ಕುಣಿಗಲ್ : ಹೆಜ್ಜೇನು ದಾಳಿಗೆ ಕೋಟ್ಯಂತರ ರೂ. ಬೆಲೆ ಬಾಳುವ ಐರ್ಲ್ಯಾಂಡ್ ಹಾಗೂ ಅಮೆರಿಕದ ಎರಡು ಗಂಡು ತಳಿ ಕುದುರೆ ದಾರುಣವಾಗಿ ಕೊನೆಯುಸಿರೆಳೆದಿರುವ ಘಟನೆ ಕುಣಿಗಲ್ ಸ್ಟಡ್ ಫಾರಂನಲ್ಲಿ (Kunigal Stud farm) ನಡೆದಿದೆ.
ಎಂದಿನಂತೆ ಬುಧವಾರ ಏರ್ ಸಫೋರ್ಟ್, ಸನಸ್ ಪರ್ ಅಕ್ಚಮ್ ಎಂಬ ಎರಡು ಕುದುರೆಗಳನ್ನು ಸ್ಟಾಲಿನ್ ಪ್ಯಾಡಕ್ಗೆ ಮೇಯಲು ಬಿಡಲಾಗಿತ್ತು, ಆದರೆ ಮಧ್ಯಾಹ್ನ ಸುಮಾರು ಒಂದು ಗಂಟೆ ಸಮಯದಲ್ಲಿ ದಿಢೀರನೇ ಸಾವಿರಾರು ಹೆಜ್ಜೇನುಗಳು ಎರಡು ಕುದುರೆಗಳ ಮೇಲೆ ಏಕಾ ಏಕಿ ದಾಳಿ ಮಾಡಿದವು, ಜೇನು ಹುಳುಗಳ ದಾಳಿಗೆ ಎರಡು ಕುದುರೆಗಳು ಕಿರಿಚಿಕೊಂಡು ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದವು ಇದನ್ನು ಗಮನಿಸಿದ ಇಲ್ಲಿನ ಕಾರ್ಮಿಕರು ವೈದ್ಯರಿಗೆ ಮಾಹಿತಿ ನೀಡಿದರು.
ತತ್ ಕ್ಷಣ ಘಟನೆ ಸ್ಥಳಕ್ಕೆ ತೆರಳಿದ ವೈದ್ಯರ ತಂಡ ದಾಳಿಯಲ್ಲಿ ಗಾಯಗೊಂಡ ಕುದುರೆಗಳಿಗೆ ಸ್ಟಡ್ ಫಾರಂ ನಲ್ಲಿ ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ 10 ಗಂಟೆ ವೇಳೆಯಲ್ಲಿ ಸನಸ್ ಪರ್ ಅಕ್ಚಮ್ ಕೊನೆಯುಸಿರೆಳೆದರೆ ಏರ್ ಸಫೋರ್ಟ್ ಕುದುರೇ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದೆ.
ಅಮೆರಿಕದ ಏರ್ ಸಫೋರ್ಟ್ ಕುದುರೆಯು ವರ್ಜಿನಿಯಾ ಡರ್ಬಿಯಲ್ಲಿ ಭಾಗಿಯಾಗಿದೆ, ಪಿಲ್ಗ್ರಮಾ ಸ್ಟೇಕ್ಸ್, ಟ್ರಾನ್ಸ್ಲೇನಿಯಾ ಸ್ಟೇಕ್ಸ್, ಎರಡನೇ ಯುನೈಟೆಡ್ ನೇಷನ್ಸ್ ಸ್ಟೇಕ್ಸ್, ಮೂರನೇ ಅಮೇರಿಕನ್ ಟರ್ಫ್ ಸ್ಟೇಕ್ಸ್, ಎರಡನೇ ಹಿಲ್ ಪ್ರಿನ್ಸ್ ಸ್ಟೇಕ್ಸ್ ರೇಸಿನಲ್ಲಿ ಜಯಗಳಿಸಿ ಕೋಟ್ಯಾಂತ ರೂ ಸಂಪಾದಿಸಿದೆ ಎನ್ನಲಾಗಿದೆ, ಐರಲ್ಯಾಂಡ್ ದೇಶದ ಹತ್ತು ವರ್ಷದ ಸನಸ್ ಪರ್ ಅಕ್ಚಮ್ ಕುದುರೆ ಐದು ಸ್ಟಾರ್ ಕುದುರೇ ರೇಸ್ನಲ್ಲಿ ಮೂರು ಭಾರಿ ಜಯಭೇರಿ ಭಾರಿಸಿ ಲಾಭ ತಂದು ಕೊಟ್ಟಿದೆ.
ಕುದುರೆ ತಳಿ ಉತ್ಪಾದನೆ: ಕುದುರೆ ರೇಸಿನಲ್ಲಿ ಉತ್ತಮ ಸಾಧನೆ ಮಾಡಿರುವ ಈ ಎರಡು ಕುದುರೆಗಳನ್ನು ಅಮೆರಿಕ ಹಾಗೂ ಐರ್ಲ್ಯಾಂಡ್ ದೇಶಗಳಿಂದ ಕಳೆದ ಆರು ವರ್ಷದ ಹಿಂದೆ ಯುಆರ್ಬಿಬಿ ತಲಾ ಒಂದು ಕೋಟಿ ರೂಗಳಂತೆ ಎರಡು ಕೋಟಿ ರೂಗಳಿಗೆ ಖರೀದಿಸಿ ಈ ಬೀಜದ ತಳಿಯ ಕುದುರೆಗಳಿಂದ ಕುದುರೆ ಮರಿ ತಳಿಗಳನ್ನು ಉತ್ಪಾದಿಸಲಾಗುತ್ತಿತು ಎನ್ನಲಾಗಿದೆ.ಈ ಕುದುರೆಗಳು ನೂರಾರು ಕುದುರೆ ಮರಿಗಳಿಗೆ ಜನ್ಮ ನೀಡಿವೆ, ಈ ಕುದುರೆ ಮರಿಗಳನ್ನು ಬೇರೆ ಬೇರೆ ರಾಜ್ಯಗಳು ಹಾಗೂ ದೇಶಗಳಿಂದ ಬಂದು ಲಕ್ಷಾಂತರ ರೂಗೆ ಖರೀದಿ ಮಾಡಿ ರೇಸ್ಗೆ ಬಳಸಿಕೊಳ್ಳುತ್ತಿದ್ದಾರೆ.
ಸ್ಟಡ್ಫಾರಂಗೆ ಅಘಾತ: ಸರ್ಕಾರವು 30 ವರ್ಷಗಳ ಅವಧಿಗೆ ಯುಆರ್ಬಿ’ ಬಿಗೆ ಗುತ್ತಿಗೆ ನೀಡಿತ್ತು. ಈ ಗುತ್ತಿಗೆ ಅವಧಿ ಕಳೆದ ಸೆಪ್ಟಂಬರ್ಗೆ ಮುಗಿದಿತ್ತಾದರೂ ಮತ್ತೆ ಯುಆರ್ಬಿಬಿ ಸ್ವಲ್ಪ ದಿವಸ ಕಾಲವಕಾಶ ತೆಗೆದುಕೊಂಡಿತ್ತು. ಇದೇ ವೇಳೆ ಎರಡು ಬೀಜದ ತಳಿ ಕುದುರೆಗಳು ಹೆಜ್ಜೇನು ದಾಳಿಗೆ ತುತ್ತಾಗಿದ್ದು ಸ್ಟಡ್ ಫಾರಂಗೆ ಏಕ ಕಾಲದಲ್ಲಿ ಎರಡು ಅಘಾತಗಳು ಉಂಟಾಗಿದೆ.
ಕೇಂದ್ರ ವಹಿಸಿಕೊಳ್ಳಬೇಕು: ಸಂಸದ – ಖಾಸಗಿಯವರ ಗುತ್ತಿಗೆ ಅವಧಿ ಮುಗಿದಿರುವ ಕುಣಿಗಲ್ ಸ್ಟಡ್ ಫಾರ್ಮ್ ಅಭಿವೃದ್ಧಿಯ ಹೊಣೆಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಎಸ್ .ಪಿ.ಮುದ್ದಹನುಮೇಗೌಡ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿದ ಎಸ್ಪಿಎಂ, ಕುಣಿಗಲ್ ಸ್ಟಡ್ ಫಾರ್ಮ್ ವಿಶ್ವವಿಖ್ಯಾತ ಕುದುರೆ ಸಂತಾನೋತ್ಪತ್ತಿ ಕೇಂದ್ರವಾಗಿದೆ. 421 ಎಕರೆ ಪ್ರದೇಶದಲ್ಲಿರುವ ಸ್ಟಡ್ ಫಾರ್ಮ್ನ ನಿರ್ವಹಣೆಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಪ್ರಸ್ತಾವನೆ ಸಲ್ಲಿಸಲು ಮನವಿ ಮಾಡಿದರು.
ಟಿಪ್ಪು ಸ್ಥಾಪಿಸಿದ ಕುದುರೆ ಸಂತಾನೋತ್ಪತ್ತಿ ಕೇಂದ್ರ: 1790 ರ ದಶಕದಲ್ಲಿ, ಬೆಂಗಳೂರು ನಗರದಿಂದ ಸುಮಾರು 72 ಕಿ.ಮೀ. ದೂರದಲ್ಲಿ, ಟಿಪ್ಪು ಸುಲ್ತಾನ್ ತನ್ನದೇ ಆದ ಕುದುರೆ ಸಂತಾನೋತ್ಪತ್ತಿ ಕೇಂದ್ರವನ್ನು ಸ್ಥಾಪಿಸಿದ ಎನ್ನಲಾಗಿದ. ಇಂದು, ಆ ಮೂಲ ಸಂತಾನೋತ್ಪತ್ತಿ ಕೇಂದ್ರವನ್ನು ಕುಣಿಗಲ್ ಸ್ಟಡ್ ಫಾರ್ಮ್ ಆಗಿ ವಿಸ್ತರಿಸಲಾಗಿದೆ. ಇದು ಆಗ್ನೇಯ ಏಷ್ಯಾದ ಅತಿದೊಡ್ಡ ಮತ್ತು ದೇಶದ ಟಾಪ್ ಐದು ಹಾರ್ಸ್ ಫಾರ್ಮ್ ಗಳಲ್ಲಿ ಒಂದಾಗಿದೆ.
ಇಲ್ಲಿನ ಮಣ್ಣಿನ ಸತ್ವ ವಿದೇಶದ ಕುದುರೆಗಳು ಫಾರ್ಮ್ ಹೌಸ್ನಲ್ಲಿ ಬಹಳಷ್ಟು ಆರೋಗ್ಯಾಪೂರ್ಣವಾಗಿ ಬೆಳೆಯುತ್ತದೆ. ಇಂದಿನವರೆಗೆ ಇಲ್ಲಿ ಕುದುರೆಗಳು ಸಾವನ್ನಪ್ಪಿದ ಘಟನೆ ನಡೆದಿರಲಿಲ್ಲ.
ಕುಣಿಗಲ್ ಸ್ಟಡ್ ಫಾರ್ಮ್ ಎಂದೇ ಜನಪ್ರಿಯವಾಗಿರುವ ಇದನ್ನು 1992 ರಲ್ಲಿ ಕರ್ನಾಟಕ ಸರ್ಕಾರವು ಕೈಗಾರಿಕೋದ್ಯಮಿ ವಿಜಯ್ ಮಲ್ಯ ಅವರ ರೇಸ್ ಹಾರ್ಸ್ ವಿಭಾಗಕ್ಕೆ ಗುತ್ತಿಗೆ ನೀಡಿದಾಗ, ಈ ಫಾರ್ಮ್ ಅನ್ನು ಯುನೈಟೆಡ್ ರೇಸಿಂಗ್ ಮತ್ತು ಬ್ಲಡ್ಸ್ಟಾಕ್ ಬ್ರೀಡರ್ಸ್ ಅಥವಾ ಯುಆರ್ಬಿಬಿ ಎಂದು ಹೆಸರಿಸಲಾಯಿತು.