ಪುತ್ತೂರು, ಫೆ.24: ಗಾಂಧಿ ವಿಚಾರ ವೇದಿಕೆ ಪುತ್ತೂರು ತಾಲ್ಲೂಕು ಘಟಕ ಮತ್ತು ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ‘ಕರ್ನಾಟಕದ ಇಂದಿನ ಅಗತ್ಯಗಳು’ ವಿಷಯದ ಕುರಿತು ಜನ ಸಂವಾದ ಕಾರ್ಯಕ್ರಮ ಪುತ್ತೂರಿನ ಜೈನ ಭವನದಲ್ಲಿ ಫೆ.26 ಭಾನುವಾರದಂದು ನಡೆಯಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷ ಝೇವಿಯರ್ ಡಿ.ಸೋಜಾ ಕಾರ್ಯಕ್ರಮ ಬೆಳಿಗ್ಗೆ 10ಗೆ ಆರಂಭವಾಗಲಿದ್ದು ಭ್ರಷ್ಟಾಚಾರ ನಿಯಂತ್ರಣ ಮತ್ತು ದಕ್ಷ ಆಡಳಿತ ಕುರಿತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಸಂತೋಷ್ ಹೆಗ್ಡೆ, ಸಾಮಾಜಿಕ ಅಗತ್ಯಗಳು ಕುರಿತು ಪತ್ರಕರ್ತ ಬಿ.ಎಂ. ಹನೀಫ್, ಯುವಜನತೆಯ ಅಗತ್ಯಗಳು ಕುರಿತು ಗಾಂಧಿ ವಿಚಾರ ವೇದಿಕೆಯ ವ್ಯವಸ್ಥಾಪಕ ಸದಸ್ಯ ಎನ್.ಎಂ.ಬಿರಾದಾರ ವಿಚಾರ ಮಂಡಿಸುವರು ಎಂದು ತಿಳಿಸಿದರು.
ಚಿಂತಕ ವಿಲೈಡ್ ಡಿ.ಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಗಾಂಧಿ ವೇದಿಕೆ ಮಾತೃ ಘಟಕದ ಅಧ್ಯಕ್ಷ ಶ್ರೀಧರ ಬಿಡೆ, ಮಹಾತ್ಮ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಗಾಂಧಿ ವಿಚಾರ ವೇದಿಕೆಯ ಮಾತೃ ಘಟಕದ ಉಪಾಧ್ಯಕ್ಷ ವಿನಯಚಂದ್ರ, ಸಾಹಿತಿ, ಚಿಂತಕ, ಗಾಂಧಿ ವಿಚಾರ ವೇದಿಕೆಯ ಮಾತೃ ಘಟಕದ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಗಾಂಧಿ ವಿಚಾರ ವೇದಿಕೆಯ ಆಡಳಿತಾಧಿಕಾರಿ ಭಾಗ್ಯೇಶ್ ರೈ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಆಯೋಜಕರು ಕೋರಿದ್ದಾರೆ.