kadaba : ಫೆ 24 : ಪ್ರಕೃತಿ ಮತ್ತು ಮನುಷ್ಯ ನಡುವಿನ ಸಂಘರ್ಷದಲ್ಲಿ ಕಾಡಿನ ಸಮೀಪದ ಗ್ರಾಮಸ್ಥರು ಅರಣ್ಯ ಇಲಾಖೆಯ (Forest Department) ವಿರುದ್ದ ಹೋರಾಡುವ ಕಥಾ ಹಂದರವನ್ನುಳ್ಳ ಕಾಂತಾರ ( Kantara) ತೆರೆ ಕಂಡು ಭರ್ಜರಿ ಯಶಸ್ಸು ಕಂಡದ್ದು ನಮಗೆಲ್ಲಾ ಗೊತ್ತೆ ಇದ್ದೆ. ಕಳೆದ ಶತಮಾನದ 90 ರ ದಶಕದ ಅಸುಪಾಸಿನಲ್ಲಿ ನಡೆದಿದೆ ಎನ್ನಲಾದ ಆ ದಂತ ಕಥೆಯನ್ನು ಒಂದಷ್ಟು ಹೋಲುವ ಘಟನೆಯೊಂದು 21 ನೇ ಶತಮಾನದಲ್ಲೂ ನಡೆದಿರುವುದು ವಿಪರ್ಯಾಸ.
ತಮ್ಮ ಜಾಗವನ್ನು ಅರಣ್ಯ ಇಲಾಖೆ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತದೆ ಎಂಬ ಭಯದಿಂದ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿ ಜತೆ ಜಗಳವಾಡುವ ದೃಶ್ಯ ಕಾಂತಾರ ಸಿನಿಮಾದಲ್ಲಿದ್ದರೇ, ನಮ್ಮ ಜಮೀನಿಗೆ ಬಂದ ಕಾಡಾನೆಯನ್ನು (Wild Elephant) ಅರಣ್ಯ ಇಲಾಖೆಯವರು ಸೆರೆ ಹಿಡಿದಿಲ್ಲ ಎಂದು ಕಡಬದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬಂದಿ ಹಾಗೂ ಪೊಲೀಸರಿಗೆ ಹಲ್ಲೆ ನಡೆಸಿ ವಾಹನ((Forest officers vehicles) ಜಖಂಗೊಳಿಸಿದ್ದಾರೆ. ಕಡಬ ಗಲಾಟಗೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕು ಎಂದೇ ಗುರುತಿಸಲಾಗುವ , ಪಶ್ಚಿಮ ಘಟ್ಟದ ಸರಹದ್ದಿನಲ್ಲಿರುವ ಕಡಬದಲ್ಲಿ ಕಾಡಾನೆ ದಾಂಧಲೆ ಹೊಸದೆನ್ನಲ್ಲ. ಇಲ್ಲಿನ ಕೃಷಿಕರು ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ನಿತ್ಯ ನಿರಂತರವಾದದ್ದು . ಪ್ರಾಣಿಗಳ ಕಾಟದಿಂದ ಉಳಿದ ಫಸಲಷ್ಟೆ ನಮ್ಮ ಪಾಲಿನ ಪಂಚಾಮೃತ ಎಂದು ತಿಳಿದು ಕೃಷಿ ಮಾಡುತ್ತಿರುವವರು ಇಲ್ಲಿನ ರೈತಾಪಿ ವರ್ಗ.
ಎರಡು –ಮೂರು ತಿಂಗಳುಗಳ ಹಿಂದೆ ಕನಿಷ್ಟ 7-8 ಆನೆಗಳನ್ನು ಹೊಂದಿರುವ ಕಾಡಾನೆಗಳ ಪುಂಡೊಂದು ನಾಡಿಗೆ ಬಂದಿದೆ. ಇದು ಕೂಡ ಅಲ್ಲಿನ ಜನರಿಗೆ ಹೊಸ ಸಂಗತಿಯಲ್ಲ. ಈ ಬಾರಿ ನಾಡಿಗೆ ಬಂದ ಕಾಡಾನೆಗಳು ಫಸಲನಷ್ಟೆ ಹಾನಿ ಮಾಡದೇ ಮನುಷ್ಯನ ಜೀವಕ್ಕೂ ಕುತ್ತು ತಂದವು. ಒಂದೇ ದಿನ ಇಬ್ಬರನ್ನು ಬಲಿ ತೆಗೆದುಕೊಂಡು ರೌಧ್ರವಾತರ ತೋರಿದ್ದವು. ಈ ಭಯಾನಕ ಘಟನೆಯೂ ಕಡಬ ತಾಲೂಕಿನ 7 ಗ್ರಾಮದ ಜನರನ್ನು ಭಯದ ನೆರಳಿನಲ್ಲಿ ಬದುಕುವಂತೆ ಮಾಡಿದವು.

ಕಾಡಾನೆ ಇಬ್ಬರನ್ನು ಕೊಂದ ಘಟನೆ ಸಹಜವಾಗಿಯೇ ಕಡಬದ ಜನರನ್ನು ರೊಚ್ಚಿಗೆಬ್ಬಿಸಿದ್ದವು. 5 ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಆನೆ ದಾಳಿಯಿಂದ ಮೃತಪಟ್ಟವರ ಶವವಿಟ್ಟು ಪ್ರತಿಭಟನೆ ನಡೆಸಿ ಅಡಳಿತಶಾಹಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದರು. ಆಕ್ರೋಶಕ್ಕೆ ಬೆದರಿದ ಸರಕಾರ ದ.ಕ ಡಿಸಿ ಹಾಗೂ ಸಚಿವ ಅಂಗಾರರನ್ನು ಘಟನಾ ಸ್ಥಳಕ್ಕೆ ಕಳುಹಿಸಿತ್ತು. ಹಲವು ತಿಂಗಳುಗಳಿಂದ ಗ್ರಾಮಸ್ಥರು ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸುತ್ತಿದ್ದಾಗ ದಿವ್ಯ ನಿರ್ಲಕ್ಷ್ಯ ವಹಿಸಿದ್ದ ಸರಕಾರ ಪ್ರತಿಭಟನಾಕಾರರ ಕಟ್ಟೆಯೊಡೆದ ಆಕ್ರೋಶ ನೋಡಿ ಬೆದರಿ ರಾತ್ರೋ ರಾತ್ರಿ ದುಬಾರೆಯಿಂದ ಸಾಕಾನೆಗಳನ್ನು ತರಿಸಿ ಆಪರೇ಼ನ್ ಎಲಿಫೆಂಟ್ ಕಾರ್ಯಾಚರಣೆ ಆರಂಭಿಸಿತ್ತು.

ನಾಲ್ಕು ದಿನಗಳ ಸತತ ಕಾರ್ಯಾಚರಣೆಯ ಬಳಿಕ ಕೊನೆಗೆ ಆನೆಯೊಂದನ್ನು ಸೆರೆ ಹಿಡಿದ ಆರಣ್ಯ ಇಲಾಖೆ ಅದೇ ನರಹಂತಕ ಅನೆಯೆಂದು ಘೋಷಿಸಿ ಅದನ್ನು ರಾತ್ರೋ ರಾತ್ರಿ ಕೊಡಗಿನ ದುಬಾರೆಯಲ್ಲಿರುವ ಆನೆ ಬಿಡಾರಕ್ಕೆ ಸಾಗಿಸಲು ಮುಂದಾಗಿದ್ದಾರೆ. ಈ ವಿದ್ಯಮಾನ ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ. ಕೇವಲ ಒಂದು ಆನೆಯನ್ನು ಹಿಡಿದು ಇದನ್ನೆ ನರಬಲಿ ಪಡೆದ ಆನೆ ಎಂದು ಬಿಂಬಿಸಿ ಕಾರ್ಯಾಚರಣೆಗೆ ಸ್ಥಗಿತಗೊಳಿಸಿ ದುಬಾರೆಯಿಂದ ಕರೆ ತಂದಿದ್ದ ಸಾಕಾನೆಗಳನ್ನು ಮರಳಿ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು . ಇದು ಸ್ತಳೀಯ ಗ್ರಾಮಸ್ಥರನ್ನು ಕುದಿಯುವಂತೆ ಮಾಡಿತು. ಇದು ಕಾಂತಾರದ ಘಟನೆಯೊಂದನ್ನು ಮರುಕಳಿಸುವಂತೆ ಮಾಡಿತು.
ಫೆ 23 ರಂದು ಸಂಜೆ 5 ಗಂಟೆ ಸುಮಾರಿಗೆ ಕೊಂಬಾರು ಗ್ರಾಮದ ಮಂಡೆಕರ ಬಳಿ ಅರಣ್ಯದಲ್ಲಿದ್ದ ಆನೆಯನ್ನು ಸೆರೆಹಿಡಿದ ಅರಣ್ಯಾಧಿಕಾರಿಗಳ ತಂಡ ಅದಣ್ನು ರಾತ್ರಿ ದುಬಾರೆಗೆ ಸಾಗಿಸುತ್ತಿದ್ದ ವೇಳೆ, ಸುಂಕದಕಟ್ಟೆ ಎಮಬಲ್ಲಿ ಅರಣ್ಯಾಧಿಕಾರಿಗಳ ವಾಹನವನ್ನು ಸಾವಿರಕ್ಕೂ ಮಿಕ್ಕಿದ್ದ ಗ್ರಾಮಸ್ಥರು ಅಡ್ಡಗಟ್ಟಿದ್ದಾರೆ. ನೀವು ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಇತರೆ ಕಾಡಾನೆಗಳನ್ನು ಸೆರೆಹಿಡಿದು ಒಟ್ಟಿಗೆ ಎಲ್ಲಾ ಆನೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಆ ಉದ್ರಿಕ್ತರ ಗುಂಪು ಅಗ್ರಹಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿಗಳು “ ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲ. ಹೀಗಾಗಿ ನಾವು ಮೊದಲು ಸೆರೆಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಕಾಡಾನೆಗಳನ್ನು ಸೆರೆಹಿಡಿಯುವುದಾಗಿ ತಿಳಿಸಿದರು. ಆದರೆ, ಅದನ್ನು ಅರ್ಥೈಸಿಕೊಳ್ಳುವ ಸ್ಥಿತಿಯಲ್ಲಿಲ್ಲದ ಗುಂಪಿನಲ್ಲಿದ್ದ ಕೆಲವರು ಏರುಧ್ವನಿಯಲ್ಲಿ ಗಲಾಟೆಗೆ ಮುಂದಾಗಿದ್ದಾರೆ.
ಈ ವೇಳೆ ಅರಣ್ಯ ಇಲಾಖೆ ಸಿಬಂದಿಗಳು ಪೋಲೀಸರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಪೊಲೀಸರು ತಿಳಿವಳಿಕೆ ನೀಡಿದರೂ ಕೆಲವರು ಏಕಾಏಕಿ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೂ ಮತ್ತು ಅರಣ್ಯ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ಮಾಡಿದ್ದರು. ಕಲ್ಲು ತೂರಾಟದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಗಾಯಗೊಂಡಿದ್ದಾರೆ . ಇಷ್ಟಕ್ಕೇ ನಿಲ್ಲದ ಕೆಲವು ಯುವಕರು ಸ್ಥಳದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖಾ ವಾಹನ ಹಾಗೂ ಪೊಲೀಸ್ ಇಲಾಖಾ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿ ವಾಹನಗಳನ್ನು ಜಖಂ ಮಾಡಿರುವುದಾಗಿ ಉಪ ವಲಯ ಅರಣ್ಯ ಅಧಿಕಾರಿ ಮದನ್ ಕೆ ಅವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಗುರುವಾರ ರಾತ್ರಿಯೇ ಬಂಧಿಸಿದ್ದು, ಶುಕ್ರವಾರ ಬೆಳಿಗ್ಗೆ ಆರು ಜನರನ್ನು ದಸ್ತಗಿರಿ ಮಾಡಿದ್ದಾರೆ. ಕೊಂಬಾರು ಕಮರ್ಕಜೆ ನಿವಾಸಿ ಶೀನಪ್ಪ ಗೌಡರ ಪುತ್ರರಾದ ಉಮೇಶ್, ಕೋಕಿಲಾನಂದ, ಗೋಪಾಲ ಗೌಡ ಪುತ್ರ ರಾಜೇಶ್ , ಕೋಲ್ಪೆ ಕಮಲಾಲಕ್ಷ ಅವರ ಪುತ್ರ ಜನಾರ್ಧರ ರೈ, ಚಂದ್ರಪ್ಪ ಗೌಡರ ಪುತ್ರ ತೀರ್ಥಕುಮಾರ್, ಸಿರಿಬಗಿಲು ಗ್ರಾಮದ ಬಾರ್ಯ ಮನೆ ಹುಕ್ರಪ್ಪ ಗೌಡರ ಪುತ್ರ ಗಂಗಾಧರ ಗೌಡ, ಕೊಂಬಾರು ಗ್ರಾಮ ಕೆಂಜಾಲ ನಿವಾಸಿ ದಿವಾಕರ ಅವರ ಪುತ್ರ ಅಜಿತ್ ಕುಮಾರ್ ಮತ್ತಿತ್ತರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಸೆರೆ ಹಿಡಿಯಲಾದ ಕಾಡಾನೆಯನ್ನು ದುಬಾರೆ ಆನೆ ಶಿಬಿರಕ್ಕೆ ಕೊಂಡೊಯ್ಯುವ ವೇಳೆ ಅಭಿಮನ್ಯು ಹಾಗೂ ಇನ್ನೊಂದು ಸಾಕಾನೆಯನ್ನೂ ಅಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬ ಮಾಹಿತಿ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಕಾರ್ಯಾಚರಣೆ ನಿಲ್ಲಿಸಿಲ್ಲ, ಆನೆಗಳಿಗೆ ಒಂದು ದಿನ ವಿಶ್ರಾಂತಿ ನೀಡಿ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮನವರಿಕೆ ಮಾಡಿದರೂ ಸಮಾಧಾನಗೊಳ್ಳದ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿ, ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಹಾನಿಗೊಳಿಸಿದ್ದಾರೆ.
ಘಟನೆಯಲ್ಲಿ ಎರಡು ಪೊಲೀಸ್ ಜೀಪ್, ಅರಣ್ಯ ಇಲಾಖೆಯ ಎರಡು ವಾಹನಗಳು ಜಖಂಗೊಂಡಿವೆ ಎಂದು ವರದಿಯಾಗಿದೆ. ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಲ್ಲದೆ, ಓರ್ವನನ್ನು ವಶಕ್ಕೆ ಪಡೆದು ಶುಕ್ರವಾರ ಇತರ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಲಭೆ ವೇಳೆ ಮುಂಚೂಣಿಯಲ್ಲಿ ಕಾಣಿಕೊಂಡಿದ್ದ ಕೆಲವರ ಗುರುತು ಪತ್ತೆ ಹಚ್ಚಿರುವ ಪೋಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.