ಪುತ್ತೂರು: 19ನೇ ವರ್ಷದ ಎಸ್ಡಿಪಿ ಕಲೋಪಾಸಾನ-2023ರಲ್ಲಿ (Kalopasana) ಪದ್ಮಭೂಷಣ ಪುರಸ್ಕೃತ ಕಲಾವಿದೆ ಸುಧಾ ರಘುನಾಥನ್(Sudha Ragunathan) ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು.
ಕಲಾಪೋಷಕರು, ಕಲಾಆಸಕ್ತರು, ಕಲಾಅಭಿಮಾನಿಗಳು ಸೇರಿಕೊಂಡಾಗ ಮಾತ್ರ ಕಲೆ ಜೀವಂತವಾಗಿ ಉಳಿಯುತ್ತದೆ. ಕಲೆ ಉಳಿಸುವ ಕಾರ್ಯ ಕಲೋತ್ಸವವಾಗಿದ್ದು, ಅದನ್ನು ಇಲ್ಲಿ ಕಾಣುತ್ತಿದ್ದೇವೆ. ನಾಡಿನ ಉತ್ತಮ ಕಲಾವಿದರನ್ನು ಕರೆದುಕೊಂಡು ಬಂದು ಇಲ್ಲಿ ಪರಿಚಯ ಮಾಡಿಸಿ ಆ ಮೂಲಕ ಕಲೆಯನ್ನು ಬೆಳೆಸುವ ಕಾರ್ಯವನ್ನು ಪಾಣಾಜೆ ವೈದ್ಯರು ಮಾಡುತ್ತಿದ್ದಾರೆ ಎಂದು ಮಂಗಳೂರು ಕೆ.ಎಂ.ಸಿ. ವೈದ್ಯ ಡಾ. ಎಂ. ಚಕ್ರಪಾಣಿ ಹೇಳಿದರು.
ಅವರು ಶನಿವಾರ ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ಪುತ್ತೂರು ಎಸ್.ಡಿ.ಪಿ. ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆಯುರ್ವೇದ ಔಷಧಿ ತಯಾರಕರ ವತಿಯಿಂದ 19ನೇ ವರ್ಷದ ಕಲೋಪಾಸನಾ 2023 ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಎರಡು ದಶಕಗಳಷ್ಟು ಕಾಲದಿಂದ ವಿಶಿಷ್ಠವಾದ ಕಾರ್ಯಕ್ರಮ ನಡೆದುಕೊಂಡು ಬರುತ್ತಿದ್ದು, ಇನ್ನು ಮುಂದೆಯೂ ನಡೆಯಲಿದೆ. ವಿಶಿಷ್ಠವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದು ಸುಲಭದ ವಿಚಾರವಲ್ಲ. ಇಂತಹ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುತ್ತಿರುವ ಹರಿಕೃಷ್ಣ ಪಾಣಾಜೆ ಯವರನ್ನು ಅಭಿನಂದಿಸಬೇಕು. ಇನ್ನು ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲು ಚೈತನ್ಯ ಉತ್ಸಾಹವನ್ನು ದೇವರು ನೀಡಲಿ ಎಂದರು.
ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ರೂಪಲೇಖಾ, ಮೇಘನಾ, ಡಾ. ಗೋಪಾಲ್ ಪಣಿಕ್ಕರ್, ಸುಜಾತಾ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಕೆ. ಮಾಧವ ಭಟ್ ಕಾರ್ಯಕ್ರಮ ನಿರೂಪಿಸಿದರು.
ಹಸಿರ ಮಧ್ಯೆ ಕಲೋಪಾಸನಾ:
ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿರುವ ಔಷಧೀಯ ಗಿಡಗಳ ನಡುವಿನ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ನೆಲದ ಹಾಸಿನಲ್ಲೂ ಔಷಧೀಯ ಗಿಡಗಳಿದ್ದವು, ಅವುಗಳ ಮಧ್ಯದಲ್ಲಿ ಜನರು ಕುಳಿತು ಕಲೆಯನ್ನು ಆಸ್ವಾಧಿಸುವ ಮೂಲಕ ಹಸಿರ ಮಧ್ಯೆ ಕಲೋಪಾಸನಾ ಕಾರ್ಯಕ್ರಮ ನಡೆಯಿತು.

ಪದ್ಮಭೂಷಣ ಪುರಸ್ಕೃತ ಕಲಾವಿದರನ್ನು ಪುತ್ತೂರಿಗೆ ಪರಿಚಯಿಸಿದ ಹರಿಕೃಷ್ಣ ಪಾಣಾಜೆ..!
ಆಕಾಶವಾಣಿ ಹಾಗೂ ದೂರದರ್ಶನದ ಮುಂಚೂಣಿ ಕಲಾವಿದರಲ್ಲಿ ಒಬ್ಬರದಾದ ಪದ್ಮಭೂಷಣ, ಸಂಗೀತ ಕಲಾನಿಧಿ ವಿದುಷಿ ಸುಧಾ ರಘುನಾಥನ್ ಅವರು ಭಾರತದ 50ನೇ ಗಣರಾಜ್ಯೋತ್ಸವದ ಅಂಗವಾಗಿ 2000ನೇ ಇಸವಿಯಲ್ಲಿ ಲೋಕಸಭೆಯ ಕೇಂದ್ರ ಭವನದಲ್ಲಿ ವಂದೇ ಮಾತರಂ ಹಾಡು ಹಾಡಿದ್ದು ಅತ್ಯಂತ ಆಕರ್ಷಕ ಹಾಗೂ ಸ್ಮರಣೀಯ ಪ್ರದರ್ಶನವಾಗಿತ್ತು.
ವಿಶ್ವಸಂಸ್ಥೆ ಆಯೋಜಿಸಿದ ಸಂಗೀತ ಕಾರ್ಯಕ್ರಮದಲ್ಲಿಯೂ ತಮ್ಮ ಪ್ರದರ್ಶನ ನೀಡಿದರು.
ಇಂತಹ ಮೇರು ಕಲಾವಿದರನ್ನು ಪುತ್ತೂರಿನ ಕಲಾ ರಸಿಕರಿಗೆ ಪರಿಚಯಿಸುವ ಕಾರ್ಯವನ್ನು ಡಾ. ಹರಿಕೃಷ್ಣ ಪಾಣಾಜೆ ಕಲೋಪಾಸನಾ ಮೂಲಕ ಮಾಡಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತ:
ಪದ್ಮಭೂಷಣ, ಸಂಗೀತ ಕಲಾನಿಧಿ ವಿದುಷಿ ಸುಧಾ ರಘುನಾಥನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. ಇವರಿಗೆ ವಯಲಿನ್ ನಲ್ಲಿ ವಿದ್ವಾನ್ ಎಂಬಾರ್ ಎಸ್. ಕಣ್ಣನ್, ಮೃದಂಗದಲ್ಲಿ ವಿದ್ವಾನ್ ನೈವೇಲಿ ಎಸ್. ಸ್ಕಂದಸುಬ್ರಹ್ಮಣ್ಯನ್, ಘಟಂ ಹಾಗೂ ಮೋರ್ಸಿಂಗ್ ನಲ್ಲಿ ವಿದ್ವಾನ್ ಆರ್. ರಮಣ್, ಪುತ್ತೂರಿನ ಭಾಮಿನಿ ಸಹಕರಿಸಿದರು.
ಇವರ ಕಾರ್ಯಕ್ರಮ ನೋಡಲು ದಕ್ಷಿಣ ಕನ್ನಡ, ಉಡುಪಿ ಕೊಡಗು ಕಾಸರಗೋಡಿನಿಂದಲು ಕಲಾ ರಸಿಕರು ಕಲೋಪಾಸಾನ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಪುತ್ತೂರಿಗೆ ಬರುವ ಹಿಂದಿನ ದಿನ ಸುಧಾ ರಘುನಾಥನ್ ಅವರಿಗೆ ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದ್ದರು.