ಬೆಂಗಳೂರು: ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷವು ಇಂದು ಮತ್ತೊಂದು ಯೋಜನೆಯನ್ನು ಘೋಷಣೆ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನ್ತಿ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುವ ‘ಗೃಹಲಕ್ಷ್ಮಿ ಯೋಜನೆ’ (Gruha Lakshmi) ಘೋಷಿಸಿದೆ.
ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ‘ಗೃಹಲಕ್ಷ್ಮಿ ಯೋಜನೆ’ಯನ್ನು ಘೋಷಣೆ ಮಾಡಿದರು.

ಕಾಂಗ್ರೆಸ್ ಬಸ್ ಯಾತ್ರೆಯ ಸಮಾವೇಶದಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ‘ಗೃಹ ಜ್ಯೋತಿ’ ಘೋಷಣೆ ಮಾಡಲಾಗಿತ್ತು. ಇದೀಗ ನಾ ನಾಯಕಿ ಸಮಾವೇಶದಲ್ಲಿ ಗೃಹ ಲಕ್ಷ್ಮಿ ಯೋಜನೆ ಘೋಷಣೆಯನ್ನು ಕಾಂಗ್ರೆಸ್ ಮಾಡಿದೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನ್ತಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ ಹಾಕುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ.

ಬೆಲೆಯೇರಿಕೆಯಿಂದ ಬಸವಳಿದು ಮನೆಯ ನಿರ್ವಹಣೆ ಮಾಡಲು ಹರಸಾಹಸ ಪಡುತ್ತಿರುವ ರಾಜ್ಯದ ಎಲ್ಲಾ ಗೃಹಿಣಿಯರೇ, ನಿಮ್ಮ ಮನೆ ನಿರ್ವಹಣೆ ಇನ್ಮುಂದೆ ಕಾಂಗ್ರೆಸ್ ಹೊಣೆ! ರಾಜ್ಯದ ಮಹಿಳೆಯರೇ, ದಿನಸಿ ವಸ್ತುಗಳು ದುಬಾರಿಯಾಗಿವೆ ಎಂಬ ಚಿಂತೆ ಬಿಡಿ. ನಿಮ್ಮ ಮನೆಯ ಪ್ರತಿ ತಿಂಗಳ ದಿನಸಿ ಖರ್ಚು ಇನ್ಮುಂದೆ ಕಾಂಗ್ರೆಸ್ ಹೊಣೆ ಎಂದು ಕಾಂಗ್ರೆಸ್ ಭರವಸೆ ನೀಡಿದೆ.