ಪುತ್ತೂರು: ಬೆಳಂದೂರು ಗ್ರಾಮ
ಪಂಚಾಯತ್ ವ್ಯಾಪ್ತಿಯ ಕ್ಯಾಮಣ ಗ್ರಾಮದ ಅಂಕಜಾಲು ಎಂಬಲ್ಲಿನ ಅಕ್ರಮ ತಳ್ಳುಗಾಡಿಯನ್ನು ತೆರವು ಮಾಡಿರುವುದಕ್ಕೆ ಪುತ್ತೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಮತ್ತು ಗ್ರಾ.ಪಂ ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ ಕೆ. ಅವರಿಗೆ ವಾಟ್ಸ್ಆ್ಯಪ್ ಕರೆ ಮೂಲಕ ಜೀವ ಬೆದರಿಕೆಯೊಡ್ಡಿರುವ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ, ಕರ್ತವ್ಯಕ್ಕೆ ಅಡ್ಡಿ ಮತ್ತು ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಅಂಕಜಾಲು ಎಂಬಲ್ಲಿ ಅಬ್ದುಲ್ ರಜಾಕ್ ಬಿನ್ ಶೇಖಬ್ಬ ಎಂಬವರ ಅಕ್ರಮ ತಳ್ಳುಗಾಡಿಯನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ನ.30ಕ್ಕೆ ತೆರವುಗೊಳಿಸಲಾಗಿತ್ತು.
ಡಿ.5ಕ್ಕೆ ಅನಾಮಧೇಯ ವ್ಯಕ್ತಿಯೊಬ್ಬರು ವಾಟ್ಸಪ್ ಕರೆ ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಕೆ. ಮತ್ತು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ತಳ್ಳುಗಾಡಿ ವ್ಯಾಪಾರಿಗೆ ಬೇರೆ ವ್ಯವಸ್ಥೆ ಮಾಡದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ.ನಿನ್ನ ಹಾಗೂ ಇ.ಒ ನವೀನ್ ಭಂಡಾರಿಯವರ ಮೊಬೈಲ್ ನಂಬರ್ ಹೊರ ದೇಶದಲ್ಲಿ ಎಲ್ಲರಲ್ಲೂ ಹರಿದಾಡುತ್ತಿದೆ. ಇದರಿಂದ ನಿಮ್ಮಿಬ್ಬರಿಗೆ ತೊಂದರೆಯಾಗಲಿದೆ’ ಎಂದು ಜೀವ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ .
ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಈ ರೀತಿ ಕೊಲೆ ಬೆದರಿಕೆ ಹಾಕುವ ಮೂಲಕ ಅಡ್ಡಿಪಡಿಸಿರುವುದರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಈ ಕುರಿತು ಕಡಬ ಹಾಗೂ ಪುತ್ತೂರಿನ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ನವೀನ್ ಭಂಡಾರಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ‘ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮತ್ತು ಕೊಲೆ ಬೆದರಿಕೆ’ ಆರೋಪದಡಿ ಪ್ರಕರಣ ದಾಖಲಾಗಿದೆ.