Moral Policing ವಿಟ್ಲ: ಬಸ್ಸಿನಲ್ಲಿ ಹಿಂದೂ ವಿದ್ಯಾರ್ಥಿನಿ ಜತೆ ಮಾತನಾಡಿದನ್ನು ಆಕ್ಷೇಪಿಸಿ ಮುಸ್ಲಿಂ ವಿದ್ಯಾರ್ಥಿಗೆ ತಂಡವೊಂದು ಹಲ್ಲೆ ನಡೆಸಿರುವುದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಒಟ್ಟು 6 ಮಂದಿಯ ವಿರುದ್ದ ಜ 13 ರಂದು ಪ್ರಕರಣ ದಾಖಲಾಗಿದೆ.
ವೀರಕಂಬ ಗ್ರಾಮದ ಮಂಗಳಪದವು ನಿವಾಸಿ ಖಲಂದರ್ ಅಬ್ಬಾಸ್ ಅವರ ಪುತ್ರ ಮಹಮ್ಮದ್ ಶಾಕೀರ್ ದೂರು ನೀಡಿದಾತ. ಈತ ನೀಡಿದ ದೂರಿನಂತೆ ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್, ರೋಹಿತ್ ಹಾಗೂ ಇತರ 3 ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಕೀರ್ ಮಂಗಳೂರು ಬಲ್ಮಠ ಎಂಬಲ್ಲಿರುವ ಯೆನಪೋಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಜ 12 ರಂದು ಕಾಲೇಜು ಮುಗಿಸಿ ಕೆ.ಎಸ್,ಆರ್,ಟಿ,ಸಿ ಬಸ್ಸಿನಲ್ಲಿ ಮನೆಗೆ ಬರುತ್ತಿದ್ದಾಗ ಈತ ಕುಳಿತುಕೊಂಡಿದ್ದ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಚಾಕಲೇಟು ಬೇಕೆ ಎಂದು ಕೇಳಿದ್ದಾನೆ ಎನ್ನಲಾಗಿದೆ.
ಇದನ್ನು ಪ್ರಶ್ನಿಸಿ ವೀರಕಂಭ ಗ್ರಾಮದ ಕೆಲಿಂಜ ಎಂಬಲ್ಲಿಗೆ ಬಸ್ ತಲುಪಿದಾಗ ಬಸ್ಸಿಗೆ ಏಕಾಏಕಿಯಾಗಿ ಬಂದಆರೋಪಿಗಳಾದ ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್, ರೋಹಿತ್ ಹಾಗೂ ಇತರ 3 ಜನರು ಹಲ್ಲೆ ನಡೆಸಿದ್ದಾರೆ ಎಂದು ಶಾಕೀರ್ ಪೊಲೀಸರಿಗೆ ದೂರು ನೀಡಿದ್ದಾರೆ.