ಪುತ್ತೂರು: ‘ನಮಗೆ ಮಹಾಲಿಂಗೇಶ್ವರನ ಸನ್ನಿದಾನವೇ ದೊಡ್ಡ ನ್ಯಾಯದೇಗುಲ – ಇಲ್ಲೇ ನ್ಯಾಯ ತೀರ್ಮಾನ ಆಗಲಿ’ ಎಂದು ಕಂಬಳಕ್ಕೆ ಅಪಚಾರ ಬಯಸುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯವರು (Puttur Kambala ) ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.1ರಂದು ನಡೆ ಪ್ರಾರ್ಥನೆ ನೆರವೇರಿಸಿದ್ದಾರೆ
ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಎದುರಿನ ದೇವರಮಾರು ಗದ್ದೆಯಲ್ಲಿ ಜ.28-29ರಂದು ನಡೆದ 30ನೇ ವರ್ಷದ ಕೋಟಿ-ಚೆನಯ್ಯ ಕಂಬಳ ಕೂಟ ಯಶಸ್ವಿಯಾಗಿ ನಡೆದಿದ್ದು, ಅಲ್ಲಿಗೆ ಆಗಮಿಸಿದ್ದ ನಟಿಯ ಜೊತೆ ಯಾರೋ ಅಸಭ್ಯವಾಗಿ ವರ್ತಿಸಿದ್ದಾರೆ ವರದಿಗಳು ವೈರಲ್ ಆಗಿದ್ದು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿಯನ್ನು ಹಾಗೂ ಇತಿಹಾಸ ಪ್ರಸಿದ್ಧ ಕಂಬಳಕ್ಕೆ ಅಪಚಾರ ಬಯಸುವ ಕಾಣದ ಕೈಗಳ ವಿರುದ್ಧ ದೇವರೇ ನೋಡಿಕೊಳ್ಳಲಿ ಎಂದು ಕಂಬಳ ಸಮಿತಿ ಅಧ್ಯಕ್ಷರಾದ ಎನ್ ಚಂದ್ರಹಾಸ ಶೆಟ್ಟಿ ದೇವರ ನಡೆಯಲ್ಲಿ ನಿಂತು ಪ್ರಾರ್ಥಿಸಿದರು.
ಆ ಸಂದರ್ಭ ಪ್ರಧಾನ ಅರ್ಚಕರು ವೇ| ವಸಂತ ಕೆದಿಲಾಯರು , ಬಲ್ನಾಡು ಉಳ್ಳಾಲ್ತಿ, ಕಾಣತ್ತೂರು ನಾಲ್ವರು ದೈವಂಗಳ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವರ ಪ್ರಸಾದ ಹಾಕಿ ನಾಗದೇವರಿಗೆ ನಾಗತಂಬಿಲ ಕೊಟ್ಟು ನಡೆಯುವ ಕಂಬಳಕ್ಕೆ ಅಪಚಾರ ಬಯಸಲು ಪ್ರಯತ್ನಿಸುವವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿ ಕಂಬಳ ಸಮಿತಿಗೆ ಪ್ರಸಾದ ವಿತರಿಸಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಶಾಸಕಿ ಶಕುಂತಲ ಶೆಟ್ಟಿ, ಕಂಬಳ ಸಮಿತಿ ಈ ಘಟನೆಗೆ ಕಾರಣವಲ್ಲ ಎಂದು ನಟಿ ಸಾನ್ಯ ಅಯ್ಯರ್ ಹೇಳಿದ್ದಾಳೆ. ಅವಳು ಒಮ್ಮೆ ಕಾರ್ಯಕ್ರಮ ಮುಗಿಸಿ ಹೋಗಿ ನಂತರ ಬಂದದ್ದು ಆಯೋಜಕರಿಗೆ ಗೊತ್ತಿರಲಿಲ್ಲ. ಈಗಲೂ ಅವಳು ದೂರು ಕೊಟ್ಟರೆ ಅವಳ ಜೊತೆ ನಾವು ನಿಂತು ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದರು.
ಈ ಘಟನೆಗೆ ಧರ್ಮಗಳನ್ನು ಎಳೆದು ತರುವ ಪ್ರಯತ್ನ ನಡೆದಿದೆ. ಅನ್ಯಮತಿಯ ಯಾರೂ ಅಂತ ಬರೆದವರಿಗೆ ಗೊತ್ತಿರಬಹುದು, ಗೊತ್ತಿದ್ದರೆ ಗೊತ್ತಿರುವವರು ಪೊಲೀಸ್ ದೂರು ಕೊಡಲಿ ಎಂದರು.
ಈ ಪ್ರಕರಣವನ್ನು ನನ್ನ ವಿರುದ್ಧ ಹಾಗೂ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ವಿರುದ್ಧ ಅಪಪ್ರಚಾರ ಮಾಡಲು ಕಂಬಳ ಸಮಿತಿಯನ್ನು ಎಳೆದು ಹಾಕಿದ್ದಾರೆ.
ಅನ್ಯಧರ್ಮಿಯನೋ ಅಧರ್ಮಿಯನೋ ಗೊತ್ತಿಲ್ಲ ನಮಗೆ ಮಹಾಲಿಂಗೇಶ್ವರ ಸನ್ನಿಧಾನವೇ ನ್ಯಾಯದೇಗುಲ ಇಲ್ಲಿ ನ್ಯಾಯ ತೀರ್ಮಾನ ಆಗ್ತದೆ ಎನ್ನುವ ನಂಬಿಕೆ ನಮಗಿದೆ ಎಂದರು.
ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಈ ವರ್ಷ ಕಂಬಳ ಕೂಟ ಅದ್ಭುತ ಯಶಸ್ವಿಯಾಗಿದೆ. ಈ ಕಂಬಳ ಗದ್ದೆಯಲ್ಲಿ ಏನೇ ತಪ್ಪು ನಡೆದರೂ ತೀರ್ಪೂ ಬೇಗ ಸಿಗ್ತದೆ. ಎಷ್ಟೋ ಕಂಬಳ ಕೋಣ ಮಾಲಕರು ಸಣ್ಣ ತಪ್ಪಾದರೂ ತಪ್ಪು ಕಾಣಿಕೆ ಹಾಕುವಷ್ಟು ಅವರಿಗೆ ಸಮಸ್ಯೆ ಕಾಡುತ್ತದೆ. ಅದುದರಿಂದ ಈ ಸಮಸ್ಯೆಯನ್ನು ತಂದವರನ್ನು ದೇವರು ನೋಡಿಕೊಳ್ತಾರೆ ಎಂದರು.
ನಂತರ ವರ್ಷಂಪ್ರತಿಯಂತೆ ಕಂಬಳ ಸಮಿತಿಯ ವತಿಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
ಕಂಬಳ ಸಮಿತಿ ಕಾರ್ಯದರ್ಶಿ ದಿನೇಶ್ ಪಿ.ವಿ, ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ಶಿವರಾಮ ಆಳ್ವ, ಜಿನ್ನಪ್ಪ ಪೂಜಾರಿ ಮುರ, ನಿರಂಜನ್ ರೈ ಮಠಂತಬೆಟ್ಟು ಹಾಗೂ ಸದಸ್ಯರಾದ ಭಾಗ್ಯೇಶ್ ರೈ, ಪ್ರವೀಣ್ ಶೆಟ್ಟಿ ಅಳಕೆಮಜಲು, ದುರ್ಗಾಪ್ರಸಾದ್ ರೈ ಕುಂಬ್ರ, ಭಾಸ್ಕರ್ ಗೌಡ ಕೋಡಿಂಬಾಳ, ಉಮೇಶ್ ಕರ್ಕೆರ , ಗಂಗಾಧರ ಶೆಟ್ಟಿ ಪನಡ್ಕ , ಅಭಿಷೇಕ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ವಿಕ್ರಮ್ ಶೆಟ್ಟಿ ಅಂತರ ಕೋಡಿಂಬಾಡಿ, ಯೋಗೀಶ್ ಸಾಮಾನಿ, ಸಂತೋಷ್ ಸವಣೂರು, ಮಂಜುನಾಥ ಗೌಡ ತೆಂಕಿಲ , ಸನ್ಮಿತ್ ರೈ, ಕೃಷ್ಣಪ್ರಸಾದ್ ಆಳ್ವ, ಸನತ್ ರೈ ಒಳತ್ತಡ್ಕ, ಶಶಿರಾಜ್, ಗಣೇಶ್ ರಾಜ್ , ಜಯಪ್ರಕಾಶ್ ಬದಿನಾರು, ಸುದರ್ಶನ್ ನಾಯ್ಕ್ ಕಂಪ, ಉಮಾಶಂಕರ್ ಪಾಂಗಲಾಯಿ, ಪ್ರವೀಣ್ ನಾಯ್ಕ್, ಶಶಿಕಿರಣ್ ರೈ ಸಹಿತ ಹಲವು ಸದಸ್ಯರು ಭಾಗವಹಿಸಿದ್ದರು.
ನಟಿ ಸಾನ್ಯ ಅಯ್ಯರ್ ಜೊತೆ ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಕಂಬಳ ಗದ್ದೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ವರದಿಗಳು ಹಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿತು.
ಈ ವಿಚಾರವಾಗಿ ನಟಿಯೂ ಬೆಂಗಳೂರಿನಲ್ಲಿ ಸ್ಪಷ್ಟಿಕರಣ ಕೊಟ್ಟಿದ್ದು, ಆಯೋಜಕರು ನನ್ನನ್ನು ಗೌರವಯುತವಾಗಿ ಕಳಿಸಿಕೊಟ್ಟಿದ್ದಾರೆ ಎಂದಿದ್ದು, ದಕ್ಷಿಣ ಕನ್ನಡ ಎಸ್ಪಿ ಸೋನಾವಾಲಾ ಯಾವೂದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.