ಉಳ್ಳಾಲ : ಡಿಸೆಂಬರ್ 27: ಶಾಲೆ ಮುಗಿದ ಬಳಿಕ ಮನೆಗೆ ತೆರಳಲು ಬಸ್ ಗೆ ಕಾಯುತ್ತಿದ್ದ 14 ರ ಹರೆಯದ ವಿದ್ಯಾರ್ಥಿಗೆ ಮಾರುತಿ ಬ್ರಿಝಾ ಕಾರೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿದ್ದ ಘಟನೆ ಇಂದು ಸಂಜೆ ಉಳ್ಳಾಲದಲ್ಲಿ ಸಂಭವಿಸಿದೆ. ಬೋಳಿಯಾರು ಭಟ್ರಬೈಲು ನಿವಾಸಿ ಹರಿಶ್ಚಂದ್ರ -ಅರುಣಾಕ್ಷಿ ದಂಪತಿ ಪುತ್ರ ಕಾರ್ತಿಕ್ (14) ಮೃತ ಬಾಲಕ. ಈತ ಮುಡಿಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿ.
ಶಾಲೆ ಬಿಟ್ಟು ಮನೆಗೆ ತೆರಳಲು ರಸ್ತೆಬದಿಯಲ್ಲಿ ನಿಂತಿದ್ದ ಬಾಲಕನಿಗೆ ಮುಡಿಪು ಕಡೆಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಬಸ್ಸೊಂದನ್ನು ಓವರ್ ಟೆಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದ್ದಾಗಿ ಆಕ್ರೋಶ ಭರಿತ ಸಾರ್ವಜನಿಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ
ಸ್ಥಳೀಯರ ಆರೋಪಕ್ಕೆ ಪುಷ್ಟಿ ನೀಡುವಂತೆ ಬಾಲಕನಿಗೆ ಢಿಕ್ಕಿ ಹೊಡೆದ ಕಾರು ನಂತರ ಸಮೀಪದಲ್ಲೇ ಇದ್ದ ರಿಕ್ಷಾಗೂ ಢಿಕ್ಕಿ ಹೊಡೆದಿದೆ. ಕಾರು ಮಾಲಕ ಟ್ರಯಲ್ ನೋಡಲು ಇನ್ನೋರ್ವ ಗೆಳೆಯನಿಗೆ ಕಾರು ನೀಡಿದ್ದ ಸಂದರ್ಭ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಅಪಘಾತಕ್ಕಿಡಾದ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೊಸ ಕಾರು ಬ್ರಿಝಾ ಕಾರು ಬುಕ್ ಮಾಡಲು ನಿರ್ಧರಿಸಿದ್ದು ಅದಕ್ಕೂ ಮೊದಲು ಕಾರನ್ನು ಟ್ರಯಲ್ ನೋಡಲು ಸ್ನೇಹಿತ ಕಾರನ್ನು ಕೆಲ ಗಂಟೆಗಳ ಕಾಲ ಎರವಲು ಪಡೆದಿದ್ದ. ಈ ವೇಳೆ ಕಾರಿನ ಸ್ಪೀಡ್ ಟೆಸ್ಟ್ ಮಾಲು ಹೋಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮಂಗಳೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

