ವಿಟ್ಲ: ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ವಿಟ್ಲ ಇದರ ವತಿಯಿಂದ ಸೆಪ್ಟೆಂಬರ್ 24 ರಂದು ವಿಟ್ಲ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಮಿತಿ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಬೆಂಞನ್ತಿಮಾರು ವಿಟ್ಲದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಆಗ್ರಹಿಸಿ, ತನಿಖೆಯನ್ನು ನಿಷ್ಕ್ರಿಯಗೊಳಿಸಿದ ತನಿಖಾಧಿಕಾರಿಗಳನ್ನು, ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರನ್ನು ತನಿಖೆಗೆ ಒಳಪಡಿಸಬೇಕು, ಅಮಾಯಕ ಹೆಣ್ಣೊಬ್ಬಳನ್ನು ಕೊಂದು ಮುಗಿಸಿದ, ನಿಜವಾದ ರಕ್ತಪಿಪಾಸುಗಳನ್ನು ಶಿಕ್ಷಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು.
ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟನವರ್, ತಮ್ಮಣ್ಣ ಶೆಟ್ಟಿ, ಸೌಜನ್ಯ ತಾಯಿ ಭಾಗವಹಿಸಲಿದ್ದಾರೆ.ವಿವಿಧ ಸಂಘಟನೆಗಳ ಸಹಕಾರದಿಂದ ನಡೆಯುವ ಪ್ರತಿಭಟನಾ ಮೆರವಣಿಗೆ ವಿಟ್ಲದ ರಥದ ಗದ್ದೆಯ ಬಳಿಯಿಂದ ಮಧ್ಯಾಹ್ನ 3.30 ಕ್ಕೆ ಹೊರಡಲಿದೆ, ಬಳಿಕ ಪ್ರತಿಭಟನಾ ಸಭೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು, ಕಾರ್ಯಾಧ್ಯಕ್ಷ ಚಂದ್ರಶೇಖರ ಯು., ಸಂಘಟನಾ ಕಾರ್ಯದರ್ಶಿ ಗಣೇಶ್ ಸೀಗೆಬಲ್ಲೆ, ಸಮಿತಿಯ ಪದಾಧಿಕಾರಿಗಳಾದ ಅಜಯ್ ಕೇಪು, ಚೇತನ್ ಕಡಂಬು ಉಪಸ್ಥಿತರಿದ್ದರು.