ಪುತ್ತೂರು: ಪುತ್ತೂರಿನ (Puttur) ಸಂಟ್ಯಾರಿನ ಬಳಕ ಎಂಬಲ್ಲಿ ಕಾರು ಅಪಘಾತಗೊಂಡು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುಂಡೂರಿನ ಮುರಳಿಕೃಷ್ಣ ಭಟ್ ಎಂಬವರು ಮೃತಪಟ್ಟಿದ್ದು, ಮೃತಪಟ್ಟ ವ್ಯಕ್ತಿಯ ವಿರುದ್ಧವೇ ದೂರು ದಾಖಲಾಗಿದೆ.
ಕಾಲಿನಲ್ಲಿದ್ದ ಪಿಡಬ್ಲ್ಯಡಿ ಗುತ್ತಿಗೆದಾರ ಶಶಿಕುಮಾರ್ ಕಕ್ಕೂರು ದೂರು ದಾಖಲಿಸಿದ್ದು, ಫೆ.14 ರಂದು ರಾತ್ರಿ ಸುಮಾರು 08.25 ಗಂಟೆಗೆ ದೂರುದಾರರು ಮತ್ತು ಬೆಟ್ಟಂಪಾಡಿಯ ದಿಲೀಪ್ ಎಂಬವರು ಪುತ್ತೂರಿನ ದರ್ಭೆಯಲ್ಲಿದ್ದಾಗ, ಆವರ ಪರಿಚಯದ ನಿಡ್ಪಳ್ಳಿಯ ಮುರಳಿಕೃಷ್ಣ ಎಂಬವರು ಕೆಎ.21.ಪಿ.5049 ನೇ ಕಾರನ್ನು ಚಲಾಯಿಸಿಕೊಂಡು ಪುತ್ತೂರಿನಿಂದ ದರ್ಭೆಗೆ ಬಂದು ಶಶಿಕುಮಾರ್ ಬಳಿ ನಿಲ್ಲಿಸಿ, ಫಿರ್ಯಾದುದಾರರು ಮತ್ತು ಬೆಟ್ಟಂಪಾಡಿಯ ದಿಲೀಪ್ ರವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿದ್ದಾರೆ.
ಆ ವೇಳೆ ಸದ್ರಿ ಕಾರಿನಲ್ಲಿ ದೂಮಡ್ಕದ ನವನೀತರವರು ಕುಳಿತುಕೊಂಡಿದ್ದು, ಮುರಳಿಕೃಷ್ಣರವರು ಕಾರನ್ನು ಚಲಾಯಿಸಿಕೊಂಡು ರಾತ್ರಿ ಸುಮಾರು 08:30 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಬಳಕ್ಕ ಎಂಬಲ್ಲಿಗೆ ತಲುಪಿದಾಗ ಮುರಳಿಕೃಷ್ಣರವರು ಸದ್ರಿ ಕಾರನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ 2 ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಸದ್ರಿ ಕಾರು ರಸ್ತೆಯ ಎಡ ಬದಿಯ ಆಳಕ್ಕೆ ಬಿದ್ದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಅಪಘಾತದಿಂದಾಗಿ ದೂರುದಾರರ ಹಲ್ಲು ಮುರಿದಿದ್ದು,ತುಟಿ, ಬಲಕಣ್ಣಿನ ಮೇಲ್ಭಾಗ,ಬಲಕೋಲು ಕಾಲಿಗೆ ರಕ್ತ ಗಾಯವಾಗಿರುತ್ತದೆ, ದಿಲೀಪ್ ರವರ ಮುಖ,ಬಲ ಕೋಲು ಕಾಲಿನಲ್ಲಿ ರಕ್ತ ಗಾಯ ಮತ್ತು ಗುದ್ದಿದ ರೀತಿಯ ಗಾಯವಾಗಿರುತ್ತದೆ. ನವನೀತ್ ರವರಿಗೆ ಕುತ್ತಿಗೆಯ ಬಳಿ ಗುದ್ದಿದ ರೀತಿಯ ನೋವುಂಟಾಗಿರುತ್ತದೆ. ಕಾರಿನ ಚಾಲಕರಾದ ಮುರಳಿಕೃಷ್ಣರವರಿಗೆ ತಲೆ ಮತ್ತು ಇತರ ಕಡೆಗಳಲ್ಲಿ ತೀವ್ರ ಗಾಯವಾಗಿ ರಕ್ತ ಸುರಿಯುತ್ತಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಅಪಘಾತವನ್ನು ನೋಡಿ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ದಿಲೀಪ್,ನವನೀತ್ ಮತ್ತು ಶಶಿಕುಮಾರ್ ಚಿಕಿತ್ಸೆಗಾಗಿ ಪುತ್ತೂರಿನ ಆದರ್ಶ ಆಸ್ಪತ್ರೆಲ್ಲಿ ಒಳರೋಗಿಯಾಗಿ ದಾಖಲಿಸಿದ್ದು,ಈ ಅಪಘಾತದಲ್ಲಿ ಗಾಯಗೊಂಡ ಮುರಳಿಕೃಷ್ಣರವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮುರಳಿಕೃಷ್ಣರವರು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯಾಧಿಕಾರಿಯವರು ತಿಳಿಸಿರುವುದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 14-2023 ಕಲಂ 279,337,338,304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.