ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಏಣಿತ್ತಡ್ಕ ಎಂಬಲ್ಲಿ ಕುಮಾರಧಾರ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ.ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ(46) ಮೃತಪಟ್ಟ ಮಹಿಳೆ.
ಕುಮಾರಧಾರ ಹೊಳೆಯ ಇನ್ನೊಂದು ಮಗ್ಗುಲಲ್ಲಿರುವ ಅರೆಲ್ತಡ್ಕ ಎಂಬಲ್ಲಿಂದ ಹುಲ್ಲು ಸಂಗ್ರಹಿಸಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಹೊಳೆಯನ್ನು ತೆಪ್ಪದ ಮುಖಾಂತರ ದಾಟುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ದೋಣಿ ನದಿಯ ಮದ್ಯ ಭಾಗಕ್ಕೆ ಬಂದಾಗ ಜೊರಾದ ಗಾಳಿ ಬೀಸಿದ್ದು ಈ ವೇಳೆ ತೆಪ್ಪ ಮಗುಚಿ ಬಿದ್ದಿದೆ. ತೆಪ್ಪದಲ್ಲಿದ್ದ ಇನ್ನಿಬ್ಬರು ಮಹಿಳೆಯರು ಹುಲ್ಲು ತುಂಬಿದ್ದ ಗೋಣಿ ಚೀಲದ ಸಹಾಯದಿಂದ ಈಜಿ ದಡ ಸೇರಿದ್ದಾರೆ.ಆದರೆ ಗೀತಾ ನೀರಿನಲ್ಲಿ ಮುಳುಗಿದ್ದಾರೆ .
ತೆಪ್ಪದಲ್ಲಿ ಮೂರು ಮಹಿಳೆಯರಿದ್ದರು.ತೆಪ್ಪದಲ್ಲಿದ್ದ ಹುಲ್ಲಿನ ಮೂಟೆಗಳು ನೀರಿನಲ್ಲಿ ತೇಲುತ್ತಿದ್ದುದರಿಂದ ಅವುಗಳ ಸಹಾಯದಿಂದ ಮೂವರು ಮಹಿಳೆಯರೂ ನೀರಿನ ಸೆಳೆತದಿಂದ ಪಾರಾಗಲು ಯತ್ನಿಸಿದ್ದಾರೆ.ಈ ಪೈಕಿ ವಿದ್ಯಾಲಕ್ಷ್ಮಿ ಹಾಗೂ ಸುನಂದ ಎಂಬವರು ಹುಲ್ಲಿನ ಮೂಟೆಯ ಸಹಾಯದಿಂದ ನದಿ ದಡ ಸೇರಿದ್ದಾರೆ.ಆದರೆ ಗೀತಾ ಅವರು ದಡಸೇರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ಥಳೀಯ ಈಜು ತಜ್ಞರು ನೀರಲ್ಲಿ ಮುಳುಗಿದ್ದ ಮಹಿಳೆಯನ್ನು ಮೇಲಕ್ಕೆತ್ತಿದರೂ ಅಷ್ಟೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ನಿರಂತರವಾಗಿ ನದಿಯಾಚೆಯಿಂದ ಹುಲ್ಲು ತರಲು ಹೋಗುತ್ತಿದ್ದ ಈ ಮೂವರು ಮಹಿಳೆಯರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರಾಗಿದ್ದು, ಭಾನುವಾರ ಮಧ್ಯಾಹ್ನ ಯೊಜನೆಯ ಮೀಟಿಂಗ್ ಇರುವ ಕಾರಣ ಮಧ್ಯಾಹ್ನದ ಮೊದಲೇ ಹುಲ್ಲು ತರಲು ಹೋಗಿದ್ದರು.
ವಿಷಯ ತಿಳಿದು ನೀರಿಗಿಳಿದ ಸ್ಥಳಿಯರಾದ ರಾಮಕೃಷ್ಣ, ನೇತ್ರಾಕ್ಷ ಮತ್ತಿತರರು ಹುಡುಕಾಡಿದಾಗ ಅದಾಗಲೇ ಮೃತಪಟ್ಟಿದ್ದರು. ಕಡಬ. ಠಾಣಾ ಎ.ಎಸ್ ಐ ಶಿವರಾಮ, ಕಾನ್ಸ್ ಟೇಬಲ್ ಚಂದನ್ ಸ್ಥಳಕ್ಕಾಗಮಿಸಿ ಪರೀಶಿಲನೆ ನಡೆಸಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಇಬ್ಬರು ಪುತ್ರರು ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.