ಪುತ್ತೂರು: ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ಉದ್ಯಮಿ ಅಶೋಕ್ ಕುಮಾರ್ ರೈ (Ashok Kumar Rai) ಯವರು ಪಕ್ಷದಲ್ಲಿ ಸಂಘಟನಾತ್ಮಕವಾಗಿ ತೊಡಗಿಸುಕೊಳ್ಳು ತ್ತಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ (Puttur Congress) ಸಮಿತಿಗಳ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಅಶೋಕ್ ಕುಮಾರ್ ರೈ ಯವರು ಪ್ರಪ್ರಥಮ ಬಾರಿಗೆ ಪುತ್ತೂರು ಕಾಂಗ್ರೆಸ್ ಕಛೇರಿಗೆ ಆಗಮಿಸಿದ ವೇಳೆ ಮಾಜಿ ಶಾಸಕಿ ಶಕುಂತಲ ಶೆಟ್ಟಿ , ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ್ ಬಿ ಕೆ, ಪುತ್ತೂರು ನಗರ ಅಧ್ಯಕ್ಷ ಮಹಮ್ಮದ್ ಆಲಿ ಸಹಿತ ಹಲವು ನಾಯಕರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು,
ಓರ್ವ ಸಾಮಾನ್ಯ ಕಾರ್ಯಕರ್ತನ ನೆಲೆಯಲ್ಲಿ ಪಾಲ್ಗೊಳ್ಳುತ್ತಾ, ಮುಂದಿನ ಚುನಾವಣೆಯ ವೇಳೆಗೆ ಪಕ್ಷ ಸಂಘಟನಾತ್ಮಕವಾಗಿ ಯಾವ ರೀತಿ ಕೆಲಸ ಮಾಡಬೇಕು ಎಂಬ ಬಗ್ಗೆ ಎಲ್ಲಾ ಕಾರ್ಯಕರ್ತರಿಗೂ ಒಂದಿಷ್ಟು ಪ್ರೇರಣೆ ನೀಡುವ ಕೆಲಸ ಮಾಡತೊಡಗಿದ್ದೇನೆ.
ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಸಮಯ ವ್ಯರ್ಥ ಮಾಡದೇ ಈಗಿನಿಂದಲೇ ಪಕ್ಷದ ಪರ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಅಶೋಕ್ ರೈ ಹೇಳಿದರು.
ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಬೇಕಾದರೆ ಬೇರು ಮಟ್ಟದಲ್ಲಿ ಕೆಲಸ ಆಗಬೇಕು. ಕಾರ್ಯಕರ್ತರೇ ಪಕ್ಷದ ಶಕ್ತಿ. ಸ್ಥಳೀಯವಾಗಿ ಪ್ರತಿಯೊಂದೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಲವಾದಾಗ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಅವರ ಬೆಂಬಲ ಗಳಿಸುವುದು ಸುಲಭವಾಗುತ್ತದೆ. ಬೂತ್ ಮಟ್ಟದ ಕಾರ್ಯಕರ್ತರೇ ಪಕ್ಷವನ್ನು ನಿಜವಾದ ಅರ್ಥದಲ್ಲಿ ಗೆಲ್ಲಿಸುವುದು ಎಂದರು.
ಮುಂದುವರಿದು : ಪ್ರತಿಯೊಂದೂ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಡಿಯಲ್ಲಿ ಬರುವ ಪ್ರತಿಯೊಂದೂ ಬೂತ್ ಗಳಲ್ಲಿ ಕಾರ್ಯಕರ್ತರ ತಂಡವನ್ನು ರಚಿಸಿ ಬೂತ್ ಕಮಿಟಿಗಳನ್ನು ಮಾಡಿ ಆ ಮೂಲಕ ಜನರ ಬಳಿಗೆ ತೆರಳುವ ಕೆಲಸ ಆಗಬೇಕು. ಅದಕ್ಕಾಗಿ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ, ಅದಕ್ಕಾಗಿ ಬೂತ್ ಕಾರ್ಯಕರ್ತರು ನನ್ನನ್ನು ಯಾವುದೇ ಬೂತ್ ಗೆ ಕರೆದರೂ ನಾನು ಅಲ್ಲಿಗೆ ಬರಲು ಸಿದ್ಧನಿದ್ದೇನೆ ಎಂದರು. ಸಭೆಯಲ್ಲಿ ಎಲ್ಲಾ ಆಕಾಂಕ್ಷಿಗಳು ಹಾಗೂ ನಾಯಕರು ಉಪಸ್ಥಿತರಿದ್ದರು.
ಆಕಾಂಕ್ಷಿಗಳ ಬೂತು ಪರಿಚಯ
ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ, ಸ್ವತ: ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಎಂ ಬಿ ವಿಶ್ವನಾಥ ರೈ ಮತ್ತು ರಾಜ್ಯ ವಕ್ತಾರ ಅಮಳ ರಾಮಚಂದ್ರರವರು ಪುತ್ತೂರು ವಿಧಾನಸಭಾ ವ್ಯಾಪ್ತಿಯಲ್ಲಿ ನೂತನ ಪ್ರಯೋಗವೊಂದಕ್ಕೆ ಕೈ ಹಾಕಿದ್ದಾರೆ. ಕ್ಷೇತ್ರದ ಎಲ್ಲಾ 14 ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳನ್ನು ಪ್ರತಿ ಬೂತ್ ಗೆ ಜತೆಯಾಗಿ ಕರೆದುಕೊಂಡು ಹೋಗುವ ಕಾರ್ಯ ಇದಾಗಿದು, ಸದ್ಯ ಈ ಪ್ರಯತ್ನ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಟಿಕೆಟ್ ಬಗ್ಗೆ ಗಂಭೀರವಾಗಿರುವ ಎಲ್ಲ ಆಕಾಂಕ್ಷಿಗಳು ಈ ಪ್ರಯೋಗದಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ 10 ಬೂತ್ ಗಳ ಪ್ರವಾಸ ಮುಗಿದಿದೆ. ಈ ಆಕಾಂಕ್ಷಿಗಳ ಪ್ರವಾಸದಲ್ಲಿ ಅಶೋಕ್ ಕುಮಾರ್ ರೈಯವರು ಪಾಲ್ಗೊಳ್ಳುತ್ತಿದ್ದು, ಇದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಮೂಡಿಸಿದೆ.
ಈ ಬಾರಿಯ ಆಕಾಂಕ್ಷಿಗಳಾದ ಶಕುಂತಲ ಶೆಟ್ಟಿ, ಅಶೋಕ್ ರೈ, ದಿವ್ಯ ಪ್ರಭಾ ಚಿಲ್ತಡ್ಕ, ಡಾ.ರಾಜಾರಮ್ ಬಿ ಕೆ, ಚಂದ್ರಹಾಸ ಶೆಟ್ಟಿ, ಸತೀಶ್ ಕುಮಾರ್ ಕೆಡೆಂಜಿ ಸೇರಿದಂತೆ ಎಲ್ಲಾ 14 ಆಕಾಂಕ್ಷಿಗಳನ್ನು ಜೊತೆಯಾಗಿ ಬೂತ್ ಗೆ ಕರೆದುಕೊಂಡು ಹೋಗುವ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ. ಇದನ್ನು ಅದನ್ನು ಸ್ವತ: ಟಿಕೆಟ್ ಆಕಾಂಕ್ಷಿಯಾಗಿರುವ ಎಂ.ಬಿ ವಿಶ್ವನಾಥ ರೈ ಯವರೇ ಮಾಡಿರುವುದು ವಿಶೇಷ ಎನಿಸಿದೆ ಹಾಗೂ ಪಕ್ಷದೊಳಗೆ ಗುಣಾತ್ಮಕ ಸಂದೇಶ ಹರಡಲು ಕಾರಣವಾಗಿದೆ ಎನ್ನುತ್ತಾರೆ ಪಕ್ಷದ ಹಿರಿಯರು. ಎಲ್ಲರೂ ಜತೆಯಾಗಿ ಪ್ರಯತ್ನಿಸಿದರೆ , ಪಕ್ಷ ಗೆಲುವಿನ ಮೆಟ್ಟಿಲೆರಬಹುದು ಎನ್ನುವುದು ಅವರ ಅಭಿಮತ
ಎಲ್ಲರನ್ನು ಒಟ್ಟಾಗಿ ಬೂತುಗಳಿಗೆ ತೆರಳಿದರೆ ಯಾರೇ ಆಕಾಂಕ್ಷಿಯಾದರೂ ಪಕ್ಷಕ್ಕೆ ಲಾಭ ಎನ್ನುವ ಚಿಂತನೆಯಿಂದ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ರಾಜ್ಯ ವಕ್ತಾರ ಅಮಲ ರಾಮಚಂದ್ರರು. ಎರಡು ಬ್ಲಾಕ್ ನ ಹಲವು ಬೂತ್ ಗಳಿಗೆ ಆಕಾಂಕ್ಷಿಗಳ ತಂಡ ಈಗಾಗಲೇ ಭೇಟಿ ನೀಡಿದೆ.
ಈ ಹಿಂದಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಒಡೆದ ಮನೆ ಎಂಬ ಆರೋಪ ಕೇಳಿಬಂದಿತು. ಇದೇ ಮೊದಲ ಬಾರಿ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದೆ.