ಮಂಗಳೂರು: ಹಿಂದೂತ್ವವಾದಿ ಸಂಘಟನೆಗಳ ತೀವ್ರ ವಿರೋಧದ ಬಳಿಕವು ಸುಳ್ಯದ ಇತಿಹಾಸ ಪ್ರಸಿದ್ದ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಸಂತೆ ಅಂಗಡಿ ನಡೆಸಲು ಅನ್ಯ ಮತೀಯರಿಗೆ ಸೇರಿದಂತೆ ಎಲ್ಲ ಧರ್ಮಿಯರಿಗೆ ಮುಕ್ತ ಅವಕಾಶ ನೀಡುವ ಬಗ್ಗೆ ಜ 2 ರಂದು ನಡೆಯುವ ದೇವಸ್ಥಾನದ ಪೂರ್ವ ಭಾವಿ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಜೀರ್ಣೋದ್ಧಾರ ಸಮಿತಿಯವರು ಕೈ ಗೊಂಡ ಈ ನಿರ್ಣಯವನ್ನು ರದ್ದುಗೊಳಿಸಿ ಕೇವಲ ಹಿಂದೂ ಧರ್ಮಿಯರಿಗೆ ಮಾತ್ರ ಸಂತೆ ಏಲಂ ನಡೆಸಲು ಅವಕಾಶ ನೀಡಬೇಕೆಂದು ಸುಳ್ಯ ತಾಲೂಕು ಹಿಂದೂ ರಕ್ಷಣಾ ವೇದಿಕೆಯ ಕಾರ್ಯಕರ್ತರು ದೇವಸ್ಥಾನದ ಆಡಳಿತ ಸಮಿತಿಗೆ ಜ.4 ರಂದು ಮನವಿ ಸಲ್ಲಿಸಿದರು. ಅಲ್ಲದೇ ಮಂಗಳೂರು ವಿಭಾಗದ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ, ಸುಳ್ಯ ತಹಶೀಲ್ದಾರ್ ರವರಿಗೆ, ಸುಳ್ಯ ಪೊಲೀಸ್ ಇನ್ಸ್ ಪೆಕ್ಟರ್ ಗೆ, ಹಾಗೂ ಎಸೈಯವರಿಗೂ ಮನವಿ ಸಲ್ಲಿಸಿದ್ದಾರೆ . ಜ 6 ರಂದು ಸಂತೆ ಏಲಂ ನಡೆಯಲಿದ್ದು, ಅದಕ್ಕೂ ಮೊದಲು ಈ ಹಿಂದಿನ ನಿರ್ಣಯವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ಇಂದು (ಜ 4 ರಂದು ) ಸಂಜೆ 6 ಗಂಟೆಗೆ ದೇವಸ್ಥಾನದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಡಾ| ಕೆ. ವಿ. ಚಿದಾನಂದರವರ ನೇತ್ರತ್ವದಲ್ಲಿ ಚೆನ್ನಕೇಶವ ದೇವಸ್ಥಾನದಲ್ಲಿಸಭೆ ನಡೆಯಿತು. ಸಭೆಯಲ್ಲಿ ಹಿಂದೂ ಸಂಘಟನೆಗಳ ಮನವಿಗೆ ಸ್ಪಂದಿಸಿ ಕೇವಲ ಹಿಂದೂ ಧರ್ಮಿಯರಿಗೆ ಮಾತ್ರ ಸಂತೆ ಏಲಂ ನಡೆಸಲು ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ. ಈ ಸಂದರ್ಭ ದೇವಾಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ,ನಿವೃತ್ತ ಬಿಡಿಒ ಎಂ.ಮೀನಾ ಕ್ಷಿ ಗೌಡ, ಕೃಪಾಶಂಕರ ತುದಿಯಡ್ಕ ಮತ್ತು ಹಿಂದೂ ಸಂಘಟನೆ ಪ್ರಮುಖರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಏನಿದು ವಿವಾದ ?
ಕರಾವಳಿ ಭಾಗದಲ್ಲಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಬೇಕೆಂದು ಹಿಂದುತ್ವ ಪರ ಸಂಘಟನೆಗಳು ಕಳೆದ ಕೆಲ ವರ್ಷಗಳಿಂದ ಒತ್ತಾಯಿಸುತ್ತಿವೆ. ಈ ಸಂಬಂಧ ಈಗಾಗಲೇ ಸಂಘಪರಿವಾರದ ಹಿಡಿತವಿರುವ ಪ್ರದೇಶಗಳಲ್ಲಿ ಅದು ಜಾರಿಯೂ ಆಗಿದೆ. ಈಗಾಗಲೇ ಹಿಂದುತ್ವಪರ ಸಂಘಟನೆಗಳು ಕರಾವಳಿಯುದ್ದಕ್ಕೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಹೇರಲು ಪ್ರಯತ್ನಪಟ್ಟಿದ್ದು ಹಲವೆಡೆ ಈ ಪ್ರಯತ್ನಕ್ಕೆ ಊರವರ ವಿರೋಧದಿಂದ ಹಿನ್ನಡೆಯೂ ಆಗಿದೆ ಬಹುತೇಕ ಕಡೆ ಸಫಲರೂ ಆಗಿದ್ದಾರೆ. ಇದರ ಮುಂದುವರಿದ ಭಾಗವಾಗಿ ಸುಳ್ಯದ ಚೆನ್ನಕೇಶವ ದೇಗುಲದಲ್ಲೂ ಅನ್ಯ ಮತೀಯರ ವ್ಯಾಪಾರ ನಿಷೇಧಕ್ಕೆ ಯತ್ನಿಸಿದ್ದು , ಆದರೇ ಇಲ್ಲಿ ಹಿಂದುತ್ವ ಪರ ಸಂಘಟನೆಗಳಿಗೆ ಜ 2 ರ ಸಭೆಯ ನಿರ್ಣಯದಿಂದ ತೀವ್ರ ಹಿನ್ನಡೆಯುಂಟಾಗಿತ್ತು.
ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ಜ.03 ರಿಂದ ಜ.12 ರವರೆಗೆ ನಡೆಯಲಿದ್ದು, ಈ ಹಿಂದೆ ಯಾವ ರೀತಿ ಸಂತೆ ಏಲಂ ಆಗುತ್ತಿತ್ತೋ ಹಾಗೆಯೇ ಮುಂದುವರಿಸಿ ಎಲ್ಲರಿಗೂ ಮುಕ್ತ ಅವಕಾಶ ನೀಡಲು ಜಾತ್ರೋತ್ಸವದ ಪೂರ್ವಬಾವಿ ಸಭೆಯಲ್ಲಿ ನಿರ್ಣಯಿಸಲಾಯಿತು. ಜಾತ್ರೋತ್ಸವದ ಬಗ್ಗೆ ಚರ್ಚಿಸಲು ಜ.2 ರಂದು ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು.
ಅಂಗಡಿಗಳ ಏಲಂ ಬಗ್ಗೆ ದಾಮೋದರ ಮಂಚಿ ಮತ್ತು ರವಿ ಮತ್ತಿತರರು ವಿಷಯ ಪ್ರಸ್ತಾಪಿಸಿದರು. ಅದಕ್ಕೆ ಉತ್ತರಿಸಿದ ಕೃಪಾಶಂಕರ ಅಂಗಡಿಗಳ ಏಲಂ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಮಾಡಿದ್ದೇವೆ ಎಂದು ಹೇಳಿದರು. ಆಗ ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ್, ಜಯಪ್ರಕಾಶ್ ರೈ, ಗೋಕುಲದಾಸ್ ಮತ್ತಿತರರು ಇಲಾಖೆಯ ನಿಯಮದಲ್ಲಿ ಏನೇನಿದೆ ಓದಿ ಹೇಳಿ ಎಂದು ಹೇಳಿದರು. ಬಳಿಕ ಈ ಬಗ್ಗೆ ಚರ್ಚೆ ನಡೆದು ಈ ಹಿಂದೆ ಇದ್ದ ರೀತಿಯಲ್ಲಿ ಏಲಂ ಮಾಡಲು ನಿರ್ಧರಿಸಲಾಯಿತು.
ಇದಕ್ಕೂ ಮೊದಲು ಜಾತ್ರೋತ್ಸವದಲ್ಲಿ ಸಂತೆ ವ್ಯಾಪಾರಕ್ಕೆ ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣಾ ವೇದಿಕೆ ದೇವಸ್ಥಾನದ ಆಡಳಿತ ಸಮಿತಿಗೆ ಮನವಿ ಮಾಡಿತ್ತು. ಆದರೆ ಇವರ ಬೇಡಿಕೆಗೆ ಸೊಪ್ಪು ಹಾಕದ ದೇಗುಲದ ಆಡಳಿತ ಮಂಡಳಿ ಸಭೆಯಲ್ಲಿ ಸಂತೆ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಿರುವುದರಿಂದ ಹಿಂದುತ್ವಪರ ಸಂಘಟನೆಯ ಬೇಡಿಕೆಯನ್ನು ದೇವಸ್ಥಾನ ತಿರಸ್ಕರಿಸಿತ್ತು. ಅದರೆ ಹಿಂದೂ ಜಾಗರಣ ವೇದಿಕೆಯು, ದೇಗುಲದ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಣಯದ ಬಗ್ಗೆ ವಿರೋಧ ವ್ಯಕ್ತಪಡಿಸಿ, ಅನ್ಯಧರ್ಮಿಯರಿಗೆ ವ್ಯಾಪಾರ ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದೆ.