ಬೆಂಗಳೂರು: “ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೋ ಗೊತ್ತಿತ್ತು. ವಂಚನೆಗೊಳಗಾಗಿರುವ ಉದ್ಯಮಿ ಗೋವಿಂದಬಾಬು ಪೂಜಾರಿ ನನಗೆ ತುಂಬಾ ಆತ್ಮೀಯ ಸ್ನೇಹಿತರು, ಇದನ್ನು ನೀವು ನೀವೇ ಮುಗಿಸಿಕೊಳ್ಳಿ ಎಂದು ಹೇಳಿದ್ದೆ” ಎಂದು ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ (Chakravarthi Sulibele) ಹೇಳಿದ್ದಾರೆ.
ಚೈತ್ರಾ ಕುಂದಾಪುರ ಬಂಧನದ ಬೆನ್ನಲ್ಲೇ ಈ ಪ್ರಕರಣದ 3ನೇ ಆರೋಪಿ ಅಭಿನವ ಹಾಲಶ್ರೀ ಜೊತೆಗಿದ್ದ ಸೂಲಿಬೆಲೆ ಅವರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇಂದು ಗುರುಪುರ ವಜ್ರಾದೇಹಿ ಶ್ರೀಗಳು ಚೈತ್ರಾ ಪ್ರಕರಣದಲ್ಲಿ ನಾನು ಸೂಲಿಬೆಲೆ ಹತ್ರ ಮಾತಾನಾಡಿದ್ದೇ ಎಂದ ನಂತರ ವಿಷಯದ ಬಗ್ಗೆ ಚರ್ಚೆ ಪ್ರಾರಂಭವಾಗಿತ್ತು.
ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, “ಹಾಲಾಶ್ರೀ ಸ್ವಾಮೀಜಿ ನನಗೆ ಆಪ್ತರು, ಯುವ ಬ್ರಿಗೇಡ್ ನ ಹೆಚ್ಚಿನ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ. ಈ ಸ್ವಾಮಿ ಸೇರಿದಂತೆ ಹೆಚ್ಚಿನ ಎಲ್ಲಾ ಸ್ವಾಮೀಜಿಗಳ ಜೊತೆ ನನಗೆ ಸಂಪರ್ಕ ಇದೆ. ಹಾಗಂತ ನನ್ನ ಹೆಸರು ಈ ಪ್ರಕರಣದಲ್ಲಿ ಥಳಕು ಹಾಕುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಹಾಲಶ್ರೀ ಸ್ವಾಮೀಜಿ ಸಿಕ್ಕಿದಾಗ ನಾನು ಇದರ ಬಗ್ಗೆ ಕೇಳ್ತೇನೆ ಎಂದು ಸೂಲಿಬೆಲೆ ಹೇಳಿದರು.
“ಗೋವಿಂದಬಾಬು ಪೂಜಾರಿ ನನಗೆ ಆತ್ಮೀಯ ಸ್ನೇಹಿತರು. ಅವರು ನನಗೆ ಈ ವಿಚಾರ ತಿಳಿಸಿದಾಗ ನಾನು ಆಘಾತಕ್ಕೊಳಗಾಗಿದ್ದೆ ಅವರು ಮೋಸ ಹೋಗಿದ್ದಕ್ಕೆ ನನಗೆ ಬೇಸರವಿದೆ. ನನಗ್ಯಾಕೆ ಮೊದಲೇ ಮಾತನಾಡ್ಲಿಲ್ಲ ಕೇಳಿದ್ದೆ . ಆ ತಂಡ ಗೌಪ್ಯ ಕಾಪಾಡಬೇಕು ಎಂದು ಹೇಳಿದ ನಂತರ ಬಾಬು ಪೂಜಾರಿಯವರು ಯಾರಲ್ಲೂ ಹೇಳಿಲ್ಲ. ಈ ತರಹದ್ದು ಪಕ್ಷದಲ್ಲಿ ನಡೆಯೋದಿಲ್ಲ. ಯಾರೂ ದುಡ್ಡು ಕೇಳಿದರೂ ಕೊಡಬೇಡಿ ಅಂದಿದ್ದೆ ಎಂದರು.
ಗೋವಿಂದ್ ಬಾಬು ಪೂಜಾರಿ ಜೊತೆ ಇದನ್ನು ಮಾತುಕತೆಯಲ್ಲಿ ಬಗೆಹರಿಸಿಕೊಳ್ಳಿ ಎಂದಿದ್ದೆ ಎಂದರು.
ಬಿಜೆಪಿ ಸಮೀಕ್ಷೆಗಳು ಸುಳ್ಳು, ಸರ್ವೆ ನಂಬಿ ದುಡ್ಡು ಕೊಡಬೇಡಿ, ಯಾವಾ ಸರ್ವೆ ಎಂದು ಯಾರಿಗೂ ಗೊತ್ತಿಲ್ಲ ಎಂದು ಹಲವರಿಗೆ ಹೇಳಿದ್ದು ಎಂದು ಸೂಲಿಬೆಲೆ ಹೇಳಿದರು.
ಪೂಜಾರಿಯವರ ಈ ವಿಚಾರವನ್ನು ನಾನು ಈ ಹಿಂದೆಯೇ ಸಿ.ಟಿ.ರವಿ ಗಮನಕ್ಕೂ ತಂದಿದ್ದೆ. ಬಿಜೆಪಿಯಲ್ಲಿ ಈ ರೀತಿ ನಡೆಯಲ್ಲವೆಂದು ಜನರಿಗೆ ಗೊತ್ತಾಗಬೇಕು. ಗೊತ್ತಾಗೋದರಲ್ಲಿ ತಪ್ಪಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದರು ಎಂದು ಸೂಲಿಬೆಲೆ ತಿಳಿಸಿದರು.
“ಚೈತ್ರಾ ಕುಂದಾಪುರ ಅವರನ್ನು ಸುಮಾರು 10 ವರ್ಷಗಳ ಹಿಂದೆ ನೋಡಿದ್ದೆ. ನನ್ನ ಮತ್ತು ಅವರ ಮಧ್ಯೆ ಬೇರೆ ಯಾವುದೇ ಹಣದ ವ್ಯವಹಾರ ಇಲ್ಲ, ವಂಚನೆ ಪ್ರಕರಣದಲ್ಲಿ ನನ್ನ ಹೆಸರು ಬಂದಿದ್ದಕ್ಕೆ ಬೇಸರವಿಲ್ಲ. ಸಿಸಿಬಿ ಕರೆದರೆ ವಿಚಾರಣೆಗೆ ಹೋಗುತ್ತೇನೆ, ಮಾಹಿತಿ ಕೇಳಿದರೆ ನೀಡುತ್ತೇನೆ” ಎಂದು ತಿಳಿಸಿದರು.