ಮೂಡುಬಿದಿರೆ, ಮಾ.2: ಇಲ್ಲಿನ ಜಿ.ಕೆ. ಎಂಟರ್ ಪ್ರೈಸಸ್ ಮಾಲಕ ಹಾಗೂ ಜಿ.ಕೆ. ಎಂದೇ ಖ್ಯಾತರಾಗಿದ್ದ ಗಣೇಶ್ ಕಾಮತ್ ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಇವರ ಜೀವನದ ಯಶಸ್ಸಿನ ಕಥೆಯೇ ರೋಚಕವಾಗಿದೆ (Success Story).
ಅವರಿಂದು ತನ್ನ ಮನೆಯಿಂದ ಮೂಡುಬಿದಿರೆಯಲ್ಲಿರುವ ಜಿ.ಕೆ. ಎಂಟರ್ಪ್ರೈಸಸ್ಗೆ ತೆರಳುತ್ತಿದ್ದಾಗ ಹೃದಯಾಘಾತಕ್ಕೊಳಗಾದರು. ತಕ್ಷಣ ಅವರನ್ನು ಆಸ್ಪತ್ರೆ ದಾಖಲಿಸುವ ಪ್ರಯತ್ನ ಮಾಡಲಾಯಿತು. ಆದರೆ, ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕಾರ್ಕಳದ ಗಾಂಧಿ ಮೈದಾನದಲ್ಲಿ ಹಗಲು-ರಾತ್ರಿ ಕ್ರಿಕೆಟ್ ಪಂದ್ಯಾಟಕ್ಕಾಗಿ ಲೈಟಿಂಗ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿದ್ದ ಗಣೇಶ್ ಕಾಮತ್ ತನ್ನೆರಡು ಕೈಗಳನ್ನು ಕಳೆದುಕೊಂಡಿದ್ದರು. ಆದರೂ ಧೃತಿಗೆಡದ ಅವರು ತನ್ನದೇ ಆದ ಜಿ.ಕೆ.ಎಂಟರ್ಪ್ರೈಸಸ್ ಉದ್ಯಮವನ್ನು ಪ್ರಾರಂಭಿಸಿದ್ದರು. ಉದ್ಯಮದೊಂದಿಗೆ ಸಮಾಜಮುಖಿಯಾಗಿದ್ದ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜಿಲ್ಲೆ ಮಾತ್ರವಲ್ಲ ರಾಜ್ಯ ಮಟ್ಟದಲ್ಲೂ ಅವರು ಪ್ರಸಿದ್ಧಿ ಪಡೆದಿದ್ದರು.
ಸುಮಾರು ಮೂವತ್ತು ವರ್ಷಗಳ ಹಿಂದೆ ಕಾರ್ಕಳದ ಗಾಂಧಿ ಮೈದಾನದಲ್ಲಿ ಶಾಮಿಯಾನ ಕಟ್ಟುತ್ತಿರುವಾಗ ಅಡ್ಡಕ್ಕೆ ಎಸೆದ ಕಬ್ಬಿಣದ ಹಗ್ಗ ಅಲ್ಲಿಯೇ ಮೇಲ್ಗಡೆಯುಂದಲೇ ಹಾದು ಹೋಗಿದ್ದ ವಿದ್ಯುತ್ ಹೈಟೆನ್ಶನ್ ತಂತಿಗಳ ಮೇಲೆ ಬಿದ್ದಾಗ ಯುವಕ ಗಣೇಶ್ ಕಾಮತ್ ಅವರ ದೇಹವೇ ಅರೆವಾಸಿ ಸುಟ್ಟಾಗಿತ್ತು.
ಮೂಡುಬಿದಿರೆಯ ಪ್ರಸಿದ್ಧ ಆರ್ .ಕೆ ಡೆಕೊರೇಟರ್ಸ್ ನಲ್ಲಿ ದುಡಿಯುತ್ತಿದ್ದರು. ಲಕ್ಷಾಂತರ ರೂಪಾಯಿಗಳ ವೈದ್ಯಕೀಯ ಖರ್ಚಿನಿಂದಾಗಿ ಯುವಕ ಬದುಕುಳಿದ. ಆದರೆ ತನ್ನೆರಡೂ ಕೈಗಳನ್ನು ಮೊಣಗಂಟಿನಿಂಗಲೇ ಕಳೆದುಕೊಳ್ಳಬೇಕಾಗಿ ಬಂತು.
ಪರಿಹಾರ ಇತ್ಯಾದಿ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲು ತುಳಿಯುತ್ತಲೇ ಇದ್ದ ಯುವಕ.
ಅದೊಂದು ದಿನ ಸುದ್ದಿಯಾಯಿತು ,ಜೀಕೆಯವರದ್ದು ಶಾಮಿಯಾನ ಮತ್ತು ವಿದ್ಯುತ್ ದೀಪಾಲಂಕಾರ ಕೆಲಸ ಪ್ರಾರಂಭವಾಗುತ್ತದೆ ಎಂದು. ಹಲವರು ಬಂಡವಾಳದ ನೆರವು ಕೊಟಿದ್ದರು.
ಎರಡೂ ಪ್ಲಾಸ್ಟಿಕ್ ಕೈಗಳು. ಅದಕ್ಕೆ ಸರಿಗೆಯಲ್ಲಿ ನಿಯಂತ್ರಣ. ಅವರ ಸಾಹಸ ಸಾಧನೆಗೆ ಮೆಚ್ಚಲೇಬೇಕು. ಸ್ವಂತ ತಾನೇ ಹಾಜರಿದ್ದುಕೊಂಡು ಕೆಲಸ ಮಾಡಿಸುವುದು.
ಜಿ.ಕೆ ಹೊರ ಜಿಲ್ಲೆಗೂ ಪಸರಿಸಿ ಬ್ರಾಂಡ್ ಆಗತೊಡಗಿತು.
ತನ್ನ ಕಚೇರಿಯಲ್ಲಿ ಕ್ಲರ್ಕ್ ಆಗಿದ್ದವಳನ್ನೇ ಮದುವೆಯಾದರು,ಸಂಸಾರಿಯಾದರು.
ದುಬಾರಿ ಕಾರುಗಳ ಮಾಲಕರಾಗಿ ಪ್ರವಾಸ ಮಾಡಿ ದೇಶ ಸುತ್ತಾಡಿದರು.
ಒಂದೇ ಸೆಕೆಂಡು ಹೊತ್ತಿನ ವ್ಯತ್ಯಾಸದಿಂದಷ್ಟೇ ಬದುಕುಳಿದ ಗಣೇಶ್ ಕಾಮತ್ ನಂತರ ಅಂಥದ್ದಾದ ಎತ್ತರಕ್ತೆ ಏರುತ್ತಾರೆ ಎಂದು ಅಂದು ಯಾರೂ ಕೂಡ ಊಹಿಸಿಲ್ಲ, ಸಾಧ್ಯವೂ ಇರಲಿಲ್ಲ.
ಮೂಡುಬಿದಿರೆಯ ಬನ್ನಡ್ಕ ಬಳಿ ಸುಮಾರು ಎರಡು ಕಿ ಮೀ ದೂರ ಒಳಗೆ ಯಾವುದಕ್ಕೂ ಬೇಡವಾದಂತಿದ್ದ ಬಂಡೆ ಜಾಗವೊಂದನ್ನು ಖರೀದಿಸಿ ಜಿ.ಕೆ ಗಾರ್ಡನ್ ರೆಸಾರ್ಟ್ ಮಾಡಿದರು. ಅದು ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಓಪನ್ ಮಂಟಪ, ಗಾರ್ಡನ್ ಇಲ್ಲಿದೆ. ದೂರದೂರಿನವರು ಕೂಡಾ ಅಲ್ಲಿ ಕಾರ್ಯಕ್ರಮ ಮಾಡಿಸತೊಡಗಿದರು.ಗೋಧೂಳಿಯ,ರಾತ್ರಿಯ ಕಾರ್ಯಕ್ರಮಗಳಿಗೆ ಅದು ಈಗಲೂ ಭಾರೀ ಬೇಡಿಕೆಯ ಓಪನ್ ಗಾರ್ಡನ್ ಆಗಿದೆ. ನಿರ್ಲಕ್ಷಿತ ಭೂಮಿಯಲ್ಲಿ ಬಯಲು ಮಂಟಪ ನಿರ್ಮಾಣವಾದ ನಂತರ ಮೂಡುಬಿದಿರೆಯ ಜನ ತಮ್ಮ ಮೂಗಿನ ಮೇಲೆ ಬೆರಳಿಟ್ಟಿದ್ದರು.
ಪರಿಶ್ರಮ ಪಟ್ಟು ಮೇಲೆ ಬಂದ ಇವರು ನೂರಾರು ಕೋಟಿಯ ಒಡೆಯನಾಗಿ, ನೂರಾರು ಮಂದಿಗೆ ಉದ್ಯೋಗದಾತನಾಗಿ ತನ್ನ ಬದುಕನ್ನು ಸಾರ್ಥಕ ಪಡಿಸಿಕೊಂಡ ಗಣೇಶ ಕಾಮತರು ತನ್ನ ಉಸಿರಾಟವನ್ನು ನಿಲ್ಲಿಸಿದ್ದಾರೆ.