ನವದೆಹಲಿ: ದೆಹಲಿಯಲ್ಲಿ (Delhi) ಎರಡು ದಿನಗಳ ಕಾಲ ನಡೆದ ಬಿಜೆಪಿ (BJP) ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Modi Muslim Statement) ಆಡಿರುವ ಒಂದು ಮಾತು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಹಿಂದೂ ಹೃದಯ ಸಾಮ್ರಾಟ್, ಹಿಂದುತ್ವದ ಆಧಾರದಲ್ಲಿ ಚುನಾವಣೆ ಎದುರಿಸಿದ್ದಾರೆ ಎಂದೆಲ್ಲ ಕರೆದುಕೊಳ್ಳುತ್ತಿರುವ ಮೋದಿ ಮುಸ್ಲಿಂ (Muslim) ಸಮುದಾಯದ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ತಮ್ಮ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ. ದೇಶದ ಅನೇಕ ಸಮುದಾಯಗಳು ಬಿಜೆಪಿಗೆ ಮತ ಹಾಕುವುದಿಲ್ಲ, ಆದರೆ ಬಿಜೆಪಿ ಕಾರ್ಯಕರ್ತರು ಮುಸ್ಲಿಂ ಸಮುದಾಯಕ್ಕೆ ಅಗೌರವ ತೋರದೆ, ಉತ್ತಮ ಸಮನ್ವಯತೆ ಸ್ಥಾಪಿಸಿ ಅವರೊಂದಿಗೆ ಉತ್ತಮ ನಡವಳಿಕೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಚಲನಚಿತ್ರಗಳಂಥ ಅಪ್ರಸ್ತುತ ವಿಚಾರಗಳ ಕುರಿತು ಹೇಳಿಕೆ ನೀಡುವುದರಿಂದ ದೂರ ಉಳಿದು, ಪಕ್ಷದ ಅಭಿವೃದ್ಧಿ ಕಾರ್ಯಸೂಚಿಯನ್ನು ಮುನ್ನೆಲೆಗೆ ತರಬೇಕು ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಿಜೆಪಿ (BJP) ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಇಂತಹ ಹೇಳಿಕೆಗಳು ಪಕ್ಷದ ಮೂಲ ಅಜೆಂಡಾಗೆ ಧಕ್ಕೆ ಆಗುತ್ತದೆ ಎಂದು ಬಿಜೆಪಿಗರಿಗೆ ಕರೆ ನೀಡಿದ್ದಾರೆ. ಈಗಾಗಲೇ ಶಾರುಕ್ ಖಾನ್ ನಟನೆಯ ಪಠಾಣ್ ಚಿತ್ರದ ವಿರುದ್ಧ ಬಿಜೆಪಿ ಹಾಗೂ ಬಲಪಂಥೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಬೈಕಾಟ್ ಅಭಿಯಾನ ಕೈಗೊಂಡ ಕೂಡಲೇ ಮೋದಿಯ ಈ ಹೇಳಿಕೆ ಬಲಪಂಥೀಯರಿಗೆ ಇಕ್ಕಟ್ಟಿಗೆ ಸಿಲುಕಿಸಿದೆ.
ದೇಶಾದ್ಯಂತ ಲವ್ ಜಿಹಾದ್, ಹಿಜಾಬ್, ವ್ಯಾಪಾರ ಬೈಕಾಟ್, ಸಿನಿಮಾ ಬೈಕಾಟ್, ಹಲಾಲ್ ಮೊದಲಾದ ಗಂಭೀರ ವಿಚಾರಗಳ ಬಗ್ಗೆ ಸಂಘ ಪರಿವಾರ ಹೋರಾಟ ಮಾಡುತ್ತಿರುವಾಗಲೇ ಮೋದಿ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ. ಇದೀಗ ಈ ಹೋರಾಟ ಪ್ರಾರಂಭಿಸಿರುವ ಸಂಘಟನೆಗಳು ಇದೀಗ ಮೋದಿ ಹೇಳಿಕೆ ನಂತರ ಇಕ್ಕಟ್ಟಿಗೆ ಸಿಲುಕಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಪ್ರಾರಂಭವಾಗಿದೆ.
ಈ ಬಗ್ಗೆ ಇದೀಗ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳನ್ನು ವಿಶ್ವಾಸದಿಂದ ಜೊತೆಗೆ ಕರೆದೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಅದನ್ನು ಪಾಲನೆ ಮಾಡಲಾಗುವುದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ತಮ್ಮ ದೆಹಲಿ ಭೇಟಿಯ ಬಗ್ಗೆ ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮೊಂದಿಗೆ ಅಲ್ಪಸಂಖ್ಯಾತರು ಚೆನ್ನಾಗಿದ್ದಾರೆ. ಮೊದಲಿನಿಂದಲೂ ವಿಶ್ವಾಸದಿಂದ ಇದ್ದೇವೆ. ನಮ್ಮ ಬಗ್ಗೆ ಅವರಿಗೆ ಗೌರವವಿದೆ. ನಮಗೂ ಅವರ ಬಗ್ಗೆ ವಿಶ್ವಾಸವಿದೆ. ಪ್ರಧಾನಿ ಸಲಹೆಯಂತೆ ಬರುವ ದಿನಗಳಲ್ಲಿ ಅವರೊಂದಿಗೆ ಹೆಚ್ಚಿನ ವಿಶ್ವಾಸದಿಂದ ಹೆಜ್ಜೆ ಇಡುವ ಪ್ರಯತ್ನ ಮಾಡಲಿದ್ದೇವೆ’ ಎಂದರು.
ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಬೊಹ್ರಾ, ಪಸ್ಮಂದ ಮತ್ತು ಸಿಖ್ ಥರದ ಅಲ್ಪಸಂಖ್ಯಾತ ಸಮುದಾಯಗಳನ್ನು ಒಳಗೊಂಡಂತೆ ಸಮಾಜದ ಎಲ್ಲ ವರ್ಗದ ಜನರನ್ನು ತಲುಪಿ, ಯಾವುದೇ ರಾಜಕೀಯ ಲಾಭದ ಅಪೇಕ್ಷೆ ಇಲ್ಲದೆ ಅವರಿಗಾಗಿ ದುಡಿಯಬೇಕು ಎಂದು ಬಿಜೆಪಿ ಸದಸ್ಯರಿಗೆ ಕರೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಭಾಷಣ ಮಾಡಿದ ಅವರು, 2024ರ ಲೋಕಸಭಾ ಚುನಾವಣೆಗೆ ಸುಮಾರು 400 ದಿನ ಮಾತ್ರ ಬಾಕಿ ಉಳಿದಿದ್ದು, ಪಕ್ಷದ ಕಾರ್ಯಕರ್ತರು ಸಮಾಜದ ಎಲ್ಲ ವರ್ಗಗಳಿಗಾಗಿ ಪೂರ್ಣ ನಿಷ್ಠೆಯಿಂದ ದುಡಿಯಬೇಕು ಎಂದು ಸೂಚಿಸಿದ್ದಾರೆ.
ಈ ಭಾಷಣದ ಕುರಿತು ಪ್ರತಿಕ್ರಿಯಿಸಿರುವ ಹಲವಾರು ಸಭಿಕರು, ಅವರ ಭಾಷಣವು ಕೇಸರಿ ಸಂಘಟನೆಯನ್ನು ವಿಸ್ತರಿಸುವ ಮತ್ತು ದೇಶವನ್ನು ಎಲ್ಲ ವಿಧದಲ್ಲೂ ಮುನ್ನಡೆಸುವ ಬಹು ದೊಡ್ಡ ದೂರದೃಷ್ಟಿ ಹೊಂದಿತ್ತು ಎಂದು ಶ್ಲಾಘಿಸಿದ್ದಾರೆ.ಸಭೆಯಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದ ವಿವಿಧ ಪಕ್ಷಗಳ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು ತುಷ್ಟೀಕರಣದ ಬಗ್ಗೆ ಮಾತನಾಡಿದರು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ಕ್ಷೇತ್ರಗಳ ವೃತ್ತಿಪರರನ್ನು ಭೇಟಿ ಮಾಡಿ, ಅವರೊಂದಿಗೆ ಸಂಪರ್ಕವಿಟ್ಟುಕೊಳ್ಳಲು ನಿಯಮಿತವಾಗಿ ವಿಶ್ವವಿದ್ಯಾಲಯಗಳು ಹಾಗೂ ಚರ್ಚ್ಗಳಿಗೆ ತೆರಳಬೇಕು ಎಂದು ಸೂಚಿಸಿದರು ಎಂದು ಹೇಳಿದ್ದಾರೆ.
ಭಾರತದ ಅತ್ಯುತ್ತಮ ಯುಗ ಬರುತ್ತಲಿದ್ದು, ಪಕ್ಷವು ದೇಶದ ಅಭಿವೃದ್ಧಿಗಾಗಿ ಅರ್ಪಿಸಿಕೊಳ್ಳಬೇಕು ಮತ್ತು 2047ರವರೆಗಿನ 25 ವರ್ಷದ ಅವಧಿಯ “ಅಮೃತ ಕಾಲ” ಯೋಜನೆಯನ್ನು “ಕರ್ತವ್ಯ ಕಾಲ” ಯೋಜನೆಯಾಗಿ ಬದಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಯಾವುದೇ ಬಗೆಯ ಅತಿಯಾದ ಆತ್ಮವಿಶ್ವಾಸದ ಕುರಿತು ಪಕ್ಷಕ್ಕೆ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 1998ರ ಚುನಾವಣೆಯ ಸಂದರ್ಭದಲ್ಲಿ ದಿಗ್ವಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನಪ್ರಿಯತೆಯನ್ನು ಕಳೆದುಕೊಂಡಿದ್ದರೂ ಮರಳಿ ಅಧಿಕಾರಕ್ಕೆ ಬಂದಿದ್ದ ನಿದರ್ಶನವನ್ನು ನೀಡಿದರು. ಆ ಸಂದರ್ಭದಲ್ಲಿ ಅವರು ಮಧ್ಯಪ್ರದೇಶ ರಾಜ್ಯದ ಬಿಜೆಪಿ ಸಂಘಟನಾ ವ್ಯವಹಾರಗಳ ಸೂತ್ರದಾರರಾಗಿದ್ದರು ಎಂದು ಮೂಲಗಳು ತಿಳಿಸಿವೆ.
“ಯಾರು ಪಣ ತೊಡುತ್ತಾರೊ, ಅವರು ಇತಿಹಾಸ ನಿರ್ಮಿಸುತ್ತಾರೆ. ಬಿಜೆಪಿ ಕೂಡಾ ಪಣ ತೊಟ್ಟು, ಇತಿಹಾಸ ಸೃಷ್ಟಿಸಬೇಕು” ಎಂದೂ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.