Puttur Sri Mahalingeshwara Temple ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಫೆ 18 ರಂದು ಶನಿವಾರ ಮಹಾ ರುದ್ರಯಾಗ, ಶತ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ಸಂಪನ್ನಗೊಂಡಿತ್ತು. ಪುತ್ತೂರಿನ ಸೀಮೆ ದೇವಲಾಯಕ್ಕೆ ಮುಂಜಾನೆಯಿಂದಲೇ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ತಮ್ಮ ಆರಾಧ್ಯ ಮೂರ್ತಿಯ ದರುಶನ ಪಡೆದು ಪುನೀತರಾದರು. ಅಲ್ಲದೇ ದೇಗುಲದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿ ಭಾವದಿಂದ ಪಾಲ್ಗೊಂಡರು.
ಪುತ್ತೂರಿನ ವೇದ ಸಂವರ್ಧನಾ ಪ್ರತಿಷ್ಠಾನದ ಸಹಯೋಗದಲ್ಲಿ ಬೆಳಿಗ್ಗೆ 8ರಿಂದ ದೇವಳದ ಹೊರ ಭಾಗದಲ್ಲಿ ದೇವರಿಗೆ ಮಹಾರುದ್ರಯಾಗ ನಡೆಯಿತು. 150ಕ್ಕೂ ಮಿಕ್ಕಿ ಋತ್ವಿಜರು ಏಕಕಾಲದಲ್ಲಿ ರುದ್ರ ಪಠಣ ಮಾಡುವ ಮೂಲಕ ರುದ್ರಯಾಗ ನೆರವೇರಿಸಿದರು. ಇದೇ ವೇಳೆ ಶತರುದ್ರಾಭಿಷೇಕ ಹಾಗೂ ಏಕ ಬಿಲ್ವಂ ಶಿವಾರ್ಪಣಂ ಸೇವೆ ನಡೆಯಿತು. ಭಕ್ತರು ಬಿಲ್ವಾರ್ಚಣೆ ಮಾಡಿ ಪ್ರಾರ್ಥಿಸಿದರು
.ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ದೇವಳದ ಪ್ರಧಾನ ಅರ್ಚಕ ವಿ.ಎಸ್. ಭಟ್ ಹಾಗೂ ವಸಂತ ಕೆದಿಲಾಯ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ದೇವಳದ ಎದುರು ಭಾಗದಲ್ಲಿರುವ ಧ್ಯಾನಮೂರ್ತಿ ಶಿವನ ಮುಂಭಾಗದಲ್ಲಿ ಬೆಳಿಗ್ಗೆ 6.45 ರಿಂದ ಭಜನೆ, ಕುಣಿತ ಭಜನೆ ಕಾರ್ಯಕ್ರಮ ಆರಂಭಗೊಂಡಿದ್ದು, ಭಾನುವಾರ ಸುರ್ಯೋದಯದ ತನಕ ಮುಂದುವರಿಯಲಿದೆ. ದೇವಳದ ಪಂಚಾಕ್ಷರಿ ಮಂಟಪದಲ್ಲಿ ಬೆಳಿಗ್ಗೆ 9ರಿಂದ ಶಿವನ ಛದ್ಮವೇಷ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಧ್ಯಾಹ್ನ ಸಂಗೀತೋತ್ಸವ, ಸ್ಥಳೀಯ ನೃತ್ಯ ಶಾಲೆಗಳಿಂದ ನೃತ್ಯೋತ್ಸವ, ರಾತ್ರಿ ಹೊರಾಂಗಣದ ಕಂಡನಾಯ್ಕನ ಕಟ್ಟೆಯಲ್ಲಿ ಅಷ್ಟಾವಧಾನ ಸೇವೆ ನಡೆಯಿತು.
ಮಹಾರುದ್ರಯಾಗಕ್ಕಾಗಿ ದೇವಾಲಯದ ಸಮೀಪದಲ್ಲಿ ವಿಶೇಷ ಯಾಗ ಶಾಲೆಯನ್ನು ನಿರ್ಮಾಣ ಮಾಡಲಾಗಿತ್ತು. ಯಾಗ ಶಾಲೆಯ ಛಾವಣಿಯಲ್ಲಿ ತೆಂಗಿನ ಗರಿ, ಬಿದಿರು, ಅಡಿಕೆ ಹಾಳೆಯ ತಟ್ಟೆಗಳನ್ನು ಬಳಸಿದ್ದು ವಿಶೇಷವಾಗಿತ್ತು.
ರಾತ್ರಿ ದೇವರ ಬಲಿ ಹೊರಟು ಒಳಾಂಗಣದಲ್ಲಿ ಸಾಂಪ್ರದಾಯಿಕ ಸುತ್ತು ಬಲಿ, ಹೊರಾಂಗಣದಲ್ಲಿ ದೇವರ ಬಲಿ ಉತ್ಸವ, ಪಲ್ಲಕಿ ಉತ್ಸವ, ಚಂದ್ರಮಂಡಲ ರಥೋತ್ಸವದ ಬಳಿಕ ದೇವರ ತೆಪ್ಪೋತ್ಸವ ನಡೆಯಲಿದೆ.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ಬಿ. ಐತ್ತಪ್ಪ ನಾಯ್ಕ್, ಶೇಖರ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಡಾ.ಸುಧಾ ಎಸ್. ರಾವ್, ವೀಣಾ ಬಿ.ಕೆ, ರಾಮಚಂದ್ರ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.