ವೈರಲ್ ನ್ಯೂಸ್
Twins Died | 900ಕಿ.ಮೀ ಅಂತರದಲ್ಲಿ ಒಂದೇ ರೀತಿಯ ಅವಘಡದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಅವಳಿ ಸಹೋದರರು ನಿಧನ
ಜೈಸಲ್ಮೇರ್: ಅವಳಿ-ಜವಳಿ (Twins Died) ಮಕ್ಕಳು ಒಟ್ಟಿಗೆ ಜನಿಸುವುದು, ರೂಪದಲ್ಲಿ ಥೇಟ್ ಒಂದೇ ರೀತಿ ಇರುವುದು ಹೊಸತೇನಲ್ಲ. ಆದರೆ, ರಾಜಸ್ಥಾನ ಮೂಲದ ಅವಳಿ ಸಹೋದರರು ಸಾವಿನಲ್ಲೂ ‘ಸಾಮ್ಯತೆ’ ಮೆರೆದಿದ್ದಾರೆ!
ಹೌದು, ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಇಬ್ಬರೂ ಸಹೋದರರು ಕಾಕತಾಳೀಯವೆಂಬಂತೆ ಒಂದೇ ರೀತಿಯ ಅವಘಡದಲ್ಲಿ, ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದಾರೆ. ಒಬ್ಬರು ಜೈಪುರದಲ್ಲಿ ಕಾಲು ಜಾರಿ ನೀರಿನ ಟ್ಯಾಂಕ್ಗೆ ಬಿದ್ದು ಮೃತಪಟ್ಟರೆ, 900 ಕಿ.ಮೀ. ದೂರದ ಪುಣೆಯಲ್ಲಿ ಮತ್ತೊಬ್ಬ ಸಹೋದರ ಕಾಲು ಜಾರಿ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಸುಮೇರ್ ಸಿಂಗ್ ಮತ್ತು ಸೋಹನ್ ಸಿಂಗ್ ಎಂಬ ಇಬ್ಬರು ಸಹೋದರರನ್ನು ರಾಜಸ್ಥಾನದ ತಮ್ಮ ತವರೂರು ಸಾರ್ನೊ ಕಾ ತಾಲಾ ಗ್ರಾಮದಲ್ಲಿ ಕೊನೆಗೆ ಒಂದೇ ಚಿತೆಯ ಮೇಲೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ವಿಚಿತ್ರ ಹಾಗೂ ಮನಕಲಕುವ ಘಟನೆ ಜನರನ್ನು ಭಾವುಕರನ್ನಾಗಿ ಮಾಡಿದೆ.
ಎರಡೂವರೆ ದಶಕಗಳ ಹಿಂದೆ ಅವಳಿ ಸಹೋದರರು ತಮ್ಮ ಜನ್ಮದ ಮೂಲಕ ಮನೆಯಲ್ಲಿ ‘ಡಬಲ್’ ಸಂತಸ ಮೂಡಿಸಿದ್ದರು, ಈಗ ಸಾವಿನಲ್ಲೂ ದುಪ್ಪಟ್ಟು ದುಃಖವನ್ನು ಹಂಚಿದ್ದಾರೆ.
ಮೃತ ಸಹೋದರರ ಪೈಕಿ ಸುಮೇರ್ ಪುಣೆಯಲ್ಲಿ ಕೆಲಸ ಮಾಡುತ್ತಿದ್ದರೆ, ರಾಜಸ್ಥಾನದಲ್ಲೇ ಉಳಿದಿದ್ದ ಮತ್ತು ಟ್ಯಾಂಕ್ಗೆ ಬಿದ್ದ ಸೋಹನ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು.
ದುರಂತ ನಡೆದದ್ದು ಹೇಗೆ?
”ಸುಮೇರ್ ಟೆರೇಸ್ ಮೇಲೆ ಫೋನಿನಲ್ಲಿ ಮಾತನಾಡುತ್ತಾ ಅಂಚಿಗೆ ತಲುಪಿದ್ದಾರೆ. ಈ ವೇಳೆ ಕಾಲು ಜಾರಿ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ತವರೂರಿನಲ್ಲಿದ್ದ ಮತ್ತೊಬ್ಬ ಸಹೋದರ, ಸೋಹನ್ ಸಾವಿನ ಸುದ್ದಿ ತಿಳಿದ ಕೆಲವೇ ಗಂಟೆಗಳಲ್ಲಿ ಕಾಲು ಜಾರಿ ನೀರಿನ ಟ್ಯಾಂಕ್ಗೆ ಬಿದ್ದಿದ್ದಾರೆ.
ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಟ್ಯಾಂಕ್ನಲ್ಲಿ ನೀರು ತರಲು ಹೋದ ಸೋಹನ್ ಮತ್ತೆ ಮನೆಗೆ ಬಂದಿಲ್ಲ. ಕುಟುಂಬದ ಸದಸ್ಯರು ಹುಡುಕಿದಾಗ,ಆತ ಟ್ಯಾಂಕ್ನಲ್ಲಿ ಬಿದ್ದಿರುವುದು ತಿಳಿದುಬಂದಿದೆ. ಅರೆ ಜೀವವಾಗಿದ್ದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಹೀಗೆ ಇಬ್ಬರೂ ಸಹೋದರರು ಬಹುತೇಕ ಒಂದೇ ರೀತಿಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಕೊನೆಯುಸಿರೆಳೆದಿದ್ದಾರೆ.
“ಎರಡನೇ ಸಹೋದರನ ಸಾವಿನ ಪ್ರಕರಣದಲ್ಲಿ ಆತ್ಮಹತ್ಯೆಯ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ,’’ ಎಂದು ಬರ್ಮರ್ ಜಿಲ್ಲೆಯ ಸಿಂಧಾರಿ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಸುರೇಂದ್ರ ಸಿಂಗ್ ಹೇಳಿದ್ದಾರೆ.
ರಾಮ- ಲಕ್ಷ್ಮಣರ ಬಾಂಧವ್ಯ
ಮೃತ ಅವಳಿ ಸಹೋದರರಲ್ಲಿ ಕೇವಲ ರೂಪದಲ್ಲಿ ಮಾತ್ರದಲ್ಲ, ಅವರ ಹಾವಭಾವ-ನಡವಳಿಕೆ ಎಲ್ಲದರಲ್ಲೂ ಸಾಮ್ಯತೆಯಿತ್ತು ಎನ್ನುತ್ತಾರೆ ಗ್ರಾಮಸ್ಥರು. ಇಬ್ಬರೂ ಚಿಕ್ಕಂದಿನಿಂದಲೂ ತುಂಬಾ ಅನ್ಯೋನ್ಯವಾಗಿದ್ದರು. ಅವಳಿ ಮಕ್ಕಳ ಪೈಕಿ ಸೋಹನ್ ಕೊಂಚ ದೊಡ್ಡವರು. ಓದಿನಲ್ಲಿ ಕೂಡ ಚುರುಕು. ಹಾಗಾಗಿ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ, ಓದಿನಲ್ಲಿ ಅಷ್ಟು ಚುರುಕಿಲ್ಲದ ಸುಮೇರ್ ಪುಣೆಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದರನ ಓದಿಗೆ ಬೆಂಬಲಿಸುತ್ತಿದ್ದರು,” ಎಂದು ಗ್ರಾಮಸ್ಥ ರಾಮ್ ಸಿಂಗ್ ಹೇಳಿದ್ದಾರೆ.
ವಿಟ್ಲ
Farmer-ಕೋವಿ ಡೆಪಾಸಿಟ್ ಇಟ್ಟ ರೈತ ಮಂಗ ಓಡಿಸಲು 112 ಪೊಲೀಸ್ ಹೆಲ್ಪ್ ಲೈನಿಗೆ ಕರೆ ಮಾಡಿ ಬಿಸಿ ಮುಟ್ಟಿಸಿದ – ಆಡಿಯೋ ವೈರಲ್
ವಿಟ್ಲ : ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬಿಲ್ಲಂಪದವಿನ ಕೃಷಿಕರೊಬ್ಬರು ವಿಟ್ಲ ಪೋಲಿಸರಿಗೆ ಬಿಸಿಮುಟ್ಟಸಿದ ಘಟನೆ ನಡೆದಿದೆ. ನ್ಯಾಯಾಲಯ ಸೂಚನೆ ನೀಡಿದ್ದರೂ ಠಾಣೆಯಲ್ಲಿ ಠೇವಣಿ ಇರಿಸಿದ್ದ ಕೋವಿಯನ್ನು ಪೊಲೀಸರು ವಾಪಸ್ ನೀಡದ ಕಾರಣ ಈ ಘಟನೆ ನಡೆದಿದೆ.
ಕೃಷಿಕ ನಿಶಾಂತ ನಾರಾಯಣರವರು ಅಳಿಕೆ ಗ್ರಾಮ ನಿವಾಸಿಯಾಗಿದ್ದು, ತಮ್ಮ ಕಾರ್ಯದ ಮೂಲಕ ಪೊಲೀಸರ ಕಣ್ತೆರೆಸಿದ್ದು, ಪೊಲೀಸರೇ ಮನೆಗೆ ಬಂದು ಕೋವಿಯನ್ನು ಮರಳಿಸಿದ್ದಾರೆ.
ಘಟನೆಯ ವಿವರ :
ಗ್ರಾಮೀಣ ಪ್ರದೇಶಗಳ ಕೃಷಿಕರು ಕಾಡು ಹಂದಿ ಹಾಗೂ ಕೋತಿಗಳ ಉಪಟಳವನ್ನು ಹತೋಟಿಗೆ ತರಲು ಪರವಾನಗಿ ಕೋವಿ ಇರಿಸಿಕೊಂಡಿರುತ್ತಾರೆ. ಆದರೆ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಚುನಾವಣೆಯ ಸಮಯದಲ್ಲಿ ಕೃಷಿಕರು ಕೋವಿಯನ್ನು ಠಾಣೆಯಲ್ಲಿ ಠೇವಣಿ ಇಡುವ ನಿಯಮವನ್ನು ಜಿಲ್ಲಾಡಳಿತದ ಸೂಚನೆಯಂತೆ ಪೊಲೀಸ್ ಇಲಾಖೆ ಪ್ರತೀ ವರ್ಷ ನಡೆಸುತ್ತಿತ್ತು.
ಆದರೆ ಈ ಬಾರಿ ಕೋವಿಯನ್ನು ಠಾಣೆಗಳಲ್ಲಿ ಠೇವಣಿ ಇರಿಸಿದರೆ, ಕೃಷಿಕರಿಗೆ ಕಾಡುಹಂದಿ ಹಾಗೂ ಮಂಗಗಳ ಉಪಟಳ ಎದುರಾದರೆ ಏನು ಗತಿ ಎಂದು ಮರುಪ್ರಶ್ನಿಸಿದ್ದು ಈ ಹಿನ್ನೆಲೆಯಲ್ಲಿ ಕೆಲ ಕೃಷಿಕರಿಗೆ ವಿನಾಯಿತಿಯೂ ದೊರೆತ್ತಿತ್ತು. ಜಿಲ್ಲಾಧಿಕಾರಿಗೆ ರಿಯಾಯಿತಿ ನೀಡುವಂತೆ ಪತ್ರ ಬರೆದು ಕೋವಿಯ ಅಗತ್ಯತೆ ಬಗ್ಗೆ ತಿಳಿಸಿದ್ದರು. ತಮ್ಮ ಕೋವಿಯನ್ನು ವಿಟ್ಲ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಿದ್ದರು. ಜಿಲ್ಲಾಧಿಕಾರಿಗಳು ಮನವಿಯನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಈ ಕುರಿತಾಗಿ ಎ.1 ರಂದು ಉಚ್ಚ ನ್ಯಾಯಾಲಯಕ್ಕೆ ಮಾಣಿಮೂಲೆ ಗೋವಿಂದ ಭಟ್ ಜತೆಗೆ ವಕೀಲ ಸುಬ್ರಹ್ಮಣ್ಯ ಭಟ್ ಮೂಲಕ ಮನವಿ ಸಲ್ಲಿಸಿದ್ದರು.
ಇದಾಗುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿಯ ಮರುಪರಿಶೀಲನೆಯನ್ನು ನಡೆಸಿ ಕೋವಿ ಠೇವಣಿಗೆ ವಿನಾಯಿತಿ ನೀಡುವ ಬಗ್ಗೆ ತಿಳಿಸಿದ್ದರು. ಹೀಗಿದ್ದರೂ ಕೋವಿಯನ್ನು ಹಿಂತಿರುಗಿಸದೆ, ನ್ಯಾಯಾಲಯದ ಆದೇಶವನ್ನು ಇಲಾಖೆ ಪಾಲಿಸಿರಲಿಲ್ಲ.
ಪೊಲೀಸರೇ ಕೋವಿ ಮನೆಗೆ ತಲುಪಿಸಿದರು :
ಎ.2ರಂದು, ತಮ್ಮ ತೋಟಕ್ಕೆ ಕೋತಿಗಳ ಹಿಂಡು ಬಂದು ಕೃಷಿಯನ್ನು ಹಾನಿ ಮಾಡುತ್ತಿವೆ ನನ್ನ ಬಳಿ ಈಗ ಕೋವಿ ಇಲ್ಲ. ತೋಟಕ್ಕೆ ಬಂದ ಕೋತಿಗಳನ್ನು ಓಡಿಸಿ ಎಂದು ನಿಶಾಂತ್ ಬಿಲ್ಲಂಪದವು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಅದರಂತೆ ವಿಟ್ಲ ಪರಿಸರದ 112 ವಾಹನ ಬಿಲ್ಲಂಪದವುಗೆ ಬಂದು ಸಮಸ್ಯೆಗೆ ಸ್ಪಂದಿಸಿದ್ದರು. ಕೋವಿ ನೀಡದೇ ಹೋದರೆ ಪದೇ ಪದೇ ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತ ಪೊಲೀಸರು ಮರುದಿನವೇ ಕೋವಿಯನ್ನು ನಿಶಾಂತ್ ಬಿಲ್ಲಂಪದವು ಅವರ ಮನೆಗೆ ಹಿಂತಿರುಗಿಸಿದ್ದಾರೆ.
ವೈರಲ್ ಆದ ಆಡಿಯೋ :
ಚುನಾವಣಾ ನೀತಿ ಸಂಹಿತೆ ಪ್ರಕಾರ ಕೋವಿ ಡೆಪಾಸಿಟ್ ಮಾಡಿದ್ದ ಕಾರಣದಿಂದ ತೋಟಕ್ಕೆ ನುಗಿದ್ದ ಕೋತಿಯನ್ನು ಓಡಿಸಲು ಕೃಷಿಕರೋಬ್ಬರು 112 ಕ್ಕೆ ಕರೆ ಮಾಡಿ ʻತೋಟಕ್ಕೆ ಮಂಗ ಬಂದಿದೆ. ಕೂಡಲೇ ಬರಬೇಕುʼ ಎಂದು ಮನವಿ ಮಾಡಿದ್ದರು. ಸಂಜೆ 5 ಗಂಟೆಯ ವೇಳೆಗೆ ಅವರು ಫೋನ್ ಮಾಡಿದ್ದು, ರಾತ್ರಿ 8 ಗಂಟೆಯ ವೇಳೆಗೆ ವಿಟ್ಲ ಪೋಲಿಸರು ಅವರ ಮನೆಗೆ ಭೇಟಿ ನೀಡಿದ್ದಾರೆ. ತುರ್ತು ಪೊಲೀಸರನ್ನೇ ತೋಟಕ್ಕೆ ಕರೆಸಿದ ಘಟನೆ, ಪೊಲೀಸರ ಜೊತೆ ನಿಶಾಂತ್ ಬಿಲ್ಲಂಪದವು ನಡೆಸಿದ ಮಾತುಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಂಗಳೂರು
Charmadi Ghat-ಕಾಡಾನೆ ಕೈಯಿಂದ ಜಸ್ಟ್ ಮಿಸ್ ಆದ ಬೈಕ್ ಸವಾರ; ಚಾರ್ಮಾಡಿ ಘಾಟ್ ನಲ್ಲೊಂದು ಪವಾಡ
ಮಂಗಳೂರು: ಕರ್ನಾಟಕದ ಅತ್ಯಂತ ಸುಂದರ್ ಘಾಟ್ ರಸ್ತೆಯಾಗಿರುವ ಚಾರ್ಮಾಡಿಯಲ್ಲಿ ಹಗಲು ಹೊತ್ತಿನಲ್ಲೇ ಇದೀಗ ಕಾಡಾನೆ ಸಂಚಾರ ಶುರುವಾಗಿದೆ. ಇದರಿಂದ ವಾಹನ ಸವಾರರು ಜೀವ ಕೈಯ್ಯಲ್ಲಿ ಹಿಡಿದು ಓಡಾಡುವಂತಾಗಿದೆ. ಇತ್ತೀಚೆಗಷ್ಟೇ ಘಾಟ್ ರಸ್ತೆಯ ಒಂಬತ್ತನೇ ತಿರುವಿನಲ್ಲಿ ಮಟ ಮಟ ಮಧ್ಯಾಹ್ನ ಒಂಟಿ ಸಲಗವೊಂದು ರಸ್ತೆಗಿಳಿದು ಭಯ ಹುಟ್ಟಿಸಿತ್ತು. ಬೈಕ್ ಸವಾರನೊಬ್ಬ ಇದನ್ನು ತಿಳಿಯದೇ ಅಲ್ಲಿಂದ ಸಂಚರಿಸಿದ್ದು ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೆರಿಯದ ಬಾಂಜಾರು ಮಲೆ ಕಡೆಯಿಂದ ಸೋಮವಾರ ಮಧ್ಯಾಹ್ನ ಕಾಡಾನೆಯೊಂದು ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನ ಸಮೀಪ ಬಂದಿದ್ದು, ಕೆಲವು ಹೊತ್ತು ರಸ್ತೆ ಬದಿಯಲ್ಲಿ ನಿಂತುಕೊಂಡು ಬಳಿಕ ಅಲ್ಲಿಂದ ತೆರಳಿ ರಸ್ತೆಯಲ್ಲಿಒಂದಿಷ್ಟು ಹೊತ್ತು ಸಂಚರಿಸಿ ಮತ್ತೆ ನೆರಿಯ ಕಾಡಿನ ಕಡೆಗೆ ತೆರಳಿದೆ.
ಜಸ್ಟ್ ಮಿಸ್ ಆದ ಬೈಕ್ ಸವಾರ
ರಸ್ತೆ ಬದಿ ಆನೆಯನ್ನು ಗಮನಿಸಿದ ವಾಹನ ಸವಾರರು ಆನೆ ದಾಟಿ ಹೋಗಲು ಅನುಕೂಲವಾಗುವಂತೆ ಇಕ್ಕೆಲಗಳಲ್ಲೂ ವಾಹನಗಳನ್ನು ನಿಲ್ಲಿಸಿದ್ದರು. ಆದರೆ, ರಸ್ತೆಯ ಒಂದು ಬದಿಯಲ್ಲಿ ವಾಹನಗಳಿಲ್ಲದ ಕಾರಣ ಆನೆ ಇರುವುದನ್ನು ತಿಳಿಯದ ಬೈಕ್ ಸವಾರರೊಬ್ಬ ಆನೆ ದಾಟುತ್ತಿರುವ ಸಮಯದಲ್ಲೇ ಸಂಚರಿಸಿದ್ದಾನೆ.
ತಕ್ಷಣವೇ ಉಳಿದ ವಾಹನ ಸವಾರರು ಆನೆ ಇರುವುದರ ಬಗ್ಗೆ ಆತನ ಗಮನಕ್ಕೆ ತಂದರೂ ಅದನ್ನು ತಿಳಿಯದ ಆತ ಆತನ ಪಾಡಿಗೆ ಸಂಚಾರ ನಡೆಸಿದ್ದಾನೆ. ಅದೃಷ್ಟವಶಾತ್ ಆತನ ಮೇಲೆ ಕಾಡಾನೆ ದಾಳಿ ನಡೆಸಿಲ್ಲ. ಈ ದೃಶ್ಯವನ್ನು ಪ್ರಯಾಣಿಕರು ವಿಡಿಯೊ ಚಿತ್ರೀಕರಣ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶನಿವಾರ ರಾತ್ರಿ ಕಾಡಾನೆ ಬೆಳ್ತಂಗಡಿ ತಾಲೂಕಿನ ಕಲ್ಮಂಜದ ತೋಟವೊಂದರಲ್ಲಿ ದಾಂಧಲೆ ನಡೆಸಿದ್ದು ಬಳಿಕ ಭಾನುವಾರ ರಾತ್ರಿ ಚಾರ್ಮಾಡಿ ಬಳಿ ಕಂಡುಬಂದಿದೆ.
ನೀರು ಹುಡುಕಿಕೊಂಡು ಸಂಚಾರ
ಸ್ಥಳೀಯರು ಹಾಗೂ ಇಲಾಖೆಯವರು ಸೇರಿ ಆನೆಯನ್ನು ಕಾಡಿಗಟ್ಟಿದ್ದರೂ ಈ ಸಮಯ ಅದು ನೆರಿಯ ಕಾಡಿನತ್ತ ಓಡಿತ್ತು. ಅದರ ಬಳಿಕ ಸೋಮವಾರ ನೆರಿಯದ ಬಾಂಜಾರು ಮಲೆ ಮೂಲಕ ಚಾರ್ಮಾಡಿ ಘಾಟಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಕಲ್ಮಂಜದಲ್ಲಿ ದಾಂಧಲೆ ನಡೆಸಿದ ಆನೆ ಚಾರ್ಮಾಡಿ ಘಾಟಿಯಲ್ಲಿ ಪ್ರ ತ್ಯಕ್ಷವಾಗಿರುವ ಅನುಮಾನಗಳು ಮೂಡಿವೆ. ಪ್ರಸ್ತುತ ಕಾಡಿನ ಕೆರೆಗಳು, ನೇತ್ರಾವತಿ ನದಿ ಸಂಪೂರ್ಣ ಒಣಗಿದ್ದು, ಕೇವಲ ಮೃತ್ಯುಂಜಯ ನದಿಯಲ್ಲಿ ಮಾತ್ರ ನೀರು ಹರಿಯುತ್ತಿದೆ. ಈ ನದಿ ಹರಿಯುವ ನೆರಿಯ, ಚಾರ್ಮಾಡಿ ಭಾಗದಲ್ಲಿ ಕಾಡಾನೆ ಆಶ್ರಯ ಪಡೆದಿರುವ ಸಾಧ್ಯತೆ ಇದೆ.
ಎರಡು ತಿಂಗಳ ಹಿಂದಷ್ಟೇ ಇಲ್ಲಿ ಹಗಲು ಹೊತ್ತಿನಲ್ಲೇ ಕಾಡಾನೆಗಳ ಹಿಂಡು ಸಂಚರಿಸಿದ ವೇಳೆ ವಾಹನ ಸವಾರರು ಗಾಬರಿಗೊಳಗಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಚಾರ್ಮಾಡಿ ರಸ್ತೆಯು ಬಂದರು ನಗರಿ ಬೆಂಗಳೂರನ್ನು ರಾಜಧಾನಿ ಬೆಂಗಳೂರಿನೊಂದಿಗೆ ಸಂಪರ್ಕಿಸುವ ಮತ್ತು ಕರಾವಳಿಯನ್ನು ಬಯಲು ಸೀಮೆಯೊಂದಿಗೆ ಜೋಡಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿದ್ದು ಉತ್ತರ ಕರ್ನಾಟಕದ ಬಹುಭಾಗದ ಜನರು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಲು ಇದೇ ಘಾಟ್ ರಸ್ತೆಯನ್ನು ಬಳಸುತ್ತಾರೆ.
ಪಶ್ಚಿಮಘಟ್ಟದ ಅತ್ಯಂತ ಮನೋಹರವಾದ, ರುದ್ರರಮಣೀಯ ದೃಶ್ಯಗಳು ಇಲ್ಲಿ ಕಾಣಸಿಗುವುದರಿಂದ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ ಪ್ರಕೃತಿಯ ಸೌಂದರ್ಯ ವೀಕ್ಷಿಸುತ್ತಾರೆ. ಈ ಸಂದರ್ಭದಲ್ಲಿ ಗೊತ್ತಿಲ್ಲದ ಸ್ಥಳದಲ್ಲಿ ವಾಹನ ನಿಲ್ಲಿಸುವುದು ಸುರಕ್ಷಿತವಲ್ಲ. ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ಇಲ್ಲಿ ಸಂಚರಿಸುವವರು ಬಹಳ ಜಾಗರೂಕರಾಗಿರಬೇಕು. ಎಷ್ಟೋ ಮಂದಿ ಮೋಜಿಗೆಂದು ಬಂದು ಫಚೀತಿಗೊಳಗಾಗುವ ಘಟೆನೆಗಳು ಇಲ್ಲಿ ಪ್ರತಿನಿತ್ಯ ನಡೆಯುತ್ತಿರುತ್ತವೆ.
ವಿದೇಶ
Helped microchip-ನೆರವಾದ ಮೈಕ್ರೋಚಿಪ್ – ನಾಪತ್ತೆಯಾಗಿದ್ದ ನಾಯಿ 2 ಸಾವಿರ ಮೈಲು ದೂರದಲ್ಲಿ ಪತ್ತೆ! ಸಿನಿಮಾ ಕಥೆಯಂತಿದೆ ಪುನರ್ಮಿಲನದ ಸ್ಟೋರಿ
ವಾಷಿಂಗ್ಟನ್: ಶ್ವಾನಗಳನ್ನು ಸಾಕಿದವರು, ಅವು ದಿಢೀರ್ ಕಳೆದು ಹೋದರೆ ಮಕ್ಕಳನ್ನೇ ಕಳೆದುಕೊಂಡಷ್ಟು ದುಃಖಕ್ಕೆ ಒಳಗಾಗುತ್ತಾರೆ. ಸಾಕಿದ ನಾಯಿ ನಾಪತ್ತೆಯಾದಾಗ, ಅವುಗಳನ್ನು ಹುಡುಕಿ ಕೊಟ್ಟವರಿಗೆ ಲಕ್ಷಗಟ್ಟಲೆ ಹಣ ನೀಡುವುದಾಗಿ ಮಾಲೀಕರು ಜಾಹೀರಾತು ನೀಡಿದ ಹಲವಾರು ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಹೀಗೆ ಕಾಣೆಯಾದ ಶ್ವಾನಗಳು ತಮ್ಮ ಮಾಲೀಕರನ್ನು ಸೇರಿದ ‘ಶುಭಂ’ ಸುದ್ದಿಗಳೂ ಇವೆ.
ಆದರೆ ಮಾಲೀಕನಿಂದ ಮಾತ್ರವಲ್ಲದೆ, ತನ್ನ ಊರಿನಿಂದಲೇ ನಾಪತ್ತೆಯಾದ ಶ್ವಾನ ಮರಳಿ ಮಾಲೀಕನನ್ನು ಸೇರುವುದು ಸಾಧ್ಯವೇ? ಅದೂ ಸಾವಿರಾರು ಕಿಮೀ ದೂರ ಹೋಗಿರುವಾಗ? ಇಂತದ್ದೊಂದು ಅಚ್ಚರಿಯ ಘಟನೆ ಅಮೆರಿಕದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದ ಮನೆಯಿಂದ ಕಾಣೆಯಾಗಿದ್ದ ಮುದ್ದಿನ ನಾಯಿಯೊಂದು ಅಲ್ಲಿಂದ 2 ಸಾವಿರಕ್ಕೂ ಹೆಚ್ಚು ಮೈಲು ದೂರದಲ್ಲಿರುವ ಉಪನಗರ ಡೆಟ್ರಾಯಿಟ್ನಲ್ಲಿ ಪತ್ತೆಯಾಗಿದೆ. ನಾಟಕೀಯ ರೀತಿಯಲ್ಲಿ ಶ್ವಾನ ಮತ್ತು ಅದರ ಮಾಲೀಕರ ಪುನರ್ಮಿಲನ ನಡೆದಿದೆ. ಅದೂ ಸುಮಾರು ಎಂಟು ತಿಂಗಳ ಬಳಿಕ.
ಮಿಷ್ಕಾ ಎಂಬ ಹೆಸರಿನ ಟೆರೀಯರ್ ತಳಿಯ ನಾಯಿ ಕಳೆದ ವರ್ಷದ ಜುಲೈ ತಿಂಗಳಲ್ಲಿ ಕಣ್ಮರೆಯಾಗಿತ್ತು. ಮಧ್ಯ ಪಶ್ಚಿಮ ರಾಜ್ಯವಾದ ಮಿಚಿಗನ್ನ ಹಾರ್ಪರ್ ವುಡ್ಸ್ ಸಮೀಪ ಕಾಣಿಸಿತ್ತು. ನಿವಾಸಿಯೊಬ್ಬರು ಇದು ಬೀದಿ ನಾಯಿ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಅದನ್ನು ಕಾಪಾಡಿದ್ದ ಅಧಿಕಾರಿಗಳು, ಆಕೆಯನ್ನು ಪ್ರಾಣಿ ಆಶ್ರಯ ಕೇಂದ್ರಕ್ಕೆ ಕರೆದೊಯ್ದಿದ್ದರು.
ಮಿಷ್ಕಾಳನ್ನು ತಪಾಸಣೆ ನಡೆಸಿದ ಗ್ರಾಸ್ ಪಾಯಿಂಟ್ ಪ್ರಾಣಿ ದತ್ತು ಸಮಾಜದ (ಜಿಪಿಎಎಎಸ್) ಸಿಬ್ಬಂದಿ, ಆಕೆಯ ದೇಹದಲ್ಲಿ ಮೈಕ್ರೋಚಿಪ್ ಅಳವಡಿಸಿರುವುದನ್ನು ಗಮನಿಸಿದ್ದರು. ಇದರಿಂದ, ಆಕೆ 2,343 ಮೈಲು ದೂರದಲ್ಲಿರುವ ಸ್ಯಾನ್ ಡಿಯಾಗೋದಲ್ಲಿ ವಾಸವಿರುವ ವ್ಯಕ್ತಿಗಳಿಗೆ ಸೇರಿದವಳು ಎಂಬುದು ಪತ್ತೆಯಾಗಿತ್ತು. ಮೈಕ್ರೋಚಿಪ್ ಮಾಹಿತಿ ಆಧಾರದಲ್ಲಿ ಅವರು ಶ್ವಾನ ಮಾಲೀಕರನ್ನು ಸಂಪರ್ಕಿಸಿದ್ದರು. ಆದರೆ ಆಕೆ ಅಷ್ಟು ದೂರ ಪ್ರಯಾಣಿಸಿದ್ದು ಹೇಗೆ ಎನ್ನುವುದು ನಿಗೂಢವಾಗಿದೆ.
ಮಿಷ್ಕಾ ಕಾಣೆಯಾಗಿ ತಿಂಗಳುಗಳೇ ಕಳೆದಿದ್ದರಿಂದ ಅದರ ಮಾಲೀಕ ಮೆಹ್ರಾಡ್ ಹೌಮನ್ ಮತ್ತು ಅವರ ಕುಟುಂಬದವರು, ಆಕೆ ಮತ್ತೆ ಜೀವಂತವಾಗಿ ಸಿಗುತ್ತಾಳೆ ಎಂಬ ಆಸೆ ಬಿಟ್ಟಿದ್ದರು. ಮಿಷ್ಕಾ ಪತ್ತೆಯಾದಾಗ ಅವರು ಮಿನ್ನೆ ಪೊಲಿಸ್ ನಗರದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದರು ಎಂದು ಜಿಪಿಎಎಎಸ್ ತಿಳಿಸಿದೆ.
ಕ್ಯಾಲಿಫೋರ್ನಿಯಾದಿಂದ ಪ್ರಾಣಿ ಕೇಂದ್ರಕ್ಕಿಂತಲೂ ಮಿನ್ನೆಪೊಲಿಸ್ನಿಂದ ಅಂತರ ಕಡಿಮೆ. ಹಾಗಿದ್ದರೂ ಮಿಷ್ಕಾಳಿಗಾಗಿ ಹೌಮನ್ ಅವರ ಕುಟುಂಬ ಸುಮಾರು 10 ಗಂಟೆ ಕಾರು ಚಾಲನೆ ಮಾಡಿಕೊಂಡು ಬರಬೇಕಾಗಿತ್ತು.
ಸಿನಿಮಾ ಕಥೆಯಂತಿದೆ ಎಂದ ಕೇಂದ್ರ
“ಹಾಲಿವುಡ್ ಹೇಳಲು ಇಷ್ಟಡುವಂತಹ ಕಥೆ ಇದು” ಎಂದು ಯಾವ ಸಿನಿಮಾ ಕಥೆಗೂ ಮಿಷ್ಕಾಳ ಕಥೆ ಕಮ್ಮಿ ಇಲ್ಲ ಎಂಬಂತೆ ಜಿಪಿಎಎಎಸ್ ತನ್ನ ಫೇಸ್ಬುಕ್ ಖಾತೆಯಲ್ಲಿ ಬುಧವಾರ ತಿಳಿಸಿದೆ.
ಬಿಳಿ ಬಣ್ಣದ, ಮೈ ತುಂಬಾ ಹರಡಿರುವ ಕೂದಲಿನ ಮಿಷ್ಕಾಳ ಫೋಟೋ ಹಾಗೂ ವಿಡಿಯೋಗಳನ್ನು ಕೇಂದ್ರವು ಹಂಚಿಕೊಂಡಿದೆ. ತನ್ನ ಮಾಲೀಕರನ್ನು ಮತ್ತೆ ನೋಡಿದ ಖುಷಿಯಲ್ಲಿ ಆಕೆ ತನ್ನ ಬಾಲವನ್ನು ಆಡಿಸುತ್ತಾ ಸಂಭ್ರಮಿಸುವುದು ಕಾಣಿಸಿದೆ. “ನಾವೆಲ್ಲರೂ ಬಯಸಿದ್ದ, ಶುಭ ಅಂತ್ಯವಿದು” ಎಂದು ಜಿಎಎಎಸ್ ಬರೆದಿದೆ. ಪಶುವೈದ್ಯರೊಬ್ಬರು ಆರೋಗ್ಯ ತಪಾಸಣೆ ನಡೆಸಿದ ಬಳಿಕ ಮಿಷ್ಕಾಳನ್ನು ಕ್ಯಾಲಿಫೋರ್ನಿಯಾಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ಅದು ಹೇಳಿದೆ.
-
ಸಾಮಾಜಿಕ ಮಾಧ್ಯಮ21 hours ago
Hasana sex tape : ಚುನಾವಣೆ ಹೊಸ್ತಿಲಲ್ಲಿ ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್ ಡ್ರೈವ್ ಸೌಂಡ್ ! ಅಸಲಿಯ / ನಕಲಿಯ ತೀವ್ರ ಚರ್ಚೆ
-
ದಕ್ಷಿಣ ಕನ್ನಡ22 hours ago
Student harrased in bus ಉಪ್ಪಿನಂಗಡಿ: ಸ್ಲೀಪರ್ ಕೋಚ್ ಬಸ್ನಲ್ಲಿ ವಿದ್ಯಾರ್ಥಿನಿಗೆ ಜತೆ ಸಹ ಪ್ರಯಾಣಿಕನಿಂದ ಕಿರುಕುಳ – ಯುವತಿ ವ್ಯಗ್ರಗೊಳ್ಳುತ್ತಾಳೆ ಕಿಟಕಿಯಿಂದ ಹಾರಿ ಆರೋಪಿ ಪರಾರಿ – ಮುಂದೇನಾಯಿತು ?
-
ಬಿಗ್ ನ್ಯೂಸ್1 day ago
NOTAForSoujanyaCase : ಸೌಜನ್ಯ ಪ್ರಕರಣ : ಟ್ವಿಟರ್ ಟ್ರೆಂಡಿಂಗಲ್ಲಿ 3ನೇ ಸ್ಥಾನ ಪಡೆದ ನೋಟಾ ಅಭಿಯಾನ
-
ನಿಧನ ವಾರ್ತೆ20 hours ago
Bhagavata Subramanya Dhareshwara-ಹಾಡು ನಿಲ್ಲಿಸಿದ ಬಡಗುತಿಟ್ಟಿನ ಗಾನ ಕೋಗಿಲೆ – ಯಕ್ಷಗಾನದ ಹಿರಿಯ ಭಾಗವತ ಸುಬ್ರಮಣ್ಯ ಧಾರೇಶ್ವರ ಇನ್ನಿಲ್ಲ
-
ಅಪರಾಧ2 days ago
Online acquaintance-ಆನ್ ಲೈನ್ ಪರಿಚಿತ ಗೆಳೆಯ ಮಹಿಳೆಯ ಜೀವಾಂತ್ಯಗೊಳಿಸಿದ
-
ನಿಧನ ವಾರ್ತೆ2 days ago
Run over-ತಂದೆಯಿಂದಲೇ ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಪುಟ್ಟ ಕಂದಮ್ಮ ದುರ್ಮರಣ
-
ಮಂಗಳೂರು20 hours ago
Janardhana Poojary-ಹಿಂದುತ್ವದ ಅಮಲಿನಲ್ಲಿ ಹಿಂದುಳಿದ ವರ್ಗದ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮೇಲ್ವರ್ಗದವರು ಅಧಿಕಾರ ನಡೆಸುತ್ತಿದ್ದಾರೆ- ಇದಕ್ಕೆಲ್ಲ ತಿಲಾಂಜಲಿ ನೀಡುವ ಕೆಲಸ ಪದ್ಮರಾಜ್ ಆರ್ ಪೂಜಾರಿಯನ್ನು ಗೆಲ್ಲಿಸುವ ಮೂಲಕ ಆಗಬೇಕಿದೆ :ಜನಾರ್ದನ ಪೂಜಾರಿ
-
ದಕ್ಷಿಣ ಕನ್ನಡ2 days ago
ಬೆಲೆಯೆರಿಕೆ ಗಗನಕ್ಕೆರಿದ ಸಂದರ್ಭ ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಮೂಲಕ ಮಹಿಳೆಯರ ನೆರವಿಗೆ ನಿಂತಿದೆ : ಅನಿತಾ ಹೇಮನಾಥ ಶೆಟ್ಟಿ