Kadaba Wild elephant Attack ಪುತ್ತೂರು : ಕಾಡಾನೆಯೊಂದು ದಾಳಿ ನಡೆಸಿ ಅಮಾಯಕರಿಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಉಧ್ರಿಕ್ತರ ತಂಡವೊಂದು ನಾಡಿಗೆ ಬಂದಿರುವ ಆನೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಬಗ್ಗೆ ಕಡಬ ಠಾಣೆಯಲ್ಲಿ ಫೆ 24 ರಂದು ಪ್ರಕರಣ ದಾಖಲಾಗಿತ್ತು. ಈ ವೇಳೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಅವರಿಗೆ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಉಮೇಶ್ ಕಮರ್ಕಜೆ, ರಾಜೇಶ್ ಕನಡ ಕಮರ್ಕಜೆ, ಜನಾರ್ಧನ ರೈ ಕೊಲ್ಯ, ಕೋಕಿಲ ಕಮರ್ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ ಬಾರ್ಯ ಸಿರಿ ಬಾಗಿಲು ಮತ್ತು ಅಜಿತ್ ಕುಮಾರ್ ರೆಂಜಾಳ ಜಾಮೀನು ದೊರೆತ ಆರೋಪಿಗಳು.
ಏನಿದು ಪ್ರಕರಣ :
ರೆಂಜಿಲಾಡಿ ನೈಲದಲ್ಲಿ ಫೆಬ್ರವರಿ 20ರಂದು ಬೆಳ್ಳಂಬೆಳಗ್ಗೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಪೇರಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಜಿತಾ ರೈ ಮತ್ತು ನೈಲ ರಮೇಶ್ ರೈ ಎಂಬವರು ಮೃತಪಟ್ಟಿದ್ದರು ಈ ಬಳಿಕ ಪರಿಸರದ ನಾಗರಿಕರು ಆತಂಕದಿಂದಲೇ ದಿನ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು. ವಿಚಾರ ವಿಧಾನಸಭಾ ಅಧಿವೇಶನದಲ್ಲಿಯೂ ಪ್ರಸ್ತಾಪವಾಗಿತ್ತು.
ಕಳೆದ ಹಲವು ಸಮಯಗಳಿಂದ ಈ ಭಾಗದಲ್ಲಿ ಕಾಡಾನೆಗಳು ಹಾವಳಿಯಿಡುತ್ತಿದ್ದು, ಜನ ನೆಮ್ಮದಿ ಕಳೆದುಕೊಂಡು ಆತಂಕದಿಂದಲೇ ಬದುಕುವ ಸ್ಥಿತಿ ಒದಗಿತ್ತು. ಹೀಗಾಗಿ ಕಾಡಾನೆಗಳನ್ನು ಸೆರೆಹಿಡಿದು ಕೊಂಡೊಯ್ಯುವಂತೆ ಅಲ್ಲಿನ ನಾಗರೀಕರು ಒಕ್ಕೊರಳ ಆಗ್ರಹ ವ್ಯಕ್ತಪಡಿಸಿದ್ದರು. ಕೊನೆಗೂ ದುಬಾರೆಯಿಂದ ಸಾಕಾನೆಗಳನ್ನು ತರಿಸಿ ನಾಲ್ಕು ದಿನ ಸತತ ಕಾರ್ಯಚರಣೆ ನಡೆಸಿ ಫೆಬ್ರವರಿ 23ರಂದು ರಾತ್ರಿ ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮೂಜೂರು ಅರಣ್ಯ ಪ್ರದೇಶದಲ್ಲಿ ಒಂದು ಸೆರೆ ಹಿಡಿಯಲಾಗಿತ್ತು.
ಅದೇ ದಿನ ರಾತ್ರಿ 9:00 ಗಂಟೆ ಸುಮಾರಿಗೆ ಕಾಡಾನೆಯನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಕಾರ್ಯಾಚರಣ ತಂಡ ಮುಂದಾದಾಗ ನಾಗರಿಕರ ಗುಂಪೊಂದು ಲಾರಿಯನ್ನು ತಡೆದು, ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ ಇತರ ಕಾಡಾನೆಗಳನ್ನೂ ಸೆರೆ ಹಿಡಿದು ಒಟ್ಟಿಗೆ ಸಾಕಾನೆ ಹಾಗೂ ಕಾಡಾನಡ ಸೆರಿದಂತೆ ಎಲ್ಲಾ ಆನೆಗಳನ್ನು ಒಟ್ಟಿಗೆ ಕೊಂಡು ಹೋಗುವಂತೆ ಒತ್ತಾಯಿಸಿದ್ದರು. ಸೆರೆಹಿಡಿದ ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲವಾದ್ದರಿಂದ ನಾವು ಮೊದಲು ಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಆನೆಗಳನ್ನು ಸೆರೆ ಹಿಡಿಯುವುದಾಗಿ ಅಧಿಕಾರಿಗಳು ತಿಳಿಸಿದ್ದು ಇದಕ್ಕೆ ಸಾರ್ವಜನಿಕರ ಗುಂಪು ಅಸಮ್ಮತಿ ಸೂಚಿಸಿತ್ತು ಈ ವೇಳೆ ಕೆಲವರು ಕರ್ತವ್ಯದಲ್ಲಿದ್ದ ಪೊಲೀಸ್, ಅರಣ್ಯಇಲಾಖಾ ಸಿಬ್ಬಂದಿಗಳ ಮೇಲೆ ಕಲ್ಲುತೂರಾಟ ಮಾಡಿದ್ದರು.
ಇಲಾಖಾ ವಾಹನಗಳಿಗೂ ಕಲ್ಲುತೂರಾಟ ಮಾಡಿ ಹಾನಿ ಉಂಟು ಮಾಡಿದ್ದರಲ್ಲದೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ್ದಾಗಿ ಉಪವಲಯ ಅರಣ್ಯ ಅಧಿಕಾರಿ ಮದನ್ ಬಿ.ಕೆ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಕಲಂ 143, 144, 147, 148, 341, 353, 332, 307, 427, 504, 506 ಜೊತೆಗೆ 149 IPC ಮತ್ತು 2(ಸಿ), Karnataka Prevention of Destruction And Loss Of Property Act 1981 ರಂತೆ ಪ್ರಕರಣ ದಾಖಲಿಸಿಕೊಂಡು 7 ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಒಂದೆಡೆ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿದೆ ತತ್ಪರಿಣಾಮವಾಗಿ ಅಮಾಯಕರಿಬ್ಬರು ಬಲಿಯಾಗಿದ್ದಾರೆ. ಬಳಿಕ ಇಲ್ಲಿ ಜೀವನ ನಡೆಸಲು ಜನರು ಭಯ ಪಡುತ್ತಿದ್ದ ಸಂದರ್ಭ ಪೊಲೀಸರು ಅಮಾಯಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಜೈಲಿಗಟ್ಟಿರುವುದು ನ್ಯಾಯ ಸಮ್ಮತವಾದ ವಿಚಾರ ಅಲ್ಲ ಎಂದು ಆರೋಪಿಗಳ ಪರ ವಕೀಲ ಮಹೇಶ್ ಕಜೆ ಅವರು ನ್ಯಾಯಾಲಯದ ಗಮನ ಸೆಳೆದಿದ್ದರು.
ಅವರ ವಾದವನ್ನು ಪುರಸ್ಕರಿಸಿದ ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಪ್ರಭಾರವನ್ನು ಹೊಂದಿರುವ ಆರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಅವರು ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಮಾರ್ಚ್ 17ರಂದು ಆದೇಶಿಸಿದ್ದಾರೆ.