ಉಜಿರೆ: ವ್ಯಕ್ತಿತ್ವದ ಸರ್ವತೋಮುಖ ವಿಕಸನವೇ ಶಿಕ್ಷಣದ ಗುರಿಯಾಗಿದೆ. ಇಂದು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಮುಕ್ತ ಅವಕಾಶವಿದ್ದು, ಶಿಕ್ಷಣದೊಂದಿಗೆ ಜ್ಞಾನ ಮತ್ತು ಕೌಶಲ ಅಭಿವೃದ್ಧಿ ಮಾಡಿಕೊಳ್ಳಬೇಕು. ಇದನ್ನು ವಿವೇಕದಿಂದ ಲೋಕಕಲ್ಯಾಣಕ್ಕಾಗಿ ಬಳಸಿ ಬದುಕಿನ ಸೊಗಡನ್ನು ಆನಂದಿಸಿ, ಆಸ್ವಾದಿಸಿ ಅನುಭವಿಸಬೇಕು ಎಂದು ಮೈಸೂರಿನ ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಪ್ರಕಟಿಸಲಾದ 29ನೆ ವರ್ಷದ ಜ್ಞಾನಶರಧಿ’’ ಮತ್ತು
ಜ್ಞಾನವಾರಿಧಿ’’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಪಂಚೇಂದ್ರಿಯಗಳ ಮೂಲಕವೂ ನಾವು ಜ್ಞಾನಸಂಗ್ರಹ ಮಾಡಬಹುದು. ನಮ್ಮ ಸುತ್ತ ಮುತ್ತಲಿನ ಪ್ರಕೃತಿ-ಪರಿಸರ ಹಾಗೂ ಜೀವನದಲ್ಲಿ ನಡೆಯುವ ಘಟನೆಗಳಿಂದನಾವು ಅಪಾರ ಜ್ಞಾನ, ಮಾಹಿತಿ ಕಲೆ ಹಾಕಬಹುದು ಎಂದು ಅವರು ಸಲಹೆ ನೀಡಿದರು.

ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ವಿತರಿಸಿದ ಚಲನಚಿತ್ರ ನಟ ಸಿಹಿಕಹಿ ಚಂದ್ರು ಮಾತನಾಡಿ, ನಿರ್ಧಿಷ್ಟ ಗುರಿ, ತ್ಯಾಗ, ದೃಢಸಂಕಲ್ಪ ಮತ್ತು ಉತ್ತಮ ಶಿಸ್ತಿನ ಮೂಲಕ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬದುಕಿನಲ್ಲಿ ಹಾಸ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದ ಅವರು ಸದಾ ನಗು ನಗುತ್ತಾ ಜೀವನದ ಸೊಗಡನ್ನು ಅನುಭವಿಸಬೇಕು ಎಂದು ಹೇಳಿದರು. ಶುಭಾಶಂಸನೆ ಮಾಡಿದ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕಿ ಸುಮಂಗಲಾ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಧನಾತ್ಮಕ ಚಿಂತನೆಯೊಂದಿಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಶಾಂತಿವನ ಟ್ರಸ್ಟ್ ನ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆಯಿಂದ ಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

ಹೇಮಾವತಿ ವೀ. ಹೆಗ್ಗಡೆ ಅಧ್ಯಕ್ಷತೆ ವಹಿಸಿದರು. ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ ಜೈನ್ ಸ್ವಾಗತಿಸಿದರು.

ಕುಂಚ-ಗಾನ-ನೃತ್ಯ ವೈಭವ:-
ವಿದುಷಿ ಶ್ರೇಯ ಕೊಳತ್ತಾಯ ಮತ್ತು ಬಳಗದವರ ಸುಶ್ರಾವ್ಯ ಗಾಯನ, ದಾವಣಗೆರೆಯ ಬಾಬಲೇಶ್ವರರ ಚಿತ್ರ ರಚನೆ ಮತ್ತು ಮಂಗಳೂರಿನ ಶಾರದಾ ಮಣಿಶೇಖರ್ ಶಿಷ್ಯೆಯರ ಆಕರ್ಷಕ ನೃತ್ಯ ಪ್ರದರ್ಶನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.
