ಪುತ್ತೂರು: ಫೆ 21: ಪುತ್ತೂರು: ಪುತ್ತೂರಿನ ಎಸ್.ಡಿ.ಪಿ ರೆಮೆಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ಹಾಗೂ ಎಸ್.ಡಿ.ಪಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ 19ನೇ ವರ್ಷದ ಸಾಂಸ್ಕೃತಿಕ ಅನಾವರಣ ‘ಕಲೋಪಾಸನಾ-2023ʼ ಫೆ. 25ರಿಂದ 27 ವರೆಗೆ ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ನಡೆಯಲಿದೆ.
ಎಸ್ಡಿಪಿ ರೆಮಿಡೀಸ್ ಮತ್ತು ರಿಸಚ್ ಸೆಂಟರ್ನ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆಯವರು ಈ ಕುರಿತ ಮಾಹಿತಿಯನ್ನು ಪುತ್ತೂರಿನ ವಾರ್ತಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಹಂಚಿಕೊಂಡರು.
ಕಳೆದೆರಡು ದಶಕಗಳಿಂದ ದ.ಕ. ಜಿಲ್ಲೆಯ ಜನತೆಗೆ ಸಂಗೀತ, ನೃತ್ಯ, ಯಕ್ಷಗಾನ ಕಲೆಯ ರಸದೌತಣ ವನ್ನು ಉಣಬಡಿಸುತ್ತಾ ಬಂದಿರುವ ಎಸ್ಡಿಪಿ ಈ ಬಾರಿ ಹತ್ತೊಂಬತ್ತನೇ ವರ್ಷದ ಅಂಗವಾಗಿ ಖ್ಯಾತ ಕಲಾವಿದರಿಂದ ಸಂಗೀತ, ಯಕ್ಷಗಾನ ಆಯೋಜಿಸಿದ್ದು ಪ್ರತಿ ದಿನ ಸಂಜೆ 6ರಿಂದ ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ ಎಂದರು.
ಕಳೆದ 18 ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಂಗೀತ ಹಾಗೂ ಭರತನಾಟ್ಯ ಕಲಾವಿದರನ್ನು ಪುತ್ತೂರಿಗೆ ಮಾಡುವ ಮೂಲಕ ಮೂರು ದಿನಗಳ ಕಾರ್ಯಕ್ರಮವನ್ನು ಹಾಕಿಕೊಂಡು ಬರಲಾಗುತ್ತದೆ. ೩ನೇ ದಿನ ಯಕ್ಷಗಾನವನ್ನು ಹಾಕಿಕೊಳ್ಳಲಾಗುತ್ತಿತ್ತು. ಈ ವರ್ಷ ಮೊದಲೇ ದಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಉಳಿದೆರಡು ದಿನ ಬಡಗು ಹಾಗೂ ತೆಂಕು ತಿಟ್ಟಿನ ಯಕ್ಷಗಾನ ನಡೆಯಲಿದೆ ಎಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಫೆ. 25 ರಂದು ಸಾಯಂಕಾಲ 6 ಗಂಟೆಗೆ ಮಂಗಳೂರು ಕಸ್ತೂರ್ ಭಾ ಮೆಡಿಕಲ್ ಕಾಲೇಜು ಪ್ರೊಫೆಸರ್ ಆಫ್ ಮೆಡಿಸಿನ್ ಡಾ. ಎಂ. ಚಕ್ರಪಾಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಂಗೀತಕಲಾ ನಿಧಿ ಸುಧಾ ರಘುನಾಥನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇವರಿಗೆ ವಯಲಿನ್ ನಲ್ಲಿ ಎಂಬಾರ್ ಕಣ್ಣನ್, ಮೃದಂಗದಲ್ಲಿ ನೈವೇಲಿ ಎಸ್. ಸ್ಕಂದಸುಬ್ರಹ್ಮಣ್ಯನ್, ಘಟಂ ನಲ್ಲಿ ಆರ್. ರಮಣ್ ಸಹಕರಿಸಲಿದ್ದಾರೆ ಎಂದರು.
ಫೆ.26ರಂದು ಸಾಯಂಕಾಲ 6 ಗಂಟೆಗೆ ಶ್ರೀ ಪೆರ್ಡೂರು ಮೇಳದವರಿಂದ ಚಂದ್ರಹಾಸ ಶಶಿಪ್ರಭ ಯಕ್ಷಗಾನ, ಫೆ.27 ರಂದು ಸಾಯಂಕಾಲ 6 ಗಂಟೆಗೆ ಶ್ರೀ ಹನುಮಗಿರಿ ಮೇಳದವರಿಂದ ಭಾರತ ಜನನಿ ಯಕ್ಷಗಾನ ನಡೆಯಲಿದೆ. ಕಲೋಪಾಸನಾ ಸಂಪೂರ್ಣ ಉಚಿತ ಕಾರ್ಯಕ್ರಮವಾಗಿದ್ದು ಸುಮಾರು 1200 ಆಸನದ ವ್ಯವಸ್ಥೆ ಇರಲಿದೆ. ಕಲಾರಸಿಕರು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಶಸ್ಸುಗೊಳಿಸಬೇಕು ಎಂದು ವಿನಂತಿಸಿದರು.
ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ನ ಶ್ರೀಮತಿ ರೂಪಲೇಖ ಉಪಸ್ಥಿತರಿದ್ದರು.