ಪುತ್ತೂರು: ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಬೇಕು. ಈ ದಿಸೆಯಲ್ಲಿ ಸರಕಾರಿ ಶಾಲೆಗಳ ಗುಣ ಮಟ್ಟವನ್ನು ಹೆಚ್ಚಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ 3 ಮೊಡರ್ನ್ ಶಾಲೆಯನ್ನು ಆರಂಭಿಸಲಾಗುವುದು ಎಂದು ಪುತ್ತೂರಿನ ನೂತನ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ಮೇ 25 ರಂದು ನಡೆದ ಶಾಲಾ ಶೈಕ್ಷಣಿಕ ಪೂರ್ವ ಭಾವಿಯಲ್ಲಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ರಾಜಧಾನಿ ದೆಹಲಿಯಲ್ಲಿ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದು, ದೇಶಕ್ಕೆ ಮಾದರಿಯಾಗಿ ಶಾಲೆಯನ್ನು ನಡೆಸಲಾಗುತ್ತಿದೆ. ಮಾತೃಭಾಷೆ ಕನ್ನಡದ ಜತೆಗೆ ಇಂಗ್ಲಿಷ್ ಶಿಕ್ಷಣವನ್ನು ಶಾಲೆಗಳಲ್ಲಿ ನೀಡಬೇಕು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಶಾಲಾ ಬಸ್ ಗಳ ಅಗತ್ಯವಿರುವುದಿಲ್ಲ. ಹೊಸ ಚಿಂತನೆಗಳಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಕಾರ್ಯ ನಡೆಯಬೇಕೆಂದು ತಿಳಿಸಿದರು.
ಪುತ್ತೂರಿನ ಭಾಗದಲ್ಲಿ 327ಶಿಕ್ಷಕರ ಕೊರತೆ ಯಿದ್ದು, ಈ ಪೈಕಿ 130 ಶಿಕ್ಷಕರನ್ನು ಈ ಸಾಲಿನಲ್ಲಿ ಸರ್ಕಾರದಿಂದ ನೇರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರ ಆಯ್ಕೆಯ ಸಂದರ್ಭ ಶಿಕ್ಷಣ ಇಲಾಖೆ ಭಾಷಾ ಹಾಗೂ ವಿಷಯ ಪರಿಣತಿಯನ್ನು ಹೊಂದಿದ ಶಿಕ್ಷಕರನ್ನೆ ಆಯ್ಕೆ ಮಾಡಿಕೊಳ್ಳಬೇಕು . ಪಿಂಚಣಿ ವ್ಯವಸ್ಥೆಯ ಬಗ್ಗೆ ಸರ್ಕಾರಕ್ಕೆ ಒತ್ತಡ ಹಾಕುವ ಕಾರ್ಯ ಮಾಡಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪಾಣಾಜೆ ಗ್ರಾಮಕ್ಕೆ ಪುತ್ತೂರಿನಿಂದ ಶಾಲೆಯ ಸಮಯಕ್ಕೆ ತಲುಪುವ ರೀತಿಯಲ್ಲಿ ಸರ್ಕಾರಿ ಬಸ್ ಸೇವೆಯ ಅಗತ್ಯವಿದೆ. ಪುತ್ತೂರಿನಲ್ಲಿರುವ ಗುರುಭವನ ಶಿಥಿಲಾವಸ್ಥೆಯಲ್ಲಿದ್ದು ಅದರ ದುರಸ್ಥಿ, ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು ಅದನ್ನು ತುಂಬುವ ಕಾರ್ಯವಾಗಬೇಕು, ಗೌರವ ಶಿಕ್ಷಕರ ನೇಮಕವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಾಡಬೇಕು, ಎನ್. ಪಿ. ಎಸ್. ವ್ಯವಸ್ಥೆಯು ನಿವೃತ್ತಿಯಾಗುವ ಎಲ್ಲ ಶಿಕ್ಷಕರಿಗೆ ಸಿಗುವಂತಾಗಬೇಕು , ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಮುಖ್ಯ ಶಿಕ್ಷಕರಿಗೆ ಇ.ಎಲ್. ನೀಡಬೇಕು. ಶಾಲೆಗಳಿಗೆ ಲಾಂಡ್ ಲೈನ್ ಮೂಲಕ ಇಂಟರ್ ನೆಟ್ ವ್ಯವಸ್ಥೆ ಒದಗಿಸಬೇಕು, ಹಲವು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯೂ ನೆನೆಗುದಿಗೆ ಬಿದ್ದಿದ್ದು, ಇದರಿಂದಾಗಿ ಹಲವು ಶಿಕ್ಷಕರು ಕುಟುಂಬದಿಂದ ದೂರವಿದ್ದು ಉದ್ಯೋಗ ಮಾಡುವ ಪರಿಸ್ಥಿತಿಯಿದ್ದು ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಶಿಕ್ಷಕರು ಹಾಗೂ ಅವರನ್ನು ಪ್ರತಿನಿಧಿಸುವ ಸಂಘದ ಮುಖಂಡರುಗಳು ನೂತನ ಶಾಸಕರಲ್ಲಿ ಮನವಿ ಮಾಡಿದರು. ಈ ಕುರಿತು ತಾನೂ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದರು.
ವಿವಿಧ ಸಂಘ ಸಂಸ್ಥೆಗಳಿಂದ ಶಾಸಕರಾದ ಅಶೋಕ್ ಕುಮಾರ್ ರೈ ಅವರನ್ನು ಸನ್ಮಾನಿಸಲಾಯಿತು. ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕು ಐತಿಹಾಸಿಕ ಸಾಧನೆ ಮೆರೆದಿದ್ದು ಜಿಲ್ಲೆಯಲ್ಲಿ ಎರಡನೇ ಸಂಪಾದಿಸಿದ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಭಿನಂಧಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್., ಟಿಪಿಇಒ ಸುಂದರ, ಎಡಿಎಂಡಿ ವಿಷ್ಣುಪ್ರಸಾದ್, ಬಿಆರ್ಸಿಸಿ ನವೀನ್ ವೇಗಸ್, ಇಸಿಒ ಹರಿಪ್ರಸಾದ್, ಪ್ರೌಢ ಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ, ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್, ಪ್ರಧಾನ ಕಾರ್ಯದರ್ಶಿ ವಿಮಲ್, ಮುಖ್ಯಶಿಕ್ಷಕಿ ಕಾರ್ಮೆಲ್ ಮತ್ತಿತ್ತರರು ಉಪಸ್ಥಿತರಿದ್ದರು.