ಬಿಗ್ ನ್ಯೂಸ್
Heart Attack : ಹೃದಯಘಾತಕ್ಕೆ ತುತ್ತಾಗಿ ರಂಗಸ್ಥಳದಿಂದ ಕೆಳಗೆ ಕುಸಿದು ಬಿದ್ದು ಪ್ರಸಿದ್ದ ಯಕ್ಷಗಾನ ಪಾತ್ರದಾರಿ ಮೃತ್ಯು
ಮಂಗಳೂರು: ಡಿ 23 : ರಂಗಸ್ಥಳದಲ್ಲಿ ಯಕ್ಷಗಾನ ನಡೆಯುತ್ತಿದ್ದಾಗ ಪಾತ್ರದಾರಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಕಲಾವಿದ ಗುರುವಪ್ಪ ಬಾಯಾರು ( 58) ಮೃತಪಟ್ಟವರು.
ಕಟೀಲು ಕ್ಷೇತ್ರದ ಸರಹದ್ದಿನಲ್ಲಿ ಸರಸ್ವತೀ ಸದನದಲ್ಲಿ ಗುರುವಾರ ತ್ರಿಜನ್ಮ ಮೋಕ್ಷ ಯಕ್ಷಗಾನ ಆಯೋಜಿಸಲಾಗಿತ್ರು. ಅದರಲ್ಲಿ ಗುರುಪಪ್ಪ ಬಾಯರು ಶಿಶುಪಾಲನ ಪಾತ್ರಧಾರಿಯಾಗಿದ್ದರು. ಇನ್ನೊಂದು ಪಾತ್ರಧಾರಿ ಯಕ್ಷಗಾನದ ರಂಗಸ್ಥಳದಲ್ಲಿ ಕುಣಿಯುತ್ತಿದ್ದಾಗ ಅಲ್ಲೇ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಾಯಾಘಾತವಾಗಿ ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.
ʼತ್ರಿಜನ್ಮ ಮೋಕ್ಷʼ ಯಕ್ಷಗಾನದ ಅಂತಿಮ ಭಾಗದಲ್ಲಿ ಶಿಶುಪಾಲ- ದಂತವಕ್ತ್ರರ ವಧೆಯ ಪ್ರಸಂಗವಿದೆ. ಆಟದ ಕೊನೆಯವರೆಗೂ ಶಿಶುಪಾಲನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಗುರುವಪ್ಪ ಅವರು ಕೊನೆಯ ಹಂತದಲ್ಲಿ ಹೃದಯಾಘಾತದಿಂದ ರಂಗಸ್ಥಳದಿಂದ ಕೆಳಗೆ ಕುಸಿದು ಬಿದ್ದಿದ್ದಾರೆ.
ಕೂಡಲೇ ಕಾರ್ಯಕ್ರಮ ನಿಲ್ಲಿಸಿ ಗುರುವಪ್ಪ ಅವರನ್ನು ಉಪಚರಿಸಿ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಗುರುವಪ್ಪ ಬಾಯಾರು ಅವರು ಕಟೀಲು ಮೇಳದಲ್ಲಿ ಹಲವು ದಶಕಗಳಿಂದ ಪಾತ್ರ ನಿರ್ವಹಿಸುತ್ತಿದ್ದು, ಎರಡನೇ ಹಾಗೂ ಬಣ್ಣದ ವೇಷಗಳ ನಿರ್ವಹಣೆಗೆ ಖ್ಯಾತರಾಗಿದ್ದರು. ದೇವಿ ಮಹಾತ್ಮೆಯ ವಿದ್ಯುನ್ಮಾಲಿ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.
ಐದು ವರ್ಷಗಳ ಹಿಂದೆ 2017ರಲ್ಲಿ ಕಟೀಲು ಮೇಳದ ಪ್ರಸಿದ್ದ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರು ಬಜ್ಪೆಯಲ್ಲಿ ಯಕ್ಷಗಾನ ಪ್ರದರ್ಶಿಸುತ್ತಿದ್ದಾಗ ರಂಗಸ್ಥಳದಲ್ಲೆ ಕುಸಿದು ಇಹಲೋಕ ತ್ಯಜಿಸಿದ್ದರು. ಅದಕ್ಕೂ ಮೊದಲು ಹಿರಿಯ ಯಕ್ಷಗಾನ ಕಲಾವಿದ ಅರುವ ನಾರಾಯಣ ಶೆಟ್ಟಿಯವರು ಕೂಡ ವೇಷಧಾರಿಯಾಗಿ ರಂಗಸ್ಥಳದಲ್ಲೆ ಕುಸಿದು ಬಿದ್ದು ಮೃತಪಟ್ಟಿದ್ದರು.
ಬಿಗ್ ನ್ಯೂಸ್
Big Breaking : ವಿಟ್ಲ : ನಿರ್ಮಾಣ ಹಂತದ ಸೇತುವೆ ಕುಸಿದು 7ಮಂದಿಗೆ ಗಾಯ
ವಿಟ್ಲ: ಪುಣಚ ಗ್ರಾಮದ ಬರೆಂಜ – ಕುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 7ಮಂದಿಗೆ ಗಾಯವಾಗಿದೆ.
ಸೇತುವೆಯ ಕೊನೆಯ ಹಂತದ ಕಾರ್ಯವಾಗಿ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದ ಸಮಯ ತಳಭಾಗದಿಂದ ನೀಡಿದ ರಾಡ್ ಜಾರಿದ ಹಿನ್ನಲೆಯಲ್ಲಿ ಮೇಲ್ಭಾಗದ ಸಂಪೂರ್ಣ ಕಾಂಕ್ರೀಟ್ ಕುಸಿದು ಬಿದ್ದಿದೆ.
ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿಯನ್ನು ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. . ಸ್ಥಳದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.
ಬಿಗ್ ನ್ಯೂಸ್
Big Breaking: ಬಂಟ್ವಾಳ: ಹಿಂದೂ ಮುಖಂಡನ ಕುತ್ತಿಗೆಗೆ ಚೂರಿ ಇರಿತ – ಜೀವನ್ಮರಣ ಹೋರಾಟ : ಒಟ್ಟಿಗೆ ರಿಕ್ಷಾದಲ್ಲಿ ತೆರಳುತ್ತಿದ್ದಾಗಲೇ ಆಪ್ತ ಸ್ನೇಹಿತನಿಂದ ಕೃತ್ಯ
ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹಿಂದೂ ಯುವಸೇನೆಯ ಮುಖಂಡ, ಉದ್ಯಮಿಯಾಗಿರುವ ಪುಷ್ಪರಾಜ್ ಎಂಬವರಿಗೆ ಚೂರಿ ಇರಿತವಾಗಿದೆ. ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಘಟನೆ ನಡೆದಿದ್ದು,ಚೂರಿ ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.
ರಿಕ್ಷಾದಲ್ಲಿ ಜೊತೆಯಾಗಿ ತೆರಳುತ್ತಿದ್ದಾಗಲೇ ಚೂರಿಯಿಂದ ಕುತ್ತಿಗೆಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಸ್ನೇಹಿತ ರವಿ ಎಂಬಾತ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಆರೋಪಿ ರವಿ ಚೂರಿಯಿಂದ ಇರಿದು ಮತ್ತೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಗ್ ನ್ಯೂಸ್
Narendra Modi Mangalore | ಮಂಗಳೂರಿಗೆ ಆಗಮಿಸುವ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ : ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು..? ಕಿತ್ತುಕೊಂಡದ್ದೆಷ್ಟು..? ಸರಣಿ ಪ್ರಶ್ನೆ ಕೇಳಿದ ಸಿಎಂ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರ (Narendra Modi Mangalore) ಪರ ಪ್ರಚಾರಕ್ಕೆ ಮಂಗಳೂರಿಗೆ ಇಂದು ರಾತ್ರಿ ಆಗಮಿಸಲಿದ್ದಾರೆ.
ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯ ಪ್ರತಿಮೆಗೆ ಹಾರಾರ್ಪಣೆ ಮಾಡಿ ರಾತ್ರಿ 7.30 ರಿಂದ ರೋಡ್ ಶೋ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು? ಕಿತ್ತುಕೊಂಡದ್ದೆಷ್ಟು? ಎಂದು ಸರಣಿ ಪ್ರಶ್ನೆ ಕೇಳಿದ್ದಾರೆ.
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ದಕ್ಷಿಣ ಕನ್ನಡಕ್ಕೆ ನಿಮಗೆ ಸ್ವಾಗತ. ಕಳೆದ 33 ವರ್ಷಗಳಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಅದಕ್ಕಿಂತ ಹಿಂದಿನ 39 ವರ್ಷ ಈ ಕ್ಷೇತ್ರವನ್ನು ನಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಕಳೆದ 33 ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ನೀವು ಕೊಟ್ಟದ್ದೆಷ್ಟು? ಎನ್ನುವ ಲೆಕ್ಕ ಕೊಡಿ, ಈ ಜಿಲ್ಲೆಯಿಂದ ಏನು ಕಿತ್ತುಕೊಂಡಿದ್ದೀರಿ ಎನ್ನುವ ಲೆಕ್ಕವನ್ನು ನಾನು ಕೊಡುತ್ತೇನೆ.
ಬಜ್ಪೆಯ ವಿಮಾನ ನಿಲ್ದಾಣದ ಕನಸು ಕಂಡವರು ಉಳ್ಳಾಲ ಶ್ರೀನಿವಾಸ ಮಲ್ಯ. ಮಲ್ಯರ ಕನಸನ್ನು ನನಸು ಮಾಡಿದವರು ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ. ಶ್ರೀನಿವಾಸ ಮಲ್ಯರ ಪ್ರಯತ್ನದ ಫಲವಾದ ಈ ವಿಮಾನ ನಿಲ್ದಾಣವನ್ನು ನೀವು ನಿಮ್ಮ ಉದ್ಯಮಿ ಮಿತ್ರ ಗೌತಮ ಅದಾನಿ ಅವರಿಗೆ ನೀಡಿದಿರಿ. ಈಗ ಹೇಳಿ, ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು? ಕಿತ್ತುಕೊಂಡದ್ದೆಷ್ಟು?
ನವಮಂಗಳೂರು ಬಂದರು ಕೂಡಾ ಸಂಸದ ಯು.ಶ್ರೀನಿವಾಸ ಮಲ್ಯ ಅವರ ಕನಸಾಗಿತ್ತು. ಮಲ್ಯರ ಮಾತಿಗೆ ಮನ್ನಣೆ ಕೊಟ್ಟು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ಪಣಂಬೂರಿನಲ್ಲಿ ಬಂದರಿಗೆ ಚಾಲನೆ ನೀಡಿದರು. ಈ ಬಂದರನ್ನು ಕೂಡಾ ಉದ್ಯಮಿ ಮಿತ್ರ ಅದಾನಿಯವರಿಗೆ ಹಂತಹಂತವಾಗಿ ಮಾರಲು ಹೊರಟಿದ್ದೀರಿ. ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದೆಷ್ಟು?
ಬಜ್ಪೆ ವಿಮಾನ ನಿಲ್ದಾಣ ಮತ್ತು ಎನ್ಎಂಪಿಟಿ ಮಾತ್ರವಲ್ಲ ಇಲ್ಲಿನ ರೀಜನಲ್ ಎಂಜನಿಯರಿಂಗ್ ಕಾಲೇಜ್, ಎಂಸಿಎಫ್, ಎಂಆರ್ಪಿಎಲ್, ಬೈಕಂಪಾಡಿ ಕೈಗಾರಿಕ ಪ್ರದೇಶ, ರಾಷ್ಟ್ರೀಯ ಹೆದ್ದಾರಿ 66 ಮಾತ್ರವಲ್ಲ ಕರಾವಳಿಯಲ್ಲಿ ರಕ್ತರಹಿತ ಕ್ರಾಂತಿಯನ್ನೇ ಉಂಟು ಮಾಡಿರುವ ಭೂ ಸುಧಾರಣೆ ಕಾಯ್ದೆ ಕೂಡಾ ಜಾರಿಗೆ ಬಂದದ್ದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಾಲದಲ್ಲಿ. ಪ್ರಧಾನಿಯಾಗಿ ನಿಮ್ಮ ಹತ್ತು ವರ್ಷದ ಕಾಲದಲ್ಲಿ ಇಲ್ಲವೇ ನಿಮ್ಮ ಸಂಸದರು ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ 33 ವರ್ಷಗಳ ಅವಧಿಯಲ್ಲಿ ಈ ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು? ಕಿತ್ತುಕೊಂಡದ್ದೆಷ್ಟು?
ಖ್ಯಾತ ಉದ್ಯಮಿ ಹಾಜಿ ಅಬ್ದುಲ್ಲಾ ಅವರು 1906ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಿಸಿದರು. ನೀವು ಇದನ್ನು ಯೂನಿಯನ್ ಬ್ಯಾಂಕ್ ಜೊತೆ ವಿಲೀನಗೊಳಿಸಿದಿರಿ.
ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರು ಟಿಎಂಎ ಪೈ, ಉಪೇಂದ್ರ ಪೈ.
ವಾಮನ್ ಕುಡ್ವಾ ಅವರು 1925ರಲ್ಲಿ ಸ್ಥಾಪಿಸಿದ್ದು ಸಿಂಡಿಕೇಟ್ ಬ್ಯಾಂಕ್. ಲಾಭದಲ್ಲಿದ್ದ ಈ ಬ್ಯಾಂಕನ್ನು ಕೆನರಾ ಬ್ಯಾಂಕ್ ಜೊತೆ ವಿಲೀನಗೊಳಿಸಿದಿರಿ. ದಕ್ಷಿಣ ಕನ್ನಡದ ಉದ್ಯಮಿ ಮತ್ತು ಸಮಾಜ ಸೇವಕ ರೈತರಿಗಾಗಿಯೇ ವಿಜಯ ದಶಮಿಯ ದಿನವೇ 1931ರಲ್ಲಿ ಸ್ಥಾಪಿಸಿದ್ದು ವಿಜಯಾ ಬ್ಯಾಂಕ್. ಇದನ್ನು ನಿಮ್ಮ ರಾಜ್ಯದ ನಷ್ಟದಲ್ಲಿದ್ದ ಬರೋಡಾ ಬ್ಯಾಂಕ್ ಜೊತೆ ವಿಲೀನಗೊಳಿಸಿದಿರಿ. ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು?
ಮೂರು ದಶಕಗಳಿಂದ ನಿಮ್ಮ ಪಕ್ಷವನ್ನು ಗೆಲ್ಲಿಸುತ್ತಾ ಬಂದಿರುವ ದಕ್ಷಿಣ ಕನ್ನಡದ ಜನತೆಯ ಬಗ್ಗೆ ಯಾಕೆ ನಿಮಗೆ ಈ ಪರಿಯ ದ್ವೇಷ? ಈ ಜಿಲ್ಲೆಯಲ್ಲಿ ಬಹುಸಂಖ್ಯಾತ ಸಮುದಾಯವಾದ ಬಿಲ್ಲವರ ಆರಾಧ್ಯಗುರು ಬ್ರಹ್ಮಶ್ರೀ ನಾರಾಯಣ ಗುರುಗಳು. ಗಣರಾಜ್ಯೋತ್ಸವದ ಪರೇಡ್ ನಲ್ಲಿ ರಾಜ್ಯ ಸರ್ಕಾರ ನಾರಾಯಣ ಗುರುಗಳ ಟ್ಯಾಬ್ಲೋ ಪ್ರದರ್ಶನ ಮಾಡಲು ಹೊರಟರೆ ಅದಕ್ಕೆ ನೀವು ಅಡ್ಡಗಾಲು ಹಾಕಿದಿರಿ. ನಾರಾಯಣ ಗುರುಗಳಿಗೆ ಹಿಂದೂ ಧರ್ಮದ ಗುರುಗಳ ಪಕ್ಕದಲ್ಲಿ ಜಾಗ ಇಲ್ಲವೇ?
ನಾರಾಯಣ ಗುರುಗಳಿಗೆ ನಿಮ್ಮ ನೇತೃತ್ವದ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದು ಸಾಕಾಗಲಿಲ್ಲ ಎಂದೋ ಏನೋ? ಯಾರೋ ತಲೆತಿರುಕನ ನೇತೃತ್ವದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ನೇಮಿಸಿದ್ದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಶಾಲಾ ಪಠ್ಯದಲ್ಲಿದ್ದ ನಾರಾಯಣ ಗುರುಗಳ ಪಾಠವನ್ನೂ ಕಿತ್ತು ಹಾಕಿತು. ನಾರಾಯಣ ಗುರುಗಳಿಗೆ ಮಾಡಿರುವ ಅಪಮಾನದ ವಿರುದ್ಧ ಜನ ಸಿಡಿದೆದ್ದು ಪ್ರತಿಭಟನೆ ನಡೆಸಿದರೂ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದಕ್ಕೆ ಲಕ್ಷ್ಯವನ್ನೇ ಕೊಡಲಿಲ್ಲ. ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು?
ಅಂತಿಮವಾಗಿ ನಿಮ್ಮ 33 ವರ್ಷಗಳ ಅತ್ಯಂತ ಮಹತ್ವದ ಕೊಡುಗೆ- ಜಾತಿ-ಧರ್ಮಗಳ ಅಂತರವನ್ನು ಮೀರಿ ಒಂದು ಕುಟುಂಬದಂತೆ ಸೌಹಾರ್ದತೆಯಿಂದ ಬದುಕುತ್ತಿದ್ದ ಜಿಲ್ಲೆಯನ್ನು ‘ಕೋಮುವಾದದ ಪ್ರಯೋಗಶಾಲೆ’’ಯನ್ನಾಗಿ ಪರಿವರ್ತಿಸಿದ್ದು. ಇದರ ಫಲವಾಗಿ ಅತ್ಯಂತ ಹೆಚ್ಚು ಸಾಕ್ಷರತೆ ಇರುವ ಮತ್ತು ಬುದ್ದಿವಂತರ ಜಿಲ್ಲೆ ಎಂದೇ ಖ್ಯಾತಿ ಪಡೆದಿದ್ದ ಜಿಲ್ಲೆ ಇಂದು ಕೋಮುವಾದದ ಕಳಂಕ ಹಚ್ಚಿಕೊಂಡು ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು?