ಮಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲದಿರುವುದು ಉಭಯ ಜಿಲ್ಲೆಗಳ ಜನತೆಯ ನಿರಾಶೆಗೆ ಕಾರಣವಾಗಿದೆ. ಈ ಎರಡು ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಮಾತ್ರ ವಿಜಯಿಯಾಗಿತ್ತು. ಉಳಿದ 11 ಕ್ಷೇತ್ರಗಲಲ್ಲಿ ಬಿಜೆಪಿ ಸದಸ್ಯರು ವಿಜಯ ಸಾಧಿಸಿದ್ದಾರೆ.
ಮೇ 20 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಜತೆ 8 ಮಂದಿ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿಯೂ ಅಧಿಕಾರ ವಹಿಸಿಕೊಂಡಿದ್ದರು. ಇದಾಗಿ ವಾರದ ಬಳಿಕ ಇಂದು ಮತ್ತೆ 24 ಮಂದಿ ಸಚಿವ ಸಂಪುಟ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಸಂಪುಟ ಸಚಿವರ ಸಂಖ್ಯೆ 34ಕ್ಕೆರಿದೆ. ಈ ಮೂಲಕ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಆದರೇ ದ.ಕ ಹಾಗೂ ಉಡುಪಿಗೆ ಸೇರಿದ ಯಾರೊಬ್ಬರು ಸಚಿವ ಸಂಪುಟದಲ್ಲಿಲ್ಲ.
ಮಂಗಳೂರು ಕ್ಷೇತ್ರದಿಂದ ಯು.ಟಿ. ಖಾದರ್ ಮತ್ತು ಪುತ್ತೂರಿನಿಂದ ಅಶೋಕ ಕುಮಾರ್ ರೈ ಕಾಂಗ್ರೆಸ್ ಉಭಯ ಜಿಲ್ಲೆಗಳಲ್ಲಿ ಗೆದ್ದಿರುವ ಕ್ಷೇತ್ರಗಳು. , ಸತತ ಐದು ಬಾರಿ ಗೆಲುವು ಸಾಧಿಸಿರುವ ಯು.ಟಿ. ಖಾದರ್ ಸಚಿವರಾಗುವುದು ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೇ ಅವರನ್ನು ಅನಿರೀಕ್ಷಿತವಾಗಿ ವಿಧಾನಸಭೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಹೀಗಾಗಿ ವಿಧಾನ ಪರಿಷತ್ ಸದಸ್ಯರಾಗಿರುವ ಮಂಜುನಾಥ ಭಂಡಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹರೀಶ್ ಕುಮಾರ್ ಅವರ ಹೆಸರು ಸಹ ಸಚಿವ ಸ್ಥಾನಕ್ಕೆ ಕೇಳಿ ಬಂದಿದ್ದವು. ಆದರೇ ರಾಜ್ಯದಲ್ಲಿ ಯಾವುದೇ ವಿಧಾನ ಪರಿಷತ್ ಸದಸ್ಯರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಕಲ್ಪಿಸಿಲ್ಲ. ಇನ್ನು ಜಿಲ್ಲೆಯಿಂದ ಆಯ್ಕೆಯಾಗಿರುವ ಇನ್ನೊರ್ವ ಶಾಸಕ ಅಶೋಕ್ ಕುಮಾರ್ ರೈ ಹೆಸರು ಸಚಿವ ಸ್ಥಾನಕ್ಕೆ ಆರಂಭದಲ್ಲಿ ಕೇಳಿ ಬಂದಿತ್ತಾದರೂ ಬಳಿಕದ ದಿನಗಳಲ್ಲಿ ಅದು ತಣ್ಣಗಾಯಿತು.
‘ನಾನಾಗಿ ಸಚಿವ ಸ್ಥಾನ ಕೇಳುವುದಿಲ್ಲ. ಆದರೆ, ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಲು ನಿರ್ಧರಿಸಿದರೆ, ಶಿರಸಾವಹಿಸಿ ಆ ಜವಾಬ್ದಾರಿ ನಿಭಾಯಿಸಲು ಸಿದ್ಧ ‘ ಎಂದು ಆರಂಭದಲ್ಲಿ ಹೇಲಿದ ಹರೀಶ್ ಕುಮಾರ್ ಕೆಲ ದಿನಗಳ ಬಳಿಕ ಹೇಳಿಕೆ ಬದಲಾಯಿಸಿ ‘ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ’ ಎಂದು ಉಲ್ಟಾ ಹೊಡೆದರು.
‘ಪಕ್ಷವು ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧ. ಇದಕ್ಕಾಗಿ ದುಂಬಾಲು ಬೀಳುವುದಿಲ್ಲ’ ಎಂದೇ ಹೇಳುತ್ತಿದ್ದ ಮಂಜುನಾಥ ಭಂಡಾರಿ ಸಂಪುಟ ಸೇರಲು ಸಾಕಷ್ಟು ಕಸರತ್ತನ್ನೂ ನಡೆಸಿದ್ದರು. ಉಡುಪಿ ಜಿಲ್ಲೆಯ ಕೋಟಾದಲ್ಲಿ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರವೂ ಸ್ಥಳೀಯ ಕಾಂಗ್ರೆಸ್ಸಿಗರಲ್ಲಿ ಇತ್ತು. ಆದರೆ, ಈ ಇಬ್ಬರೂ ವಿಧಾನ ಪರಿಷತ್ ಸದಸ್ಯರಿಗೆ ಮುಖ್ಯಮಂತ್ರಿ ಮಣೆ ಹಾಕಿಲ್ಲ.
ರಾಜ್ಯ ಸಂಪುಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗುವುದು ಖಚಿತವಾಗಿದೆ.