ಪುತ್ತೂರು: ಹಿಂದೂ ಸಂಘಟನೆಗಳ (Hindu Sangatane) ಮುಖಂಡರು ಹಾಗೂ ಕಾರ್ಯಕರ್ತರ ಸಹಿತ ಹಲವರನ್ನು ಬಂಧಿಸಿ ತನ್ನ ಮುಂದೆ ಹಾಜರುಪಡಿಸುವಂತೆ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಪೊಲೀಸರಿಗೆ ನೋಟೀಸ್ ನೀಡಿದ್ದು , ಈ ಕ್ರಮದ ವಿರುದ್ಧ ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಸಾರ್ವಜನಿಕ ಶಾಂತಿ ಭಂಗ ಮತ್ತು ಪ್ರಚೋದನೆ ನೀಡುವ ಉದ್ದೇಶ ಹೊಂದಿರುವವರಿಗೆ ರೂ.1 ಲಕ್ಷದ ಜಾಮೀನು ಸಹಿತ ಮುಚ್ಚಳಿಕೆ ಬರೆದುಕೊಡುವಂತೆ ಜಾರಿ ಮಾಡಿದ ನೊಟೀಸ್ ಗೆ ಸೂಕ್ತ ಸ್ಪಂದನೆ ನೀಡದವರನ್ನು ದಸ್ತಗಿರಿ ಮಾಡಿ ತನ್ನ ಸಮ್ಮುಖ ಹಾಜರುಪಡಿಸುವಂತೆ ಪುತ್ತೂರು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯವರು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.
ದಸ್ತಗಿರಿ ಮಾಡಲು ನಿರ್ದೇಶಿಸಿರುವವರ ಪಟ್ಟಿಯಲ್ಲಿ ಹಿಂದೂ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಸೇರಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಗಳು ನಿನ್ನೆ ಸಂಜೆಯಿಂದ ಹರಿದಾಡಲು ಆರಂಭಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಡಿವೈಎಸ್ಪಿ ವೀರಯ್ಯ ಹಿರೇಮಠ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವವರ ಮತ್ತು ಅತಿ ಹೆಚ್ಚು ಪ್ರಕರಣ ದಾಖಲಾದವರ ವಿರುದ್ದ ಮುಂದಿನ ದಿನಗಳಲ್ಲಿ ಅವರು ಸಾರ್ವಜನಿಕ ಶಾಂತಿ ಭಂಗ, ಪ್ರಚೋದನೆ ನಡೆಸುವ ಸಾಧ್ಯತೆಯಿದೆಯೆಂದು ಅವರ ವಿರುದ್ದ ಸಿಆರ್ಪಿಸಿ ಕಲಂ 107, 108, 109, 110ರಡಿ ಪ್ರಕರಣ ದಾಖಲಿಸುವಂತೆ ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಲಾಗಿತ್ತು.
ಅದರಂತೆ 2022ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರೆಲ್ಲರಿಗೂ ರೂ.1 ಲಕ್ಷದ ಜಾಮೀನು ಸಹಿತ ಮುಚ್ಚಳಿಕೆ ಬರೆದುಕೊಡುವಂತೆ ಇತ್ತೀಚೆಗೆ ತಹಸಿಲ್ದಾರ್ ನೋಟೀಸ್ ಜಾರಿ ಮಾಡಿದ್ದರು. ಸುಮಾರು 60 ಮಂದಿಗೆ ಈ ರೀತಿ ನೊಟೀಸು ಜಾರಿ ಮಾಡಲಾಗಿತ್ತು ಎನ್ನಲಾಗುತ್ತಿದೆ.
ನೊಟೀಸ್ ಜಾರಿಯಾದ ಬಳಿಕವೂ ಸುಮಾರು 28 ಮಂದಿ ಹಾಜರಾಗಿ ಮುಚ್ಚಳಿಕೆ ಬರೆದುಕೊಡದೇ ಇದ್ದು, ಅವರನ್ನು ಬಂಧಿಸಿ ಹಾಜರುಪಡಿಸುವಂತೆ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಹಿಂದು ಸಂಘಟನೆ ಆಕ್ರೋಶ:
ಹಿಂದು ಸಂಘಟನೆಯ ಹಲವು ಮುಖಂಡರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿದೆ.ಸಮಾಜದ ಶಾಂತಿ ಕದಡುವ ಕಾರ್ಯಗಳನ್ನು ಮಾಡುವವರನ್ನು ಬಂಧಿಸದೆ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಹಿಂದು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ, ವಾರಂಟ್ ಜಾರಿ ಮಾಡಿ ಕಾರ್ಯಕರ್ತರ ಮನೆಗೆ ತೆರಳಿ ಮಾನಸಿಕ ಕಿರುಕುಳ ನೀಡಿದರೆ ಮುಂದಿನ ದಿನ ಹಿಂದು ಜಾಗರಣ ವೇದಿಕೆ ಹೋರಾಟದ ಮೂಲಕ ಉತ್ತರ ನೀಡಲಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿವೈಎಸ್ಪಿ ಭೇಟಿ:
ಹಿಂದು ಸಂಘಟನೆಯ ಮುಖಂಡರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುತ್ತಿದ್ದಾರೆಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಡಿವೈಎಸ್ಪಿ ವೀರಯ್ಯ ಹಿರೇಮಠ ಅವರನ್ನು ಭೇಟಿ ಮಾಡಿ ಈ ಕುರಿತು ಮಾಹಿತಿ ಪಡೆದಿದ್ದಾರೆ.
ಕೇವಲ ಹಿಂದು ಸಂಘಟನೆ ಮಾತ್ರವಲ್ಲ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇತರ ಸಂಘಟನೆಗಳವರ ವಿರುದ್ಧವೂ ಸಾರ್ವಜನಿಕ ಶಾಂತಿ ಭಂಗ ಪ್ರಕರಣದ ದಾಖಲು ಮಾಡಲಾಗಿದೆ ಎಂದು ಡಿವೈಎಸ್ಪಿಯವರು ತಿಳಿಸಿರುವುದಾಗಿ ಪಿ.ಜಿ.ಜಗನ್ನಿವಾಸ ರಾವ್ ಹೇಳಿದ್ದಾರೆ.