ಪುತ್ತೂರು : ಅ :31 :
ಪುತ್ತೂರು ಶಾಸಕರು ಪ್ರಯಾಣಿಸುತಿದ್ದ ಕಾರನ್ನು ತಡೆದು ರಸ್ತೆ ನಿರ್ಮಿಸುವಂತೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು ಒತ್ತಡ ಹಾಕಿದ ಘಟನೆ, ಈ ವೇಳೆ ಶಾಸಕರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರು ಪ್ರತಿಭಟನಾಕಾರರನ್ನು ಪುತ್ತೂರು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾದ ಘಟನೆ ಅ . 31 ರಂದು ನಡೆದಿದೆ.
ಪುತ್ತೂರು ನಗರ ಸಭೆ ಠಾಣಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ಘಟನೆ ನಡೆದಿದೆ. ನಗರಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ಮನೆಗಳಿಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮದ ಪ್ರಯುಕ್ತ ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ತಾರಿಗುಡ್ಡೆ ಭಾಗಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು .
ಆ ಕಾರ್ಯಕ್ರಮಕ್ಕೆ ಶಾಸಕ ಮಠಂದೂರು ಭೇಟಿ ನೀಡಲು ಅಗಮಿಸಿದ ವೇಳೆ ಒಂದಷ್ಟು ಗ್ರಾಮಸ್ಥರು ಶಾಸಕರ ಕಾರನ್ನು ಬಲವಂತವಾಗಿ ತಡೆದಿದ್ದಾರೆ.
ಇಲ್ಲಿನ ರಸ್ತೆ ತೀರ ಹದಗೆಟ್ಟಿದ್ದು ದುರಸ್ತಿ ಮಾಡಲಾಗಿಲ್ಲ. ಕಳೆದ ಚುಣಾವಣೆ ಸಂದರ್ಭ ದುರಸ್ತಿ ಮಾಡುವ ಭರವಸೆ ನೀಡಿದ್ದೀರಿ ಎಂದು ಈ ಪ್ರತಿಭಟನಾ ನಿರತರು ಶಾಸಕರಲ್ಲಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಂತದಲ್ಲಿ ಅದೇ ಗ್ರಾಮದ ಅನಾರೋಗ್ಯ ಪೀಡಿತರೊಬ್ಬರು ಶಾಸಕರಲ್ಲಿ ” ರಸ್ತೆ ಸಂಪೂರ್ಣ ಹಾಳಾಗಿದೆ. ಕನಿಷ್ಟ ಪಕ್ಷ ಆ ಗುಂಡಿಗಳನ್ನಾದರೂ ಮುಚ್ಚಬೇಕು. ತುರ್ತು ಸ್ಥಿತಿಯಲ್ಲಿ ಆಸ್ಪತ್ರೆಗೆ ತೆರಳುವಾಗ ಭಾರೀ ತೊಂದರೆಯಾಗುತ್ತದೆ ಎಂದು ತ್ರೀವ್ರವಾಗಿ ಆಕ್ಷೇಪಿಸಿದ್ದಾರೆ ಎನ್ನಲಾಗಿದೆ. ಆಗ ಶಾಸಕರು ತಮ್ಮ ಕಾರಿನ ಡೋರ್ ತೆರದಿದ್ದು ಅದು ಆ ಅನಾರೋಗ್ಯ ಪೀಡಿತ ವ್ಯಕ್ತಿಗೆ ತಗುಲಿ ಕೆಳಗಡೆ ಬಿದ್ದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ. ಶಾಸಕರ ಜತೆ ಕಾರಿನಲ್ಲಿದ ನಗರಸಭೆ ಸದಸ್ಯ ಹಾಗೂ ಬಿಜೆಪಿ ನಗರ ಮಂಡಳದ ಅಧಕ್ಷರಾದ ಪಿ.ಜಿ ಜಗನ್ನಿವಾಸರಾವ್ ರವರು ಪುತ್ತೂರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ನೆರೆದಿದ್ದ ಗುಂಪನ್ನು ಚದುರಿಸಿದ್ದು, ಸ್ಥಳೀಯ ಪ್ರಖ್ಯಾತ್ ರೈ ಹಾಗೂ ಇನ್ನೊರ್ವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಪುತ್ತೂರು ನಗರ ಠಾಣೆ ಗೆ ಮುತ್ತಿಗೆ ಹಾಕಿದ್ದಾರೆ. ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಠಾಣೆಯ ಮೆಟ್ಟಿಲಿನಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಠಾಣೆಗೆ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ , ನಗರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ , ಬ್ಲಾಕ್ ಕಾಂಗ್ರೇಸ್ ಪುತ್ತೂರು ಅಧ್ಯಕ್ಷ ಎಂ.ಬಿ .ವಿಶ್ವನಾಥ ರೈ ಯವರು ಠಾಣೆಗೆ ಆಗಮಿಸಿ ಪೊಲೀಸರ ಜತೆ ಮಾತುಕತೆ ನಡೆಸಿದ್ದಾರೆ.
ಘಟನೆಯ ಬಗ್ಗೆ ನಿಖರ ನ್ಯೂಸ್ ಜತೆ ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿಯವರು ” ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಿದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಬಿಡುಗಡೆಗೊಳಿಸುವಂತೆ ನಾವು ಪೊಲೀಸರಿಗೆ ಒತ್ತಡ ಹಾಕಿದ್ದೇವೆ. ಆದರೇ ಪೊಲೀಸ್ ಇನ್ಸ್ ಪೆಕ್ಟರ್ ಯುವಕರು ಶಾಸಕರ ಕ್ಷಮೆ ಕೇಳಬೇಕು ಎಂದು ಹೇಳುತಿದ್ದಾರೆ. ಇದು ಅಕ್ಷಮ್ಯ . ಪ್ರಜಾಪ್ರಭುತ್ವದಲ್ಲಿ ಈ ರೀತಿಯ ವ್ಯವಸ್ಥೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ಪೊಲೀಸರು ಬಂಧಿತರನ್ನು ಬಿಡುಗಡ ಮಾಡದಿದ್ದರೇ , ಇನ್ನು ಮುಂದೆ ಶಾಸಕರು ತೆರಳುವ ಪ್ರತಿ ಸ್ಥಳಕ್ಕೆ ಭೇಟಿ ನೀಡುವ ಸ್ಥಳಕ್ಕೂ ಬೇಟಿ ನೀಡುತ್ತೇನೆ. ನನ್ನನ್ನೂ ಪೊಲೀಸರು ಬಂಧಿಸಲಿ ಎಂದು ಅಗ್ರಹಿಸಿದ್ದಾರೆ.
ಇನ್ನೂ ತಾರಿಗುಡ್ಡೆಯಲ್ಲಿ ಶಾಸಕರ ಕಾರು ತಡೆದು ಗಲಾಟೆ ನಡೆಸಿದ ಬಗ್ಗೆ ಪಿ. ಜಿ ಜಗನ್ನಿವಾಸ ರಾವ್ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು ಇನ್ನು ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಶಾಸಕರ ಮೈ ಮೇಲೆ ಕೈ ಹಾಕಲು ಬಂದಿದ್ದಾರೆ ಹಾಗೂ ಶಾಸಕರಿಗೆ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆಂದು ಪಿ.ಜಿ ರಾವ್ ಅವರು ಆರೋಪಿಸಿದ್ದಾರೆ

ಈ ಬಗ್ಗೆ ಪುತ್ತೂರು ಶಾಸಕರ ಪ್ರತಿಕ್ರಿಯೆ ಪಡೆಯಲು ಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಕ್ಕಿಲ.
ಕೊನೆ ಕ್ಷಣದ ಮಾಹಿತಿಯ ಪ್ರಕಾರ ವಶಕ್ಕೆ ಪಡೆದ ಇಬ್ಬರನ್ನು ಪೊಲೀಸರು ಬಿಡುಗಡೆ ಮಾಡಿದ್ದು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ.
