ಮಂಗಳೂರು : ಸಶಸ್ತ್ರ ಸೀಮಾಬಲ್ನಲ್ಲಿ ಭೋಪಾಲ್ನಲ್ಲಿ ಸೇವಾ ನಿರತರಾಗಿದ್ದ ಮಂಗಳೂರು ಶಕ್ತಿನಗರದ ನಿವಾಸಿ ಹವಾಲ್ದಾರ್ ಮುರಳೀಧರ್ ರೈ (37) ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತ್ತು. ಮಂಗಳೂರಿನ ಸಂಜಯನಗರ ಆಂಜನೇಯ ಸಭಾಭವನದ ಮೈದಾನದಲ್ಲಿ ಸಾರ್ವಜನಿಕರಿಗೆ ಹಾಗೂ ಗಣ್ಯರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ವಿ.ಎಚ್.ಪಿ ಮುಖಂಡ ಶರಣ್ ಪಂಪುವೆಲ್ ಸೇರಿದಂತೆ ಹಲವು ಪ್ರಮುಖರ ಆಗಮಿಸಿ ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ದಕ್ಷಿಣಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಜಿಲ್ಲಾಡಳಿತ ವತಿಯಿಂದ ಮೃತರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು. ಬಳಿಕ ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಸ್ಥಳದಲ್ಲಿ ಮುರಳೀಧರ್ ಅಮರ್ ರಹೇ ಘೋಷಣೆ ಕೂಗಲಾಯಿತು. ಬಳಿಕ ವಿಧಿ ವಿಧಾನಗಳಂತೆ ಮಹಾಕಾಳಿ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
37ರ ಹರೆಯದ ಮುರಳಿಧರ ರೈಯವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ರವಿವಾರ ಭೋಪಾಲ್ನಲ್ಲಿ ಮಲಗಿದಲ್ಲೇ ಅವರಿಗೆ ಹೃದಯಾಘಾತವಾಗಿದ್ದು, ಸೋಮವಾರ ಬೆಳಗ್ಗೆ ಜತೆಗಿದ್ದವರು ಕರೆದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.
ಊರಿಗೆ ಬರುವವರಿದ್ದರು
ಮುರಳೀಧರ್ ರೈ ಅವರು 2007ರಲ್ಲಿ ಕಾನ್ಸ್ಟೆಬಲ್ ಆಗಿ ಸಶಸ್ತ್ರ ಸೀಮಾ ಬಲ್ಗೆ ಸೇರಿದ್ದರು. ರವಿವಾರ ರಾತ್ರಿ ವೀಡಿಯೋ ಕಾಲ್ ಮೂಲಕ ಪತ್ನಿ ಜತೆ ಮಾತನಾಡಿದ್ದರು. ಫೆ. 5ರಂದು ನಡೆಯಲಿದ್ದ ತಾಯಿಯ ನಿಧನದ ಮೊದಲ ವರ್ಷದ ಕಾರ್ಯಕ್ರಮಕ್ಕಾಗಿ ಎರಡು ವಾರದ ರಜೆಯಲ್ಲಿ ಮಂಗಳವಾರ ಹೊರಟು ಬುಧವಾರ ಊರಿಗೆ ಬರುವವರಿದ್ದರು. ಅವರು ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಅಗಲಿದ್ದಾರೆ.