ಉಪ್ಪಿನಂಗಡಿ, ಜ.1: ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಅನುಮತಿ ರಹಿತವಾಗಿ ಅಳವಡಿಸಿದ ಬ್ಯಾನರನ್ನು ತೆಗೆಯಲು ಹೋದ ಪಂಚಾಯತ್ ಪಿಡಿಒ ಅವರ ಕರ್ತವ್ಯ ನಿರ್ವಹಣೆಗೆ ಗ್ರಾಮ ಪಂಚಾಯತ್ ಸದಸ್ಯರೋರ್ವರು ತಡೆಯೊಡ್ಡಿ, ಹಲ್ಲೆಗೆ ಯತ್ನಿಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದರು .
ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನೆಡ್ಚಿಲ್ ಎಂಬಲ್ಲಿ ಪಂದ್ಯಾಟವೊಂದಕ್ಕೆ ಸಂಬಂಧಿಸಿ ಹಾಕಲಾಗಿದ್ದ ಬ್ಯಾನರ್ ಅನ್ನು ಅನುಮತಿ ಇಲ್ಲದೇ ಹಾಕಲಾಗಿದೆ ಎಂಬ ಕಾರಣಕ್ಕೆ ಪಿಡಿಒ ಸೂಚನೆಯಂತೆ ತೆರವು ಮಾಡಲು ಮುಂದಾದಾಗ ಸ್ಥಳೀಯರು ಪ್ರತಿಭಟಿಸಿದ್ದಾರೆ.ಈ ವೇಳೆ ಪಂಚಾಯತ್ ಸಿಬ್ಬಂದಿ ನೀಡಿದ ಮಾಹಿತಿಯಾಧಾರದಲ್ಲಿ ಸ್ವತಃ ತಾವೇ ಸ್ಥಳಕ್ಕೆ ಭೇಟಿ ನೀಡಿದ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಬ್ಯಾನರ್ ನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಆ ವೇಳೆ ಪಂಚಾಯತ್ ಸದಸ್ಯರಾದ ಸುರೇಶ್ ಅತ್ರಮಜಲು, ಬಿಜೆಪಿ ಕಾರ್ಯಕರ್ತ ರಮೆಶ್ ಭಂಡಾರಿ, ಹಾಗೂ ರೋಹಿತ್ ಮತ್ತಿತರರು ಬ್ಯಾನರ್ ತೆಗೆಯದಂತೆ ತಡೆಯೊಡ್ಡಿ ಪಿಡಿಒ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಸರಕಾರಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದಾರೆಂದು ಆಪಾದಿಸಿ ದೂರು ಸಲ್ಲಿಕೆಯಾಗಿದೆ. ಈ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ.
ಪ್ರತಿ ದೂರು:
ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯ ಸುರೇಶ್ ಅತ್ರಮಜಲು ಪೊಲೀಸರಿಗೆ ದೂರು ನೀಡಿ, ಜನಪ್ರತಿನಿಧಿಯಾಗಿರುವ ತನ್ನ ಮೇಲೆ ಪಂಚಾಯತ್ ಅಧ್ಯಕ್ಷರ ಒಪ್ಪಿಗೆ ಪಡೆದು ಅನಾರೋಗ್ಯಕ್ಕೀಡಾದ ಮಗುವಿನ ಸಹಾಯಾರ್ಥವಾಗಿ ನಡೆಸುವ ಕಾರ್ಯಕ್ರಮದ ಬಗ್ಗೆ ಹಾಕಲಾದ ಬ್ಯಾನರ್ ನ್ನು ಬಲವಂತವಾಗಿ ತೆಗೆಯಲು ಮುಂದಾದ ಗ್ರಾಮ ಪಂಚಾಯತ್ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರು ಸಾರ್ವಜನಿಕವಾಗಿ ನನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ದೂರನ್ನು ಸ್ವೀಕರಿಸಿರುವ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿಯನ್ನು ಕೋರಿದ್ದಾರೆ.
ಗ್ರಾ. ಪಂ ಅಧ್ಯಕೆ ಹೇಳಿದ್ದೇನು ?
ಪ್ರಕರಣದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯರವರು ಅನಾರೋಗ್ಯಕ್ಕೀಡಾದ ಬಡ ಮಗುವಿಗೆ ಧನ ಸಹಾಯ ಸಂಗ್ರಹಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಕ್ರೀಡಾ ಕಾರ್ಯಕ್ರಮಕ್ಕೆ ಮಾನವೀಯ ನೆಲೆಯಲ್ಲಿ ಶುಲ್ಕ ವಿಧಿಸದೆ ಬ್ಯಾನರ್ ಅಳವಡಿಸಲು ಒಪ್ಪಿಗೆ ಸೂಚಿಸಿದ್ದೆ. ಬ್ಯಾನರ್ ತೆರವುಗೊಳಿಸುವ ಕಾರ್ಯಾಚರಣೆಯ ಬಗ್ಗೆ ಪಂಚಾಯತ್ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ನನ್ನ ಗಮನಕ್ಕೆ ತಂದಿರಲಿಲ್ಲ. ನನ್ನ ಗಮನಕ್ಕೆ ತಂದಿರುತ್ತಿದ್ದರೆ ನಾನು ಒಪ್ಪಿಗೆ ನೀಡಿರುವ ವಿಚಾರವನ್ನು ತಿಳಿಸುತ್ತಿದ್ದೆ. ಉಪ್ಪಿನಂಗಡಿಯ ಕಂಬ ಕಂಬಗಳಲ್ಲಿ ಅನಧಿಕೃತವಾಗಿ ಬ್ಯಾನರ್ ಗಳು ರಾರಾಜಿಸುತ್ತಿರುವಾಗ ಓರ್ವ ಬಡ ರೋಗಿಗೆ ಧನ ಸಹಾಯ ಸಂಗ್ರಹಿಸಲು ಆಯೋಜಿಸಿದ ಕಾರ್ಯಕ್ರಮದ ಬ್ಯಾನರ್ ತೆರವುಗೊಳಿಸಲು ಮು೦ದಾದ ಕೃತ್ಯ ಸರಿಯಲ್ಲ. ಶುಲ್ಕವನ್ನು ಪಾವತಿಸಲೇ ಬೇಕೆನ್ನುವುದಾಗಿದ್ದಲ್ಲಿ ನಾನೇ ಅದರ ಶುಲ್ಕವನ್ನು ಪಾವತಿಸುತ್ತಿದ್ದೆ ಎಂದು ತಿಳಿಸಿದ್ದಾರೆ.
ವರ್ಗಾವಣೆ ಆದೇಶ ರದ್ದು ಮಾಡಿಸಿ ವಾರದ ಹಿಂದೆಯಷ್ಟೆ ಕರ್ತವ್ಯಕ್ಕೆ ಹಾಜರಾಗಿದ್ದರು:
ಈ ಹಿಂದೆ ಉಪ್ಪಿನಂಗಡಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದ್ದ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರನ್ನು ಅ 21 2022 ರಂದು ಸರಕಾರ ವರ್ಗಾವಣೆಗೊಳಿಸಿತ್ತು . ಇದರ ವಿರುದ್ದ ಅವರು ಕರ್ನಾಟಕ ನ್ಯಾಯ ಮಂಡಳಿ ಮೊರೆ ಹೋಗಿದ್ದರು. ನ್ಯಾಯ ಮಂಡಳಿಯೂ ವಿಲ್ಫ್ರೆಡ್ ಅವರನ್ನು ಉಪ್ಪಿನಂಗಡಿ ಪಡಿಒ ಆಗಿ ಮರು ಸ್ಥಾಪಿಸಿ ಆದೇಶಿಸಿತ್ತು .ಅದರಂತೆ ಅವರು ಡಿ 27 ರಂದು ಮರಳಿ ಉಪ್ಪಿನಂಗಡಿ ಪಿಡಿಒ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದಾಗಿ ವಾರದೊಳಗೆ ವಿವಾದವೊಂದನ್ನು ಮೈಮೆಲೆ ಎಳೆದುಕೊಂಡಿದ್ದಾರೆ