ಬೆಂಗಳೂರು
ಬೆಂಗಳೂರಿನಲ್ಲಿ ಪ್ರಧಾನಿ ಔತಣಕೂಟಕ್ಕೆ ಯಶ್, ರಿಷಬ್ ಶೆಟ್ಟಿ ಸಹಿತ ಹಲವು ಸಾಧಕರು – ಅಯ್ಯೋ ಶ್ರದ್ಧಾಳ ಕಂಡು ‘ಅಯ್ಯೋ’ ಎಂದ ಪ್ರಧಾನಿ: ವಿದೇಶದಲ್ಲಿ ಸಿನಿಮಾಕ್ಕೆ ಕೊಡುವ ಪ್ರೋತ್ಸಾಹದಂತೆ ಭಾರತದಲ್ಲೂ ಕೊಡಿ ಎಂದು ಬೇಡಿಕೆ ಇಟ್ಟ ಕಲಾವಿದರು
ಪ್ರಧಾನಮಂತ್ರಿ ಕಚೇರಿಯಿಂದ ಬಂದ ನೇರ ಆಹ್ವಾನದ ಮೇರೆಗೆ ಬೆಂಗಳೂರಿನ ರಾಜಭವನದಲ್ಲಿ ಭಾನುವಾರ ರಾತ್ರಿ ನಡೆದ ಔತಣಕೂಟದಲ್ಲಿ ಕನ್ನಡ ಚಿತ್ರರಂಗದಿಂದ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ನಟ ನಿರ್ದೇಶಕ ರಿಷಬ್ ಶೆಟ್ಟ ಹಾಗೂ ಶ್ರದ್ಧಾ ಜೈನ್ ಭಾಗವಹಿಸಿದ್ದರು. ಇವರೊಂದಿಗೆ ಕ್ರೀಡಾ ಕ್ಷೇತ್ರದ ಸಾಧಕರು ಪ್ರಧಾನಿ ಜೊತೆ ಔತಣಕೂಟದಲ್ಲಿ ಭಾಗವಹಿಸಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಇವರೆಲ್ಲಾ ಮಾತುಕತೆ ನಡೆಸಿದರು. ಇದೇ ವೇಳೆ, ಕನ್ನಡ ಚಲನಚಿತ್ರ ರಂಗದ ಬೆಳವಣಿಗೆ ಬಗ್ಗೆ ಪ್ರಶಂಸಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶ ವಿದೇಶಗಳ ಪ್ರೇಕ್ಷಕರ ಗಮನ ಸೆಳೆದ ‘ಕಾಂತಾರ’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೇ, ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ನಟಿ ಶ್ರದ್ಧಾ ಜೈನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಿಷಬ್ ಶೆಟ್ಟಿ ತಂಡದೊಂದಿಗೆ ಭೇಟಿಯಾದ ಸಂತಸವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
”ನಮಸ್ಕಾರ, ಹೌದು, ನಾನು ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಯವರನ್ನು ಭೇಟಿಯಾದೆ. ನನಗೆ ಅವರ ಮೊದಲ ಮಾತು ‘ಅಯ್ಯೋ!’. ನಾನು ಕಣ್ಣು ಮಿಟುಕಿಸುತ್ತಿಲ್ಲ, ಅದು ನನ್ನ ‘ಓ ಮೈ ಜೋಡ್, ಅವರು ನಿಜವಾಗಿಯೂ ಹೇಳಿದ್ದಾರೆ, ಇದು ನಿಜವಾಗಿಯೂ ನಡೆದಿದೆ!!!!’ ನೋಡಿ. ಭಾರತದ ಪ್ರಧಾನ ಮಂತ್ರಿಗಳಿಗೆ ಧನ್ಯವಾದ! ಎಂದು ಸಂಭ್ರಮವನ್ನು ಶ್ರದ್ಧಾ ಜೈನ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಕನ್ನಡದ ಸಿನಿಮಾಗಳು ಉತ್ತರ ಭಾರತದ ಚಿತ್ರಗಳಿಗಿಂತ ಹೆಚ್ಚು ಖ್ಯಾತಿ ಗಳಿಸುತ್ತಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ”ಕನ್ನಡದ ಸಿನಿಮಾಗಳಲ್ಲಿ ನಾಡಿನ ಸಾಂಸ್ಕೃತಿಕ ಪರಂಪರೆ ಹಾಗೂ ಪ್ರಾದೇಶಿಕತೆ ಬಿಂಬಿಸಲು ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಮೂಲಕ ದೇಶ-ವಿದೇಶಗಳಿಗೆ ನಮ್ಮ ಪರಂಪರೆಯನ್ನು ಪರಿಚಯಿಸಿ ಕನ್ನಡ ಚಿತ್ರರಂಗ ಯಶಸ್ಸು ಗಳಿಸುತ್ತಿರುವುದು ದೇಶದ ಗೌರವ ಹೆಚ್ಚುವಂತೆ ಮಾಡಿದೆ” ಎಂದರು ನರೇಂದ್ರ ಮೋದಿ.
”ನಮ್ಮ ದೇಶದ ದ್ವೀಪಗಳನ್ನು ಚಿತ್ರೀಕರಣಕ್ಕೆ ಸೂಕ್ತವಾಗುವಂತೆ ಅಭಿವೃದಿ ಪಡಿಸುವ ಯೋಜನೆ ಸರ್ಕಾರಕ್ಕೆ ಇದೆ. ನಿಮ್ಮ ರಚನಾತ್ಮಕ ಯೋಚನೆಗಳನ್ನು ಪತ್ರದ ಮೂಲಕ ಹಂಚಿಕೊಳ್ಳಿ. ದೂರವಾಣಿ ಮೂಲಕ ಕೂಡ ನಿಮ್ಮ ಜೊತೆ ಸಂಪರ್ಕದಲ್ಲಿ ಇರುತ್ತೇವೆ” ಎಂದು ನರೇಂದ್ರ ಮೋದಿ ತಿಳಿಸಿದರು.
‘ಕಾಂತಾರ’ ಸಿನಿಮಾದ ಬಗ್ಗೆ ಪ್ರಸ್ತಾಪಿಸಿದ ಮೋದಿ, ”ಸ್ಥಳೀಯತೆ, ಪರಂಪರೆ ಹಾಗೂ ಸಂಸ್ಕೃತಿ ಪರಿಚಯಿಸುವ ಇಂತಹ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮಬೇಕು” ಎಂದು ಅಭಿಪ್ರಾಯಪಟ್ಟರು. ಹೊಂಬಾಳೆ ಫಿಲ್ಮ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಮೋದಿ, ”ಪ್ರತಿಭಾವಂತರಿಗೆ ಅವಕಾಶಗಳನ್ನು ಕೊಟ್ಟು ಕನ್ನಡ ಚಿತ್ರೋದ್ಯಮವನ್ನು ಹೊಸ ಎತ್ತರಕ್ಕೆ ಏರಿಸುವ ಕೆಲಸ ಮಾಡುತ್ತಿರುವ ಕಾರ್ಯ ಶ್ಲಾಘನೀಯ” ಎಂದರು
ಪುನೀತ್ ರಾಜ್ಕುಮಾರ್ ಅವರ ಜನಪ್ರಿಯತೆಯನ್ನು ಪ್ರಧಾನಿ ಮೋದಿ ಸ್ಮರಿಸಿದರು. ಯಶ್ ಮತ್ತು ರಿಷಬ್ ಶೆಟ್ಟಿ ಅವರ ಕಲಾಪ್ರೌಢಿಮೆಯನ್ನು ಮೋದಿ ಮೆಚ್ಚಿದರು.
”ಅಶ್ವಿನಿ ಜೀ” ಎಂದು ಮಾತು ಆರಂಭಿಸಿದ ಪ್ರಧಾನಿ ಮೋದಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಯೋಗಕ್ಷೇಮ ವಿಚಾರಿಸಿದರು. ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿದ ನಂತರ, ಅಪ್ಪು ಅವರ ಕೊನೆಯ ಸಿನಿಮಾ ‘ಗಂಧದ ಗುಡಿ’ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದೆ ಎಂದರು. ನಿರ್ಮಾಣ ಸಂಸ್ಥೆಯನ್ನ ಅಶ್ವಿನಿ ನಡೆಸುತ್ತಿರುವ ಬಗ್ಗೆ ಕೇಳಿ ತಿಳಿದುಕೊಂಡ ಮೋದಿ ಅವರು, ”ನಿಮ್ಮ ನಿರ್ಮಾಣದಲ್ಲಿ ಒಳ್ಳೆಯ ಚಿತ್ರಗಳು ಹೊರಬರಲಿ” ಎಂದು ಹಾರೈಸಿದರು.
”ಸರ್ಕಾರಕ್ಕೆ ಸಿನಿಮಾ ಕ್ಷೇತ್ರದಿಂದ ಅತಿ ಹೆಚ್ಚು ತೆರಿಗೆ ಬರುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ಸಿನಿಮಾ ಕ್ಷೇತ್ರಕ್ಕೆ ಹೆಚ್ಚಿನ ಸಹಕಾರ ನೀಡಬೇಕು. ಬೇರೆ ದೇಶಗಳಲ್ಲಿ ಸಿನಿಮಾಗೆ ಕೊಡುತ್ತಿರುವ ಹಾಗೆಯೇ ಇಲ್ಲೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಶೂಟಿಂಗ್ಗಾಗಿ ಬೇರೆ ದೇಶದವರು ನಮ್ಮಲ್ಲಿಗೆ ಬರುವಂತೆ ಆಗಬೇಕು. ಐಟಿ-ಬಿಟಿ ಕ್ಷೇತ್ರಕ್ಕೆ ಕೊಡುವಂತೆ ಸಿನಿಮಾದವರಿಗೂ ಬೆಂಬಲ ನೀಡಬೇಕು.
ಚಿತ್ರೀಕರಣಕ್ಕೆ ಬೇಕಾದ ಸ್ಟುಡಿಯೋ ಮತ್ತಿತರ ಸವಲತ್ತು ಕಲ್ಪಿಸಬೇಕು. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವವರ ಹಿತರಕ್ಷಣೆಗೆ ಆದ್ಯತೆ ಕೊಡಬೇಕು” ಎಂಬುದನ್ನು ಚಿತ್ರತಂಡದವರು ಪ್ರಧಾನಿ ಮೋದಿ ಅವರ ಗಮನಕ್ಕೆ ತಂದರು.
ರಾಜಕೀಯ
Lokpoll-ಲೋಕ್ ಪೋಲ್ ಸಮೀಕ್ಷೆ ಬಹಿರಂಗ : ಕರ್ನಾಟಕದಲ್ಲಿ ಕಾಂಗ್ರೇಸ್ ಮೇಲುಗೈ – ಕ್ಲೀನ್ ಸ್ವೀಪ್ ಕನಸಿನಲ್ಲಿರುವ ಬಿಜೆಪಿ-ಜೆಡಿಎಸ್ ಮೈತ್ರಿಗೆ ಶಾಕ್..!
ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಮೊದಲ ಹಂತದ ಮತದಾನಕ್ಕೆ ಕೇವಲ 13 ದಿನ ಮಾತ್ರ ಬಾಕಿಯಿದೆ. ರಾಜ್ಯದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಬಿಜೆಪಿ – ಜೆಡಿಎಸ್ ಹಾಗೂ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿವೆ. ಇದರ ನಡುವೆ ಲೋಕ್ ಪೋಲ್ ಸಮೀಕ್ಷೆ ಬಿಡುಗಡೆಯಾಗಿದ್ದು, 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸಮೀಕ್ಷೆಯ ಫಲಿತಾಂಶದಿಂದ ಶಾಕ್ ಆಗಿದೆ. ಈ ಸಮೀಕ್ಷೆಯಿಂದ ಆಡಳಿತಾರೂಢ ಕಾಂಗ್ರೆಸ್ ನಾಯಕರು ಖುಷ್ ಆಗಿದ್ದಾರೆ.
ಕಳೆದ ಬಾರಿಗಿಂತ ಸುಮಾರು 10ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಲೋಕ್ ಪೋಲ್ ಸಮೀಕ್ಷೆ ಭವಿಷ್ಯ ನುಡಿದಿದ್ದು, ಕಾಂಗ್ರೆಸ್ ಹತ್ತಿರಹತ್ತಿರ 20 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಈಗಲೇ ಚುನಾವಣೆ ನಡೆದರೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ 11 ರಿಂದ 13 ಕ್ಷೇತ್ರಗಳನ್ನು ಗೆಲ್ಲಲಿದ್ದರೆ, ಕಾಂಗ್ರೆಸ್ 15 ರಿಂದ 17 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಲೋಕ್ ಪೋಲ್ ಸಮೀಕ್ಷೆ ಹೇಳಿದೆ.
15 ದಿನದ ಹಿಂದೆ ಪ್ರಕಟವಾಗಿದ್ದ ಇದೇ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 12 ರಿಂದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿತ್ತು. ಬಿಜೆಪಿ 10 ರಿಂದ 12 ಕ್ಷೇತ್ರಗಳಲ್ಲಿ, ಜೆಡಿಎಸ್ 1 ರಿಂದ 2 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿತ್ತು. ಈಗ ಮತ್ತೆ ಅನೇಕ ಕ್ಷೇತ್ರಗಳಲ್ಲಿ ವ್ಯತ್ಯಾಸ ಆಗಿದ್ದು, ಲೋಕ್ ಪೋಲ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳನ್ನು ವೃದ್ಧಿಸಿಕೊಂಡಿದೆ. ಪ್ರತಿ ಕ್ಷೇತ್ರದಲ್ಲಿಯೂ 1350 ಜನರ ಪ್ರತಿಕ್ರಿಯೆಯನ್ನು ಪಡೆದು ಸಮೀಕ್ಷೆ ನಡೆಸಲಾಗಿದೆ.
ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳು!
ಸಮೀಕ್ಷೆಯ ವೇಳೆ ಹಲವು ವಿಚಾರಗಳು ಗಮನಕ್ಕೆ ಬಂದಿವೆ ಎಂದು ಲೋಕ್ ಪೋಲ್ ಸಮೀಕ್ಷೆ ತನ್ನ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದೆ. ಪ್ರಮುಖವಾಗಿ ನಿರುದ್ಯೋಗ, ಹಣದುಬ್ಬರ, ಪ್ರಧಾನಿ ಅಭ್ಯರ್ಥಿ, ಕಲ್ಯಾಣ ಯೋಜನೆಗಳು ಮತ್ತು ಕನ್ನಡ ಅಭಿಮಾನದ ಐದು ವಿಷಯಗಳನ್ನು ಜನರು ಮುಖ್ಯವಾಗಿ ಗಮನಿಸಿದ್ದಾರೆ. ಜೊತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕಾಂಗ್ರೆಸ್ ಪರ ಒಲವು ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ ಎಂದು ಸಮೀಕ್ಷೆ ಹೇಳಿದೆ.
ಸದಾನಂದ ಗೌಡ ಹಾಗೂ ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗಿದ್ದರಿಂದ ಒಕ್ಕಲಿಗ ಮತಗಳು ಕಾಂಗ್ರೆಸ್ ಕಡೆ ವಾಲಿವೆ, ಹಲವು ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿಯಲ್ಲಿ ಹೊಂದಾಣಿಕೆ ಕೊರತೆಯಿಂದ ಜೆಡಿಎಸ್ ನಾಯಕರು ಬಿಜೆಪಿ ಪರ ಕೆಲಸ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗ, ಚಾಮರಾಜನಗರ, ರಾಯಚೂರಿನಲ್ಲಿ ಜೆಡಿಎಸ್ ಉತ್ತಮ ಸಂಘಟನೆ ಹೊಂದಿದ್ದು, ಅಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಇದರಿಂದ ಬಿಜೆಪಿಗೆ ಹೊಡೆತ ಎನ್ನಲಾಗಿದೆ. ಇನ್ನು, ಅಹಿಂದ ಮತದಾರರು ಕಾಂಗ್ರೆಸ್ ಪರ ಇದ್ದು, ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಆಂತರಿಕ ಅಸಮಾಧಾನ ಹೊಡೆತ ಕೊಡಲಿದೆ ಎಂದು ಲೋಕ್ ಪೋಲ್ ಸಮೀಕ್ಷೆ ಹೇಳಿದೆ.
ನಿಧನ ವಾರ್ತೆ
S.K. Jain-ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಟಿವಿ ಮಾಧ್ಯಮದ ಮೊಟ್ಟ ಮೊದಲ ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ ವಿಧಿವಶ
ಕನ್ನಡ ಟಿವಿ ಮಾಧ್ಯಮದ ಮೊಟ್ಟ ಮೊದಲ ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್(67) ರವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಏ.12ರಂದು ವಿಧಿವಶರಾಗಿದ್ದಾರೆ.
ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮಾ.18ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರದಂದು ಇಹಲೋಕ ತ್ಯಜಿಸಿದ್ದಾರೆ.
2 ದಶಕಗಳ ಹಿಂದೆ ಟಿವಿ ಮಾಧ್ಯಮದ ಮೂಲಕ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿದ್ದ ಜೈನ್ ಅವರು ಭಾರೀ ಸಂಚಲನ ಮೂಡಿಸಿದ್ದರು. ಕರ್ನಾಟಕ ಮಾಧ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಜೈನ್ ಅವರು, ರಾಶಿ ಭವಿಷ್ಯ, ಶುಭ-ಅಶುಭ, ಫಲಾಫಲ ಸೇರಿದಂತೆ ಜ್ಯೋತಿಷ್ಯದ ಪರಿಕರಗಳಲ್ಲಿ ನಿಖರತೆಯನ್ನು ತಂದುಕೊಟ್ಟಿದ್ದರು.
ವಿದ್ಯುನ್ಮಾನ ಮಾಧ್ಯಮದಲ್ಲಿ ಜ್ಯೋತಿಷಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಕರ್ನಾಟಕದಲ್ಲಿ ಹೊಸ ಪರಂಪರೆ ಹಾಗೂ ಜ್ಯೋತಿಷ್ಯವನ್ನು ಮನೆ ಮನೆಗೆ ತಲುಪಿಸಿದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಅಂದಿನ ಕಾಲಮಾನದಲ್ಲೇ ಎಸ್.ಕೆ. ಜೈನ್ ಅವರ ಕಾರ್ಯಕ್ರಮಕ್ಕೆ ಲಕ್ಷಾಂತರ ವೀಕ್ಷಕರಿದ್ದರು. ಬಹಳಷ್ಟು ವೀಕ್ಷಕರು ಕಾದಿದ್ದು ಜೈನ್ ಅವರ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಎಸ್.ಕೆ. ಜೈನ್ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅಪರಾಧ
Rameswaram café-ರಾಮೇಶ್ವರಂ ಕೆಫೆ ಬಾಂಬರ್ ಮತ್ತು ಮಾಸ್ಟರ್ ಮೈಂಡ್ ಕೋಲ್ಕತ್ತಾದಲ್ಲಿ ಎನ್ಐಎ ಬಲೆಗೆ
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬಾಂಬರ್ ಮತ್ತು ಮಾಸ್ಟರ್ ಮೈಂಡ್ ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದ್ದ ಇಬ್ಬರನ್ನು ಎನ್ಐಎ ಅಧಿಕಾರಿಗಳು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬಂಧಿಸಿದ್ದಾರೆ.
ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್ ಅವರನ್ನು ಕೋಲ್ಕತ್ತಾದ ಬಳಿ ಅವರ ಅಡಗುದಾಣದಲ್ಲಿ ಪತ್ತೆಹಚ್ಚಲಾಗಿದೆ.
ಮುಸ್ಸಾವಿರ್ ಹುಸೇನ್ ಶಾಜಿಬ್ ಕೆಫೆಯಲ್ಲಿ ಐಇಡಿ ಇರಿಸಿದ ಆರೋಪಿಯಾಗಿದ್ದು, ಸ್ಫೋಟದ ಕಾರ್ಯಗತಗೊಳಿಸುವಿಕೆ ಮತ್ತು ನಂತರ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುವ ಮಾಸ್ಟರ್ ಮೈಂಡ್ ಆಗಿರುವ ಅಬ್ದುಲ್ ಮಥೀನ್ ತಾಹಾನನ್ನು ಬಂಧಿಸಲಾಗಿದೆ.
ಎ. 12ರಂದು ಮುಂಜಾನೆ, ಎನ್ಐಎ ಕೋಲ್ಕತ್ತಾದ ಬಳಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದೆ ಎಂದು ಎನ್ಐಎ ಪ್ರಕಟಣೆ ತಿಳಿಸಿದೆ.
-
ಪುತ್ತೂರು1 day ago
ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ
-
ಸಾಮಾಜಿಕ ಮಾಧ್ಯಮ4 hours ago
Dhruv Rathee | ಕನ್ನಡ ಸೇರಿ ಪಂಚಭಾಷೆಯಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ
-
ದಕ್ಷಿಣ ಕನ್ನಡ27 mins ago
ನಿಮ್ಮ ಕಾವಲುಗಾರನಾಗಿ ನಾನಿರುವೆ: ಪದ್ಮರಾಜ್ ಆರ್. ಪೂಜಾರಿ; ಬಂಟ್ವಾಳದಲ್ಲಿ ಬಿರುಸಿನ ಪ್ರಚಾರ