ದಕ್ಷಿಣ ಕನ್ನಡ: ಜಿಲ್ಲೆಯ ಸುಳ್ಯದಲ್ಲಿರುವ ಕೆ.ವಿ.ಜಿ ಡೆಂಟಲ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ವಿಚಾರವಾಗಿ ಪರಿಶಿಷ್ಟ ಜಾತಿಯ ಡೆಂಟಲ್ ವಿದ್ಯಾರ್ಥಿನಿಗೆ ರ್ಯಾಗಿಂಗ್ (Ragging) ಮಾಡಿ ಮಾರಣಾಂತಿಕ ಹಲ್ಲೆ ಮಾಡಿ , ಜಾತಿ ನಿಂದನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸ್ ದೂರು ನೀಡಿದ್ದು, ಕೇರಳ ಮೂಲದ ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರು ಮೂಲದ ಡಾ.ಪಲ್ಲವಿ ಡೆಂಟಲ್ ವಿದ್ಯಾರ್ಥಿನಿಯಾಗಿದ್ದು, ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಡಾ.ಪಲ್ಲವಿ ರ್ಯಾಂಕ್ ಹೋಲ್ಡರ್ ಆಗಿದ್ದಳು. ಹೀಗಾಗಿ ಪರಿಶಿಷ್ಟ ಜಾತಿ ಮೆರಿಟ್ನಲ್ಲಿ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದರು. ಇದೇ ವಿಚಾರವಾಗಿ ಕೇರಳ ಮೂಲದ ವಿದ್ಯಾರ್ಥಿಗಳಾದ ಡಾ.ವಿಶಾಕ್, ಡಾ.ಐಶ್ವರ್ಯ ಆರ್, ಡಾ.ಆಲ್ಫಾ ಮೇರಿ ಮ್ಯಾಥ್ಯ, ಡಾ.ಡೆನೆಲ್ ಸೆಬಾಸ್ಟಿನ್, ಡಾ.ರಿಷಿಕೇಶ್ ಕಿರುಕುಳ ನೀಡುತ್ತಿದ್ದರು.
ಡಿ. 21ರಂದು ನಾನು ಮತ್ತು ಅಣ್ಣ ಊಟ ಮುಗಿಸಿ ವಾಪಸ್ ಬರುತ್ತಿದ್ದಾಗ ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾರೆ. ಈ ವೇಳೆ ಅಣ್ಣ ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನಾವು ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ವಿಭಾಗದ ಎಚ್ಒಡಿಗೆ ಮಾಹಿತಿ ನೀಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿ ಪಲ್ಲವಿ ಹೇಳಿಕೊಂಡಿದ್ದಾರೆ.
ನನ್ನ ಮೇಲೆ ಹಲ್ಲೆ ನಡೆದ ನಂತರ ಪೊಲೀಸರಿಗೆ ಹಾಗೂ ಕಾಲೇಜಿನ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದೇವೆ. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದೆವು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಾದೆವು. ಇಷ್ಟಾದರೂ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ದ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿನಿ ಪಲ್ಲವಿ ತಿಳಿಸಿದ್ದಾರೆ.
ರ್ಯಾಗಿಂಗ್ ಮಾಡಿ ಕಿರುಕುಳ ಮಾನಸಿಕ ಖಿನ್ನತೆಗೆ ಒಳಗಾಗಿರುವ ವಿದ್ಯಾರ್ಥಿನಿ ಪ್ರಸ್ತುತ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿ ಪಲ್ಲವಿಯ ಬಲ ಕಿವಿ 62% ಕಿವುಡು, ಮೂತ್ರದಲ್ಲಿ ರಕ್ತಸ್ರಾವ ಹಾಗೂ ಬಲಕೈ ಸ್ವಾಧೀನ ಕಳೆದುಕೊಂಡಿದೆ ಎಂದು ವೈದ್ಯರು ಹೇಳಿರುವುದು ವರದಿಯಾಗಿದೆ.
ಘಟನೆಯ ಬಗ್ಗೆ ಪಲ್ಲವಿ, ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ವಿಚಾರವಾಗಿ ಡಾ.ವಿಸಾಕ್ ಜಿ ಪನಿಕರ್ ಎಂಬಾತ ಪ್ರತಿದೂರು ದಾಖಲಿಸಿದ್ದಾನೆ. ಸದ್ಯ ಡಾ.ಪಲ್ಲವಿ, ಡಾ.ಹನೀಶ್, ಪಲ್ಲವಿ ಅಣ್ಣ ಮತ್ತು ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ. ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಎರಡು ಕಡೆಯ ದೂರು ಪಡೆದು ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಧ್ಯಮಗಳು ಹಾಗೂ ಪತ್ರಿಕಾ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಕೆವಿಜಿ ಡೆಂಟಲ್ ಕಾಲೇಜ್ ಪ್ರಕಟಣೆಯಲ್ಲಿ ತಿಳಿಸಿದೆ.