ಶಿವಮೊಗ್ಗ ಸ್ಫೋಟ ಮತ್ತು ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಗೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಹೇಳಿದೆ. ಮಂಗಳೂರಿನ ಹೀರಾ ಕಾಲೇಜು ಬಳಿಯ ಮಝೀನ್ ಅಬ್ದುಲ್ ರಹಮಾನ್ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದೇವನಾಯಕನಹಳ್ಳಿಯ ನದೀಮ್ ಅಹ್ಮದ್ ಕೆ ಅವರನ್ನು ಮಂಗಳವಾರ ಬಂಧಿಸಿರುವುದಾಗಿ ಎನ್ಐಎ ಮಾಹಿತಿ ನೀಡಿದೆ.
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಖ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ನಾಲ್ವರು ಆರೋಪಿಗಳನ್ನು ಎನ್ಐಎ ಇತ್ತೀಚೆಗಷ್ಟೆ ಬಂಧಿಸಿತ್ತು. ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ಮಜಿನ್ ಮತ್ತು ನದೀಮ್ನನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈ ಹಿಂದೆ ಬಂಧಿತ ಮಾಜ್ ಮುನೀರ್ ಮತ್ತು ಸೈಯ್ಯದ್ ಯಾಸೀನ್ ಅವರಿಂದ ಇವರು ನೇಮಕಗೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
‘ಇಸ್ಲಾಮಿಕ್ ಸ್ಟೇಟ್ನ ಚಟುವಟಿಕೆಗಳನ್ನು ಮುಂದುವರಿಸಲು ಆರೋಪಿಗಳನ್ನು ನೇಮಿಸಿಕೊಳ್ಳಲಾಗಿತ್ತು. ದೊಡ್ಡ ಪಿತೂರಿಯ ಭಾಗವಾಗಿ ವಿಧ್ವಂಸಕ ಅಥವಾ ಗಲಭೆ ಕೃತ್ಯಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು’ ಎಂದು ಎನ್ಐಎ ಹೇಳಿದೆ. ಶಿವಮೊಗ್ಗದ ತುಂಗಾ ತೀರದಲ್ಲಿನ ಪ್ರಾಯೋಗಿಕ ಸ್ಫೋಟದಲ್ಲಿ ಈ ತಂಡ ಭಾಗಿಯಾಗಿತ್ತು. ಕಳೆದ ವರ್ಷ ಆಗಸ್ಟ್ 15 ರಂದು ಸಾವರ್ಕರ್ ಅವರ ಭಾವಚಿತ್ರ ಇಟ್ಟಿದ್ದ ವಿಚಾರದಲ್ಲಿ ನಡೆದ ಗಲಭೆಯ ಹಿಂದೆಯೂ ಇವರ ಕೈವಾಡವಿತ್ತು ಎಂದು ತಿಳಿಸಿದೆ.
ಈ ಘಟನೆಯಲ್ಲಿ ವ್ಯಕ್ತಿಯೊಬ್ಬನಿಗೆ ಇರಿಯಲಾಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ಅವರ ಮೊಬೈಲ್ ಫೋನ್ಗಳನ್ನು ಪರಿಶೀಲಿಸಿದಾಗ, ಅವರಿಗೆ ಐಎಸ್ ನಂಟು ಇರುವುದು ಗೊತ್ತಾಗಿದೆ. ಕರ್ನಾಟಕ ಮತ್ತು ದೇಶದ ಇತರ ಭಾಗಗಳಲ್ಲಿ ಬೃಹತ್ ವಿಧ್ವಂಸಕ ಕೃತ್ಯಕ್ಕೆ ಈ ತಂಡ ಸಜ್ಜಾಗಿತ್ತು’ ಎಂದು ಎನ್ಐಎ ಮೂಲಗಳು ತಿಳಿಸಿವೆ.
NIA arrests another 2 terror operatives in connection with Shivamogga ISIS Conspiracy Case pic.twitter.com/NhrgTN4MVp
— NIA India (@NIA_India) January 11, 2023
ಕಾಂಗ್ರೆಸ್ ಕಚೇರಿ ಮೇಲೆ ಎನ್ಐಎ ದಾಳಿ
ತೀರ್ಥಹಳ್ಳಿ: ಮನೆ ಮೇಲೆ ಅಥವಾ ಅವರ ಮನೆ ಬಳಿಯಿರುವ ಕಚೇರಿ ಮೇಲೆ ಯಾವುದೇ ತನಿಖಾ ಸಂಸ್ಥೆ ದಾಳಿ ನಡೆದಿಲ್ಲ. ಇದು ಬಿಜೆಪಿಯ ಕಪೋಲ ಕಲ್ಪಿತ ಸುದ್ದಿ ಎಂಬುದಾಗಿ ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೊಪ್ಪುಗುಡ್ಡೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿರುವ ರಾಷ್ಟ್ರೀಯ ತನಿಖಾ ತಂಡ ( NIA) ಹಾಗೂ ಜಾರಿ ನಿರ್ದೇಶನಾಲಯದ ( ED) ಅಧಿಕಾರಿಗಳು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ಅವರನ್ನು ಕರೆಸಿ ಕಚೇರಿ ಬಾಡಿಗೆ ಕರಾರು ಪತ್ರದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಕಿಮ್ಮನೆ ರತ್ನಾಕರ್ ಅವರು ಮಾತ್ರ ತನ್ನ ಮನೆ ಮೇಲೆ ಅಥವಾ ಅವರ ಮನೆ ಬಳಿಯಿರುವ ಕಚೇರಿ ಮೇಲೆ ಯಾವುದೇ ದಾಳಿ ನಡೆದಿಲ್ಲ. ಇದು ಬಿಜೆಪಿಯ ಕಪೋಲಕಲ್ಪಿತ ಸುದ್ದಿ ಎಂದು ಆರೋಪಿಸಿದರು.
ಈ ಬಗ್ಗೆ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದಿನ ಬೆಳಗ್ಗೆ 9:00 ಗಂಟೆಗೆ ನಾನು ನನ್ನ ಮನೆಯ ಪಕ್ಕದಲ್ಲಿರುವ ಕಚೇರಿಯಲ್ಲಿ ಕುಳಿತಿದ್ದೆ .ಆಗ ಸೊಪ್ಪುಗುಡ್ಡೆಯಲ್ಲಿರುವ ಪಕ್ಷದ ಕಚೇರಿಯಿಂದ ನನಗೆ ದೂರವಾಣಿ ಕರೆ ಬಂತು. ಪಕ್ಷದ ಕಚೇರಿಗೆ ಸ್ವಲ್ಪ ಬರಬೇಕು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಕಾಯುತ್ತಿದ್ದಾರೆ ಅನ್ನುವ ಮಾಹಿತಿ ಬಂತು. ನಾನು ಹೋದೆ ಆಧಿಕಾರಿಗಳು ನನ್ನನ್ನ ಕೇಳಿದ್ದು ಇಷ್ಟೆ, “ಪಕ್ಷದ ಕಚೇರಿ ಯಾವಾಗಿಂದ ಬಾಡಿಗೆಗೆ ಪಡೆದುಕೊಂಡಿದ್ದೀರಿ.? ಯಾರಿಂದ ಪಡೆದುಕೊಂಡಿದ್ದೀರಿ..?” ಎಂದರು.
ಕಟ್ಟಡ ಮಾಲೀಕನಿಗೆ ಪಕ್ಷದೊಂದಿಗೆ ಸಂಬಂಧವಿಲ್ಲ
ನಾನು ಅವರಿಗೆ ಉತ್ತರಿಸಿ, 10 ಲಕ್ಷ ಹಣವನ್ನು ಠೇವಣಿ ನೀಡಿ 2015ರಲ್ಲಿ ಈ ಕಚೇರಿಯನ್ನು ಬಾಡಿಗೆ ಪಡೆದುಕೊಂಡಿದ್ದೆ. ಇದರ ಮಾಲೀಕರು ಆಸಿಂ ಅಬ್ದುಲ್ ಮಜೀಂ ಎಂಟು ವರ್ಷದ ಕರಾರಿಗೆ ಸಹಿ ಹಾಕಿ ಕೊಟ್ಟಿದ್ದರು. ಪ್ರತಿ ತಿಂಗಳು ಸಾವಿರ ರೂಪಾಯಿ ಬಾಡಿಗೆ ನೀಡುತ್ತಿದ್ದಿವಿ. ಈ ತರಹ ಪ್ರತಿ ತಿಂಗಳು 1000 ರೂಪಾಯಿಯನ್ನು ಡಿಸೆಂಬರ್ ತಿಂಗಳವರೆಗೂ ಕಟ್ಟಿಕೊಂಡು ಬಂದಿದ್ದೇವೆ. ಯಾವಾಗ ಬಾಡಿಗೆ ಕರಾರು ಮುಕ್ತಾಯವಾಗುತ್ತೋ ಅಥವಾ ಬೇಡ ಅನಿಸುತ್ತೋ ಆಗ ನಾವು ನೀಡಿದ್ದ ಠೇವಣಿ ಮೊತ್ತ 10 ಲಕ್ಷ ರೂಪಾಯಿಂದ ವಾಪಸ್ ನೀಡಿ ಬಿಲ್ಡಿಂಗ್ ಪಡೆದುಕೊಳ್ಳಬಹುದು ಎಂದು ಕರಾರಿನಲ್ಲಿತ್ತು. ಆಸಿಂ ಹಾಗೂ ನಮಗೆ ಇರುವ ಸಂಬಂಧ ಬಾಡಿಗೆ ಮತ್ತು ಬಾಡಿಗೆದಾರನ ಸಂಬಂಧವೇ ಹೊರತು ಬೇರೇನು ಇಲ್ಲ ಪಕ್ಷಕ್ಕೂ ಅದಕ್ಕೂ ಆ ಸಂಬಂಧವು ಇಲ್ಲ..!
ಮಾಧ್ಯಮಗಳಲ್ಲಿ ಪಕ್ಷದ ವಿಚಾರ, ನನ್ನ ವಿಚಾರ ಎಲ್ಲ ಮಾತನಾಡುತ್ತಿದ್ದಾರೆ. ಇದು ಬಿಜೆಪಿ ಕಪೋಲಕಲ್ಪಿತ. ಮನೆ ಮಾಲೀಕ ಅಥವಾ ಗೃಹ ಸಚಿವ ಆರಗ ಜ್ಞಾನೇಂದ್ರ ಗೆ ಏನಾದರೂ ಸಂಬಂಧ ಇದೆಯಾ ಗೊತ್ತಿಲ್ಲ. ಉಳಿದ ಮಾಹಿತಿ ಗೃಹ ಸಚಿವರ ಬಳಿಯೇ ಇದೆ. ತೀರ್ಥಹಳ್ಳಿಯಲ್ಲಿ ಕೋಮು ಗಲಭೆ ಸೃಷ್ಟಿಕರ್ತ ಅವರೇ ಆಗಿರೋದ್ರಿಂದ ಕೋಮುಗಲಭೆಯಲ್ಲಿ ಹಿಂದೆ ಅವರು ಆರೋಪಿಯೂ ಆಗಿದ್ದರಿಂದ ಈಗ ಮತ್ತೊಂದು ಏನಾದರೂ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮಗೂ ಆಸಿಂಗೂ ಇರುವ ಸಂಬಂಧ ಬಾಡಿಗೆದಾರ ಮತ್ತು ಮಾಲೀಕನಿಗೂ ಇರುವ ಸಂಬಂಧ ಅಷ್ಟೇ. ಬಿಟ್ಟರೆ ಬೇರೇನು ಇಲ್ಲ ಎಂದರು.
ನಮ್ಮ ಮನೆಯಲ್ಲಿ ಏನೂ ಸಿಗದು
ಇನ್ನು ಕಿಮ್ಮನೆ ಮನೆಯ ಮೇಲೆ ರೈಡ್ ಮಾಡಿದ್ದಾರೆ ಎಂಬ ವಿಚಾರ ಸುಳ್ಳು. ನಮ್ಮ ಮನೆಯ ಮೇಲೆ ರೈಡ್ ಮಾಡಿಲ್ಲ ನಮ್ಮನೆಯ ಮೇಲೆ ರೈಡ್ ಮಾಡಿದ್ದಿದ್ರೆ 10 ಸಾವಿರ ರೂಪಾಯಿ ಕೂಡ ಸಿಗುವುದಿಲ್ಲ. ಅವರೇ ಕೊಟ್ಟು ಹೋಗಬೇಕು ಅಷ್ಟೇ. ನಮ್ಮಿಂದ ತಗೊಂಡು ಹೋಗೋಕೆ ಏನು ಇಲ್ಲ. ಬೆಂಚು ಸೋಫಾ ಆ ತರಹದ ಏನಾದರೂ ವಸ್ತುಗಳನ್ನು ಎತ್ತಿಕೊಂಡು ಹೋಗಬೇಕಷ್ಟೆ.
ಮ್ಮನೆ ಸುಳ್ಳು ಸುದ್ದಿಯನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವು ದೃಶ್ಯ ಮಾಧ್ಯಮಗಳು ನಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಬಂದಿರೋದ್ರಿಂದ ಈತರಹ ಏನಾದ್ರೂ ಲಾಭ ಆಗುತ್ತಾ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯವರು ಇದ್ದಾರೆ. ಈಗ ಎಲ್ಲವನ್ನು ಕಳೆದುಕೊಂಡಿರುವ ಬಿಜೆಪಿ ಮಾನ ಮರ್ಯಾದೆಯನ್ನು ಕಳೆದುಕೊಂಡಿದೆ. ಇತರ ಜಾತಿ ಧರ್ಮದಲ್ಲಿ ಏನಾದ್ರೂ ಸಿಗುತ್ತಾ ಎಂಬ ಪ್ರಯತ್ನದಲ್ಲಿದ್ದಾರೆ. ಅವರಿಗೆ ಒಳ್ಳೆಯದಾಗಲಿ ನಾಡು ಶಾಂತಿಯಿಂದ ಇರಲಿ. ಕಾಂಗ್ರೆಸ್ಸಿಗೆ ಈ ಕುಟುಂಬಕ್ಕೂ ಹಾಗೂ ಅವರು ಕಲ್ಪಿಸುತ್ತಿರುವ ಸಂಬಂಧಕ್ಕೂ ಯಾವುದೇ ಹೋಲಿಕೆ ಇಲ್ಲ ಎಂದರು. ಇನ್ನು ತೀರ್ಥಹಳ್ಳಿಯಲ್ಲಿ ಯಾಕೆ ದಾಳಿಯಾಗಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ . ನಮ್ಮ ಕಚೇರಿಗೆ ಬಂದಿದ್ದು ಈ ವಿಷಯಕ್ಕೆ ಮಾತ್ರ ಎಂದರು.