ತಿರುವನಂತಪುರಂ: ಸ್ಥಳೀಯ ಹೋಟೆಲ್ನಲ್ಲಿ (Hotel) ಬಿರಿಯಾನಿ (Biriyani) ಆರ್ಡರ್ (Online Order) ಮಾಡಿ ಸೇವಿಸಿದ್ದ 20 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೃತ ಯುವತಿಯನ್ನು ಪೆರುಂಬಳದ (Perumbala) ಅಂಜು ಶ್ರೀಪಾರ್ವತಿ (Anju Sreeparvathy) ಎಂದು ಗುರುತಿಸಲಾಗಿದೆ. ಡಿಸೆಂಬರ್ 31 ರಂದು ಕಾಸರಗೋಡಿನ (Kasaragod) ರೊಮ್ಯಾನ್ಸಿಯಾ ಎಂಬ ರೆಸ್ಟೋರೆಂಟ್ನಿಂದ ಆನ್ಲೈನ್ (Online) ಮೂಲಕ ಕುಜಿಮಂತಿ (Kuzhimanthi) ಬಿರಿಯಾನಿಯನ್ನು ಆರ್ಡರ್ ಮಾಡಿ ತರಿಸಿಕೊಂಡು ಸೇವಿಸಿದ್ದರು.
ನಂತರ ಅಸ್ವಸ್ಥರಾದ ಯುವತಿಯನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಈ ಬಗ್ಗೆ ಯುವತಿಯ ಪೋಷಕರು (Parents) ಪೊಲೀಸರಿಗೆ (Police) ಸಹ ದೂರು ನೀಡಿದ್ದಾರೆ. ಆದರೆ ಶನಿವಾರ ಮುಂಜಾನೆ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದೀಗ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ :
ಮೊದಲಿಗೆ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕರ್ನಾಟಕದ ಮಂಗಳೂರಿನ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಕೊನೆಯುಸಿರೆಳೆದಿದ್ದಾರೆ.
ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ ಸಚಿವೆ ವೀಣಾ ಜಾರ್ಜ್:
ಮತ್ತೊಂದೆಡೆ ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಬಗ್ಗೆ ಪತ್ತನಂತಿಟ್ಟದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಘಟನೆ ಮತ್ತು ಯುವತಿಗೆ ನೀಡಿದ ಚಿಕಿತ್ಸೆಯ ಬಗ್ಗೆಯೂ ಡಿಎಂಒ ಪರಿಶೀಲಿಸುತ್ತಿದ್ದಾರೆ ಎಂದು ಜಾರ್ಜ್ ತಿಳಿಸಿದ್ದಾರೆ.
ಹೋಟೆಲ್ನ ಪರವಾನಗಿ ರದ್ದುಗೊಳಿಸಲು ಸೂಚನೆ:
ಇದೇ ವೇಳೆ ವಿಷಕಾರಿ ಆಹಾರ ಸೇವಿಸಿ ಯುವತಿ ಮೃತಪಟ್ಟಿರುವ ಆರೋಪ ಹಿನ್ನೆಲೆ ಹೋಟೆಲ್ನ ಪರವಾನಗಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ (ಎಫ್ಎಸ್ಎಸ್ಎ) ಅಡಿಯಲ್ಲಿ ರದ್ದುಗೊಳಿಸಲಾಗುವುದು ಎಂದಿದ್ದಾರೆ.
ಈ ಮುನ್ನ ಕಾಸರಗೋಡಿನ ಐಡಿಯಲ್ ಫುಡ್ ಪಾಯಿಂಟ್ ಎಂಬ ಉಪಾಹಾರ ಗೃಹದಲ್ಲಿ ಚಿಕನ್ ಷಾವರ್ಮಾ ತಿಂದ 16 ವರ್ಷದ ದೇವಾನಂದ ಎಂಬ ಬಾಲಕಿ ಸಾವನ್ನಪ್ಪಿದ್ದಳು ಮತ್ತು ಹಲವರು ಆಸ್ಪತ್ರೆಗೆ ದಾಖಲಾಗಿದ್ದರು.