ಪ್ರಥಮ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗೆ ಕೆಲವೇ ದಿನಗಳು ಉಳಿದಿವೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಿ ಉತ್ತಮ ಫಲಿತಾಂಶಕ್ಕಾಗಿ ಅವಿರತ ಶ್ರಮಿಸಬೇಕು. ಮೊಬೈಲ್ ಫೋನ್ ನ ಕೆಟ್ಟ ಪರಿಣಾಮ ದಿನೇ ದಿನೇ ಹೆಚ್ಚುತ್ತಿದೆ. ವಿದ್ಯಾರ್ಥಿಗಳ ಹೆತ್ತವರು ಇದನ್ನು ಗಮನಿಸಿ ಎಚ್ಚೆತ್ತುಕೊಂಡು ತಮ್ಮ ಮಕ್ಕಳು ಮೊಬೈಲ್ಗೆ ದಾಸರಾಗದೆ ಅಭ್ಯಾಸದಲ್ಲಿ ನಿರತರಾಗಿ ಉತ್ತಮ ಗುಣ ನಡತೆಯ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅಂಬಿಕಾದಲ್ಲಿ ಪಾಠ ಪ್ರವಚನ, ಕೋಚಿಂಗ್, ಪರಿಹಾರ ಬೋಧನೆ ಎಲ್ಲವೂ ಚೆನ್ನಾಗಿ ನಡೆಯುತ್ತದೆ ಎಂದು ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನಡೆದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಪೋಷಕ-ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಹಾಗೂ ಪ್ರಸಕ್ತ ಸಾಲಿನ ಮತ್ತು ಮುಂದಿನ ವರ್ಷದ ಶೈಕ್ಷಣಿಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಸಿ.ಇ.ಟಿ., ಜೆ.ಇ.ಇ., ನೀಟ್, ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಸಾಧನೆ ಪ್ರಶಂಸನೀಯ. ವಿದ್ಯಾರ್ಥಿಗಳನ್ನು ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉತ್ತಮ ಸಾಧನೆ ಮಾಡುವಂತೆ ಅಂಬಿಕಾ ನಿರಂತರ ಶ್ರಮಿಸುತ್ತಿದೆ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಅವರು ತಿಳಿಸಿದರು. ಅವರು ಪೋಷಕರಿಗೆ ಎನ್.ಡಿ.ಎ., ನೀಟ್, ಸಿ.ಇ.ಟಿ. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ಮಾಹಿತಿ ನೀಡಿದರು.
ನಮ್ಮ ಮಕ್ಕಳು ಶೈಕ್ಷಣಿಕ ವಿಚಾರವಾಗಿಯೂ ನೈತಿಕವಾಗಿಯೂ ಪರಿಶುದ್ಧರಾಗಿರಬೇಕು, ದಾರಿ ತಪ್ಪಬಾರದು. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯು ಉಪನ್ಯಾಸಕರು, ಪೋಷಕರು, ಆಡಳಿತ ಮಂಡಳಿ ಇವರೆಲ್ಲರ ಮಹತ್ತರ ಹೊಣೆಗಾರಿಕೆ. ಮಕ್ಕಳ ದುರ್ವರ್ತನೆಗೆ ನಾವು ಕಾರಣರಾಗಿ ಮತ್ತೆ ಪಶ್ಚಾತ್ತಾಪ ಪಡುವಂತಾಗಬಾರದು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪೋಷಕರೂ ಕೂಡ ತಮ್ಮ ಮಕ್ಕಳ ಸಮಸ್ಯೆಗಳನ್ನು ಅರಿತು ನಕ್ಷತ್ರಿಕನಂತೆ ಹಿಂಬಾಲಿಸಿ ಗುರಿ ಮುಟ್ಟುವಲ್ಲಿ ಸಹಕರಿಸಬೇಕು. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಸುವ್ಯವಸ್ಥೆಗಳು ಇಲ್ಲಿವೆ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿಗ ಸುಬ್ರಹ್ಮಣ್ಯ ನಟ್ಟೋಜರು ತಿಳಿಸಿದರು.
ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಪ್ರಯತ್ನಿಸುವ ನೆಲೆಯಲ್ಲಿ ನಿರಂತರ ಪರೀಕ್ಷೆಗಳು, ಪರಿಹಾರ ಬೋಧನೆ, ಪುನರಾವರ್ತನೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಯುತ್ತಾ ಇರುತ್ತದೆ. ನಮ್ಮ ಮಕ್ಕಳು ಸಮಾಜಕ್ಕೆ ಕಾಣಿಕೆಯಾಗಬೇಕು. ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು. ಉತ್ತಮ ನಾಗರಿಕರಾಗಿ, ಸುಸಂಸ್ಕೃತರಾಗಿ ದೇಶದ ಆಸ್ತಿ ಆಗಬೇಕು. ಇದು ಪೋಷಕರ, ಆಡಳಿತ ಮಂಡಳಿಯ ಹಾಗೂ ಉಪನ್ಯಾಸಕರ ಹಾರೈಕೆ. ಈ ನಿಟ್ಟಿನಲ್ಲಿ ಪೋಷಕರ ಸಂಪರ್ಕ ನಿರಂತರವಾಗಿ ವಿದ್ಯಾಲಯದ ಜೊತೆಗಿರಲಿ ಎಂದು ಅವರು ಹೇಳಿದರು.
ಹಿರಿಯ ಉಅಪನ್ಯಾಸಕರುಗಳಾದ ಪುಷ್ಪಲತಾ ಪಿ ಹಾಗೂ ದಿನೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಬಿಕಾದ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು, ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಪುನೀತ್ ಸಹಕರಿಸಿದರು.