Amit Shah Puttur Visit : ಪುತ್ತೂರು : ಫೆ 13 : ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳು ಹಾಗೂ ಅದಕ್ಕೆ ಸರಕಾರ ಒದಗಿಸಲಿರುವ ಪರಿಹಾರ ಕ್ರಮಗಳ ಬಗ್ಗೆ ಮಾತನಾಡದ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾರವರು ಕ್ಯಾಂಪ್ಕೋ ಸುವರ್ಣ ಮಹೋತ್ಸವದ ವೇದಿಕೆಯನ್ನು ಬಿಜೆಪಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.
ಪುತ್ತೂರಿನ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಎಂ ಬಿ ವಿಶ್ವನಾಥ ರೈಯವರು ಶಾ ಭೇಟಿಯಿಂದ ಪುತ್ತೂರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅವರ ಪುತ್ತೂರು ಭೇಟಿ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆಯೆಂದು ಗೇಲಿ ಮಾಡಿದ್ದಾರೆ
ಗೃಹ ಸಚಿವರಂತಹ ದೊಡ್ಡ ನಾಯಕರು ಭೇಟಿ ನೀಡುವಾಗ ತರಾತುರಿಯಲ್ಲಿ ರಸ್ತೆ, ಹೆಲಿಪ್ಯಾಡ್ ಗಳನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಆದರೇ ಜನ ಸಾಮಾನ್ಯರ ಸಮಸ್ಯೆಗಳು ವರ್ಷಾನುಗಟ್ಟಲೆಯಾದರೂ ಪರಿಹಾರವು ಆಗುವುದಿಲ್ಲ, ಸೂಕ್ತ ಸ್ಪಂದನೆಯೂ ಸಿಗುತ್ತಿಲ್ಲ ಎಂದರು
ಕೇಂದ್ರ ಸಹಕಾರಿ ಸಚಿವರು ಇಲ್ಲಿನ ಜೀವನಾಡಿಯಾದ ಅಡಿಕೆ ಬೆಳೆಗೆ ಪ್ರಯೋಜನಕಾರಿಯಾಗುವ ಯಾವುದೇ ಮಾತುಗಳನ್ನು ಆಡಿಲ್ಲ. ಗುಜರಾತ್ ಹಾಗೂ ಅಡಿಕೆಗಿರುವ ನಂಟಿಗಷ್ಟೆ ಅಡಿಕೆಯ ಉಲ್ಲೇಖ ಮಾಡಿದರು. ಎಲೆ ಚುಕ್ಕಿ ಹಾಗೂ ಹಳದಿ ರೋಗದಿಂದ ಸಂಕಷ್ಟ ಪಡುತ್ತಿರುವ ರೈತನಿಗೆ ಯಾವುದೇ ಯೋಜನೆ, ಪರಿಹಾರ ಘೋಷಿಸಿಲ್ಲ. ಭೇಟಿಯ ಸಂದರ್ಭ ಶಾ ಪುತ್ತೂರಿಗೆ ಕೊಟ್ಟ ಕೊಡುಗೆಯೇನು ? ಕ್ಯಾಂಪ್ಕೋ ಹಾಗೂ ರೈತರಿಗಾದ ಪ್ರಯೋಜನವೇನು ಎಂದು ಪ್ರಶ್ನಿಸಿದರು
ಸೊಕ್ಕಿನ ಮನುಷ್ಯ
ಬಳಿಕ ಮಾತನಾಡಿದ ಕಾಂಗ್ರೆಸ್ ರಾಜ್ಯ ವಕ್ತಾರ ಅಮಳ ರಾಮಚಂದ್ರ, “ ರೈತರ ಖರ್ಚಿನಲ್ಲಿ ಆಯೋಜಿಸಲಾದ ಕ್ಯಾಂಪ್ಕೋ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾಡಿದ ಅಮಿತ್ ಶಾ ಅವರ ಪಕ್ಷದವರು ಹೇಳುವಂತೆ ಉಕ್ಕಿನ ಮನುಷ್ಯನಲ್ಲ, ಸೊಕ್ಕಿನ ಮನುಷ್ಯ. ಅವರು ವೇದಿಕೆಯನ್ನು ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಹಣಿಯಲು ಬಳಸಿಕೊಂಡರು ಎಂದರು.
ಗೆಟ್ ಔಟ್ ಎನ್ನುತ್ತಿದ್ದರು
ಕ್ಯಾಂಪ್ಕೋ ಸದಸ್ಯರಲ್ಲಿ ಎಲ್ಲ ಪಕ್ಷದವರಿದ್ದು , ಈ ಪಕ್ಷಾತೀತ ಸಹಕಾರಿ ಸಂಘದವೇದಿಕೆಯಲ್ಲಿ ಚುನಾವಣಾ ಭಾಷಣ ಮಾಡಲು ಇವರಿಗೆ ಅಧಿಕಾರ ಕೊಟ್ಟವರಾರು? ಕ್ಯಾಂಪ್ಕೋ ಸ್ಥಾಪಕ ವಾರಾಣಾಸಿ ಸುಬ್ರಯ ಭಟ್ ಅವರು ಮೊನ್ನೆ ವೇದಿಕೆಯಲ್ಲಿರುತ್ತಿದ್ದರೇ ಶಾ ರನ್ನು ಗೆಟ್ ಔಟ್ ಎನ್ನುತ್ತಿದ್ದರು. ಆದರೇ ಬಿಜೆಪಿಯ ಚಮಚಾ ಹಾಗೂ ಚೇಲಾಗಳಂತೆ ವರ್ತಿಸುವ ಈಗಿನ ಬಹುತೇಕ ನಿರ್ದೇಶಕರು ಅಡಳಿತ ಮಂಡಳಿಯ ಸದ್ಯಸ್ಯರು ವೇದಿಕೆಯ ದುರುಪಯೋಗಕ್ಕೆ ಮೂಕ ಸಾಕ್ಷಿಯಾದರು ಎಂದರು
ಸಮಾವೇಶ ಬಿಜೆಪಿಯಿಂದ ಹೈಜಾಕ್
ಕ್ಯಾಂಪ್ಕೋ ತಾನು ಬೆಳೆದು ಬಂದ ಹಾದಿ, ಎದುರಿಸುತ್ತಿರುವ ಸವಾಲುಗಳು, ಸರಕಾರದಿಂದ ಸಿಗಬೇಕಾದ ಸವಲತ್ತು, ಪರಿಹಾರಗಳ ಬಗ್ಗೆ ಗಮನ ಸೆಳೆಯಲು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದರೇ , ಬಿಜೆಪಿಯವರು ಪೂರ್ತಿ ಕಾರ್ಯಕ್ರಮವನ್ನು ಹೈಜಾಕ್ ಮಾಡಿ ರೈತರಿಗೆ ಹಾಗೂ ಸಂಘದ ಸದಸ್ಯರಿಗೆ ಅನ್ಯಾಯ ಮಾಡಿದ್ದಾರೆ . ಪುತ್ತೂರು ಪೇಟೆಯುದ್ದಕ್ಕೂ ಬಿಜೆಪಿಯವರು ಹಾಕಿದ ಬಂಟಿಂಗ್ಸ್ ಹಾಗೂ ಬ್ಯಾನರ್ ಗಳೆ ಇದಕ್ಕೆ ಸಾಕ್ಷಿ.
ನ ಭಯಂ ನ ಲಜ್ಜಾಂ
ಶಾ ರವರು ಭಾರತ್ ಮಾತ ಕೀ ಜೈ ಎಂಬ ದೇಶ ಪ್ರೇಮದ ಘೋಷಣೆಯನ್ನು ರಾಜಕೀಯ ಲಾಭಕ್ಕಾಗಿ, ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡರು. ಶಾ ರವರು ಓಟಿಗಾಗಿ ಏನೂ ಬೇಕಾದರು ಮಾಡಬಲ್ಲರು. ಆ ವಿಚಾರದಲ್ಲಿ ಅವರಿಗೆ ನ ಭಯಂ ನ ಲಜ್ಜಾಂ ( ಭಯವೂ ಇಲ್ಲ , ನಾಚಿಕೆಯೂ ಇಲ್ಲ ). ಇದಕ್ಕೆ ಸಾಕ್ಷಿ ಸಹಕಾರಿ ಕ್ಷೇತ್ರದ ಈ ವೇದಿಕೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿರುವ ರೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾ ಪುತ್ರ ಅಡಿಕೆ ಅಮದು ವ್ಯಾಪಾರಿ
ಅಮಿತ್ ಶಾರವರ ಮಗ ಅಡಿಕೆ ಅಮದು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ . ಹೀಗಾಗಿಯೇ ಶಾ ರವರು ಅಡಿಕೆಯ ಕನಿಷ್ಟ ಅಮದು ಬೆಳೆಯನ್ನು ಹೆಚ್ಚಿಸುವ ಬಗ್ಗೆ ತುಟಿಪಿಟಕ್ ಎಂದಿಲ್ಲ ಎಂದು ಆರೋಪಿಸಿದ ಅವರು “ ಕೃಷಿ ಯಂತ್ರ ಮೇಳದಲ್ಲಿ ಸಚಿವೆ ಶೋಭಾರವರು, ಅಡಿಕೆಗೆ ಕನಿಷ್ಟ ಅಮದು ಬೆಲೆ ನಿಗದಿಯ ಕುರಿತಾಗಿ ಶಾ ತಮ್ಮ ಭೇಟಿಯ ವೇಳೆ ಮಾಹಿತಿ ನೀಡಲಿದ್ದರೆಂದು ತಿಳಿಸಿದ್ದರೂ ಶಾ ಮೌನಕ್ಕೆ ಶರಣಾಗಿರುವುದು ಯಾಕೇ ಎಂದು ಪ್ರಶ್ನಿಸಿದ್ದಾರೆ.
ತರಾತುರಿಯಲ್ಲಿ ನಿರ್ಮಿಸಿದ ಹೆಲಿಪ್ಯಾಡ್ ಗೆ ವರ್ಕ್ ಅರ್ಡರ್ ಎಲ್ಲಿದೆ ?
ಶಾ ಭೇಟಿಯಿಂದಾಗಿ ಪುತ್ತೂರಿನ ಮೊಟ್ಟೆತಡ್ಕದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣವಾಯಿತೆಂದು ಶಾಸಕ ಸಂಜೀವ ಮಠಂದೂರು ಹೇಳಿಕೊಂಡಿದ್ದಾರೆ. ಹೇಳಿದ್ದಾರೆ. ಇದರ ಟೆಂಡರ್ ಕರೆದದ್ದು ಯಾವಾಗ ? ವರ್ಕ್ ಅರ್ಡರ್ ಎಲ್ಲಿದೆ? ಸರಕಾರದ ಬೊಕ್ಕಸದ ಹಣವನ್ನು ಯಾವುದೇ ಲಂಗು ಲಗಾಮಿಲ್ಲದೇ ತಮ್ಮ ಸ್ವಂತ ಕಿಸೆಯ ಹಣ ಎಂಬಂತೆ, ನೀತಿ ನಿಯಮಗಳನ್ನು ಗಾಳಿಗೆ ತೂರಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸದರು.
ಕಾಂಗ್ರೆಸ್ ಪಕ್ಷದ ಮೌನೀಸ್ ಮಸ್ಕರೆಂಜಸ್, ರವೀಂದ್ರ ರೈ ನೆಕ್ಕಿಲು ಮತ್ತು ಸಿದ್ದಿಕ್ ಸುಲ್ತಾನ್ ಉಪಸ್ಥಿತರಿದ್ದರು