ಕಡಬ: ನೂತನ ತಾಲೂಕಿನ ಉದ್ಘಾಟನೆಯ ಜೊತೆಗೆ 4 ವರ್ಷಗಳ ಹಿಂದೆ ಶಂಕುಸ್ಥಾಪನೆ ಕಂಡಿದ್ದ ಕಡಬ ತಾಲೂಕು ಆಡಳಿತ ಸೌಧ ಪಂಚಾಯತ್ ನೂತನ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ( ಮಾ 24 ) ನೆರವೇರಿಸಲಿದ್ದಾರೆ.
4.5 ಕೋ. ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಸುನೀಲ್ ಕುಮಾರ್, ಎಸ್ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲು, ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಡಬ ತಾಲೂಕು ಕೇಂದ್ರವಾದರೂ ಕಂದಾಯ ಇಲಾಖೆಗೆ ಸಂಬಂಧಿಸಿದ ಕಚೇರಿಗಳು ಒಂದೇ ಸೂರಿನಡಿ ಬಾರದೇ ಇರುವುದರಿಂದ ಜನರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆದಾಡಬೇಕಾದ ಅನಿವಾರ್ಯತೆ ಮಾತ್ರ ತಪ್ಪಿರಲಿಲ್ಲ. ಕೆಲ ವರ್ಷಗಳ ಹಿಂದೆ ಕಡಬ ಎಪಿಎಂಸಿ ಉಪ ಪ್ರಾಂಗಣದ ಬಳಿ ಸ್ವಂತ ಕಟ್ಟಡಕ್ಕೆ ತಹಶೀಲ್ದಾರ್ ಕಚೇರಿ ಸ್ಥಳಾಂತರವಾದರೂ ಭೂಮಿ ಕೇಂದ್ರ, ಕಂದಾಯ ನಿರೀಕ್ಷಕರ ಕಚೇರಿ ಹಾಗೂ ದಾಖಲೆಗಳ ಕೊಠಡಿ ಈ ಹಿಂದೆ ತಹಶೀಲ್ದಾರ್ ಕಚೇರಿ ಇದ್ದ ಪಟ್ಟಣ ಪಂಚಾಯತ್ನ ಬಾಡಿಗೆ ಕಟ್ಟಡದಲ್ಲಿಯೇ ಉಳಿದಿದೆ.
ಭೂಮಾಪನಾ ಇಲಾಖಾ ಕಚೇರಿಯೂ ಕಡಬ ಪೇಟೆಯ ಬಾಡಿಗೆ ಕೊಠಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ.
ಅದರಿಂದಾಗಿ ಕಂದಾಯ ಇಲಾಖಾ ಕೆಲಸಕಾರ್ಯಗಳಿಗೆ ಗ್ರಾಮಗಳಿಂದ ತಾಲೂಕು ಕೇಂದ್ರಕ್ಕೆ ಬರುವ ಜನಕ್ಕೆ ಅಲೆದಾಟ ತಪ್ಪಿಲ್ಲ. ಕಡಬ ಪೇಟೆಯಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿಯಿಂದ ತಹಶೀಲ್ದಾರ್ ಕಚೇರಿಗೆ ಸರಿಸುಮಾರು 1 ಕಿ.ಮೀ. ದೂರವಿದೆ. ಕಂದಾಯ ಇಲಾಖೆ ಕೆಲಸವಾಗಬೇಕಿದ್ದರೆ ನೂತನ ತಾಲೂಕಿನ 42 ಗ್ರಾಮಗಳ ಜನತೆ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಅಲೆದಾಡುವುದು ಅನಿವಾರ್ಯ.
ಎಲ್ಲಾ ಕಂದಾಯ ಕಚೇರಿಗಳು ಒಂದೇ ಆವರಣದಲ್ಲಿ ಇದ್ದರೆ ಎಲ್ಲರಿಗೂ ಅನುಕೂಲ, ದೂರದ ಕಾಣಿಯೂರು, ಚಾರ್ವಾಕ, ಸವಣೂರು ಮುಂತಾದ ಭಾಗಗಳಿಂದ ಬರುವ ಜನರ ಪರದಾಟ ಹೇಳತೀರದು. ತಹಶೀಲ್ದಾರ್ ಕಚೇರಿ ಒಂದು ಕಡೆಯಾದರೆ ಕಂದಾಯ ನಿರೀಕ್ಷಕರ ಕಚೇರಿ ಇನ್ನೊಂದು ಕಡೆ ಇರುವುದರಿಂದ ಒಂದು ಸಣ್ಣ ಕೆಲಸವಾಗಬೇಕಿದ್ದರೆ ದಿನಪೂರ್ತಿ ಅಲೆದಾಟ, ಸಿಬಂದಿ ಕೊರತೆಯಿಂದಾಗಿ ಕೆಲಸ ಕಾರ್ಯಗಳು ಕೂಡ ನಿಗದಿತ ವೇಗದಲ್ಲಿ ಆಗುತ್ತಿಲ್ಲ.
ತಾಲೂಕು ಆಡಳಿತ ಸೌಧ ಕಚೇರಿಗಳು ಉದ್ಘಾಟನೆಗೊಂಡು ಎಲ್ಲಾ ಸೂರಿನಡಿ ಬಂದು ಅಗತ್ಯ ಸಿಬಂದಿ ನೇಮಕವಾದರೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಬಗೆಹರಿಯಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಅಡಳಿತ ಸೌಧಕ್ಕೆ 1.60 ಎಕ್ರೆ ಜಮೀನು
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ತೆರೆಯಲ್ಪಡಬೇಕು ಎನ್ನುವ ಸರಕಾರದ ಆಶಯದಂತೆ ಕಡಬದಲ್ಲಿ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮಂಜೂರುಗೊಂಡು ತಹಶೀಲ್ದಾರ್ ಕಚೇರಿ ಬಳಿ ಸರ್ವೆ ನಂಬ್ರ 130/1ಎಪಿ2 ರಲ್ಲಿ ಇರುವ 1.60 ಎಕರೆ ಜಮೀನಿನಲ್ಲಿ ಕರ್ನಾಟಕ ಗೃಹ ಮಂಡಳಿಯ ಮೂಲಕ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡಿದೆ. ನೂತನ ಸೌಧದಲ್ಲಿ ತಹಶೀಲ್ದಾರರ ಕಚೇರಿ, ಭೂ ದಾಖಲೆಗಳಸಹಾಯಕ ನಿರ್ದೇಶಕರ ಕಚೇರಿ, ಶಾಸಕರ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಸರ್ವೆ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸಲಿವೆ.
ಕಡಬದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿಯಲ್ಲಿ ಎಲ್ಲಾ ಕಚೇರಿಗಳು ಲಭ್ಯವಾಗುವಂತೆ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಲೂಕು ಆಡಳಿತ ಸೌಧ, 4.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಡಬ ತಾಲೂಕು ಪಂಚಾಯತ್ ಕಟ್ಟಡ ಸಹಿತ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾ.24ಕ್ಕೆ ನಡೆಯಲಿದೆ.
ಎಸ್.ಅಂಗಾರ, ಸಚಿವರು