ಪುತ್ತೂರು ನಗರ ಸಭೆ ವ್ಯಾಪ್ತಿಯ ಮಹಿಳಾ ಪೊಲೀಸ್ ಠಾಣೆಯ ಎರಡು ಫರ್ಲಾಂಗ್ ದೂರದಲ್ಲಿರುವ ಮುಖ್ಯ ರಸ್ತೆಯ ಪಕ್ಕದ ಕಾಂಪ್ಲೆಕ್ಸ್ ಒಂದರಲ್ಲಿ ಅನಧಿಕೃತವಾಗಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. ಕಾಮಗಾರಿ ಸ್ಥಗಿತಗೊಳಿಸುವಂತೆ ನಗರ ಸಭೆ ಸೂಚಿಸಿದರೂ ಕಟ್ಟಡ ಮಾಲಿಕರು ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಎದ್ದು ಕಾಣುತ್ತಿದೆ. ಅಲ್ಲಿ ಕಾಮಗಾರಿ ನಿರಂತರವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಗರ ಸಭೆ ಕಣ್ಮುಚ್ಚಿ ಕುಳಿತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕಾಂಪ್ಲೆಕ್ಸ್ ಹಳೆಯ ಕಟ್ಟಡವಾಗಿದ್ದು, ಮೇಲ್ನೋಟಕ್ಕೆ ಬಹಳಷ್ಟು ಶಿಥಿಲಗೊಂಡಂತೆ ಕಾಣುತ್ತಿದೆ. ಕಟ್ಟಡ ಈಗಾಗಲೇ ಒಂದು ಅಂತಸ್ತು ಹೊಂದಿದ್ದು, ಇದೀಗ ಮೇಲ್ಚಾವಣಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.
ಈ ಕುರಿತು ವಾರ್ಡ್ ನಿವಾಸಿಗಳಿಂದ ದೂರು ಬಂದ ಕಾರಣ ಕಾನೂನು ಪ್ರಕಾರ ಪರಿಶೀಲನೆಯನ್ನು ನಡೆಸಿ ವಾಣಿಜ್ಯ ಕಟ್ಟಡ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಂಡು ಕಾಮಗಾರಿಯನ್ನು ತಡೆ ಹಿಡಿಯಬೇಕೆಂದು ನಗರ ಸಭೆ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಅವರು 2023 ಜುಲೈ 13 ರಂದು ಪೌರಾಯುಕ್ತರಿಗೆ ದೂರು ನೀಡಿದ್ದರು.
ಕಟ್ಟಡ ನಿರ್ಮಾಣ ಅಭಾದಿತ – ಮಾಹಿತಿ ಹಕ್ಕಿಗೂ ಉತ್ತರವಿಲ್ಲ
ಹಳೆಯ ಕಟ್ಟಡವೊಂದರಲ್ಲಿ ಮೇಲ್ಚಾವಣಿ ನಿರ್ಮಾಣ ಮಾಡುತ್ತಿರುವುದನ್ನು ಗಮನಿಸಿದ ಸಾಮಾಜಿಕ ಹೋರಾಟಗಾರರು ನಗರ ಸಭೆಯಿಂದ ನೀಡಲಾದ ಪರವಾನಿಗೆಯ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳುವ ಪ್ರಯತ್ನ ಮಾಡಿದ್ದರು. ಇದಕ್ಕೆ 30 ದಿನ ಕಳೆದರೂ ಯಾವುದೇ ಉತ್ತರವನ್ನು ಅಧಿಕಾರಿಗಳು ನೀಡಿಲ್ಲದ ಕಾರಣ ಮೇಲ್ಮನವಿ ಸಲ್ಲಿಸುವ ಕಾರ್ಯವಾಗಿದೆ. ನಗರ ಸಭೆ ಮಾಹಿತಿ ನೀಡಲು ಹಿಂದೇಟು ಹಾಕಿರುವುದು ಜನರ ನಡುವೆ ಸಂಶಯ ಹುಟ್ಟು ಹಾಕಿದೆ. ಇದರ ಹಿಂದೆ ಯಾರಾನ್ನದಾರೂ ರಕ್ಷಿಸುವ ಹುನ್ನಾರ ಅಡಗಿದೆಯೇ ? ಎನ್ನುವ ಪ್ರಶ್ನೆಗಳು ಎದ್ದಿವೆ.

ನಿತ್ಯ ಸಂಚರಿಸುವ ಮುಖ್ಯ ರಸ್ತೆಯಲ್ಲೇ ಆರು ತಿಂಗಳಿಂದ ಮೇಲ್ಚಾವಣಿ ನಿರ್ಮಾಣದ ಕಾರ್ಯವಾಗುತ್ತಿದ್ದರೂ,ನಗರ ಸಭೆ ಯಾವುದೇ ಕ್ರಮವನ್ನೂ ಜರುಗಿಸಲು ಮುಂದಾಗಿಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿಗೂ ಕಾರಣವಾಗಿತ್ತು. ದೊಡ್ಡ ಮೊತ್ತದ ಗಂಟೊಂದು ಕೈ ಬದಲಾದ ಕಾರಣ ಸಂಬಂಧಪಟ್ಟವರು ನೋಡಿಯೂ ನೋಡದಂತೆ ವರ್ತಿಸುತ್ತಿದ್ದಾರೆ ಎಂಬ ಗುರುತರ ಆರೋಪವು ಕೇಳಿ ಬಂದಿದೆ.
ನವೀಕರಣ ರದ್ದು

ಸಂಬಂಧಿತ ಕಾಂಪ್ಲೆಕ್ಸ್ ನಲ್ಲಿ ಕಟ್ಟಡ ರಚನೆಯನ್ನು ಪೂರ್ಣಗೊಳಿಸಲು 1998ಮೇ24ರಿಂದ 2024 ಮೇ23 ರವರೆಗೆ ಪರವಾನಿಗೆ ನವೀಕರಿಸಲಾಗಿದೆ. 2023 ಜುಲೈ 15 ರಂದು ಕಾರ್ಯಪಾಲಕ ಅಭಿಯಂತರರು ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ಮಾಡಿದಾಗ ನೆಲ ಮಹಡಿಯ ಕಾಲಮ್ ಗಳಲ್ಲಿ ಬಿರುಕುಗಳು ಬಂದಿರುವುದು ಕಂಡಿದೆ. ಮಳೆ ನೀರು ಹರಿಯುವ ರಾಜ ಕಾಲುವೆ ಬದಿಯಲ್ಲಿದ್ದು ಸುರಕ್ಷತೆಯ ದೃಷ್ಠಿಯಿಂದ ಕಟ್ಟಡದ ಪರವಾನಿಗೆ ರದ್ದುಪಡಿಸಲು ಹಾಗೂ ಕಟ್ಟಡ ಭದ್ರತೆ ಪರಿಶೀಲಿಸಿ ಪರವಾನಿಗೆಗೆ ಅರ್ಜಿ ಸಲ್ಲಿಸುವಂತೆ ವರದಿ ನೀಡಿದ್ದರು. ಈ ಪ್ರಕಾರ ತಕ್ಷದಿಂದ ಪರವಾನಿಗೆ ನವೀಕರಣ ನಡವಳಿಯನ್ನು ರದ್ದುಗೊಳಿಸಲಾಗಿದೆ. ಕಟ್ಟಡ ಭದ್ರತೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ದೃಢೀಕರಣ ಪಡೆದು ಮರು ಪರವಾನಿಗೆಗೆ ಅರ್ಜಿ ಸಲ್ಲಿಸುವಂತೆ 2023ರ ಆಗಸ್ಟ್ 4ರಂದು ಪೌರಾಯುಕ್ತರು ಮಾಲೀಕರಿಗೆ ನಡುವಳಿಯನ್ನು ಕಳುಹಿಸಿದ್ದಾರೆ.
ಸ್ಥಗಿತಗೊಳಿಸುವಂತೆ ಸೂಚಿಸಿದ್ದೇವೆ
ಹಿಂದೆ ಕಟ್ಟಡ ಪರವಾನಿಗೆ ಪಡೆಯುವ ಸಂದರ್ಭ ನೀಡಿದ ಬಿಲ್ಡಿಂಗ್ ಡಿಸೈನ್ ನಲ್ಲಿ ಎರಡು ಮೇಲಂತಸ್ತು ಇತ್ತು. ಆದರೆ ಆಗ ಒಂದು ಅಂತಸ್ತು ಅಷ್ಟೆ ನಿರ್ಮಾಣ ಮಾಡಲಾಗಿತ್ತು. ಈಗ ಎರಡನೇ ಅಂತಸ್ತು ನಿರ್ಮಾಣ ಮಾಡುವ ಬಗ್ಗೆ ಅರ್ಜಿ ಹಾಕಿದ್ದು, ಕಟ್ಟಡ ತುಂಬಾ ಹಳೆಯದಾದ ಕಾರಣ ಅದನ್ನು ತಿರಸ್ಕರಿಸಲಾಗಿತ್ತು. ಹಾಗಾಗಿಯೂ ನಗರ ಸಭೆಗೆ ತಿಳಿಸದೆ ನಿರ್ಮಾಣ ಕಾರ್ಯ ನಡೆದಿದ್ದು, ನೋಟೀಸ್ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಬುಧವಾರ ಬೆಳಗ್ಗೆ ಎ.ಇ.ಇ. ಅವರು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿ ಮೇಲಂತಸ್ತು ಕಟ್ಟದಂತೆ ಸೂಚನೆಯನ್ನೂ ನೀಡಿದ್ದಾರೆ ಎಂಬ ಮಾಹಿತಿಯನ್ನು ಪುತ್ತೂರು ನಗರ ಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್ ನೀಡಿದ್ದಾರೆ.