ಪುತ್ತೂರು
ಪಡುಮಲೆ : 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ – ಶ್ರೀ ಮಹಾವಿಷ್ಣು ಕೂರ್ಮಾವತಾರ ಎತ್ತಿದ ಪುಣ್ಯಭೂಮಿಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ
ಪುತ್ತೂರು : ಫೆ 17: ಶ್ರೀ ಮಹಾವಿಷ್ಣು ಕೂರ್ಮಾವತಾರ ಎತ್ತಿದ ಪುಣ್ಯಭೂಮಿ, ಅಂಬರಗಾಮಿ ಕಾರಣಿಕ ಶಕ್ತಿಗಳಾದ ಪೂಮಾಣಿ-ಕಿನ್ನಿಮಾಣಿ ದೈವಗಳು ಭೂಸ್ಪರ್ಶ ಮಾಡಿ ಮೊದಲ ಆರಾಧನೆ ಪಡೆದ ಪುಣ್ಯ ನೆಲ ಮತ್ತು ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜನ್ಮಭೂಮಿ ಪಡುಮಲೆಯಲ್ಲಿ ಜೀರ್ಣೋದ್ದಾರಗೊಂಡು ಮೈದಳೆದು ನಿಂತಿರುವ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ. ಅಯ್ಯಪ್ಪ ಸ್ವಾಮಿ ವಿರಜಮಾನನಾಗಿರುವ ಶಬರಿಮಲೆ, ತಿಮ್ಮಪ್ಪ ನೆಲೆಸಿರುವ ತಿರುಮಲೆಯಷ್ಟೆ ಪವಿತ್ರತೆಯನ್ನು ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಕೂಡ ಹೊಂದಿದೆ ಎಂಬ ಪ್ರತಿತಿಯಿದೆ.
ಕೋಟಿ-ಚೆನ್ನಯರ ತಾಯಿ ಸುವರ್ಣ ಕೇದಗೆ, ಮಾತೆ ರಾಜರಾಜೇಶ್ವರಿಯು ಮೊಟ್ಟೆಯ ರೂಪತಾಳಿ ವಿಪ್ರರಿಗೆ ಸಿಕ್ಕಿದ ಪವಿತ್ರ ಮದಕ (ಕೆರೆ) ಕ್ಕಿಂತ ಸರಿ ಸುಮಾರು ಒಂದು ಕಿ. ಮೀ ದೂರದಲ್ಲಿ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನವಿತ್ತು. ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡಬಂದಂತೆ ಇದನ್ನು ಸಂಪೂರ್ಣ ನೆಲ ಸಮ ಮಾಡಿ ಪುನರ್ನಿಮಿಸುವ ಕಾರ್ಯ ಪ್ರಗತಿಯಲ್ಲಿದ್ದು ಅಂತಿಮ ಹಂತ ತಲುಪಿದೆ. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವನ್ನು ಕಳೆದ ವರ್ಷದ ಜನವರಿ ತಿಂಗಳಲ್ಲಿ ಆರಂಭಿಸಲಾಗಿದ್ದು, ಅಜುಮಾಸು ಒಂದು ವರ್ಷದೊಳಗಡೆ ಪೂರ್ಣಗೊಂಡಿದೆ. ಇದರ ಸಂಪೂರ್ಣ ವೆಚ್ಚವನ್ನು ಊರ ದಾನಿಗಳೇ ಭರಿಸಿರುವುದು ವಿಶೇಷ ಹಾಗೂ ಕರಸೇವೆಯಲ್ಲೂ ಅವರು ಕೈ ಜೋಡಿಸಿದ್ದಾರೆಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ತಿಳಿಸಿದ್ದಾರೆ
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಗುಲದ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಸುಮಾರು ರೂ.6 ಕೋಟಿ ವೆಚ್ಚದಲ್ಲಿ ದೇಗುಲ ಭವ್ಯವಾಗಿ ತಲೆಯೆತ್ತಿದೆ. ಇದರಲ್ಲಿ 2.5 ಕೋ ರೂಪಾಯಿಯನ್ನು ಮರಕ್ಕೆ ವ್ಯಯಿಸಲಾಗಿದ್ದು, ದಳಿ ಮತ್ತು ಸಾಗುವಾನಿ ಮರಗಳನ್ನು ಯೆಥೇಚ್ಚವಾಗಿ ಬಳಸಲಾಗಿದೆ. ಕಗ್ಗಲ್ಲು, ಕೆಂಪು ಪಾಲಿಶು ಕಲ್ಲುಗಳಿಂದ ನಿರ್ಮಿಸಿರುವ ಗರ್ಭಗುಡಿಗೆ ಕಾಷ್ಠಶಿಲ್ಪ ಕೆತ್ತನೆಗಳಿರುವ, ದಳಿ ಮತ್ತು ಸಾಗುವಾನಿ ಮರದ ಮಾಡು ಮಾಡಿ ತಾಮ್ರದ ಹೊದಿಕೆಯನ್ನು ಹೊದೆಸಲಾಗಿದೆ. ಸಾಗುವಾನಿ ಮರದ ಸುಂದರ ಕಾಷ್ಠ ಕೆತ್ತನೆಗಳುಳ್ಳ ಹಾಗೂ ತಾಮ್ರ ಹೊದಿಕೆಯ ತೀರ್ಥ ಮಂಟಪ, ಸುತ್ತು ಪೌಳಿಯಲ್ಲಿ ಮಹಾಗಣಪತಿ ಗುಡಿ ನಿರ್ಮಾಣಗೊಂಡಿದ್ದು ಸುಂದರವಾಗಿ ಕಂಗೋಳಿಸುತ್ತಿದೆ.
ಎರಡು ಅಂತಸ್ತಿನ ರಾಜಗೋಪುರ, ಒಳಾಂಗಣದ ಸುತ್ತುಗೋಪುರಗಳು, ರಾಜಾಂಗಣದಲ್ಲಿ ಶಾಸ್ತಾರ ಗುಡಿ, ಬೆಡಿಕಟ್ಟೆ, ಗುಳಿಗನ ಕಟ್ಟೆ, ನಾಗದೇವರು ಮತ್ತು ನಾಗ ಯಕ್ಷಿಯ ನಾಗನಕಟ್ಟೆಯನ್ನು ಒಳಗೊಂಡತೆ ದೇಗುಲ ಭವ್ಯವಾಗಿ ಪುನರ್ನಿರ್ಮಾಣಗೊಂಡಿದೆ. ನವಗ್ರಹ, ವಿಷ್ಣುವಿನ ದಶಾವತಾರ ಹಾಗೂ ರಾಶಿಗಳನ್ನು ಒಳಗಡೆ ಕೆತ್ತನೆಗಳಲ್ಲಿ ಕಾಣಬಹುದಾಗಿದ್ದು, ಇದು ದೇಗುಲಕ್ಕೆ ವಿಶೇಷ ಮೆರುಗು ನೀಡಿದೆ. ರಾಜಗೋಪುರ ಹಾಗೂ ಸುತ್ತುಪೌಳಿಗೆ ಪಾರಂಪರಿಕ ರೂಪು ನೀಡಲಾಗಿದ್ದು, ಅಕರ್ಷಕವಾಗಿ ಮೂಡಿ ಬಂದಿದೆ.
ಒಳಾಂಗಣ , ಗೋಪುರದ ಅವರಣಕ್ಕೆ ಹಾಗೂ ತೀರ್ಥ ಬಾವಿಗೆ ಗ್ರಾನೈಟ್ ಹಾಸಲಾಗಿದೆ. ಹೊರಾಂಗಣದ ನೈರುತ್ಯ ದಿಕ್ಕಿನಲ್ಲಿ ವಸಂತ ಮಂಟಪ ನಿರ್ಮಿಸಲಾಗಿದೆ. ದಕ್ಷಿಣ ಭಾಗದಲ್ಲಿ ಕಚೇರಿ ಕೊಠಡಿ, ಉತ್ತರದಲ್ಲಿ ಉಗ್ರಾಣ ಕೊಠಡಿ ಅಲ್ಲದೆ ನೈವೇದ್ಯ ಕೊಠಡಿ,ತಂತ್ರಿಗಳ ಕೊಠಡಿ, ಲಾಕರ್ ವ್ಯವಸ್ಥೆಯನ್ನೊಳಗೊಂಡ ಭದ್ರತಾ ಕೊಠಡಿ , ಶೀಟ್ ಅಳವಡಿಸಿದ ಸಭಾಂಗಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪಶ್ಚಿಮ ಭಾಗದಲ್ಲಿ 1ಕಿಮೀ ದೂರದಲ್ಲಿರುವ ಒಂದು ಎಕ್ರೆಯಷ್ಟು ವಿಶಾಲದ ಪವಿತ್ರ ಮದಕವೇ ( ಸುವರ್ಣ ಕೇದಗೆ ಮೊಟ್ಟೆ ರೂಪದಲ್ಲಿ ವಿಪ್ರರಿಗೆ ಸಿಕ್ಕಿದ ಕೆರೆ) ಈ ಕ್ಷೇತ್ರದ ಮೂಲಸ್ಥಾನ. ಈ ಕೆರೆಯಲ್ಲಿ ಮಹಿಳೆಯರುಮಿಂದು ಒದ್ದೆ ಬಟ್ಟೆಯಲ್ಲಿ ಬಂದು ಮಹಾವಿಷ್ಣುವಿನ ನಡೆಯಲ್ಲಿ ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ದಿಯಾಗುವುದು. ಅದರಲ್ಲೂ ವಿಶೇಷವಾಗಿ ಸಂತಾನವಿಲ್ಲದ್ದ ದಂಪತಿಗಳಿಗೆ ಮಕ್ಕಳಾಗುವುದು ಎಂಬ ನಂಬುಗೆಯಿದೆ . ಈ ಹಿನ್ನಲೆಯಲ್ಲಿ ಕೆರೆಯ ಬಳಿ ಶಿಲಾಮಯ ರಾಜರಾಜೇಶ್ವರಿಯ ಗುಡಿ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದ್ಯಾನ ಮಂದಿರ ಹಾಗೂ ಸುಂದರವಾದ ಕೆರೆ ನಿರ್ಮಿಸಲಾಗುವುದು ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ
ನಿಮ್ಮ ಕಾವಲುಗಾರನಾಗಿ ನಾನಿರುವೆ: ಪದ್ಮರಾಜ್ ಆರ್. ಪೂಜಾರಿ; ಬಂಟ್ವಾಳದಲ್ಲಿ ಬಿರುಸಿನ ಪ್ರಚಾರ
ಬಂಟ್ವಾಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಬಿರುಸಿನ ಪ್ರಚಾರ ಕಾರ್ಯ ನಡೆಸಿದರು.
ಗುರುವಾರ ಬೆಳಗ್ಗಿನಿಂದಲೇ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಅಂಗಡಿ – ಮಳಿಗೆ, ಮನೆಗಳಿಗೆ ತೆರಳಿ ಮತ ಯಾಚನೆ ನಡೆಸಿದರು.
ಅಭ್ಯರ್ಥಿ ತಮ್ಮ ಊರಿಗೆ ಬರುತ್ತಿದ್ದಂತೆ ಕಾರ್ಯಕರ್ತರು ಹೂ ಮಾಲೆ ಹಾಕಿ, ಶಾಲು ಹೊದಿಸಿ, ಇನ್ನೂ ಕೆಲವೆಡೆ ಪಟಾಕಿ ಸಿಡಿಸಿ ಬರಮಾಡಿಕೊಂಡರು. ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮತ ಯಾಚನೆ ಮಾಡುವಾಗ ಅವರ ಜೊತೆ ತೆರಳಿ, ಅಭ್ಯರ್ಥಿ ವೇಗಕ್ಕೆ ಇನ್ನಷ್ಟು ಬಲ ತುಂಬಿದರು.
ಬಡಗ ಬೆಳ್ಳೂರು, ಅಮ್ಮುಂಜೆ – ಬಡಕಬೈಲು ಜಂಕ್ಷನ್, ಕಳ್ಳಿಗೆ – ಬ್ರಹ್ಮರಕೊಟ್ಲು, ಶೇಡಿಗುರಿ, ಬಾಳ್ತಿಲ, ಸೂರಿಕುಮೇರು, ಮಾಣಿ, ಬುಡೋಳಿ, ಪೆರ್ಲಾಪು- ಕಡೇಶ್ವಾಲ್ಯ, ನೇರಳಕಟ್ಟೆ, ಅನಂತಾಡಿ, ಮಂಗಿಲಪದವು, ಕಲ್ಲಡ್ಕ, ಅಮ್ಟೂರು, ಬೊಳ್ಳಾಯಿ, ಮಿತನಡ್ಕ, ಕನ್ಯಾನ, ಕೊಡುಂಗಾಯಿ, ಸಾಲೆತ್ತೂರು, ಬೋಳಂತೂರು, ಮಂಚಿ – ಕುಕ್ಕಾಜೆ ಜಂಕ್ಷನ್, ಸಜೀಪ ಮುನ್ನೂರು – ನಂದಾವರ ಜಂಕ್ಷನ್, ಪಾಣೆಮಂಗಳೂರು – ಮೆಲ್ಕಾರ್ ಜಂಕ್ಷನ್ ನಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿದರು.
ಗೆಲುವಿಗೆ ನಾಂದಿ ಹಾಡಿ: ರಮಾನಾಥ ರೈ
ಮಾಜಿ ಸಚಿವ, ಜಿಲ್ಲಾ ಚುನಾವಣಾ ಉಸ್ತುವಾರಿ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಬಡವರ ಪರ ಕೆಲಸ ಮಾಡಿದ ಪಕ್ಷ. ಹಾಗಾಗಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಅಗತ್ಯವಿದೆ. ಲೋಕಸಭಾ ಚುನಾವಣೆಯ ಗೆಲುವಿನ ಮೂಲಕ ಕಾಂಗ್ರೆಸ್’ನ ಗೆಲುವಿಗೆ ನಾಂದಿ ಹಾಡಿ ಎಂದರು.
ನಿಮ್ಮ ಕಾವಲುಗಾರನಾಗಿ ನಾನಿರುವೆ: ಪದ್ಮರಾಜ್ ಆರ್. ಪೂಜಾರಿ
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಿಕೊಂಡಿ ಬಂದಿದ್ದೇನೆ. ಮುಂದೆಯೂ ಇಂತಹ ಸಾಮಾಜಿಕ ಕೆಲಸವನ್ನು ಮುಂದುವರಿಸುತ್ತೇನೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಸಹಿತ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಮನೆಮನೆಗೆ ತಲುಪಿಸಿ. ಇದರೊಂದಿಗೆ ಉದ್ಯೋಗ ಸೃಷ್ಟಿಯ ಕೆಲಸವೂ ಜಿಲ್ಲೆಯಲ್ಲಿ ನಡೆಸಲಾಗುವುದು. ಮಾತ್ರವಲ್ಲ, ನಿಮ್ಮ ಸಮಸ್ಯೆಗಳ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ. ಸಂಸತ್ ಸದಸ್ಯನಾಗಿ ನಿಮ್ಮ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು: ಹರೀಶ್ ಕುಮಾರ್
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಬಡವರ ಪರವಾಗಿ ಇರುವ ಸರಕಾರ ಇಂದಿನ ಅಗತ್ಯ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಕಾಂಗ್ರೆಸ್ ಸರಕಾರ ಕೆಲಸ ಮಾಡುತ್ತಾ ಬಂದಿದೆ. ಮುಂದೆಯೂ ಬಡವರ ಬಗ್ಗೆ ಕಾಳಜಿ ವಹಿಸಲು, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ದುಡಿಯಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಧಾರ್ಮಿಕ ಕೇಂದ್ರಗಳಿಗೆ ಭೇಟಿ:
ಬೆಳಿಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಮುಂದಾದ ಪದ್ಮರಾಜ್ ಆರ್. ಪೂಜಾರಿ ಅವರು, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಮೊಡಂಕಾಪು ಚರ್ಚ್, ನರಿಕೊಂಬು ಹನುಮಾನ್ ಮಂದಿರ, ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಸುದರ್ಶನ್ ಜೈನ್, ಸಂಜೀವ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಯೂತ್ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಸುರಯ್ಯ ಅಂಜುಮ್, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಕೊಳ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಪವಿತ್ರ ಪೂಂಜಾ, ಉಪಾಧ್ಯಕ್ಷ ಅಬ್ದುಲ್ ರಜಾಕ್, ಅಬ್ದುಲ್ ಮಜೀದ್, ಜಿಪಂ ಮಾಜಿ ಸದಸ್ಯ ಕೃಷ್ಙ ನಾಯ್ಕ, ದೇವಕಿ, ಶಾಹುಲ್ ಹಮೀದ್, ಮೊಯಿದ್ದೀನ್, ಗಂಗಾಧರ, ವಸಂತ ಬೆಳ್ಚಾಡ, ಕೃ಼ಷ್ಣಯ್ಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಪುತ್ತೂರು
ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ
ಪುತ್ತೂರು: ಬೈಕ್ ಮತ್ತು ಜೀಪೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಸಮೀಪದ ಪಾಪೆತ್ತಡ್ಕ ಎಂಬಲ್ಲಿ ಎ.17ರಂದು ನಡೆದಿದೆ.
ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಜೀಪು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದೆ.
ಬೈಕ್ ಸವಾರ ಮುಂಡೂರು ಗ್ರಾಮದ ಕಡ್ಯ ನಿವಾಸಿ, ದಿ.ಬಾಳಪ್ಪ ಗೌಡರ ಪುತ್ರ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ ಗೌಡ(46.ವ) ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೋಕೇಶ್ ಅವರ ಜೊತೆ ಬೈಕ್ನಲ್ಲಿದ್ದ ಅವರ ಮಕ್ಕಳಾದ ದೀಪ್ತಿ(8.ವ) ಹಾಗೂ ಗಗನ್ (4.ವ) ಗಂಭೀರ ಗಾಯಗೊಂಡಿದ್ದು ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಔಷಧಿಗೆ ಬಂದಿದ್ದರು: ಲೋಕೇಶ್ ಅವರು ತಮ್ಮ ಮಕ್ಕಳಿಗೆ ಔಷಧಿಗೆಂದು ಪುರುಷರಕಟ್ಟೆಗೆ ಹೋಗಿ ಬರುವಾಗ ಈ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಲೋಕೇಶ್ ಗೌಡ ಅವರು ಪತ್ನಿ ಮಾಲತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಅಪಘಾತ ನಡೆದ ವೇಳೆ ಘಟನಾ ಸ್ಥಳದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇದ್ದುದರಿಂದ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತ್ತು.
ಜೀಪು ತೆಗೆಯಲು ವಿರೋಧ: ಲಾಠಿ ಪ್ರಹಾರ: ಅಪಘಾತದ ಬಳಿಕ ರಸ್ತೆ ಬದಿಯ ಕಣಿಯಲ್ಲಿದ್ದ ಜೀಪನ್ನು ಅಲ್ಪ ಸಮಯದ ಬಳಿಕ ಚಾಲಕನ ಕಡೆಯವರು ಸ್ಥಳದಿಂದ ತೆರವು ಮಾಡಲು ಪ್ರಯತ್ನಿಸಿದಾಗ ಸ್ಥಳದಲ್ಲಿದ್ದ ಯುವಕರು ಜೀಪು ತೆಗೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡೂ ತಂಡಗಳ ಮಧ್ಯೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಸ್ಥಳದಿಂದ ಚದುರಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ: ಜೀಪು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಬವಿಸಿ ಸಾವನ್ನಪ್ಪಿದ್ದು ಜೀಪು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿ ಸೇರಿದ್ದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು.
ರಾಂಗ್ ಸೈಡಲ್ಲಿ ಜೀಪು ಬಂದದ್ದೇ ಘಟನೆಗೆ ಕಾರಣ..? ಜೀಪು ಸವಾರ ಜೀಪನ್ನು ರಾಂಗ್ ಸೈಡಲ್ಲಿ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನುವ ಆರೋಪ ಸ್ಥಳೀಯವಾಗಿ ಕೇಳಿ ಬಂದಿದೆ. ಜೀಪಿನಲ್ಲಿ ಐದು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
ಬೈಕ್ನ್ನು ಎಳೆದೊಯ್ದ ಜೀಪ್..!
ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಬೈಕ್ಗೆ ಜೀಪು ಗುದ್ದಿ 150 ಮೀ. ದೂರ ಬೈಕ್ನ್ನು ಜೀಪ್ ಎಳೆದುಕೊಂಡು ಹೋಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಬೈಕ್ ಜೀಪಿನ ಅಡಿಯಲ್ಲಿ ಅಪ್ಪಚ್ಚಿಯಾಗಿತ್ತು.
ಗೃಹ ಪ್ರವೇಶದ ಸಂತಸದಲ್ಲಿದ್ದ ಮೃತ ಲೋಕೇಶ್ :
ಮೃತ ಲೋಕೇಶ್ ಅವರ ಮನೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಇನ್ನೇನು ಕೆಲವೇ ಸಮಯದಲ್ಲಿ ಗೃಹ ಪ್ರವೇಶ ಮಾಡುವ ಸಂತಸದಲ್ಲಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಪುತ್ತೂರು
Puttur Jathre | ಪುತ್ತೂರ ಒಡೆಯನ ದರ್ಶನ ಬಲಿಗೆ ಕ್ಷಣಗಣನೆ – ‘ಪುತ್ತೂರು ಬೆಡಿ’ ಭರದ ತಯಾರಿ – ಶೃಂಗಾರಗೊಂಡ ಬ್ರಹ್ಮರಥ
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ (Puttur Jathre) ಎ.10ರಿಂದ ಪ್ರಾರಂಭವಾಗಿದ್ದು, ಎ.17ರಂದು ಮಧ್ಯಾಹ್ನ ದರ್ಶನ ಬಲಿ ರಾತ್ರಿ ಬ್ರಹ್ಮಕಲಶೋತ್ಸವ ಹಾಗೂ ಪುತ್ತೂರು ಬೆಡಿ ಎಂದೇ ಪ್ರಸಿದ್ದಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಲಿದೆ.
ಇದೀಗ ಶ್ರೀದೇವರ ವಿಶೇಷ ದರ್ಶನ ಬಲಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಭಕ್ತ ಸಾಗರ ದೇವಸ್ಥಾನಕ್ಕೆ ಹರಿದು ಬರುತ್ತಿದೆ. ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ ನಡೆಯಲಿದೆ.
ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. ಬಂದೋಬಸ್ತಿಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ಜೊತೆಗೆ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳದವರೂ ಬಂದೋಬಸ್ತ್ ನಿರತರಾಗಿದ್ದಾರೆ.ಮಪ್ತಿಯಲ್ಲಿಯೂ ನೂರಾರು ಪೊಲೀಸರು ಕಾರ್ಯನಿರತರಾಗಿದ್ದಾರೆ.ಡಿವೈಎಸ್ಪಿ ಅರುಣ್ ನಾಗೇಗೌಡರ ನೇತೃತ್ವದಲ್ಲಿ ಬಂದೋಬಸ್ತ್ ನಡೆಯಲಿದೆ.
ಎ.17ರಂದು ಬೆಳಿಗ್ಗೆ, ಶ್ರೀ ದೇವಳದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ವರ್ಷ ಸುಮಾರು ರೂ.8.5 ಲಕ್ಷ ವೆಚ್ಚದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ. ಕಾರ್ಕಳದ ರಮಾನಂದ ಮತ್ತು ಪುತ್ತೂರಿನ ನಾಗೇಶ್ ರಾವ್ ಅವರು ಸಿಡಿಮದ್ದು ಪ್ರದರ್ಶನದ ಗುತ್ತಿಗೆ ವಹಿಸಿಕೊಂಡಿದ್ದಾರೆ.
ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್: ಜಾತ್ರಾ ಗದ್ದೆಯಲ್ಲಿ ಹಲವು ಕಡೆ ಸಿಸಿ ಕ್ಯಾಮರ ಆಳವಡಿಸಲಾಗಿದೆ.ದೇವಳದ ರಥ ಮಂದಿರದ ಬಳಿ ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್ ವ್ಯವಸ್ಥೆ ಮಾಡಲಾಗಿದೆ.ಶೇಟ್ ಇಲೆಕ್ಟೋನಿಕ್ಸ್ ಸಂಸ್ಥೆ ಸಿಸಿ ಕ್ಯಾಮರಾಗಳ ನಿಯಂತ್ರಣ ಮಾಡಲಿದ್ದಾರೆ. ಪೊಲೀಸರ ಜೊತೆ ಸಿಸಿ ಕ್ಯಾಮರಾ ಕಣ್ಣಾವಲು ಕಾರ್ಯ ಮಾಡುತ್ತಿದೆ.
-
ಪುತ್ತೂರು1 day ago
ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ
-
ಸಾಮಾಜಿಕ ಮಾಧ್ಯಮ4 hours ago
Dhruv Rathee | ಕನ್ನಡ ಸೇರಿ ಪಂಚಭಾಷೆಯಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ
-
ದಕ್ಷಿಣ ಕನ್ನಡ5 mins ago
ನಿಮ್ಮ ಕಾವಲುಗಾರನಾಗಿ ನಾನಿರುವೆ: ಪದ್ಮರಾಜ್ ಆರ್. ಪೂಜಾರಿ; ಬಂಟ್ವಾಳದಲ್ಲಿ ಬಿರುಸಿನ ಪ್ರಚಾರ