ಪುತ್ತೂರು
Puttur Congress | ಎಲ್ಲಾ ಆಕಾಂಕ್ಷಿಗಳು ಜತೆಯಾಗಿ ಬೂತ್ ಗೆ ತೆರಳುವ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದೆ ಪುತ್ತೂರು ಕಾಂಗ್ರೆಸ್ – ಒಡೆದ ಮನೆಯಾಗಿದ್ದ ಪಕ್ಷದಲ್ಲೀಗ ಒಗ್ಗಟ್ಟಿನ ಮಂತ್ರ | ಅಶೋಕ್ ಕುಮಾರ್ ರೈ ಅವರನ್ನು ಆತ್ಮೀಯವಾಗಿ ಕಛೇರಿಗೆ ಬರಮಾಡಿಕೊಂಡ ಕೈ ನಾಯಕರು
ಪುತ್ತೂರು: ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ಉದ್ಯಮಿ ಅಶೋಕ್ ಕುಮಾರ್ ರೈ (Ashok Kumar Rai) ಯವರು ಪಕ್ಷದಲ್ಲಿ ಸಂಘಟನಾತ್ಮಕವಾಗಿ ತೊಡಗಿಸುಕೊಳ್ಳು ತ್ತಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ (Puttur Congress) ಸಮಿತಿಗಳ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಅಶೋಕ್ ಕುಮಾರ್ ರೈ ಯವರು ಪ್ರಪ್ರಥಮ ಬಾರಿಗೆ ಪುತ್ತೂರು ಕಾಂಗ್ರೆಸ್ ಕಛೇರಿಗೆ ಆಗಮಿಸಿದ ವೇಳೆ ಮಾಜಿ ಶಾಸಕಿ ಶಕುಂತಲ ಶೆಟ್ಟಿ , ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ್ ಬಿ ಕೆ, ಪುತ್ತೂರು ನಗರ ಅಧ್ಯಕ್ಷ ಮಹಮ್ಮದ್ ಆಲಿ ಸಹಿತ ಹಲವು ನಾಯಕರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು,
ಓರ್ವ ಸಾಮಾನ್ಯ ಕಾರ್ಯಕರ್ತನ ನೆಲೆಯಲ್ಲಿ ಪಾಲ್ಗೊಳ್ಳುತ್ತಾ, ಮುಂದಿನ ಚುನಾವಣೆಯ ವೇಳೆಗೆ ಪಕ್ಷ ಸಂಘಟನಾತ್ಮಕವಾಗಿ ಯಾವ ರೀತಿ ಕೆಲಸ ಮಾಡಬೇಕು ಎಂಬ ಬಗ್ಗೆ ಎಲ್ಲಾ ಕಾರ್ಯಕರ್ತರಿಗೂ ಒಂದಿಷ್ಟು ಪ್ರೇರಣೆ ನೀಡುವ ಕೆಲಸ ಮಾಡತೊಡಗಿದ್ದೇನೆ.
ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಸಮಯ ವ್ಯರ್ಥ ಮಾಡದೇ ಈಗಿನಿಂದಲೇ ಪಕ್ಷದ ಪರ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಅಶೋಕ್ ರೈ ಹೇಳಿದರು.
ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಬೇಕಾದರೆ ಬೇರು ಮಟ್ಟದಲ್ಲಿ ಕೆಲಸ ಆಗಬೇಕು. ಕಾರ್ಯಕರ್ತರೇ ಪಕ್ಷದ ಶಕ್ತಿ. ಸ್ಥಳೀಯವಾಗಿ ಪ್ರತಿಯೊಂದೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಲವಾದಾಗ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಅವರ ಬೆಂಬಲ ಗಳಿಸುವುದು ಸುಲಭವಾಗುತ್ತದೆ. ಬೂತ್ ಮಟ್ಟದ ಕಾರ್ಯಕರ್ತರೇ ಪಕ್ಷವನ್ನು ನಿಜವಾದ ಅರ್ಥದಲ್ಲಿ ಗೆಲ್ಲಿಸುವುದು ಎಂದರು.
ಮುಂದುವರಿದು : ಪ್ರತಿಯೊಂದೂ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಡಿಯಲ್ಲಿ ಬರುವ ಪ್ರತಿಯೊಂದೂ ಬೂತ್ ಗಳಲ್ಲಿ ಕಾರ್ಯಕರ್ತರ ತಂಡವನ್ನು ರಚಿಸಿ ಬೂತ್ ಕಮಿಟಿಗಳನ್ನು ಮಾಡಿ ಆ ಮೂಲಕ ಜನರ ಬಳಿಗೆ ತೆರಳುವ ಕೆಲಸ ಆಗಬೇಕು. ಅದಕ್ಕಾಗಿ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ, ಅದಕ್ಕಾಗಿ ಬೂತ್ ಕಾರ್ಯಕರ್ತರು ನನ್ನನ್ನು ಯಾವುದೇ ಬೂತ್ ಗೆ ಕರೆದರೂ ನಾನು ಅಲ್ಲಿಗೆ ಬರಲು ಸಿದ್ಧನಿದ್ದೇನೆ ಎಂದರು. ಸಭೆಯಲ್ಲಿ ಎಲ್ಲಾ ಆಕಾಂಕ್ಷಿಗಳು ಹಾಗೂ ನಾಯಕರು ಉಪಸ್ಥಿತರಿದ್ದರು.
ಆಕಾಂಕ್ಷಿಗಳ ಬೂತು ಪರಿಚಯ
ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ, ಸ್ವತ: ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಎಂ ಬಿ ವಿಶ್ವನಾಥ ರೈ ಮತ್ತು ರಾಜ್ಯ ವಕ್ತಾರ ಅಮಳ ರಾಮಚಂದ್ರರವರು ಪುತ್ತೂರು ವಿಧಾನಸಭಾ ವ್ಯಾಪ್ತಿಯಲ್ಲಿ ನೂತನ ಪ್ರಯೋಗವೊಂದಕ್ಕೆ ಕೈ ಹಾಕಿದ್ದಾರೆ. ಕ್ಷೇತ್ರದ ಎಲ್ಲಾ 14 ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳನ್ನು ಪ್ರತಿ ಬೂತ್ ಗೆ ಜತೆಯಾಗಿ ಕರೆದುಕೊಂಡು ಹೋಗುವ ಕಾರ್ಯ ಇದಾಗಿದು, ಸದ್ಯ ಈ ಪ್ರಯತ್ನ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಟಿಕೆಟ್ ಬಗ್ಗೆ ಗಂಭೀರವಾಗಿರುವ ಎಲ್ಲ ಆಕಾಂಕ್ಷಿಗಳು ಈ ಪ್ರಯೋಗದಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ 10 ಬೂತ್ ಗಳ ಪ್ರವಾಸ ಮುಗಿದಿದೆ. ಈ ಆಕಾಂಕ್ಷಿಗಳ ಪ್ರವಾಸದಲ್ಲಿ ಅಶೋಕ್ ಕುಮಾರ್ ರೈಯವರು ಪಾಲ್ಗೊಳ್ಳುತ್ತಿದ್ದು, ಇದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಮೂಡಿಸಿದೆ.
ಈ ಬಾರಿಯ ಆಕಾಂಕ್ಷಿಗಳಾದ ಶಕುಂತಲ ಶೆಟ್ಟಿ, ಅಶೋಕ್ ರೈ, ದಿವ್ಯ ಪ್ರಭಾ ಚಿಲ್ತಡ್ಕ, ಡಾ.ರಾಜಾರಮ್ ಬಿ ಕೆ, ಚಂದ್ರಹಾಸ ಶೆಟ್ಟಿ, ಸತೀಶ್ ಕುಮಾರ್ ಕೆಡೆಂಜಿ ಸೇರಿದಂತೆ ಎಲ್ಲಾ 14 ಆಕಾಂಕ್ಷಿಗಳನ್ನು ಜೊತೆಯಾಗಿ ಬೂತ್ ಗೆ ಕರೆದುಕೊಂಡು ಹೋಗುವ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ. ಇದನ್ನು ಅದನ್ನು ಸ್ವತ: ಟಿಕೆಟ್ ಆಕಾಂಕ್ಷಿಯಾಗಿರುವ ಎಂ.ಬಿ ವಿಶ್ವನಾಥ ರೈ ಯವರೇ ಮಾಡಿರುವುದು ವಿಶೇಷ ಎನಿಸಿದೆ ಹಾಗೂ ಪಕ್ಷದೊಳಗೆ ಗುಣಾತ್ಮಕ ಸಂದೇಶ ಹರಡಲು ಕಾರಣವಾಗಿದೆ ಎನ್ನುತ್ತಾರೆ ಪಕ್ಷದ ಹಿರಿಯರು. ಎಲ್ಲರೂ ಜತೆಯಾಗಿ ಪ್ರಯತ್ನಿಸಿದರೆ , ಪಕ್ಷ ಗೆಲುವಿನ ಮೆಟ್ಟಿಲೆರಬಹುದು ಎನ್ನುವುದು ಅವರ ಅಭಿಮತ
ಎಲ್ಲರನ್ನು ಒಟ್ಟಾಗಿ ಬೂತುಗಳಿಗೆ ತೆರಳಿದರೆ ಯಾರೇ ಆಕಾಂಕ್ಷಿಯಾದರೂ ಪಕ್ಷಕ್ಕೆ ಲಾಭ ಎನ್ನುವ ಚಿಂತನೆಯಿಂದ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ರಾಜ್ಯ ವಕ್ತಾರ ಅಮಲ ರಾಮಚಂದ್ರರು. ಎರಡು ಬ್ಲಾಕ್ ನ ಹಲವು ಬೂತ್ ಗಳಿಗೆ ಆಕಾಂಕ್ಷಿಗಳ ತಂಡ ಈಗಾಗಲೇ ಭೇಟಿ ನೀಡಿದೆ.
ಈ ಹಿಂದಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಒಡೆದ ಮನೆ ಎಂಬ ಆರೋಪ ಕೇಳಿಬಂದಿತು. ಇದೇ ಮೊದಲ ಬಾರಿ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದೆ.
ಪುತ್ತೂರು
ನರಿಮೊಗರು : ಬೈಕ್ – ಜೀಪು ನಡುವೆ ಭೀಕರ ಅಪಘಾತ : ಬೈಕ್ ಸವಾರ ಮೃತ್ಯು – ಇಬ್ಬರು ಮಕ್ಕಳು ಗಂಭೀರ : ಬೈಕನ್ನು ಎಳೆದೊಯ್ದ ಜೀಪು – ಜೀಪು ತೆಗೆಯಲು ಸಾರ್ವಜನಿಕರ ತೀವ್ರ ವಿರೋಧ
ಪುತ್ತೂರು: ಬೈಕ್ ಮತ್ತು ಜೀಪೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಸಮೀಪದ ಪಾಪೆತ್ತಡ್ಕ ಎಂಬಲ್ಲಿ ಎ.17ರಂದು ನಡೆದಿದೆ.
ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಜೀಪು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದೆ.
ಬೈಕ್ ಸವಾರ ಮುಂಡೂರು ಗ್ರಾಮದ ಕಡ್ಯ ನಿವಾಸಿ, ದಿ.ಬಾಳಪ್ಪ ಗೌಡರ ಪುತ್ರ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ ಗೌಡ(46.ವ) ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೋಕೇಶ್ ಅವರ ಜೊತೆ ಬೈಕ್ನಲ್ಲಿದ್ದ ಅವರ ಮಕ್ಕಳಾದ ದೀಪ್ತಿ(8.ವ) ಹಾಗೂ ಗಗನ್ (4.ವ) ಗಂಭೀರ ಗಾಯಗೊಂಡಿದ್ದು ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಔಷಧಿಗೆ ಬಂದಿದ್ದರು: ಲೋಕೇಶ್ ಅವರು ತಮ್ಮ ಮಕ್ಕಳಿಗೆ ಔಷಧಿಗೆಂದು ಪುರುಷರಕಟ್ಟೆಗೆ ಹೋಗಿ ಬರುವಾಗ ಈ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಲೋಕೇಶ್ ಗೌಡ ಅವರು ಪತ್ನಿ ಮಾಲತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಅಪಘಾತ ನಡೆದ ವೇಳೆ ಘಟನಾ ಸ್ಥಳದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇದ್ದುದರಿಂದ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತ್ತು.
ಜೀಪು ತೆಗೆಯಲು ವಿರೋಧ: ಲಾಠಿ ಪ್ರಹಾರ: ಅಪಘಾತದ ಬಳಿಕ ರಸ್ತೆ ಬದಿಯ ಕಣಿಯಲ್ಲಿದ್ದ ಜೀಪನ್ನು ಅಲ್ಪ ಸಮಯದ ಬಳಿಕ ಚಾಲಕನ ಕಡೆಯವರು ಸ್ಥಳದಿಂದ ತೆರವು ಮಾಡಲು ಪ್ರಯತ್ನಿಸಿದಾಗ ಸ್ಥಳದಲ್ಲಿದ್ದ ಯುವಕರು ಜೀಪು ತೆಗೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡೂ ತಂಡಗಳ ಮಧ್ಯೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಸ್ಥಳದಿಂದ ಚದುರಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ: ಜೀಪು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಬವಿಸಿ ಸಾವನ್ನಪ್ಪಿದ್ದು ಜೀಪು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿ ಸೇರಿದ್ದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು.
ರಾಂಗ್ ಸೈಡಲ್ಲಿ ಜೀಪು ಬಂದದ್ದೇ ಘಟನೆಗೆ ಕಾರಣ..? ಜೀಪು ಸವಾರ ಜೀಪನ್ನು ರಾಂಗ್ ಸೈಡಲ್ಲಿ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನುವ ಆರೋಪ ಸ್ಥಳೀಯವಾಗಿ ಕೇಳಿ ಬಂದಿದೆ. ಜೀಪಿನಲ್ಲಿ ಐದು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
ಬೈಕ್ನ್ನು ಎಳೆದೊಯ್ದ ಜೀಪ್..!
ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಬೈಕ್ಗೆ ಜೀಪು ಗುದ್ದಿ 150 ಮೀ. ದೂರ ಬೈಕ್ನ್ನು ಜೀಪ್ ಎಳೆದುಕೊಂಡು ಹೋಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಬೈಕ್ ಜೀಪಿನ ಅಡಿಯಲ್ಲಿ ಅಪ್ಪಚ್ಚಿಯಾಗಿತ್ತು.
ಗೃಹ ಪ್ರವೇಶದ ಸಂತಸದಲ್ಲಿದ್ದ ಮೃತ ಲೋಕೇಶ್ :
ಮೃತ ಲೋಕೇಶ್ ಅವರ ಮನೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಇನ್ನೇನು ಕೆಲವೇ ಸಮಯದಲ್ಲಿ ಗೃಹ ಪ್ರವೇಶ ಮಾಡುವ ಸಂತಸದಲ್ಲಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಪುತ್ತೂರು
Puttur Jathre | ಪುತ್ತೂರ ಒಡೆಯನ ದರ್ಶನ ಬಲಿಗೆ ಕ್ಷಣಗಣನೆ – ‘ಪುತ್ತೂರು ಬೆಡಿ’ ಭರದ ತಯಾರಿ – ಶೃಂಗಾರಗೊಂಡ ಬ್ರಹ್ಮರಥ
ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ (Puttur Jathre) ಎ.10ರಿಂದ ಪ್ರಾರಂಭವಾಗಿದ್ದು, ಎ.17ರಂದು ಮಧ್ಯಾಹ್ನ ದರ್ಶನ ಬಲಿ ರಾತ್ರಿ ಬ್ರಹ್ಮಕಲಶೋತ್ಸವ ಹಾಗೂ ಪುತ್ತೂರು ಬೆಡಿ ಎಂದೇ ಪ್ರಸಿದ್ದಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಲಿದೆ.
ಇದೀಗ ಶ್ರೀದೇವರ ವಿಶೇಷ ದರ್ಶನ ಬಲಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಭಕ್ತ ಸಾಗರ ದೇವಸ್ಥಾನಕ್ಕೆ ಹರಿದು ಬರುತ್ತಿದೆ. ದರ್ಶನ ಬಲಿ ನಂತರ ಬಟ್ಟಲು ಕಾಣಿಕೆ ನಡೆಯಲಿದೆ.
ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. ಬಂದೋಬಸ್ತಿಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ಜೊತೆಗೆ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳದವರೂ ಬಂದೋಬಸ್ತ್ ನಿರತರಾಗಿದ್ದಾರೆ.ಮಪ್ತಿಯಲ್ಲಿಯೂ ನೂರಾರು ಪೊಲೀಸರು ಕಾರ್ಯನಿರತರಾಗಿದ್ದಾರೆ.ಡಿವೈಎಸ್ಪಿ ಅರುಣ್ ನಾಗೇಗೌಡರ ನೇತೃತ್ವದಲ್ಲಿ ಬಂದೋಬಸ್ತ್ ನಡೆಯಲಿದೆ.
ಎ.17ರಂದು ಬೆಳಿಗ್ಗೆ, ಶ್ರೀ ದೇವಳದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ವರ್ಷ ಸುಮಾರು ರೂ.8.5 ಲಕ್ಷ ವೆಚ್ಚದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ. ಕಾರ್ಕಳದ ರಮಾನಂದ ಮತ್ತು ಪುತ್ತೂರಿನ ನಾಗೇಶ್ ರಾವ್ ಅವರು ಸಿಡಿಮದ್ದು ಪ್ರದರ್ಶನದ ಗುತ್ತಿಗೆ ವಹಿಸಿಕೊಂಡಿದ್ದಾರೆ.
ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್: ಜಾತ್ರಾ ಗದ್ದೆಯಲ್ಲಿ ಹಲವು ಕಡೆ ಸಿಸಿ ಕ್ಯಾಮರ ಆಳವಡಿಸಲಾಗಿದೆ.ದೇವಳದ ರಥ ಮಂದಿರದ ಬಳಿ ಮೊಬೈಲ್ ಸಿಸಿ ಕ್ಯಾಮರಾ ಕಂಟ್ರೋಲ್ ರೂಮ್ ವ್ಯವಸ್ಥೆ ಮಾಡಲಾಗಿದೆ.ಶೇಟ್ ಇಲೆಕ್ಟೋನಿಕ್ಸ್ ಸಂಸ್ಥೆ ಸಿಸಿ ಕ್ಯಾಮರಾಗಳ ನಿಯಂತ್ರಣ ಮಾಡಲಿದ್ದಾರೆ. ಪೊಲೀಸರ ಜೊತೆ ಸಿಸಿ ಕ್ಯಾಮರಾ ಕಣ್ಣಾವಲು ಕಾರ್ಯ ಮಾಡುತ್ತಿದೆ.
ದಕ್ಷಿಣ ಕನ್ನಡ
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಆಗಮಿಸಿದ ಬಲ್ನಾಡು ಉಳ್ಳಾಳ್ತಿ ದೈವಗಳ ಕಿರುವಾಳು – ಶ್ರೀ ದೇವರ ತೆಪ್ಪೋತ್ಸವ
Photo : ಕೃಷ್ಣಾ ಸ್ಟುಡಿಯೋ
ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಎ.16ರಂದು ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಸೂಟೆಯ ಬೆಳಕಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮನವಾಯಿತು.
ಸೂಟೆಯ ಬೆಳಕಿನಲ್ಲೇ ಬಲ್ನಾಡಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಬಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಜಾತ್ರೆಯಲ್ಲಿ ಪಾಲ್ಗೊಂಡರು. ಕಿರುವಾಳು ಮೆರವಣಿಗೆಯ ದಾರಿ ಮಧ್ಯೆ ಭಕ್ತರು ಸಾಲು ಸಾಲಾಗಿ ಆರತಿ ನೆರವೇರಿಸಿದರು.
ಕಿರುವಾಳು ದೇವಳಕ್ಕೆ ತಲುಪಿದ ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಶ್ರೀಧರ್ ತಂತ್ರಿಯವರ ವೈದಿಕತ್ವದಲ್ಲಿ ರಾತ್ರಿಯಿಂದ ಬೆಳಗ್ಗಿನ ಜಾವದ ತನಕ ಉತ್ಸವಾದಿಗಳು ನಡೆಯಿತು.
ಭಂಡಾರದ ಸ್ಥಾನದಲ್ಲಿ ಉಳ್ಳಾಲ್ತಿ ಅಮ್ಮನವರಿಗೆ ಬೆಳಗ್ಗಿನಿಂದಲೇ ಭಕ್ತರು ಮಲ್ಲಿಗೆ ಸಮರ್ಪಿಸುತ್ತಿದ್ದರು. ಬೆಳಗ್ಗಿನಿಂದಲೇ ಭಕ್ತರಿಗೆ ದೈವಗಳ ಭಂಡಾರದ ಸ್ಥಾನದಲ್ಲಿ ಮಲ್ಲಿಗೆ ಸಮರ್ಪಣೆಗೆ ಅವಕಾಶ ನೀಡಲಾಯಿತು.
ಸಂಜೆ ಗಂಟೆ 6ಕ್ಕೆ ಬಲ್ನಾಡು ದೈವಸ್ಥಾನದಿಂದ ಹೊರಟ ದೈವಗಳ ಕಿರುವಾಳು ಭಂಡಾರ ರಾತ್ರಿ ಸುಮಾರು 9.28ಕ್ಕೆ ಬಪ್ಪಳಿಗೆ ತಲುಪಿತ್ತು 10.15ಕ್ಕೆ ಮಹಿಳಾ ಪೊಲೀಸ್ ಠಾಣೆಯ ಬಳಿಯ ಅಂಕದಕಟ್ಟೆಗೆ ಬಂದು ಅಲ್ಲಿ ಭಕ್ತರು ಸಮರ್ಪಣೆ ಮಾಡಿದ ಮಲ್ಲಿಗೆ ಸ್ವೀಕಾರ ಮಾಡಿ ದೇವಳಕ್ಕೆ ಪುಷ್ಕರಣಿಯ ಭಾಗದಿಂದ ಆಗಮಿಸಿ ಗಂಟೆ 10.46ಕ್ಕೆ ಶ್ರೀ ಉಳ್ಳಾಲ್ತಿ ನಡೆಯ ಬಳಿ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ನಡೆಯಿತು ಬಳಿಕ ಪೂರ್ವ ಶಿಷ್ಟ ಪರೆಂಪರೆಯಂತೆ ಶ್ರೀ ದೇವರ ತೆಪ್ಪೋತ್ಸವ ದೇವಳದ ಕೆರೆಯಲ್ಲಿ ನಡೆಯಿತು.