ಪುತ್ತೂರು: ಫೆ 8: ದೇಶದ ಗೃಹ ಸಚಿವ ಅಮಿತ್ ಶಾ ಭೇಟಿಯು ಜನರಿಗೆ ಸಂಭ್ರಮವಾದರೆ, ವಿರೋಧಿಗಳಿಗೆ ನಡುಕ ಹುಟ್ಟಿಸಿದೆ. ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದು, ಫಲಾನುಭವಿಗಳು, ಸಹಕಾರಿಗಳು, ರೈತರು ಪಕ್ಷದ ಕಾರ್ಯಕರ್ತರು ಸೇರಿದಂತೆ ಸುಮಾರು 1 ಲಕ್ಷ ಕ್ಕೂ ಮಿಕ್ಕಿ ಮಂದಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಲವು ಮಂದಿ ಸಚಿವರು, ಜಿಲ್ಲೆಯ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಬುಧವಾರ ಪುತ್ತೂರಿನ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಾಗಿ ಹಾಗೂ ಸಹಕಾರಿ ಸಚಿವರಾಗಿ ಮೊದಲ ಬಾರಿಗೆ ಪುತ್ತೂರಿಗೆ ಬರುತ್ತಿದ್ದಾರೆ. ಅವರು ಸ್ವದೇಶಿ ಉತ್ಪನ್ನ ತಯಾರಿಸುತ್ತಿರುವ ಅಂತರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಸಂಭ್ರಮದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ನಗರವನ್ನು ಅಲಂಕರಿಸುವ ಮೂಲಕ ಅದ್ದೂರಿ ಸ್ವಾಗತ ಕೋರಲು ಬಿಜೆಪಿ ಸಂಪೂರ್ಣ ಸಿದ್ಧತೆಯಲ್ಲಿ ತೊಡಗಿದೆ ಎಂದರು
ಅಸೆಂಬ್ಲಿ ಚುನಾವಣೆಗೆ ಸಿದ್ದವಾಗುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ, ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸುವರ್ಣ ಮಹೋತ್ಸವದ ಕಾರ್ಯಕ್ರಮದ ಮೂಲಕ ರೈತಾಪಿ ವರ್ಗಕ್ಕೆ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಾರಣ ಹೋಮ ನಡೆಸಿದವರನ್ನು ಮಟ್ಟ ಹಾಕಿರುವುದರಿಂದ ಮತೀಯ ಸಂಘಟನೆಗಳಿಗೂ ಅಗತ್ಯ ಸಂದೇಶ ಈ ಸಮಾವೇಶದ ಮೂಲಕ ರವಾನೆಯಾಗಲಿದೆ. ಹೀಗೆ ಏಕಕಾಲದಲ್ಲಿ ಮೂರು ಮೂರು ಸಂದೇಶಗಳನ್ನು ಪುತ್ತೂರಿನ ತೆಂಕಿಲದ ವಿವೇಕಾನಂದ ಮೈದಾನದಲ್ಲಿ ನಡೆಯುವ ಫೆ 11 ರ ಸಮಾವೇಶದಿಂದ ಪ್ರಾಪ್ತಿಯಾಗಲಿದೆಯೆಂದು ಅವರು ವಿವರಿಸಿದರು.

ಕರಾವಳಿಯ ಆರ್ಥಿಕತೆ ಅಡಿಕೆ ಮತ್ತು ಮೀನುಗಾರಿಕೆಯ ಮೇಲೆ ನಿಂತಿದೆ. ಮುಂದಿನ ದಿನಗಳು ರೈತರಿಗೆ ನೆಮ್ಮದಿಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಸಹಕಾರಿ ಸಚಿವರಿಗೆ ಅಡಿಕೆಯ ಉತ್ಪದನಾ ವೆಚ್ಚದ ಮಾಹಿತಿ ನೀಡುವ, ಆಮದು ನಿಲ್ಲಿಸುವ, ಹಳದಿ ರೋಗ, ಎಲೆಚುಕ್ಕಿ ರೋಗದಿಂದ ರೈತರಿಗಾಗುತ್ತಿರುವ ಹಾನಿಯನ್ನು ಅದರ ಶಾಶ್ವತ ಹತೋಟಿಗೆ ಸಂಶೋಧನೆಯ ಅಗತ್ಯತೆಯನ್ನು ಮನವರಿಕೆ ಮಾಡುವುದು ಸೇರಿದಂತೆ ಹಲವು ವಿಚಾರಗಳನ್ನು ಸಚಿವರ ಗಮನಕ್ಕೆ ತರಲಾಗುವುದು ಎಂದರು.
1986ರಲ್ಲಿ ವಾರಣಾಸಿ ಸುಬ್ರಾಯ ಭಟ್ ಅವರಿಂದ ಕ್ಯಾಂಪ್ಕೂ ಸಂಸ್ಥೆ ಆರಂಭವಾಗಿದ್ದು ಸಾವಿರಾರು ಜನರಿಗೆ ಉದ್ಯೋಗ ಕೊಡುತ್ತಿದೆ. ಅಡಿಕೆಯ ಬೆಲೆ ಸ್ಥಿರತೆಯಲ್ಲಿ ಕ್ಯಾಂಪ್ಕೋ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಈ ಮೂಲಕ ಜಿಲ್ಲೆಯ ಅರ್ಥಿಕತೆ ಹದಗೆಡದಂತೆ ಕಾಪಾಡುತ್ತಿದೆ. ಈ ಎಲ್ಲ ಮಾಹಿತಿಯನ್ನು ದೇಶದ ಪ್ರಥಮ ಸಹಕಾರಿ ಸಚಿವರಿಗೆ ನೀಡಬೇಕು ಎಂಬ ಉದ್ದೇಶದಿಂದ ಅಮಿತ್ ಶಾ ಅವರನ್ನು ಸಮಾವೇಶಕ್ಕೆ ಅಹ್ವಾನಿಸಲಾಗಿದೆ.
ದಿ. ಉರಿಮಜಲು ರಾಮ್ ಭಟ್ ಅವರ ಕಾಲದಿಂದಲೂ ಪುತ್ತೂರು ಬಿಜೆಪಿಯ ಭಧ್ರ ಕೋಟೆಯಾಗಿದ್ದು ಹಿಂದೂತ್ವದ ನೆಲೆಯಲ್ಲಿ ನಿರಂತರವಾಗಿ ವಿಜಯಶಾಲಿಯಾಗಿ ಹೊರ ಹೊಮ್ಮುತ್ತಿದೆ. ಪುತ್ತೂರಿನಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬಲಿಷ್ಟವಾಗಿದ್ದು ಚುನಾವಣೆಗೆ ಸಂಪೂರ್ಣವಾಗಿ ತಯಾರಾಗಿದೆ. ಅಮಿತ್ ಶಾ ಆಗಮನ ಕಾರ್ಯಕರ್ತರಲ್ಲಿ ಇನಷ್ಟು ಹುರುಪು ತುಂಬಲಿದೆ. ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದು ಇದು ಸಾಧ್ಯವಾಗಬೇಕಾದರೇ , ಜಿಲ್ಲೆಯಲ್ಲಿ ಎಲ್ಲಾ 8 ಸ್ಥಾನಗಳನ್ನೂ ಬಿಜೆಪಿ ಗೆಲ್ಲಬೇಕಿದೆ ಮತ್ತು ಅದರಲ್ಲಿ ಸಫಲರಾಗಲಿದ್ದೇವೆ. ಕಳೆದ ಬಾರಿ 7 ಸ್ಥಾನ ಗೆದ್ದಿದ್ದೆವು. ಈ ಬಾರಿ ಡಬಲ್ ಎಂಜಿನ್ ಸರಕಾರವಿದ್ದು ಹೀಗಾಗಿ 8 ಸ್ಥಾನವನ್ನು ಗೆಲ್ಲಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನಿವಾಸ್ ರಾವ್, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಮುಖಂಡರಾದ ಬೂಡಿಯಾರ್ ರಾಧಾಕೃಷ್ಣ ಆಳ್ವ, , ಗೋಪಾಲಕೃಷ್ಣ ಹೇರಳೆ, ಆರ್.ಸಿ. ನಾರಾಯಣ್, ಅಪ್ಪಯ್ಯ ಮಣಿಯಾಣಿ, ಸಹಜ್ ರೈ ಬಳಜ್ಜ, ಪುರುಷೋತ್ತಮ ಮುಂಗ್ಲಿಮನೆ, ರಾಜೇಶ್ ಬನ್ನೂರು, ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು.
ಮತೀಯವಾದಿಗಳಿಗೆ ಸಿಂಹಸ್ವಪ್ನ
ಸಂಜೀವ ಮಠಂದೂರು
” ಕಳೆದ ಹಲವಾರು ವರ್ಷಗಳಿಂದ ದ.ಕ. ಜಿಲ್ಲೆ ಮತೀಯ ಸಂಘರ್ಷಗಳಿಗೆ ಎಡೆಯಾಗುತ್ತಿದೆ. ಕೇರಳ ಹಾಗೂ ಕಾಸರಗೋಡಿನಿಂದ ಬರುವ ಮತೀಯ ಶಕ್ತಿಗಳು ಇಲ್ಲಿ ಹಿಂದೂ ಕಾರ್ಯಕರ್ತರ ಮಾರಣ ಹೋಮ ನಡೆಸುತ್ತಿದ್ದರು. ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಶಾ ಅವರು NIA ಮೂಲಕ ಮತೀಯ ಸಂಘಟನೆಗಳನ್ನು ನಿಷೇಧಿಸುವ ಮೂಲಕ ಮತೀಯವಾದಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಕಾಶ್ಮೀರದ 370 ವಿಧಿ ರದ್ದು , ಪೌರತ್ವ ಕಾಯಿದೆ ಇತ್ಯಾದಿ ರಾಷ್ಟ್ರೀಯ ಸುರಕ್ಷತೆಯ ಕಾರ್ಯಕ್ರಮವನ್ನು ಜಾರಿಗೊಳಿಸಿರುವ ಅಮಿತ್ ಶಾರವರು ಪುತ್ತೂರು ಭೇಟಿ ನೀಡುತ್ತಿದ್ದು ಇವರನ್ನು ಸ್ವಾಗತಿಸಲು ಜಿಲ್ಲೆಯ ಜನತೆ ಉತ್ಸುಕರಾಗಿದ್ದಾರೆ. “