ಫೆ 20 : ಕಾಡಾನೆ ದಾಳಿಗೊಳಗಾಗಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ಒತ್ತಾಯ ಹಾಗೂ ಆಕ್ರೋಶದ ಬಳಿಕ ಸ್ಥಳಕ್ಕೆ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಮೃತರ ಕುಟುಂಬಕ್ಕೆ ತಲಾ 15 ಲಕ್ಷ ಪರಿಹಾರ ಇವತ್ತೇ ನೀಡುವುದಾಗಿ ಘೋಷಿಸಿದರು. ಜತೆಗೆ ಮೃತ ಯುವತಿಯ ಸಹೋದರಿಗೆ ಕೆಲಸ ಕೊಡಿಸುವುದಾಗಿಯೂ ತಿಳಿಸಿದರು.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲ ಎಂಬಲ್ಲಿ ಇಂದು ಬೆಳಗ್ಗೆ ಕಾಡಾನೆ ದಾಳಿ ಗೆ ತುತ್ತಾಗಿ ಸ್ಥಳೀಯ ನಿವಾಸಿ ರಾಜೀವ ಶೆಟ್ಟಿ ಅವರ ಪುತ್ರಿ ರಂಜಿತಾ (25) ಹಾಗೂ ತಿಮ್ಮಣ್ಣ ರೈ ಅವರ ಪುತ್ರ ರಮೇಶ್ ರೈ(58) ಎಂಬವರು ಮೃತರಾಗಿದ್ದರು. ರಂಜಿತಾ ಅವರು ತಾವು ಕೆಲಸ ಮಾಡುತ್ತಿರುವ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಪೇರಡ್ಕ ಹಾಲು ಸೊಸೈಟಿಗೆ ತೆರಳುತ್ತಿದ್ದಾಗ ಅವರ ಮನೆಯ ಸಮೀಪವೇ ಆನೆ ದಾಳಿ ನಡೆಸಿದೆ. ಆಕೆಯ ಕಿರುಚಾಟ ಕೇಳಿ ರಕ್ಷಿಸಲು ಹೋದ ರಮೇಶ್ ರೈ ಅವರ ಮೇಲೂ ಆನೆ ದಾಳಿ ಮಾಡಿದೆ.

ಗಂಭೀರವಾಗಿ ಗಾಯಗೊಂಡಿದ್ದ ರೈಯವರು ಸ್ಥಳದಲ್ಲೇ ಮೃತಪಟ್ಟರೆ, ರಂಜಿತಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಈ ಭೀಕರ ಘಟನೆಯಿಂದ ಆಕ್ರೋಶಿತರಾದ ಸ್ಥಳೀಯರು, ಸ್ಥಳಕ್ಕೆ ಜಿಲ್ಲಾಧಿಕಾರಿ, ಡಿಎಫ್ಒ ಬರಬೇಕೆಂದು ಪಟ್ಟು ಹಿಡಿದು ಶವವಿಟ್ಟು ಪ್ರತಿಭಟನೆ ನಡೆಸಿದರು. ಡಿಸಿ ಹಾಗೂ ಡಿಎಫ್ಒ ಅವರು ಬಾರದೇ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಹಾಗೂ ಡಿಎಫ್ಒ ಡಾ. ವೈ. ಕೆ. ದಿನೇಶ್ ಅವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಅಹವಾಲು ಆಲಿಸಿ, ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಿದರು. ಬಳಿಕ ಮೃತ ಯುವತಿಯ ಮನೆಗೆ ತೆರಳಿ ಮನೆಯವರಿಗೆ ಸಾಂತ್ವನ ತಿಳಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರವಿಕುಮಾರ್, “ಘಟನೆ ನಡೆದ ಸ್ಥಳ ರಕ್ಷಿತಾರಣ್ಯ ಅಲ್ಲ. ಹೀಗಾಗಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಪೂರಕ ಕ್ರಮ ಕೈಗೊಳ್ಳಲಾಗುವುದು, ಮೃತ ಇಬ್ಬರ ಮನೆಯವರಿಗೆ ತಲಾ 15 ಲಕ್ಷ ಪರಿಹಾರವನ್ನು ಇವತ್ತೇ ನೀಡಲಾಗುವುದು. ಮೃತ ರಂಜಿತಾರ ಸಹೋದರಿಗೆ ಉದ್ಯೋಗದ ಭರವಸೆ ನೀಡಿದರು. ಕಾಡಾನೆ ಹಾವಳಿ ನಿಯಂತ್ರಣಕ್ಕೆ ವೈಜ್ಞಾನಿಕ ರೀತಿಯಲ್ಲಿ ಆನೆ ಕಂದಕ ತೆಗೆಯಲಾಗುವುದು” ಎಂದರು.
ಸ್ಥಳಕ್ಕೆ ಭೇಟಿ ನೀಡಿದ ಡಿಎಫ್ಒ ಡಾ. ವೈ. ಕೆ. ದಿನೇಶ್ ಮಾತನಾಡಿ ” ಇವತ್ತು ಸಂಜೆಯೊಳಗಡೆ ಆನೆಗಳನ್ನು ಹಿಡಿಯುವ ಕಾರ್ಯಾಚರಣೆ ಮಾಡಲಾಗುವುದು. ನಾಗರಹೊಳೆ, ದುಬಾರೆ ಆನೆ ಕ್ಯಾಪಿನಿಂದ ಪಳಗಿದ ಆನೆಗಳನ್ನು ತಂದು ಕಾಡಾನೆ ಹಿಡಿಯುವ ಕಾರ್ಯಾಚರಣೆ ಮಾಡುತ್ತೇವೆ ಎಂದು ಸ್ಥಳೀಯರಿಗೆ ಭರವಸೆ ನೀಡಿದರು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು” ಭರವಸೆ ಬೇಡ ಲಿಖಿತವಾಗಿ ಕೊಡಿ ಎಂದು ಜೋರು ಧ್ವನಿಯಲ್ಲಿ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಿಎಫ್ಒ ನಾನು ಇಲ್ಲೇ ಉಳಿದು ಇಂದೇ ಕಾರ್ಯಚರಣೆ ಮಾಡುತ್ತೇನೆ ಎಂಬ ಭರವಸೆ ನೀಡಿದರು . ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ನಾಳೆ ದುಬಾರೆಯಿಂದ ಪಳಗಿದ ಆನೆಗಳು ಕಡಬಕ್ಕೆ ಬರಲಿದೆ. ಸುಮಾರು ಎಂಟರಿಂದ 10 ಕಾಡಾನೆಗಳು ಕಡಬ ಪರಿಸರದಲ್ಲಿ ಬೀಡು ಬಿಟ್ಟಿವೆ ಎನ್ನಲಾಗುತ್ತಿದೆ. ಇದನ್ನು ಮೈಸೂರು ಅಥಾವ ದುಬಾರೆಯ ಪಳಗಿದ ಆನೆಗಳ ಮೂಲಕ ನಿಯಂತ್ರಿಸಿ ಅರಣ್ಯಕ್ಕಟ್ಟುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ

ಅಧಿಕಾರಿಗಳ ವಿರುದ್ಧ ಆಕ್ರೋಶ:
ಘಟನಾ ಸ್ಥಳದಲ್ಲಿ ಬೆಳಗ್ಗೆಯಿಂದಲೇ ಬಾರೀ ಸಂಖ್ಯೆಯ ಜನರು ಸೇರಿದ್ದರು. ಜನರು ಅರಣ್ಯ. ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಆರೋಪಗಳನ್ನು ಅಧಿಕಾರಿಗಳ ಮೇಲೆ ಹೊರಿಸಿದ ಘಟನೆಯೂ ನಡೆದಿದೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಲಾಯಿತು. ಅಧಿಕಾರಿಗಳ ಭರವಸೆ ಬಳಿಕ ಮೃತರ ಮುಂದಿನ ಕಾರ್ಯಗಳಿಗೆ ಅವಕಾಶಕ್ಕೆ ಸ್ಥಳೀಯರು ಒಪ್ಪಿಗೆ ಸೂಚಿಸಿದರು.

ಎಸಿ ಗಿರೀಶ್ ನಂದನ್, ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ್, ಎಸಿಎಫ್ ಪ್ರವೀಣ್ ಕುಮಾರ್, ಕಡಬ ತಹಶೀಲ್ದಾರ್ ರಮೇಶ್, ಉಪತಹಶೀಲ್ದಾರ್ ಗೋಪಾಲ ಕಲ್ಲುಗುಡ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ, ಪಿಡಿಒ ಗುರುವ ಎಸ್. ತಾ.ಪಂ. ವ್ಯವಸ್ಥಾಪಕ ಭುವನೇಂದ್ರ ಸುಬ್ರಹ್ಮಣ್ಯ ಆರ್.ಎಫ್.ಒ. ರಾಘವೇಂದ್ರ, ಪಂಜ ಆರ್.ಎಫ್.ಒ. ಮಂಜುನಾಥ, ಕಡಬ ಎಸೈ ಹರೀಶ್, ಸುಬ್ರಹ್ಮಣ್ಯ ಎಸೈ ಮಂಜುನಾಥ, ಎಸೈ ರಾಜೇಶ್ ಸೇರಿದಂತೆ ವಿವಿಧ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಇಲಾಖೆಗಳ ಅಧಿಕಾರಿಗಳು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಸಾರ್ವಜನಿಕರು ಸ್ಥಳದಲ್ಲಿದ್ದರು.
