ಸರ್ಕಾರಿ ನೌಕರರು ವೇತನ ಏರಿಕೆ ಪ್ರತಿಭಟನೆ (Government Workers Protest) ಕೈಗೊಂಡ ಕೆಲವೇ ಗಂಟೆಗಳಲ್ಲಿ ಸರ್ಕಾರ ಬೇಡಿಕೆಗೆ ಮಣಿದಿದೆ. ರಾಜ್ಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಹಣಕಾಸು ಅಧಿಕಾರಿಗಳೊಂದಿಗೆ ಸಹ ಚರ್ಚಿಸಿ, ರಾಜ್ಯ ಸರ್ಕಾರಿ ನೌಕರರಿಗೆ , ಮೂಲ ವೇತನದ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಆದೇಶಿಸಲಾಗಿದೆ. ಎನ್.ಪಿ.ಎಸ್ ಕುರಿತಂತೆ ಸಮಿತಿಯೊಂದನ್ನು ರಚಿಸಿ, ಅದರ ವರದಿಯನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸರ್ಕಾರಿ ನೌಕರರ ವೇತನ 17 % ಹೆಚ್ಚಳಕ್ಕೆ ಆದೇಶ ಹೊರಡಿಸಲಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಹೋರಾಟ ಸಫಲವಾಗಿದೆ. ಈ ನಿಟ್ಟಿನಲ್ಲಿ ಮುಷ್ಕರವನ್ನು ಕೈಬಿಡಲು ನಿರ್ಧಾರ ಮಾಡಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದರು.
ವಿಧಾನಸೌಧದಲ್ಲಿ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗಿನ ಮಾತುಕತೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರ ವೇತನವನ್ನು ಶೇ 17 ರಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರದ ಆದೇಶವನ್ನು ಪಡೆದಿದ್ದೇವೆ.
ಎಲ್ಲವೂ ಧನಾತ್ಮಕವಾಗಿದೆ ಎಂದರು. ನಮ್ಮ ಬೇಡಿಕೆಗೆ ಈಡೇರಿಕೆಗೆ ಮುಷ್ಕರ ಇವತ್ತು ನಡೆದಿದೆ. ಈ ನಡುವೆ ಸರ್ಕಾರದ ಆದೇಶ ಆಗಿದೆ. ಈ ಮೂಲಕ ನಮ್ಮ ಹೋರಾಟ ಸಫಲವಾಗಿದೆ ಎಂದು ಅಭಿಪ್ರಾಯಪಟ್ಟದರು.
ಈ ನಡುವೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಏಕಪಕ್ಷೀಯ ನಿರ್ಧಾರಕ್ಕೆ ಸಚಿವಾಲಯ ನೌಕರ ಸಂಘ ವಿರೋಧ ವ್ಯಕ್ತಪಡಿಸಿದೆ.
ಸಚಿವಾಲಯದ ಆಪ್ತ ಸಹಾಯಕ/ಆಪ್ತ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಶ್ರೀಧರ್ಮೂರ್ತಿ ಎಸ್ ಪಂಡಿತ್ ಸಹ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ವಿರುದ್ಧ ಕಿಡಿಕಾರಿರುವ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ, ಷಡಾಕ್ಷರಿಯವರ ಏಕಪಕ್ಷೀಯ ನಿರ್ಣಯದ ವಿರುದ್ಧ ಹರಿಹಾಯ್ದಿದ್ದು, ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದ್ದ 40%ರಷ್ಟು ವೇತನ ಹೆಚ್ಚಳವನ್ನು ಸರ್ಕಾರ ಪೂರೈಸದೇ ಕೇವಲ ,17% ರಷ್ಟು ಅದು ಕೂಡ ಬರುವ ಎಪ್ರಿಲ್ ನಿಂದ ಜಾರಿಗೊಳಿಸಿದೆ. ಆದರೆ ಈ ಮಧ್ಯಂತರ ಆದೇಶ ತೃಪ್ತಿತಂದಿಲ್ಲ. ಸರ್ಕಾರ ಮಧ್ಯಂತರ ಆದೇಶ 25% ರಷ್ಟನ್ನಾದರೂ ಜಾರಿಗೊಳಿಸಬೇಕಿತ್ತು. ಅಲ್ಲದೇ ,2022 ಜುಲೈ 1ರಿಂದಲೇ 7ನೇವೇತನ ಆಯೋಗ ಸೌಲಭ್ಯ ಜಾರಿಗೊಳ್ಳಬೇಕಿತ್ತು.ಆದರೆ ಸರ್ಕಾರ ಈಗ ಮುಷ್ಕರವನ್ನು ಹತ್ತಿಕ್ಕಲು ಈ ಮಧ್ಯಂತರ ಪರಿಹಾರ ಆದೇಶ ಮಾಡಿರುವುದು ಕಣ್ಣೊರೆಸುವ ತಂತ್ರವಷ್ಟೇ. ಮತ್ತೊಂದು ಪ್ರಮುಖ ಬೇಡಿಕೆಯಾದ ಎನ್ಪಿಎಸ್ ರದ್ದುಪಡಿಸಿ ಓಪಿಎಸ್ ಅನ್ನು ಜಾರಿ ಮಾಡುವ ಪ್ರಮುಖ ಬೇಡಿಕೆಯ ಪರಿಶೀಲನೆಗೆ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದಾರಾದರೂ ಈ ಹಿಂದೆ ಮಾಡಿರುವ ಸಮಿತಿ ಏನಾಯಿತು? ಎಂದು ಪ್ರಶ್ನಿಸಿರುವ ಗುರುಸ್ವಾಮಿ, ಇದೊಂದು ಸರ್ಕಾರದ ಕಣ್ಣೊರೆಸುವ ತಂತ್ರವಷ್ಟೇ ಎಂದು ಗುಡುಗಿದ್ದಾರೆ.
ಪ್ರಮುಖವಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಆರಂಭಿಸುವ ಮುನ್ನ ಸಚಿವಾಲಯದ ನೌಕರರ ಸಂಘ ಸೇರಿದಂತೆ ಎಲ್ಲಾ ವೃಂದ ಸಂಘಗಳ ಜೊತೆ ಚರ್ಚಿಸಿದ್ದರು. ಆದರೆ ಈಗ ಸರ್ಕಾರದ ಕಣ್ಣೊರೆಸುವ ತಂತ್ರಕ್ಕೆ ಮಣಿದು ಮುಷ್ಕರವನ್ನು ಏಕಾಏಕಿಯಾಗಿ ಹಿಂಪಡೆಯಲು ಹೇಳಿದ್ದು ಸರಿಯಲ್ಲ.
ಷಡಾಕ್ಷರಿಯವರ ಈ ರೀತಿಯ ಏಕಪಕ್ಷೀಯ ನಿರ್ಣಯ ಸರಿಯಲ್ಲ.ಮುಷ್ಕರ ಕರೆಯುವ ಮೊದಲು ನಮ್ಮೊಂದಿಗೆ ಚರ್ಚಿಸಿದ್ದು ಈಗ ಮುಷ್ಕರ ಹಿಂಪಡೆಯುವಾಗ ವೃಂದ ಸಂಘಗಳ ಜೊತೆ ಚರ್ಚಿಸಿಲ್ಲ ಏಕೆ.? ಷಡಾಕ್ಷರಿಯವರ ಏಕ ಪಕ್ಷೀಯ ನಿರ್ಣಯವನ್ನು ಖಂಡಿಸುವುದಾಗಿ ಸಚಿವಾಲಯದ ನೌಕರರ ಸಂಘ ಎಚ್ಚರಿಸಿದೆ.
ತಮ್ಮ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲು ನಿರ್ಧಾರ ಮಾಡಲಾಗಿದೆ. ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರ ಸಂಘದ ಅಧ್ಯಕ್ಷ ಸಿ.ಎನ್ ಷಡಕ್ಷರಿ ಅವರು ಸೂಚನೆ ನೀಡಿದ್ದಾರೆ.
7 ನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘ ಬುಧವಾರ ಮುಷ್ಕರ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತುರ್ತು ಸಭೆಯನ್ನು ನಡೆಸಿ ಶೇ 17 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು.
ಸರ್ಕಾರಿ ನೌಕರರು ಶೇ 40 ರಷ್ಟು ಹೆಚ್ಚಳಕ್ಕೆ ಬೇಡಿಕೆ ಇಟ್ಟರೂ ಸದ್ಯ ಮಧ್ಯಂತರ ಪರಿಹಾರವಾಗಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಸರ್ಕಾರ ಈ ಆದೇಶವನ್ನು ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ತಮ್ಮ ಹೋರಾಟವನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ.
ಸದ್ಯ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಳೆ ಪಿಂಚಣಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲು ಸರ್ಕಾರ ಆದೇಶ ಮಾಡಿದೆ. ಎರಡು ತಿಂಗಳೊಳಗಾಗಿ ವರದಿಯನ್ನು ನೀಡುವಂತೆ ಸೂಚಿಸಿದೆ.