ಮುಸ್ಲಿಮರಿಗಷ್ಟೆ (Muslim) ಗಂಡಸ್ತನ, ಮೀಸೆ ಇರುವುದಲ್ಲ. ಹಿಂದೂ (Hindu) ಹುಡುಗರಿಗೂ ಇದೆ. ಹಿಂದೂ ಹುಡುಗರು ಕೂಡ ಮುಸ್ಲಿಂ ಹುಡುಗಿಯರನ್ನ ಲವ್ ಮಾಡಿ ಮತಾಂತರ ಮಾಡಬೇಕಾಗುತ್ತದೆ ಎಂದು ಸಿದ್ದರೂಢ ಇಂಟರ್ನ್ಯಾಷನಲ್ ಗುರುಕುಲಮ್ನ ಆರೂಢ ಭಾರತೀ ಸ್ವಾಮೀಜಿ (Aruda Bharathi Swamiji) ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರವು ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆಗಳ ವಾಪಸ್ ಪಡೆಯಲು ಮುಂದಾಗುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಇಂದು ಸಂತರ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು ಸ್ವಾತಂತ್ರಾನಂತರ ಹಿಂದೂ, ಜೈನ, ಸಿಖ್, ಬೌದ್ಧರ ಜನಸಂಖ್ಯೆ ಇಳಿಕೆಯಾಗುತ್ತಿದ್ದು, ಮುಸ್ಲಿಂ, ಕ್ರೈಸ್ತರ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದು ಬಲವಂತದ ಮತಾಂತರ ಸೂಚಿಸುತ್ತದೆ ಎಂದರು.
ಮುಂದುವರಿದು, ಹಿಂದೂ ಯುವತಿಯರನ್ನು ಬಲವಂತ ಮಾಡಿ ಮತಾಂತರ ಮಾಡಲಾಗುತ್ತಿದೆ. ಮುಸ್ಲಿಮರಿಗಷ್ಟೇ ಗಂಡಸ್ತನವಿಲ್ಲ. ಹಿಂದೂ ಹುಡುಗರಿಗೂ ಗಂಡಸ್ತನವಿದ್ದು, ಮುಸ್ಲಿಂ ಹುಡುಗಿಯರನ್ನು ಲವ್ ಮಾಡಿ, ಮತಾಂತರ ಮಾಡಬೇಕಾಗುತ್ತದೆ ಎಂದು ರಾಮೋಹಳ್ಳಿಯ ಆರೂಢ ಭಾರತೀ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಕ್ರಿಶ್ಚಿಯನ್ನರ ಮೇಲೂ ಕಿಡಿ
ನಾನು ಬೈಬಲ್ ಹಾಗೂ ಕುರಾನ್ ಓದಿದ್ದೇನೆ. ಹಿಂದೂಗಳ ದೇವಸ್ಥಾನ, ಮಂದಿರಗಳನ್ನ ಒಡೆದು ಹಾಕಿ, ಆ ಧರ್ಮದ ಅನುಯಾಯಿಗಳು ನೆಲೆನಿಲ್ಲದಂತೆ ನಾಶ ಮಾಡಬೇಕು ಅಂತ ಬೈಬಲ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರಿಂದ ಮುಸ್ಲಿಮರು ಕೂಡ ಹೊರತಾಗಿಲ್ಲ ಎಂದು ಭಾರತೀ ಸ್ವಾಮೀಜಿ ಹೇಳಿದರು.
ಸಭೆಯಲ್ಲಿ ಮಾತನಾಡಿದ ಮೇಲುಕೋಟೆಯ ಮಠದ ಪೀಠಾಧೀಧ್ಯಕ್ಷ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ನಮ್ಮ ರಾಷ್ಟ್ರದ ಹಲವಾರು ವಿಚಾರ ವಿನಿಮಯ ಮಾಡಲು, ಮುಖ್ಯವಾಗಿ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ವಿಚಾರವಾಗಿ ಇಂದು ಎಲ್ಲಾ ಸಾಧು ಸಂತರ, ಸನ್ಯಾಸಿಗಳ ಸಮಾವೇಶವನ್ನು ವಿಶ್ವ ಹಿಂದೂ ಪರಿಷತ್ ಆಯೋಜನೆ ಮಾಡಿದೆ.
ಮತಾಂತರ ಹಾಗೂ ಗೋಹತ್ಯೆ ಬಗ್ಗೆ ಸಾಧು ಸಂತರು ಚರ್ಚೆ ಮಾಡಬೇಕು. ಮತಾಂತರ ಹಾಗೂ ಗೋಹತ್ಯೆ ನಿಲ್ಲಬೇಕು. ಇದರಿಂದ ನಮ್ಮ ಸನಾತನ ಧರ್ಮಕ್ಕೆ ಪುಷ್ಟಿ ನೀಡಿದಂತೆ ಆಗುತ್ತದೆ. ಯಾವತ್ತೂ ನಮ್ಮ ಧರ್ಮ ಸಹಿಷ್ಣುತೆಯನ್ನೆ ಪ್ರತಿಪಾದಿಸುತ್ತದೆ. ಭಾರತದಲ್ಲಿ ಎಲ್ಲಾ ಧರ್ಮಿಗಳು ವಾಸ ಮಾಡುತ್ತಾರೆ. ಸೌಹಾರ್ದವಾದಂತ ವಾತವರಣದಲ್ಲಿ ಇರಬೇಕು ಎನ್ನುವುದು ನಮ್ಮ ಎಲ್ಲಾ ಹಿರಿಯರ ಚಿಂತನೆಯಾಗಿದೆ. ಹೀಗಾಗಿ ಮತಾಂತ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯದಂತೆ ಎಲ್ಲಾ ಯತಿಗಳು ಇಲ್ಲಿ ಸೇರಿ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದರು.
ಬಿಜೆಪಿಯಿಂದ ಹೋರಾಟ:
ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಯನ್ನು ಸರ್ಕಾರ ವಾಪಸ್ ಪಡೆಯಬಾರದು. ವಾಪಸ್ ಪಡೆಯಲು ಮುಂದಾದರೆ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ, ಸಂಸ್ಕೃತಿ ಕಾಪಾಡಬೇಕು. ಧರ್ಮ ಸ್ವಾತಂತ್ರ್ಯವು ಮತಾಂತರಕ್ಕೆ ಸ್ವಾತಂತ್ರ್ಯ ಆಗಬಾರದು ಎಂದು ಸಂತರು ಸಂದೇಶ ನೀಡಿದ್ದಾರೆ. ದುರ್ಬಲವಾದ ಕಾನೂನನ್ನು ಬಿಜೆಪಿ ಸರ್ಕಾರ ಬಲಪಡಿಸಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ಪುನಃ ದುರ್ಬಲಗೊಳಿಸಬಾರದು. ಹೀಗೆ ಮಾಡಿದರೆ ಹೋರಾಡಲಾಗುವುದು ಎಂದರು.