Communal Hooliganism ಉಳ್ಳಾಲ : ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ (Someshvara Beach) ಗುರುವಾರ ಸಂಜೆ ನಡೆದ ಮತೀಯ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 6 ಮಂದಿಯನ್ನು ಈವರೆಗೆ ಉಳ್ಳಾಲ ಹಾಗೂ ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇನ್ನಿಬ್ಬರು ಆರೋಪಿಗಾಗಿ ಪೊಲೀಶರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಅವರು, ಬಪ್ಪಿನಾಡು ನಿವಾಸಿ ಯತೀಶ್, ತಲಪಾಡಿ ನಿವಾಸಿಗಳಾದ ಸಚಿನ್, ಸುಹೇನ್, ಅಖಿಲ್ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಒಬ್ಬ ಅಪ್ರಾಪ್ತ ಬಾಲಕನಾಗಿದ್ದಾನೆ. ಮತ್ತಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಮೂರು ಪ್ರತ್ಯೇಕ ತಂಡಗಳು ತನಿಖೆ ಮುಂದುವರಿಸಿವೆ ಎಂದು ತಿಳಿಸಿದರು.
ಕೇರಳ ಚೆರ್ಕಳದ ಜಾರ್ಫ ಶರೀಫ್ ಮಂಜೇಶ್ವರದ ಮುಜೀಬ್ ಮತ್ತು ಅಶಿಕ್ ಎಂಬವರು ಮೂವರು ವಿದ್ಯಾರ್ಥಿನಿಯರ ಜತೆ ಸೋಮೇಶ್ವರ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ದುಷ್ಕರ್ಮಿಗಳ ತಂಡ ಈ ಮೂವರು ಯುವಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ.
ಘಟನಾ ಸ್ಥಳಕ್ಕೆ ಸಂಜೆ 7.20ರ ಹೊತ್ತಿಗೆ 112 ಗಸ್ತು ವಾಹನ ಆಗಮಿಸಿ ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಫತ್ರೆಗೆ ದಾಖಲಿಸಿದೆ. ಗಾಯಾಳುಗಳು ನೀಡಿದ ದೂರಿನ ಅಧಾರದಲ್ಲಿ ಒಟ್ಟು ಎಂಟು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ. ಈ ಪೈಕಿ 6 ಜನರನ್ನು ಬಂಧಿಸಿರುವ ಪೊಲೀಸರು ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಆರೋಪಿಗಳು ಎಲ್ಲರು ವಿಹಿಂಪ ಹಾಗೂ ಬಜರಂಗದಳದ ಕಾರ್ಯಕರ್ತರು ಎಂದು ಹಿಂದೂ ಮುಖಂಡರು ತಿಳಿಸಿದ್ದಾರೆ.
ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ ಮೂವರು ಯುವಕ ಮತ್ತು ಮೂವರು ಯುವತಿಯರು ಪರಸ್ಪರ ಪರಿಚಿತರು. ಯುವತಿಯರು ಹಾಗೂ ಯುವಕರು ಬೇರೆ ಬೇರೆ ಧರ್ಮಕ್ಕೆ ಸೇರಿದವರೆಂದು ಹೇಳಲಾಗುತ್ತಿದೆ. ಈ ಪೈಕಿ ಮೂವರು ಯುವಕರು ಕೇರಳದಿಂದ ಬಂದವರಾಗಿದ್ದಾರೆ. ಇವರೆಲ್ಲ ಜತೆಯಾಗಿ ಸಮುದ್ರ ತೀರದಲ್ಲಿ ಸುತ್ತಾಡುವುದನ್ನು ಗಮನಿಸಿದ ದುಷ್ಕರ್ಮಿಗಳ ತಂಡ ಪ್ರಶ್ನಿಸಿದೆ. ಮಾತಿಗೆ ಮಾತು ಬೆಳೆದು ತಂಡ ಕೇರಳ ಮೂಲದ ಮೂವರು ಯುವಕರ ಮೇಲೆ ಹಲ್ಲೆ ಮಾಡಿದೆ.
ಕಮಿಷನರ್ ಭೇಟಿ:
ಉಳ್ಳಾಲ ಠಾಣೆಗೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಭೇಟಿ ನೀಡಿದರು. ಸಿಸಿಬಿ ಎಸಿಪಿ ಪಿ.ಎ. ಹೆಗಡೆ ಹಾಗೂ ಉಳ್ಳಾಲ ಇನ್ ಸ್ಪೆಕ್ಟರ್ ಅವರಿಂದ ಮಾಹಿತಿ ಪಡೆದರು
ಬಿಜೆಪಿ- ಹಿಂದುತ್ವವಾದಿ ಪ್ರಮುಖರು ಠಾಣೆಗೆ ಭೇಟಿ:
ಉಳ್ಳಾಲ ಠಾಣೆಗೆ ಬಿಜೆಪಿ ಹಾಗೂ ಹಿಂದುತ್ವವಾದಿ ಸಂಘಟನೆಗಳ ಪ್ರಮುಖರು ಭೇಟಿ ನೀಡಿದರು. ಬಿಜೆಪಿ ಮುಖಂಡ ಸತೀಶ್ ಕುಂಪಲ ಹಾಗೂ ಇತರರು ಕಮಿಷನರ್ ಮಾಡಿ, ‘ಅಮಾಯಕ ಯುವಕರನ್ನು ಬಂಧಿಸಲಾಗಿದೆ. ತಕ್ಷಣ ಅವರನ್ನು ಬಿಡುಗಡೆಗೆ ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರಕರಣದ ಆರೋಪಿಗಳನ್ನಷ್ಟೇ ಬಂಧಿಸುವ ಭರವಸೆ ನೀಡಿದ ಕುಲದೀಪ್ ಜೈನ್ ಅವರು, ವಶಕ್ಕೆ ಪಡೆದವರು ಪ್ರಕರಣದಲ್ಲಿ ಇಲ್ಲದಿದ್ದರೆ ಅವರನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ನಂತರ ಸತೀಶ್ ಕುಂಪಲ ಮಾಧ್ಯಮಗಳ ಜತೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಬೆನ್ನಲ್ಲೇ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದಿದೆ.
ಅನ್ಯಕೋಮಿನ ಕಾಲೇಜು ವಿದ್ಯಾರ್ಥಿಗಳು ಸೋಮೇಶ್ವರ ಬೀಚ್ ಗೆ ಬಂದಿದ್ದಾರೆ. ಪವಿತ್ರ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸಿದಾಗ ಸ್ಥಳೀಯ ಯುವಕರು ಪ್ರಶ್ನೆ ಮಾಡಿದ್ದಾರೆ. ಇದು ತಪ್ಪಾದರೂ ದೇವರ ಕ್ಷೇತ್ರದ ಬಳಿ ಅಶ್ಲೀಲ ವರ್ತನೆ ಮಾಡಿದಾಗ ಆಕ್ರೋಶ ವ್ಯಕ್ತವಾಗುವುದು ಸಹಜ.
ಏನೇ ಆದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಲಿ. ಇಂತಹ ಘಟನೆಗಳಿಗೆ ಆಸ್ಪದ ನೀಡುವುದು ಬೇಡ ಅಮಾಯಕರ ಬಂಧನ ಸರಿಯಲ್ಲ, ಅಮಾಯಕರನ್ನ ಬಿಡುತ್ತೇವೆ ಎಂದಿದ್ದಾರೆ. ಯುವಕರು ನಮ್ಮ ಕಾರ್ಯಕರ್ತರಾ ಅಥವಾ ಅಲ್ಲವಾ ಅನ್ನೋದು ಪ್ರಶ್ನೆ ಅಲ್ಲ. ಅವರ ಕುಟುಂಬದವರು ವಿಷಯ ಹೇಳಿದಾಗ ನಾವು ಠಾಣೆಗೆ ಬಂದಿದ್ದೇವೆ ಎಂದರು.
ಎಲ್ಲ ವೈದ್ಯಕೀಯ ಕಾಲೇಜುಗಳ ಪ್ರಮುಖರ ಜತೆಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.