ಬಾಲಸೋರ್:
ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಸರಣಿ ರೈಲು ದುರಂತ (Train Accident) ಸಂಭವಿಸಿದೆ. ಅಪಘಾತಕ್ಕೀಡಾದ ರೈಲುಗಳ ಪೈಕಿ ಕರ್ನಾಟಕದಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಯಶವಂತಪುರ ಹೌರ ಎಕ್ಸ್ಪ್ರೆಸ್ ಕೂಡಾ ಇದೆ. ಈ ಹಿನ್ನೆಲೆ ಪ್ರಯಾಣಿಕರ ಸಹಾಯವಾಣಿಯನ್ನು ಬೆಂಗಳೂರಿನಲ್ಲಿಯೂ ಆರಂಭಿಸಲಾಗಿದೆ.
ಪಶ್ಚಿಮ ಬಂಗಾಳದ ಕೋಲ್ಕೊತಾದಿಂದ ತಮಿಳುನಾಡಿನ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು, ಮಾರ್ಗ ಮಧ್ಯೆ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅದೇ ಮಾರ್ಗದಲ್ಲಿ ಬಂದ ಬೆಂಗಳೂರಿಗೆ ಹೊರಟಿದ್ದ ಯಶವಂತಪುರ-ಹೌರಾ ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿದೆ. ಈ ಸರಣಿ ಅಪಘಾತದಲ್ಲಿಎರಡೂ ಪ್ರಯಾಣಿಕ ರೈಲುಗಳ ಹಲವು ಬೋಗಿಗಳು ಉರುಳಿಬಿದ್ದಿವೆ. ಪೈಕಿ ಅವಘಡದಲ್ಲಿ 233 ಮಂದಿ ಪ್ರಯಾಣಿಕರು ಮೃತಪಟ್ಟು 1000ಕ್ಕೂ ಮಿಕ್ಕಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.
ಉರುಳಿಬಿದ್ದ ಬೋಗಿಗಳಲ್ಲಿ ನೂರಾರು ಪ್ರಯಾಣಿಕರು ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಳೀಯ ಸಾವಿರಾರು ಜನ ಜಾತಿ ಧರ್ಮ ನೋಡದೇ ಮಾನವೀಯ ನೆಲೆಯಲ್ಲಿ ರಕ್ತ ದಾನ ಮಾಡಲು ಆಸ್ಪತ್ರೆಗೆ ಬರುತ್ತಿದ್ದಾರೆ. ಭೀಕರ ಅಪಘಾತದ ಹೊಣೆ ಹೊತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕೆಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.
ಒಡಿಶಾದಿಂದ ಪಶ್ಚಿಮ ಬಂಗಾಳದ ಕೋಲ್ಕೊತಾ ಮೂಲಕ ತಮಿಳುನಾಡಿನ ಚೆನ್ನೈಗೆ ಹೊರಟಿದ್ದ ‘ಕೋರಮಂಡಲ್ ಎಕ್ಸ್ಪ್ರೆಸ್’ ರೈಲು, ಬಹನಾಗ್ ಬಜಾರ್ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿದೆ. ಇದರಿಂದ ‘ಕೋರಮಂಡಲ್ ಎಕ್ಸ್ ಪ್ರೆಸ್’ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ ಪಕ್ಕದ ಮತ್ತೊಂದು ಹಳಿ ಮೇಲೆ ಬಿದ್ದಿವೆ. ಸರಿಯಾಗಿ ಇದೇ ಸಮಯಕ್ಕೆ, ಬೆಂಗಳೂರು ಕಡೆಗೆ ಬರುತ್ತಿದ್ದ ‘ಯಶವಂತಪುರ-ಹೌರಾ ಎಕ್ಸ್ಪ್ರೆಸ್’ ರೈಲು ಸಹ ಅದೇ ಮಾರ್ಗದಲ್ಲಿ ಪಕ್ಕದ ಹಳಿಯ ಮೇಲೆ ಬಂದಿದೆ. ಅಪಘಾತದಿಂದ ಚೆಲ್ಲಾಪಿಲ್ಲಿಯಾಗಿ ಪಕ್ಕದ ಹಳಿಗೆ ಬಿದ್ದಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳಿಗೆ ಹೌರಾ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದಿದೆ. ಇದರಿಂದ ಹೌರಾ ಎಕ್ಸ್ಪ್ರೆಸ್ನ ಹಲವು ಬೋಗಿಗಳೂ ಹಳಿ ತಪ್ಪಿದ್ದು, ಸಾವು ನೋವು ಹೆಚ್ಚಿವೆ. ಎರಡೂ ಎಕ್ಸ್ಪ್ರೆಸ್ ರೈಲುಗಳು ಶರವೇಗದಲ್ಲಿ ಬಂದ ಕಾರಣ ಅಪಘಾತದ ತೀವ್ರತೆ ಹೆಚ್ಚಾಗಿದೆ.
ಎಕ್ಸ್ಪ್ರೆಸ್ ರೈಲಿನ ಪಲ್ಟಿಯಾದ ಕೋಚ್ಗಳಲ್ಲಿ ಹೆಚ್ಚಿನವರು ಸಿಕ್ಕಿಹಾಕಿಕೊಂಡಿದ್ದಾರೆ. 300ಕ್ಕೂ ಅಧಿಕ ಮಂದಿ ಸಾವಾಗಿರುವುದಾಗಿ ಶಂಕಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳು ಸ್ಥಳಕ್ಕೆ ತೆರಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯ ಚರುಕು
3 ಎನ್ಡಿಆರ್ಎಫ್, 4 ಎಸ್ಡಿಆರ್ಎಫ್, ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ 50 ಆ್ಯಂಬುಲೆನ್ಸ್ಗಳು ದೌಡಾಯಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತದೆ. ಸಾರ್ವಜನಿಕರೂ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಡಿಶಾ ರೈಲು ಅಪಘಾತ ಸಹಾಯವಾಣಿ
ದಕ್ಷಿಣ ರೈಲ್ವೆ ಜತೆ ಪಶ್ಚಿಮ ಬಂಗಾಳ, ಒಡಿಶಾ ಸರಕಾರಗಳು ಕೈ ಜೋಡಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಗಾಯಾಳುಗಳು, ಮೃತಪಟ್ಟವರ ಮಾಹಿತಿ ಪಡೆಯಲು ಸಹಾಯವಾಣಿ ಸ್ಥಾಪಿಸಲಾಗಿದೆ.
ಬಾಲಸೋರ್- 8249591559
ಹೌರಾ- 033-26382217
ಶಾಲಿಮಾರ್-9332392339
ಖರಗ್ಪುರ-8972073925
ಬೆಂಗಳೂರು – 080-22356409
ಬಂಗಾರಪೇಟೆ – 08153 255253
ಕುಪ್ಪಂ – 8431403419
ವಿಶ್ವೇಶ್ವರ ಟರ್ಮಿನಲ್ ಬೈಯಪ್ಪನಹಳ್ಳಿ : 09606005129
ಕೆಆರ್ ಪುರಂ – 88612 03980
ಪಶ್ಚಿಮ ಬಂಗಾಳದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ
ಶಾಲಿಮಾರ್-ಕೋರಮಂಡ್ ಎಕ್ಸ್ಪ್ರೆಸ್ ರೈಲು ದುರಂತ ಆಘಾತ ತರಿಸಿದೆ. ರೈಲಿನಲ್ಲಿ ಪಶ್ಚಿಮ ಬಂಗಾಳದವರೇ ಹೆಚ್ಚಿರುವ ಸಾಧ್ಯತೆ ಇದೆ. ಒಡಿಶಾ ಸರಕಾರದ ಜತೆ ನಿರಂತರ ಸಮನ್ವಯ ಸಾಧಿಸಲಾಗುತ್ತಿದೆ. ತುರ್ತು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ರಕ್ಷಣೆಗೆ ನಮ್ಮ ಸರಕಾರ ಎಲ್ಲ ರೀತಿಯ ನೆರವು ನೀಡಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.