ಮೂಡುಬಿದಿರೆ: ಸ್ಕೌಟ್ಸ್-ಗೈಡ್ ಸಂಸ್ಥೆಯು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಪಂಚದ 216ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿದೆ. ಯಾವೂದೇ ಜನಾಂಗ, ಜಾತಿ, ಧರ್ಮ , ವರ್ಣ ಭೇದವಿಲ್ಲದೆ 1907ರಲ್ಲಿ ಬೇಡನ್ ಪೋವೆಲ್ ರವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಸ್ಕೌಟ್ಸ್-ಗೈಡ್ಸ್ ಸಂಸ್ಥೆಗೆ ನಮ್ಮ ಜಿಲ್ಲೆಯಲ್ಲೂ 100 ವರ್ಷಗಳ ಇತಿಹಾಸವನ್ನು ಹೊಂದಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ 24 ಜಾಂಬೂರಿ ಕಾರ್ಯಕ್ರಮ ನಡೆದಿದ್ದು, ದೇಶದಲ್ಲಿ ಪ್ರಪ್ರಥಮ ಬಾರಿಗೆ ಸ್ಕೌಟ್ಸ್-ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ (International Jamboree) ಕಾರ್ಯಕ್ರಮ ನಡೆಸುವ ಸೌಭಾಗ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ (Alvas Mudubidre) ದೊರಕಿದೆ ಎನ್ನುವುದು ಸಂತಸದ ಸಂಗತಿಯಾಗಿದೆ ಎಂದು ಇದು ಜಾಂಬೂರಿ ಪ್ರಧಾನ ಕಾರ್ಯದರ್ಶಿ, ದ.ಕ.ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಮುಖ್ಯ ಆಯುಕ್ತ ಡಾ.ಎಂ.ಮೋಹನ ಆಳ್ವ ಅವರು ಕಾರ್ಯಕ್ರಮದ ಸಿದ್ಧತೆಯ ಹೇಳಿದರು.
ವಿದ್ಯೆ, ಬುದ್ಧಿ, ಜಾತಿ, ಸ್ವದೇಶ ಪ್ರೇಮ, ಸಹಬಾಳ್ವೆಯೊಂದಿಗೆ ಮನಸ್ಸು ಕಟ್ಟಲು ಸ್ಕೌಟ್ಸ್-ಗೈಡ್ಸ್ ಸಹಾಯಕವಾಗಿದೆ. ನಮ್ಮ ದೇಶದಲ್ಲಿ ಒಟ್ಟು 6 ಲಕ್ಷ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ 60 ಸಾವಿರ ವಿದ್ಯಾರ್ಥಿಗಳಿದ್ದಾರೆ. ಸ್ಕೌಟ್ಸ್ ಗೈಡ್ಸ್ ಕುರಿತು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಜಾಂಬೂರಿ ಕಾರ್ಯಕ್ರಮ ನಡೆಸುತ್ತಿದ್ದು, ಮುಂದೆ ಇದು ಆಂದೋಲನವಾಗಿ ಹಲವಾರು ಸಂದೇಶಗಳನ್ನು ನೀಡಲಿದೆ ಎಂದು ಆಳ್ವರು ತಿಳಿಸಿದ್ದಾರೆ

ಡಿಸೆಂಬರ್ 21ರಿಂದ 27ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸ್ಕೌಟ್ಸ್-ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ಭಾಗವಹಿಸಲು 50, 000 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಸುಮಾರು 10 ಸಾವಿರ ತರಬೇತುದಾರರಿದ್ದು, 3,000 ಸಾವಿರ ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ.
ರಾಜ್ಯದ 30 ಸಾವಿರ, ದೇಶದ 15 ಸಾವಿರ ಹಾಗೂ ಮಲೇಷಿಯಾ, ಬಾಂಗ್ಲಾ ದೇಶ, ಸಿಂಗಾಪುರ್, ಕೆನಡಾ, ಚೀನಾ, ಶ್ರೀಲಂಕಾ ಸೇರಿದಂತೆ ಒಟ್ಟು 15 ದೇಶದ 5000 ಸಾವಿರ ವಿದ್ಯಾರ್ಥಿ ಗಳು ಸೇರಿ ಒಟ್ಟು 50 ಸಾವಿರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ಇದೇ ಮೊದಲ ಬಾರಿ ಸಾರ್ವಜನಿಕರಿಗೆ ಪ್ರವೇಶ : ಸ್ಕೌಟ್ & ಗೈಡ್ಸ್ ಅಂತರಾಷ್ಟ್ರೀಯ ಜಾಂಬೂರಿ ನೋಡಲು ಇಷ್ಟರವರೆಗೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಇದೇ ಮೊದಲ ಬಾರಿ ಮುಕ್ತ ಪ್ರವೇಶ ನೀಡಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಆಸಕ್ತರಿಗೆ ಮುಕ್ತ, ಉಚಿತ ಪ್ರವೇಶ, ಊಟೋಪಚಾರವೂ ಉಚಿತವಾಗಿದೆ.
ಏನೇನು ಇರಲಿದೆ ಜಾಂಬೂರಿಯಲ್ಲಿ..?
ಕೃಷಿಮೇಳ: 12 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಕೃಷಿ ಮೇಳ ನಡೆಯಲಿದ್ದು, 100 ಬಗೆಯ ತರಕಾರಿಗಳ ಅತ್ಯಾಕರ್ಷಕ ನೈಜತೋಟ ಮೈತಳೆದಿದೆ. ಫಲ-ಪುಷ್ಪ ಪ್ರದರ್ಶನ, ವಿವಿಧ ಮಳಿಗೆಗಳು, ಪುಷ್ಪಾಲಂಕಾರ, ಕೃಷಿಕರಿಗೆ ಮಾಹಿತಿ ನೀಡುವ ಕಾರ್ಯ ಕೃಷಿ ಮೇಳದಲ್ಲಿ ನಡೆಯಲಿದೆ.

ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಹೆಸರಿನ ಆವರಣದಲ್ಲಿ 4 ಎಕರೆ ಜಾಗದಲ್ಲಿ 100 ಬಗೆಯ ತರಕಾರಿಗಳ ಅತ್ಯಾಕರ್ಷಕ ನೈಜತೋಟ ಮೈತಳೆದಿದೆ. ಉಳಿದಂತೆ ಫಲ ಮತ್ತು ಪುಷ್ಪ ಪ್ರದರ್ಶನ, ವಿವಿಧ ಮಳಿಗೆಗಳು, ಎಜಿ ಕೊಡ್ಗಿ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ದೇಶ-ವಿದೇಶಗಳ ಬಾಳೆ, ತೆಂಗು, ಧಾನ್ಯ, ವಿವಿಧ ಜಾತಿಯ ಭತ್ತ, ಆಯುರ್ವೇದ ಮಹತ್ವದ ಹಣ್ಣು-ಹಂಪಲುಗಳ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.
ಪುಸ್ತಕ ಮೇಳ: ಸ್ಕೌಟ್ಸ್ ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೃಹತ್ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ, ದೇಶಗಳ ಪುಸ್ತಕ ಮಾರಾಟ ಮಳಿಗೆ, ಪುಸ್ತಕ ಪ್ರದರ್ಶನ ನಡೆಯಲಿದೆ.
ವಿಜ್ಞಾನ ಮೇಳ: ಪ್ರಾಥಮಿಕ, ಪ್ರೌಢಶಾಲೆ, ಪದವಿ ತರಗತಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ವಿಜ್ಞಾನ ಮೇಳ ನಡೆಸುತ್ತಿದ್ದು, ವಿಜ್ಞಾನಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಇಲ್ಲಿ ಪಡೆಯಬಹುದಾಗಿದೆ.

ಆಹಾರ ಮೇಳ: ದೇಶೀಯ ಆಹಾರಕ್ಕೆ ಸಂಬಂಧಪಟ್ಟ ಎಲ್ಲಾ ತಿಂಡಿ, ತಿನಿಸುಗಳು, ಆಯಾ ಪ್ರದೇಶಕ್ಕೆ ಸಂಬಂಧಪಟ್ಟ ವಿಶಿಷ್ಟ ಆಹಾರಗಳ ಆಹಾರೋತ್ಸವ ಮೇಳ ಏರ್ಪಡಿಸಲಾಗಿದೆ.
ಕಲಾಮೇಳ: ಕಲೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸಾಂಪ್ರದಾಯಿಕ, ಬುಡಕಟ್ಟು, ಬೇರೆ, ಬೇರೆ ರಾಜ್ಯದ ಕಲೆಗಳಿಗೆ ಕಲಾಮೇಳದಲ್ಲಿ ಆದ್ಯತೆ ನೀಡಲಾಗಿದೆ. ಟೆರ್ರಾಕೋಟ, ಶಿಲ್ಪಕಲೆ ಪ್ರದರ್ಶನ, ಕಾರ್ಟೂನ್ಸ್, ಛಾಯಾಗ್ರಹಣಕ್ಕೆ ಒತ್ತು ನೀಡಲಾಗಿದೆ. ಕೃಪಾಕರ-ಸೇನಾನಿ ಅವರು ಸೆರೆಹಿಡಿದ ಫೋಟೋ ಸೇರಿದಂತೆ ದೇಶ-ವಿದೇಶದ ಸುಮಾರು 300 ಆಯ್ದ ಫೋಟೋಗಳನ್ನು ಪ್ರದರ್ಶಿಸಲಾಗುವುದು.
ಬೃಹತ್ ವೇದಿಕೆ: ಜಾಂಬೂರಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕಾಗಿ ಆರು ವೇದಿಕೆಗಳ ಜೊತೆಗೆ ಬೃಹತ್ ವೇದಿಕೆಯನ್ನೂ ನಿರ್ಮಿಸಲಾಗಿದೆ. ಇಲ್ಲಿ 150 ಹುಲಿ ವೇಷಗಳು, ನವದುರ್ಗೆಯರು ಒಟ್ಟಿಗೆ ಕುಣಿಯುವ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಐದಾರು ತಂಡಗಳು ಮಾತ್ರ ವೇದಿಕೆಯಲ್ಲಿ ಪ್ರದರ್ಶನ ನೀಡಬಹುದಾಗಿತ್ತು. ಆದರೆ ಜಾಂಬೂರಿಯಲ್ಲಿ ಅದಕ್ಕಿಂತ ಐದಾರು ಪಟ್ಟು ಹೆಚ್ಚು ಜನ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಲಾಗಿದೆ.

ಕಾಡಿನ ವಾತಾವರಣ ಸೃಷ್ಟಿ : ಆಳ್ವಾಸ್ ಗೆ ಹೊಂದಿಕೊಂಡಂತೆ ಇರುವ ಖ್ಯಾತ ಕೃಷಿಕ ಎಲ್.ಸಿ ಸೋನ್ಸ್ ಅವರ ಜಾಗದಲ್ಲಿರುವ ಸುಮಾರು ಹತ್ತು ಎಕರೆ ಕಾಡಿನ ಪ್ರದೇಶದಲ್ಲಿ ಕಾಡಿನ ವಾತಾವರಣ ಸೃಷ್ಟಿ ಮಾಡಿ ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸುವ ಕೆಲಸ ಕೈಗೊಂಡಿದ್ದೇವೆ ಎಂದು ಡಾ.ಮೋಹನ ಆಳ್ವ ವಿವರಿಸಿದ್ದಾರೆ.

165 ಕಿಲೋ ಮೀಟರ್ ಸ್ವಚ್ಛತಾ ಆಂದೋಲನಾ:
“ನಮ್ಮ ಸಂಸ್ಕೃತಿ, ಸ್ವಚ್ಛ ಸಂಸ್ಕೃತಿ” ಎಂಬ ಹೆಸರಿನಲ್ಲಿ ಈ ಬಾರಿ 165 ಕಿಲೋ ಮೀಟರ್ ದೂರದವರೆಗೆ ಸ್ವಚ್ಛತಾ ಆಂದೋಲನಾ ನಡೆಸುವ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದೇವೆ. ಒಟ್ಟು 8 ಮಾರ್ಗಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಹರಿದು ಬರುತ್ತಿದೆ ಹೊರಕಾಣಿಕೆ : ಪ್ರತಿದಿನ 2 ಲಕ್ಷ ಜನರಿಗೆ ಅನ್ನದಾನ ಜರುಗುವುದರಿಂದ ಎಲ್ಲಾ ಊರಿನಿಂದಲೂ ಹೊರಕಾಣಿಕೆ ಹರಿದು ಬರುತ್ತಿದೆ.


ಅಂದಾಜು 35 ಕೋಟಿ ಖರ್ಚು…ದೇಣಿಗೆ ನೀಡಿ ಸಹಕರಿಸಿ…
ಈ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಅಂದಾಜು 35 ಕೋಟಿ ರೂಪಾಯಿ ವ್ಯಯಿಸಬೇಕಾಗಿದೆ. ಜಾಂಬೂರಿಯನ್ನು ಯಶಸ್ವಿಗೊಳಿಸಲು ದೊಡ್ಡ ಮೊತ್ತದ ಅಗತ್ಯವಿದೆ. ಈಗಾಗಲೇ ಕರ್ನಾಟಕ ಸರ್ಕಾರ 10 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ. ಇನ್ನುಳಿದಂತೆ ಸಾರ್ವಜನಿಕರು, ಆಸಕ್ತರು, ದಾನಿಗಳು ದೇಣಿಗೆಯನ್ನು ನೀಡಿ ಸಹಕರಿಸಬೇಕಾಗಿದೆ. ಜನರು ವಸ್ತು ಮತ್ತು ಹೊರೆಕಾಣಿಕೆ ರೂಪದಲ್ಲಿ ನಮ್ಮನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಡಾ.ಮೋಹನ್ ಆಳ್ವ ವಿನಂತಿಸಿಕೊಂಡಿದ್ದಾರೆ.
