ಹಾಸನ: ಜಿಲ್ಲೆಯ ಸಕಲೇಶಪುರ ಪಟ್ಟಣದ ಬಿಜೆಪಿ ತಾಲೂಕು ಕಚೇರಿಯಲ್ಲಿ ಬಿಜೆಪಿ ಮುಖಂಡರು ಗುಂಡು ತುಂಡು ಪಾರ್ಟಿ (Party In BJP Office) ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪಾರ್ಟಿಯ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ. ಮುಖಂಡರ ವರ್ತನೆಗೆ ಸ್ಥಳೀಯರು ಟೀಕೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಲ್ಲಿ ಪಕ್ಷಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ ಸೋಲಿನ ನೋವಲ್ಲಿ ಪಕ್ಷದ ಕಚೇರಿಯಲ್ಲೇ ಬಿಜೆಪಿ ಮುಖಂಡರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಶಿಸ್ತಿನ ಪಕ್ಷವಾದ ಬಿಜೆಪಿಯ ಕಚೇರಿಯಲ್ಲಿ ನಡೆದ ಪಾರ್ಟಿಯ ಫೋಟೋಗಳು, ವಿಡಿಯೋಗಳು ವೈರಲ್ ಆಗಿವೆ. ಶಿಸ್ತಿನ ಪಕ್ಷದಲ್ಲಿ ಮುಖಂಡರ ಆಸಿಸ್ತು ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ. ಅಶಿಸ್ತು ತೋರಿದವರ ವಿರುದ್ದ ಪಕ್ಷ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಬೆಂಬಲಿಗರು ಒತ್ತಾಯಿಸಿದ್ದಾರೆ.

ಮೂರು ದಿನಗಳ ಹಿಂದೆ ಸಕಲೇಶಪುರ ತಾಲೂಕಿನ ಉಚ್ಚಂಗಿ ಮತ್ತು ವಣಗೂರು ಗ್ರಾ.ಪಂ.ಚುನಾವಣೆ ನಡೆದು ಫಲಿತಾಂಶ ಬಂದಿತ್ತು. ಫಲಿತಾಂಶದಲ್ಲಿ ಬಿಜೆಪಿಗೆ ಪರಾಜಯ ಆದ ಕಾರಣ ಬೇಸರದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಕಲೇಶಪುರ ತಾಲೂಕು ಮಂಡಲ ಅಧ್ಯಕ್ಷ ಮಂಜುನಾಥ ಸಾಂಗ್ವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೇಶ್ ಸೇರಿ ಹಲವು ಮುಖಂಡರು ಎಣ್ಣೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು.