ದಕ್ಷಿಣ ಕನ್ನಡ
Arun Kumar Puttila : ಪುತ್ತಿಲ ಪರಿವಾರ ಕಛೇರಿ ಮುಂಭಾಗ ತಲವಾರು ಪ್ರದರ್ಶನ – ಪ್ರಕರಣ ಹಾಗೂ ಆ ಬಳಿಕ ಏನೆಲ್ಲಾ ಆಯಿತು? ಸಂಪೂರ್ಣ ಮಾಹಿತಿ ಇಲ್ಲಿದೆ

ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಪ್ರಭಾವಿ ಹಿಂದೂ ಮುಖಂಡ ಹಾಗೂ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರ ಕಚೇರಿ ಬಳಿ 9 ಮಂದಿ ಯುವಕರ ತಂಡವೊಂದು ಮಾರಾಕಾಯುಧಗಳೊಂದಿಗೆ ಬಂದ ಘಟನೆ ಪುತ್ತೂರಿನ ಹೊರವಲಯ ಮುಕ್ರಂಪಾಡಿ ಬಳಿ ನಡೆದಿದೆ . ಶುಕ್ರವಾರ (ನ 10) ರಂದು ಮಧ್ಯಾಹ್ನ 1.30 ಸುಮಾರಿಗೆ ಸುಭದ್ರ ಹಾಲ್ ಬಳಿಯಿರುವ ಪುತ್ತಿಲ ಪರಿವಾರ ಕಛೇರಿಯಲ್ಲಿ ನಡೆದಿದ್ದೂ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಇಬ್ಬರು ಅಪ್ರಾಪ್ತರು.
ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಮುಖಂಡ ದಿನೇಶ್ ಪಂಜಿಗ ನೇತ್ರತ್ವದ 6 ಕ್ಕೂ ಹೆಚ್ಚು ಮಂದಿಯ ತಂಡ ಬೆನ್ನಿನಲ್ಲಿ ತಲ್ವಾರು ಇಟ್ಟುಕೊಂಡು ʼಪುತ್ತಿಲ ಪರಿವಾರʼದ ಕಛೇರಿಯ ಮುಂದೆ ಆಗಮಿಸಿ, ಕಚೇರಿಯಲ್ಲಿದ್ದವರ ಜತೆ ವಾಗ್ವಾದ ನಡೆಸುವ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದುಷ್ಕರ್ಮಿಗಳ ತಂಡ ಪುತ್ತಿಲ ಪರಿವಾರದ ಕಛೇರಿಗೆ ಬಂದ ವೇಳೆ ಅಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ಕೃಷ್ಣ ಪ್ರಸಾದ್ ಶೆಟ್ಟಿ, ಅನಿಲ್ ತೆಂಕಿಲ ಹಾಗೂ ವಿಜೇತ್ ಮತ್ತಿತ್ತರರಿದ್ದರು. ಪ್ರತ್ಯಕ್ಷ ದರ್ಶಿಗಳ ಪ್ರಕಾರ ದಿನೇಶ್ ಪಂಜಿಗ ಹಾಗೂ ಇತರ 8 ಮಂದಿ ಮಾರಕಾಯುಧಗಳೊಂದಿಗೆ ಆಗಮಿಸಿ ಯಾರಿಗೋ ಹುಡುಕಾಟ ನಡೆಸಿದ್ದಾರೆ. ಅಲ್ಲಿ ಅವರಿಗೆ ಬೇಕಾದ ವ್ಯಕ್ತಿ ಕಾಣದಿದ್ದಾಗ ಪುತ್ತಿಲ ಪರಿವಾರದ ಪ್ರಮುಖರೊಬ್ಬರ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ದಿನೇಶ್ ಅವರನ್ನು ಕೃಷ್ಣ ಪ್ರಸಾದ್ ಶೆಟ್ಟಿಯವರು ಸಮಾಧನಿಸಲು ಪ್ರಯತ್ನಿಸಿದ್ದಾರೆ.

ಸಿಸಿಟಿವಿ ವಿಡಿಯೋ:
ಪೊಲೀಸರ ಮಿಂಚಿನ ಕಾರ್ಯಚರಣೆ
ಕಛೇರಿ ಮುಂಭಾಗ ತಲ್ವಾರು ಝಳಪಿಸಿದ ಮಾಹಿತಿ ದೊರಕುತ್ತಲೇ ಮಿಂಚಿನ ಕಾರ್ಯಚರಣೆ ನಡೆಸಿದ ಪುತ್ತೂರು ನಗರ ಠಾಣೆ ಪೊಲೀಸರು ಕೃತ್ಯ ಎಸಗಿದ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ವಾಟ್ಸಾಪ್ ಗ್ರೂಪ್ ಒಂದರಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ಮನೀಶ್ ಕುಲಾಲ್ ಹಾಗೂ ದಿನೇಶ್ ಪಂಜಿಗರವರು ರಾಜಕೀಯ ವಿಚಾರವಾಗಿ ಚರ್ಚೆ ನಡೆಸಿದ್ದು ಅದು ವಿಕೋಪಕ್ಕೆ ಹೋಗಿದೆ. ಬಳಿಕ ಅವರಿಬ್ಬರು ಫೋನ್ ನಲ್ಲೂ ಈ ಕುರಿತು ಜಗಳವಾಡಿಕೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈ ಪ್ರಕರಣ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಠಾಣೆಗೆ ಬಿಜೆಪಿ ಮುಖಂಡರ ದೌಡು
ಆರೋಪಿಗಳನ್ನು ಠಾಣೆಗೆ ಕರೆದು ಕೊಂಡು ಹೋದ ಮಾಹಿತಿ ಪಡೆಯುತ್ತಲೇ, ಠಾಣೆಗೆ ಬಿಜೆಪಿ ಪ್ರಮುಖರು ಧಾವಿಸಿದ್ದಾರೆ. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮುಖಂಡರಾದ ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ ರಾಜೇಶ್ ಬನ್ನೂರು, ಉಳಿದಂತೆ ದಿನೇಶ್ ಜೈನ್, ಶ್ರೀಧರ ತೆಂಕಿಲ ಆಗಮಿಸಿ ಪೊಲೀಸ್ ಠಾಣೆಯಲ್ಲಿ ಪಂಚಾತಿಕೆ ಮಾಡುವ ಮೂಲಕ ರಾಜಿಗೆ ಮುಂದಾಗಿದ್ದಾರೆ. ಈ ವೇಳೆ ಡಿವೈಎಸ್ಪಿ ಗಾನಾ ಪಿ ಕುಮಾರಿ, ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಹಾಗೂ ಎಸೈ ಅಂಜನೇಯ ರೆಡ್ಡಿಯವರು ಠಾಣೆಯ ಸ್ವಾಗತಕಾರರು ಹಾಗೂ ಠಾಣಾಧಿಕಾರಿ ಕೂರುವ ಕೊಠಡಿಯಲ್ಲಿ ಬಿಜೆಪಿ ಮುಖಂಡರನ್ನು ಕೂರಿಸಿ ಅರ್ಧ ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದರು.

ಪುತ್ತಿಲ ಪರಿವಾರ ಮುಖಂಡರ ಆಗಮನ
ಇದೇ ಸಮಯದಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಪ್ರಸನ್ನ ಮಾಡ್ತಾ, ಉಮೇಶ್, ಪ್ರವೀಣ್ ಶೆಟ್ಟಿ ಮತ್ತಿತ್ತರರು ಠಾಣೆಗೆ ಆಗಮಿಸಿದರು. ಅವರನ್ನು ಇನ್ಸ್ ಪೆಕ್ಟರ್ ಛೇಂಬರ್ ನಲ್ಲಿ ಕುಳ್ಳಿರಿಸಿ ಅಧಿಕಾರಿಗಳು ಮಾತುಕತೆ ನಡೆಸಿದರು. ಇದು ಬಿಜೆಪಿ ಮುಖಂಡರನ್ನು ಕೆರಳಿಸಿದ್ದು, ನಾವು ಮೊದಲು ಬಂದಿದ್ದೇವೆ, ನೀವು ಅವರನ್ನು ಚೇಂಬರ್ ಗೆ ಕರೆಸಿ ಮಾತುಕತೆ ನಡೆಸಿದ್ದೀರಿ ಠಾಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಕೋಪದಲ್ಲಿ ಆಗ್ರಹಿಸಿದರು. ಇತ್ತ ಪುತ್ತಿಲ ಪರಿವಾರದವರು ಘಟನೆಯನ್ನು ರಾಜಿಯಲ್ಲಿ ಮುಗಿಸಲು ಒಪ್ಪದೇ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಬಳಿಕ ಬಿಜೆಪಿ ಮುಖಂಡರು ಠಾಣೆಯಿಂದ ಹಿಂತಿರುಗಿದರು.

ಬಿಜೆಪಿ ಮುಖಂಡರ ಜತೆ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದ ವೇಳೆ ಠಾಣೆ ಸುತ್ತ ಜನ ಜಮಾಯಿಸಿದ್ದು, ಮಾತುಕತೆಯ ವಿಷಯ ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಪೊಲೀಸರು ಅವರನ್ನು ಚದರಿಸಲು ಯತ್ನಿಸಿದರು. ಈ ವೇಳೆ ಪತ್ರಕರ್ತರನ್ನು ಠಾಣೆಯ ಎದುರಿನಿಂದ ಹೋಗುವಂತೆ ಸೂಚಿಸಿದರು.
ಪತ್ರಕರ್ತರು ಪೊಲೀಸರ ಮಧ್ಯೆ ಮಾತಿನ ಚಕಮಕಿ ತಲ್ವಾರ್ ಪ್ರಕರಣ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ, ಠಾಣೆ ಮುಂಭಾಗ ಪುತ್ತಿಲ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಪತ್ರಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಡಿವೈಎಸ್ಪಿ ಗಾನಾ ಪಿ ಕುಮಾರಿಯವರು ಎಲ್ಲರನ್ನು ಅಲ್ಲಿಂದ ಚದುರಿಸುವಂತೆ ಪೊಲೀಸರಿಗೆ ಸೂಚಿಸಿದರು. ಎಸೈ ಅಂಜನೇಯರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಇತ್ತಂಡಗಳ ಕಾರ್ಯಕರ್ತರನ್ನು ಹಾಗೂ ಪತ್ರಕರ್ತರನ್ನು ಠಾಣೆ ಮುಂಭಾಗದಿಂದ ತೆರಳುವಂತೆ ಸೂಚಿಸಿ ಒತ್ತಾಯಪೂರ್ವಕವಾಗಿ ಚದರಿಸಲು ಯತ್ನಿಸಿದರು. ಈ ವೇಳೆ ಪತ್ರಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. "ಒಂದೋ ಸ್ಪಷ್ಟ ಮಾಹಿತಿ ನೀಡಿ, ಇಲ್ಲ ನಮ್ಮನ್ನು ಮಾಹಿತಿ ಸಂಗ್ರಹಿಸಲು ಬಿಡಿ. ಪತ್ರಕರ್ತರ ಕೆಲಸಕ್ಕೆ ಅಡ್ಡಿ ಮಾಡಬೇಡಿ. ಕಲ್ಲೇಗದಲ್ಲಿ ಹತ್ಯೆಯ ವಿಚಾರದಲ್ಲೂ ಪೊಲೀಸ್ ಇಲಾಖೆ FIR ಮಾಹಿತಿ ಬಿಟ್ಟು ಬೇರಾವುದೆ ಮಾಹಿತಿ ನೀಡಿಲ್ಲ" ಎಂದು ತಿಳಿಸಿದರು. ಬಳಿಕ ಪತ್ರಕರ್ತರೊಬ್ಬರು ಸ್ಥಳದಿಂದಲೇ ಎಸ್ಪಿಯವರಿಗೆ ಕರೆ ಮಾಡಿ ಮಾಹಿತಿ ಕೋರಿದ್ದು ಆಗ ಅವರು ವಾರ್ತಾಧಿಕಾರಿ ಬಳಿ ಕೇಳುವಂತೆ ತಿಳಿಸಿದ್ದಾರೆ. ಆದರೇ ವಾರ್ತಾಧಿಕಾರಿಯವರು ಕ್ರೈಮ್ ಸಂಬಂದಿತ ಮಾಹಿತಿಯನ್ನು ಪೊಲೀಸ್ ಇಲಾಖೆಯೆ ನೀಡಬೇಕೆಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ದೂರಿನಲ್ಲಿ ಏನಿದೆ ? ಘಟನೆಯ ಕುರಿತು ಪುತ್ತಿಲ ಪರಿವಾರ ಕಛೇರಿ ನಿರ್ವಾಹಕ ವಿಜೇತ್ ಕುಮಾರ್ (28) ಎಂಬವರು ದೂರು ನೀಡಿದ್ದಾರೆ. ನ.10ರಂದು ಮದ್ಯಾಹ್ನ ದೂರುದಾರ ವಿಜೇತ್ ಅವರು ಅನಿಲ್, ಮಹಾಬಲ ಮತ್ತು ಕೃಷ್ಣ ಪ್ರಸಾದ್ ಶೆಟ್ಟಿ ಎಂಬವರುಗಳೊಂದಿಗೆ ಪುತ್ತಿಲ ಕಛೇರಿ ಬಳಿ ಇದ್ದ ವೇಳೆ ಹೊರಗಿನಿಂದ ಬೊಬ್ಬೆ ಕೇಳಿ ಹೊರಗಡೆ ಬಂದಿದ್ದಾರೆ. ಆಗ ಆರೋಪಿಗಳಾದ ದಿನೇಶ್ ಪಂಜಿಗ ಮತ್ತು ಆತನ ಸಂಗಡಿಗರು ತಲವಾರು ತೋರಿಸಿ ಮನೀಶ್ ಎಂಬಾತನನ್ನು ಕೊಲೆ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿ, ಅವ್ಯಾಚವಾಗಿ ಬೆದರಿಸಿದ್ದಾರೆ. ಆರೋಪಿಗಳ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಐಪಿಸಿ ಕಲಂ: 143, 144, 147,148,352,504, 506 ಜೊತೆಗೆ 149 ಮತ್ತು 25 (1B) (b) Arms Act ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಬಂಧಿತರ ವಿವರ : ಪುತ್ತೂರು ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38), ನರಿಮೊಗರು ಗ್ರಾಮದ ಭವಿತ್ (19), ಪುತ್ತೂರು ಬೊಳ್ವಾರು ನಿವಾಸಿ ಮನ್ವಿತ್ ಬಿರ್ವ (19), ಆರ್ಯಾಪು ಗ್ರಾಮದ ಜಯಪ್ರಕಾಶ (18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಪುತ್ತೂರು ಬನ್ನೂರು ಗ್ರಾಮದ ಮನೀಶ (23) ಮತ್ತು ಪುತ್ತೂರು ಕಸಬಾ ಗ್ರಾಮದ ವಿನೀತ್ (19) ಬಂಧಿತರು. ಇನ್ನಿಬ್ಬರು ಅಪ್ರಾಪ್ತರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿರುವುದಾಗಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ತಿಳಿಸಿದ್ದಾರೆ.
ಘಟನೆಯ ಕುರಿತು ಅರುಣ್ ಕುಮಾರ್ ಪುತ್ತಿಲ ಹೇಳಿದ್ದೇನು ?
ಪುತ್ತೂರಿನಲ್ಲಿ ರೌಡಿಸಂನ ಅಟ್ಟಹಾಸ ಎಲ್ಲೆ ಮೀರುತ್ತಿರುವ ಸನ್ನಿವೇಶವನ್ನು ಕಾಣುತ್ತಿದ್ದೇವೆ. ಪರಿವಾರ ಸಂಘಟನೆಯ ಕಛೇರಿಗೆ ಬಂದು ತಲುವಾರನ್ನು ತೋರಿಸಿ ಕಾರ್ಯಾಕರ್ತರನ್ನು ಹತ್ಯೆ ಮಾಡುತ್ತೇವೆ ಎಂಬ ತಪ್ಪು ಹೆಜ್ಜೆಯನ್ನು ಇಡಲಾಗಿದೆ ಮತ್ತು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುವ ಕಾರ್ಯ ಮಾಡಿದ್ದಾರೆ. ಹತ್ಯೆಯ ಮನಸ್ಥಿತಿ ಬಂದವರ ಮೇಲೆ ಪ್ರಕರಣ ದಾಖಲಿಸಬೇಕು. ಪುತ್ತೂರಿನ ಜನತೆ ಶಾಂತಿ ಸೌಹಾರ್ಧತೆಯನ್ನು ಬಯಸುತ್ತದೆ ಹೊರತು ಈ ರೀತಿಯ ಕೃತ್ಯಗಳನ್ನು ಮಾನ್ಯ ಮಾಡುವುದಿಲ್ಲ. ಕಾನೂನಿಡಿಯಲ್ಲಿ ಶಿಕ್ಷೆಯನ್ನು ನೀಡುವ ಮೂಲಕ ನ್ಯಾಯ ನೀಡುತ್ತಾರೆಂಬ ವಿಶ್ವಾಸ ನಮ್ಮ ಜತೆಗೆ ಇದೆ. ಮಾಧ್ಯಮದವರು ಎಲ್ಲವನ್ನೂ ಪಾರದರ್ಶಕವಾಗಿ ತೋರಿಸುವ ಕಾರ್ಯವಾಗಬೇಕು.
ಅರುಣ್ ಕುಮಾರ್ ಪುತ್ತಿಲ
ಪುತ್ತಿಲ ಪರಿವಾರದ ಸಂಸ್ಥಾಪಕ
6 ತಿಂಗಳ ಹಿಂದಿನವರೆಗೂ ದಿನೇಶ್ ಪಂಜಿಗ ಹಾಗೂ ಮನೀಶ್ ಕುಲಾಲ್ ಇಬ್ಬರು ಹಿಂದೂ ಜಾಗರಣೆ ವೇದಿಕೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವೇಳೆ ಅವರ ಜತೆ ಮುಂಚೂಣಿಯಲ್ಲಿ ಮನೀಶ್ ಕುಲಾಲ್ ಕಾಣಿಸಿಕೊಂಡಿದ್ದರು. ಆದರೇ ದಿನೇಶ್ ಪಂಜಿಗ ಬಿಜೆಪಿ ಪಕ್ಷ ಜತೆಯೇ ಗುರುತಿಸಿಕೊಂಡಿದ್ದರು.
ಪುತ್ತೂರು
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟ

ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ನಲ್ಲಿ ಡಿಸೆಂಬರ್ 8ರಿಂದ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಲಾಗಿದೆ. ಗ್ರಾಹಕರು ಪ್ರಾಚಿ ಆ್ಯಂಟಿಕ್ ಚಿನ್ನಾಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಹಾಗೂ ಅಚ್ಚರಿಯ ಕೊಡುಗೆಗಳನ್ನು ಪಡೆಯುವ ಅವಕಾಶವಿದೆ.
1957 ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.
ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳು ಅನ್ವಯದೊಂದಿಗೆ ಈ ಆಫರ್ ಪುತ್ತೂರು ಹಾಗೂ ಸುಳ್ಯ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ದಕ್ಷಿಣ ಕನ್ನಡ
ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ – ಪಾದಯಾತ್ರಿಗಳಿಂದ ಭೀಷ್ಮ ಪ್ರತಿಜ್ಞೆ : ಹೆಗ್ಗಡೆಯವರ ಸಂಸದರ ನಿಧಿಯಿಂದ ಬೀದರ್ ನಲ್ಲಿ ಕ್ಷೀರಕ್ರಾಂತಿ

ಉಜಿರೆ: ಹೃದಯ ಪರಿವರ್ತನೆಯಿಂದ ಅದ್ಭುತ ಪ್ರಗತಿ ಸಾಧ್ಯವಾಗುತ್ತದೆ. ಎಲ್ಲರನ್ನೂ ಜಯಿಸಿ ಸರ್ವರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಶಿವನಾಮ ಸ್ಮರಣೆಯೊಂದಿಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರನ್ನು ಅಭಿನಂದಿಸಿ ಮಾತನಾಡಿದರು.

ನಾವು ಎಲ್ಲರಲ್ಲಿಯೂ ಒಳ್ಳೆಯತನವನ್ನು ಕಾಣಬೇಕು. ದೋಷವನ್ನು ಹುಡುಕಬಾರದು. ಯಾವಾಗಲೂ ಕೆಟ್ಟ ಯೋಚನೆ ಮಾಡದೆ ಸದಾಶಯದೊಂದಿಗೆ ಸತ್ಕಾರ್ಯಗಳನ್ನೇ ಮಾಡಿದರೆ ಲೋಕಕಲ್ಯಾಣವಾಗುತ್ತದೆ.
ಎಲ್ಲರಲ್ಲಿಯೂ ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆ ಮತ್ತು ಗೌರವ ಬೆಳೆಯುತ್ತದೆ. ದೇವರು ನನಗೆ ಕೊಟ್ಟ ಎಲ್ಲಾ ಅವಕಾಶಗಳನ್ನು ಮತ್ತು ಸಂಪತ್ತನ್ನು ಬಳಸಿ ಸತ್ಕಾರ್ಯಗಳನ್ನೇ ಮಾಡಿದ್ದೇನೆ. ಅಗಾಧ ಸಂಪತ್ತಿಗಿAತ ಸತ್ಕಾರ್ಯಕ್ಕೆ ಮೌಲ್ಯ ಜಾಸ್ತಿ. ಎಲ್ಲರೂ ಸೇರಿ ಜೊತೆಯಾಗಿ ಸತ್ಕಾರ್ಯಗಳನ್ನೇ ಮಾಡೋಣ ಎಂದು ಅವರು ಕಿವಿಮಾತು ಹೇಳಿದರು.

ಧರ್ಮಸ್ಥಳದ ಬಗ್ಗೆ ಯಾವುದೇ ಅನುಮಾನ, ಸಂಶಯ ಬೇಡ. ನೇರವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಸಂಸದರ ನಿಧಿಯಿಂದ ತನಗೆ ಮಂಜೂರಾದ ಎರಡೂವರೆ ಕೋಟಿ ರೂ. ಅನುದಾನವನ್ನು ಬೀದರ್ ಜಿಲ್ಲೆಗೆ ನೀಡಿದ್ದು ಅಲ್ಲಿ ಇದರಿಂದಾಗಿ ಕ್ಷೀರ ಕ್ರಾಂತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪಾದಯಾತ್ರೆ ಮೂಲಕ ಎಲ್ಲರೂ ನಿಮ್ಮ ಪ್ರೀತಿ-ವಿಶ್ವಾಸ, ಗೌರವ, ಭಕ್ತಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿರುವಿರಿ. ಇದರಿಂದ ನನ್ನಲ್ಲಿ ತೃಪ್ತಿ, ಸಂತೋಷ ಮತ್ತು ಧನ್ಯತಾಭಾವ ಮೂಡಿಬಂದಿದೆ ಎಂದರು.
ಪಾದಯಾತ್ರಿಗಳ ಭೀಷ್ಮ ಪ್ರತಿಜ್ಞೆ: ಪಾದಯಾತ್ರಿಗಳೆಲ್ಲ ಸಂಘಟನೆ ಮೂಲಕ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಗಾಗಿ ತಾವೆಲ್ಲರೂ ಧರ್ಮಸ್ಥಳದ ಜೊತೆ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಸದಾ ಇದ್ದೇವೆ ಎಂದು ಸಾಮೂಹಿಕವಾಗಿ ದೃಢಸಂಕಲ್ಪದೊಂದಿಗೆ ಭೀಷ್ಮ ಪ್ರತಿಜ್ಞೆ ಮಾಡಿದರು.
ಹೇಮಾವತಿ ವಿ ಹೆಗ್ಗಡೆಯವರು, ಶ್ರದ್ಧಾ ಅಮಿತ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್, ಸೋನಿಯವರ್ಮ, ಪೂರನ್ವರ್ಮ, ಶರತ್ಕೃಷ್ಣ ಪಡ್ವೆಟ್ನಾಯ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ.ಎಸ್. ಸತೀಶ್ಚಂದ್ರ, ಎಸ್.ಡಿ.ಎಮ್. ಕಾಲೇಜು ಪ್ರಾಂಶುಪಾಲ ಕುಮಾರ ಹೆಗ್ಡೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್, ಎಸ್.ಡಿ.ಎಮ್ ಆಸ್ಪತ್ರೆಯ ನಿರ್ದೇಶಕ ಎಮ್. ಜನಾರ್ದನ ಸಿ.ಒ.ಒ. ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ವಕೀಲ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ದಕ್ಷಿಣ ಕನ್ನಡ
ಈಶ್ವರಮಂಗಲ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಬಸ್ಸು ಹರಿದು ಸಾವು – ಅದೇ ಬಸ್ಸಿನಿಂದ ಇಳಿದಿದ್ದರು..!

ಪುತ್ತೂರು : ಈಶ್ವರಮಂಗಲದ ಗಾಳಿಮುಖದಲ್ಲಿ ಖಾಸಗಿ ಬಸ್ಸಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ. 8ರಂದು ಸಂಭವಿಸಿದೆ. ಮುಳ್ಳೇರಿಯಾದ ಕೋಳಿಕಾಲ ನಿವಾಸಿ, ಕೃಷಿಕ ಕುಂಞಿರಾಮ ಮಣಿಯಾಣಿ ಮೃತಪಟ್ಟವರು.ʼ ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಗಾಳಿಮುಖಕ್ಕೆ ಬಂದಿದ್ದ ಅವರು ಬಸ್ಸಿನಿಂದ ಇಳಿದು ರಸ್ತೆ ದಾಟುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹಿಂಬದಿ ಬಾಗಿಲಿನಿಂದ ಇಳಿದಿದ್ದ ಕುಂಞಿರಾಮ ಮಣಿಯಾಣಿ ಅವರು, ಇನ್ನೊಂದು ಬದಿಗೆ ದಾಟುವಷ್ಟರಲ್ಲಿ ಬಸ್ ಚಲಿಸಿದ್ದು, ಬಸ್ಸಿನ ಮುಂಭಾಗದ ಚಕ್ರ ಕುಂಞಿರಾಮ ಅವರ ಎದೆಯ ಭಾಗದಿಂದ ಹರಿದಿದೆ. ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಚಾಲಕನ ಮೇಲೆ FIR
ಕೇರಳ ನೋಂದಣಿಯ ಖಾಸಗಿ ಬಸ್ಸಿನ ಚಾಲಕ ಸುಜೀತ್ ವಿ ಎಂಬವರು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿ ರಸ್ತೆ ದಾಟುತ್ತಿದ್ದ ಕುಂಞಿರಾಮ ಮಣಿಯಾಣಿ ಯವರಿಗೆ ಡಿಕ್ಕಿ ಹೊಡೆದಿದ್ದು , ಆಗ ಅವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ ಅವರ ಮೇಲೆ ಬಸ್ ಚಲಿಸಿರುತ್ತದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಕುಂಞಿರಾಮ ಮಣಿಯಾಣಿರವರು ಮೃತಪಟ್ಟಿರುತ್ತಾರೆ ಎಂದು ಮೃತರ ಚಿಕ್ಕಪ್ಪನ ಮಗ ಕೃಷ್ಣ ಎ ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಕಲಂ : 279,304(A) ರಂತೆ ಪ್ರಕರಣ ದಾಖಲಾಗಿದೆ.
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು1 day ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು23 hours ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್24 hours ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸಿನೆಮಾ2 days ago
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ