ಕಡಬ: ಗ್ರಾಮ ಸಭೆಯಲ್ಲಿ ಉಡಾಫೆ ಉತ್ತರ, ಸಾಮಾಜಿಕ ಜಾಲತಾಣದಲ್ಲಿ ಭಜಕರ ನಿಂದನೆ ಹಾಗೂ ಹಿಂದೂ ಸಂಘಟನೆಯನ್ನು ಗುರಿಯಾಗಿಸಿ ಪೋಸ್ಟ್ ಹಾಕುತ್ತಿದ್ದ ಆರೋಪ ಎದುರಿಸುತಿದ್ದ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರನ್ನು (Sanjeeva Poojary) ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಫಾರಸ್ಸಿನ ಮೆರೆಗೆ ಅಮಾನತುಗೊಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಭಜಕರ ಬಗ್ಗೆ ನಿಂದನೆ, ಹಿರೇಬಂಡಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಉಡಾಫೆಯಾಗಿ ವರ್ತಿಸಿದ ಕೊಯಿಲ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಂಜೀವ ಪೂಜಾರಿಯವರು ಹಲವಾರು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ತಿಂಗಳುಗಳ ಹಿಂದೆ ಭಜನೆ ಮಾಡುವ ಭಜಕರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು ಇದರ ವಿರುದ್ಧ ಬಜರಂಗದಳದ ಕಾರ್ಯಕರ್ತರು ಇವರ ಅಮಾನತಿಗೆ ಒತ್ತಾಯಿಸಿ ಬೀದಿಗೆ ಇಳಿದಿದ್ದರು.
ಈ ನಡುವೆ ರಾತ್ರಿ ನೂರಾರು ಜನ ತನ್ನ ಮನೆಗೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಚಾರ ವಿಧಾನಸೌಧದಲ್ಲೂ ಚರ್ಚೆಯಾಗಿತ್ತು.
ಸಂಜೀವ ಪೂಜಾರಿಯವರ ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ನಿಯಮ 1958 ನಿಯಮ 98ರ ಪ್ರಕಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಸದ್ರಿ ನೌಕರರಿಗೆ ಅಮಾನತ್ತಿನ ಅವಧಿಗೆ ಅವರ ಕೇಂದ್ರಸ್ಥಾನ ಮತ್ತೂರು ಎಂದು ನಿಗಧಿಪಡಿಸಿದೆ. ಹಾಗೂ ಕೇಂದ್ರಸ್ಥಾನವನ್ನು ಬಿಡುವ ಮೊದಲು ವಲಯ ಅರಣ್ಯಾಧಿಕಾರಿ ಪುತ್ತೂರು ಇವರ ಪೂರ್ವಾನುಮತಿಯನ್ನು ಪಡೆಯತಕ್ಕದು ಎಂದು ಆದೇಶಿಸಿ ಅಮಾನತು ಮಾಡಲಾಗಿದೆ.


