ಕಾಸರಗೋಡು : ಒಂದು ತಿಂಗಳ ಹಿಂದೆ ಮಂಗಳೂರಿನ (Mangalore) ಚಿನ್ನಾಭರಣ ಅಂಗಡಿಯೊಂದರಲ್ಲಿ ನಡೆದ ಸಿಬ್ಬಂದಿಯ ಕೊಲೆ ಪ್ರಕರಣದ ಆರೋಪಿಯನ್ನು ಗುರುವಾರ ಕಾಸರಗೋಡಿನಲ್ಲಿ ಬಂಧಿಸಿರುವುದಾಗಿ ಕಾಸರಗೋಡು ಡಿವೈಎಸ್ಪಿ ಪಿ.ಕೆ.ಸುಧಾಕರನ್ ತಿಳಿಸಿದ್ದಾರೆ.
ಕೋಝಿಕ್ಕೋಡ್ ಕೊಯಿಲಾಂಡಿ ತುವಕೋಟ್ ಅಲಿ ಎನ್ನುವವರ ಮಗ ಶಿಫಾಸ್ (33) ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಿಂದ ಗುರುವಾರ ಮಧ್ಯಾಹ್ನ 2 ಗಂಟೆಗೆ ಬಂಧಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಆರೋಪಿಯ ಕಾರ್ಯಾಚರಣೆಯಲ್ಲಿ ಕಾಸರಗೋಡು ಡಿವೈಎಸ್ಪಿ P. K. ಸುಧಾಕರನ್, DCRB DySP ಅಬ್ದುಲ್ ರಹೀಮ್ ನೇತೃತ್ವದ ಪೊಲೀಸ್ ತಂಡ ಆತನನ್ನು ಬಂಧಿಸಿದೆ. ತಂಡದಲ್ಲಿ ಸಿಪಿಒ ನಿಜಿನ್ ಕುಮಾರ್, ರಾಜೇಶ್ ಕಟ್ಟಂಪಲ್ಲಿ, ಸುಜಿತ್, ಸಜೀಶ್, ಚಾಲಕ ಎಸ್ಐ ಚೆರಿಯನ್ ಇದ್ದರು.
ಬಂದಾತನಿಂದ ಪಿಸ್ತೂಲ್ ನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ದರೋಡೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ.
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ‘ಮಂಗಳೂರು ಜ್ಯುವೆಲ್ಲರ್ಸ್’ ಎಂಬ ಚಿನ್ನಾಭರಣ ಅಂಗಡಿಯ ಸಿಬ್ಬಂದಿ, ಸ್ಥಳೀಯ ಅತ್ತಾವರ ನಿವಾಸಿಯಾಗಿದ್ದ ರಾಘವೇಂದ್ರ ಆಚಾರ್ಯ(50) ಎಂಬವರನ್ನು ಫೆಬ್ರವರಿ 3ರಂದು ಅಂಗಡಿಯಲ್ಲೇ ಚೂರಿಯಿಂದು ಕೊಲೆ ಮಾಡಲಾಗಿತ್ತು. ಅಂದು ಮಧ್ಯಾಹ್ನ ಅಂಗಡಿಯ ಮಾಲಕ ಊಟಕ್ಕೆ ತೆರಳಿ ಹಿಂದಿರುಗಿದ ವೇಳೆ ಮಾಸ್ಕ್ ಧರಿಸಿದ್ದ ದುಷ್ಕರ್ಮಿಯೋರ್ವ ಅವರನ್ನು ಚೂರಿಯಿಂದು ಕೊಲೆ ಮಾಡಿ ಪರಾರಿಯಾಗಿರುವುದಾಗಿ ಜ್ಯುವೆಲ್ಲರಿಯ ಮಾಲಕ ಕೇಶವ ಆಚಾರ್ಯ ಬಂದರು ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
ಈ ವೇಳೆ ಜ್ಯುವೆಲ್ಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಚಿನ್ನಾಭರಣದಲ್ಲಿ ಕೆಲವು ಕಳವಾಗಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದರು.
ವಿವಿಧ ಆಯಾಮದಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಶಂಕಿತ ಆರೋಪಿಯ ಸಿಸಿಟಿವಿ ಕ್ಯಾಮರಾ ಚಿತ್ರ ಬಿಡುಗಡೆಗೊಳಿಸಿದ್ದರು. ಒಂದು ತಿಂಗಳ ಬಳಿಕ ಆರೋಪಿ ಕೇರಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆದರೆ ಆರೋಪಿಯ ಬಂಧನವನ್ನು ಮಂಗಳೂರು ಪೊಲೀಸರು ದೃಢೀಕರಿಸಿಲ್ಲ.